ಮಸೀದಿ ಆವರಣದೊಳಗೆ ನುಗ್ಗಿ ಜೈ ಶ್ರೀರಾಮ್​ ಘೋಷಣೆ ಕೂಗಿದ್ದ ಇಬ್ಬರ ಬಂಧನ

Mangaluru News: ಮಂಗಳೂರಿನ ಕಡಬ ತಾಲೂಕಿನ ಮರ್ಧಾಳ ಬದ್ರಿಯಾ ಜುಮಾ ಮಸೀದಿ ಮಸೀದಿ ಆವರಣದೊಳಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿ ಪರಾರಿಯಾಗಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿ ದೃಶ್ಯ ಆಧರಿಸಿ ಕಡಬ ಪೊಲೀಸರು ಇಬ್ಬರು ಯುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಸೀದಿ ಆವರಣದೊಳಗೆ ನುಗ್ಗಿ ಜೈ ಶ್ರೀರಾಮ್​ ಘೋಷಣೆ ಕೂಗಿದ್ದ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 26, 2023 | 9:50 AM

ಮಂಗಳೂರು, (ಸೆಪ್ಟೆಂಬರ್ 26): ಕಡಬ ತಾಲೂಕಿನ ಮರ್ಧಾಳ ಬದ್ರಿಯಾ ಜುಮಾ ಮಸೀದಿ ಮಸೀದಿ (Mardhala Badria Juma Masjid) ಆವರಣದೊಳಗೆ ನುಗ್ಗಿ ಜೈ ಶ್ರೀರಾಮ್ (Jai Shri Ram) ಘೋಷಣೆ ಕೂಗಿ ಪರಾರಿಯಾಗಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್(25) ಹಾಗೂ ಕೈಕಂಬ ನಡ್ತೋಟ ನಿವಾಸ್ ಸಚಿನ್​ ಎನ್ನುವವರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಬೈಕ್​ನಲ್ಲಿ ಆಗಮಿಸಿದ್ದ ಆರೋಪಿಗಳು ಮರ್ಧಾಳದ ಕಾಂಪೌಡ್ ಒಳಗೆ ನುಗ್ಗಿ ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದ್ದರು.​ ಬಳಿಕ ಧ್ವನಿ ಕೇಳಿ ಮಸೀದಿಯೊಳಗಿದ್ದ ಮೌಲ್ವಿ ಹೊರಬರುತ್ತಿದ್ದಂತೆಯೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಮಸೀದಿ ಆವರಣದಲ್ಲಿ ಬೈಕ್ ಹಿಂತಿರುಗಿಸಿ ತೆರಳಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಆಧಾರದ ಮೇಲೆ ಕಡಬ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಸೀದಿ ಆವರಣ ಪ್ರವೇಶಿಸಿ ಕಿಡಿಗೇಡಿಗಳಿಂದ ಜೈಶ್ರೀರಾಮ್ ಘೋಷಣೆ: ಮಸೀದಿ ಮುಖ್ಯಸ್ಥರಿಂದ ದೂರು

ದೂರಿನಲ್ಲಿ ಏನಿದೆ?

ಕಡಬ ತಾಲೂಕು ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯು ಕಡಬ- ಮರ್ಧಾಳ ರಸ್ತೆಯ ಮರ್ಧಾಳ ಜಂಕ್ಷನ್​ನಲ್ಲಿ ನಮ್ಮ ಮಸೀದಿಗೆ ಆವರಣ ಗೋಡೆ ಮತ್ತು ಗೇಟ್ ಇರುತ್ತದೆ. ಹೀಗಿರುವಾಗ ಸೆ.24 ರಂದು ರಾತ್ರಿ ಸುಮಾರು 10.50 ರ ಸಮಯಕ್ಕೆ ನಮ್ಮ ಮಸೀದಿಯ ಕಂಪೌಂಡಿನೊಳಗೆ ಯಾರೋ ಅಪರಿಚಿತರು ಬಂದು ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀ ರಾಮ್​ ಘೋಷಣೆ ಕೂಗಿದ್ದು, ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ ಎಂದು ಧರ್ಮಗುರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಮಸೀದಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಜೈಶ್ರೀರಾಮ್​ ಘೋಷಣೆ ಕೂಗಿದ್ದಾರೆಂದು ಮಸೀದಿ ಮುಖ್ಯಸ್ಥರ ದೂರು ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು 2 ತಂಡಗಳನ್ನು ರಚಿಸಿದ್ದರು.

ಇನ್ನಷ್ಟು ಮಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ