ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಭಾರೀ ಮಳೆ: ಕುಸಿದ ಶಾಲೆ ಮೇಲ್ಛಾವಣಿ, ರಜೆ ಇದ್ದಿದ್ದರಿಂದ ತಪ್ಪಿದ ಅನಾಹುತ

ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ.ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಶಾಲೆಯೊಂದರ ಮೇಲ್ಛಾವಣಿ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಭಾರೀ ಮಳೆ: ಕುಸಿದ ಶಾಲೆ ಮೇಲ್ಛಾವಣಿ, ರಜೆ ಇದ್ದಿದ್ದರಿಂದ ತಪ್ಪಿದ ಅನಾಹುತ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 06, 2023 | 12:59 PM

ಮಂಗಳೂರು: ಕೆಲ ದಿನಗಳ ಹಿಂದೆ ಜನರಂತೂ ಏನಪ್ಪ ಮಳೆನೇ (Rain) ಬರುತ್ತಿಲ್ಲ. ಜಲಮೂಲ ಎಲ್ಲಾ ಖಾಲಿ ಆಗುತ್ತಿವೆ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದರು. ಅಲ್ಲದೇ ಮಳೆಗಾಗಿ ಪೂಜೆ, ಪುನಸ್ಕಾರಗಳನ್ನೂ ಮಾಡಿದ್ದರು. ಇದೀಗ ಜುಲೈ ಆರಂಭದಲ್ಲಿ ಮಳೆಯ ರೌದ್ರನರ್ತನ ಶುರುವಾಗಿದೆ.. ಅದರಲ್ಲೂ ಕರಾವಳಿ, ದಕ್ಷಿಣ ಕನ್ನಡದಲ್ಲಿ ವರುಣದೇವ ಭಾರಿ ಫಜೀತಿಗಳನ್ನೇ ಸೃಷ್ಟಿ ಮಾಡಿದ್ದಾನೆ. ಮಂಗಳೂರು( Mangaluru) ಹೊರಹೊಲಯದ ತಲಪಾಡಿಯ ಶಾರದಾ ಸ್ಕೂಲ್ ಮತ್ತು ಕಾಲೇಜಿನ ಶೀಟ್​ ಮೇಲ್ಛಾವಣಿ ಕುಸಿದುಬಿದ್ದಿದೆ. ಇದರಿಂದ ಶಾಲಾ ವಾಹನಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ನಿನ್ನೆ (ಜುಲೈ 05) ಈ ಘಟನೆ ನಡೆದಿದ್ದು ಇಂದು(ಜುಲೈ 06) ಬೆಳಕಿಗೆ ಬಂದಿದೆ.

ಇದನ್ನೂ ಓದಿ: Mangaluru News: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಗುರುವಾರವೂ ರಜೆ

ದೇವಿನಗರದ ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ ಕ್ಯಾಂಪಸ್​ನ  ಆರು ಅಂತಸ್ತಿನ ಶಾಲಾ ಕಟ್ಟಡದ  ಮೇಲೆ ಇತ್ತೀಚೆಗೆ ಶೀಟ್ ಹಾಕಲಾಗಿತ್ತು. ಇದೀಗ ಭಾರಿ ಗಾಳಿ-ಮಳೆಯಿಂದಾಗಿ ಶೀಟ್ ಛಾವಣಿ ಕುಸಿದುಬಿದ್ದಿದೆ. ಇನ್ನು ಶೀಟ್​ ಜೊತೆಗೆ ಹಾಕಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆಗಳು ಉರುಳಿ ಬಿದ್ದಿವೆ.  ಸದ್ಯ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಅನಾಹುತ ತಪ್ಪಿದೆ ಎಂದು ಶಾಲಾ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ.

ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ಇದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮುನಿಸಿಗೆ ಜನ ಸಾಮಾನ್ಯರ ಬದುಕೇ ನೀರುಪಾಲಾಗಿದೆ. ಹೊರಗೆ ಬರಂಗಿಲ್ಲ. ನೆಮ್ಮದಿಯಾಗಿ ಓಡಾಡಂಗಿಲ್ಲ. ವರುಣಾಸುರನ ಕಡುಕೋಪಕ್ಕೆ ದಕ್ಷಿಣ, ಕರಾವಳಿಯಲ್ಲಿ ಅವಾಂತರಗಳ ದರ್ಶನವೇ ಆಗುತ್ತಿವೆ. ಇನ್ನು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ  ಕರಾವಳಿ ಭಾಗದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಂಕಾಳ ವೈದ್ಯ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ