ತಂಗಿಯ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದ್ದು ಅಣ್ಣಂದಿರು: ಚಪ್ಪಲಿ ಹೊಲಿಯುವವರ ತಂಗಿ ಪದ್ಮಾವತಿ ಈಗ ಸಿವಿಲ್ ಜಡ್ಜ್​​​

ದಾಂಡೇಲಿಯ ಪದ್ಮಾವತಿ ನಾಗಣ್ಣ ಮಾದಿಗ ಅವರು ಬಡತನ ಮತ್ತು ಸವಾಲುಗಳನ್ನು ಮೀರಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅಣ್ಣಂದಿರು ಚಪ್ಪಲಿ ಹೊಲಿದು ತಮ್ಮ ತಂಗಿಯ ಕನಸಿಗೆ ಬೆಂಬಲವಾಗಿ ನಿಂತರು. ಕನ್ನಡ ಮಾಧ್ಯಮದಲ್ಲಿ ಓದಿದ್ದರೂ, ಇಂಗ್ಲಿಷ್ ಭಾಷೆಯ ಸವಾಲನ್ನು ಎದುರಿಸಿ, ಮೊದಲ ಪ್ರಯತ್ನದಲ್ಲೇ ನ್ಯಾಯಾಧೀಶರಾದರು. ಉತ್ತರ ಕನ್ನಡ ಜಿಲ್ಲೆಯ ಮಾದಿಗ ಸಮುದಾಯದ ಮೊದಲ ಮಹಿಳಾ ನ್ಯಾಯಾಧೀಶರಾಗಿ ಇವರು ಸಾಧನೆ ಮಾಡಿದ್ದಾರೆ. ಇದು ಛಲ ಮತ್ತು ತ್ಯಾಗದ ಕಥೆ.

ತಂಗಿಯ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದ್ದು ಅಣ್ಣಂದಿರು: ಚಪ್ಪಲಿ ಹೊಲಿಯುವವರ ತಂಗಿ ಪದ್ಮಾವತಿ ಈಗ ಸಿವಿಲ್ ಜಡ್ಜ್​​​
ಪದ್ಮಾವತಿ

Updated on: Feb 20, 2026 | 4:36 PM

ದಾಂಡೇಲಿ, ಫೆ.20: ಬಡತನವು ಸಾಧನೆಗೆ ಅಡ್ಡಿಯಲ್ಲ, ಬದಲಾಗಿ ಅದು ಛಲವನ್ನು ಹೆಚ್ಚು ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದಾಂಡೇಲಿಯ ಯುವತಿ ಪದ್ಮಾವತಿ ನಾಗಣ್ಣ ಮಾದಿಗ ಅವರು ಸಿವಿಲ್ ನ್ಯಾಯಾಧೀಶರಾಗಿ (Civil Judge) ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆದರೆ ಈ ಸಾಧನೆಯ ಹಿಂದೆ ಅವರಿಗಿಂತ ಹೆಚ್ಚಾಗಿ ಶ್ರಮಿಸಿದ್ದು ಅವರ ಅಣ್ಣಂದಿರು. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರನ್ನು ಬೇಗ ಮದುವೆ ಮಾಡಿಕೊಡುವ ಎಂಬ ಯೋಚನೆಯಲ್ಲಿರುವ ಈ ಕಾಲದಲ್ಲಿ ನಮ್ಮ ಮನೆಯ ಮಗಳು ಸಾಧನೆ ಮಾಡಿ ಒಳ್ಳೆಯ ಸ್ಥಾನವನ್ನು ಪಡೆಯಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ತಮ್ಮ ತಂಗಿಗಾಗಿ ಇಡೀ ಜೀವನನ್ನೇ ಮುಡಪಾಗಿಟ್ಟಿದ್ದಾರೆ. ತಂಗಿಯ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದ್ದೇ ಈ ಅಣ್ಣಂದಿರು.

ಪದ್ಮಾವತಿ ಅವರ ಕುಟುಂಬದ ಹಿನ್ನೆಲೆ ಅತ್ಯಂತ ಸಾಮಾನ್ಯವಾದುದು. ತಂದೆ ನಾಗಣ್ಣ ಅವರು ನಿಧನರಾದ ಮೇಲೆ ಕುಟುಂಬದ ಜವಾಬ್ದಾರಿ ಅಣ್ಣಂದಿರ ಹೆಗಲ ಮೇಲೆ ಬಿತ್ತು. ಮನೆಯಲ್ಲಿ ಸರಿಯಾದ ಆರ್ಥಿಕ ವ್ಯವಸ್ಥೆ ಇಲ್ಲದಿದ್ದರೂ, ತಂಗಿಯ ಓದಿಗೆ ತೊಂದರೆಯಾಗಬಾರದೆಂದು ಅಣ್ಣಂದಿರು ರಸ್ತೆ ಬದಿಯಲ್ಲಿ ಕುಳಿತು ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಾ ಆಕೆಯನ್ನು ಓದಿಸಿದರು.

ಪದ್ಮಾವತಿ ಅವರು ಆರಂಭದಿಂದಲೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವರು. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಕಷ್ಟ ಎಂಬ ಸವಾಲನ್ನು ಮೆಟ್ಟಿ ನಿಂತ ಅವರು, ಕಾನೂನು ಪದವಿ (Law) ಪಡೆದು ನಂತರ ನ್ಯಾಯಾಂಗ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡು ಇಂದು ಅವರು ನ್ಯಾಯಪೀಠದ ಮೇಲೆ ಕುಳಿತು ನ್ಯಾಯ ನೀಡುವ ಸ್ಥಾನಕ್ಕೆ ಏರಿದ್ದಾರೆ. ಅಣ್ಣಂದಿರ ಬೆವರಿನ ಬೆಲೆಯನ್ನು ಅರಿತಿದ್ದ ಪದ್ಮಾವತಿ, ಹಗಲು-ರಾತ್ರಿ ಕಷ್ಟಪಟ್ಟು ಓದಿ ಮೊದಲ ಪ್ರಯತ್ನದಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?

ಉತ್ತರ ಕನ್ನಡ ಜಿಲ್ಲೆಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮಾದಿಗ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಏನು ಸಾಧಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇವರ ಸಾಧನೆಯೇ ದೊಡ್ಡ ಉತ್ತರವಾಗಿದ್ದಾರೆ. ನಾವು ಪಟ್ಟ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ನಮ್ಮ ತಂಗಿ ಸಮಾಜಕ್ಕೆ ನ್ಯಾಯ ನೀಡುವ ಕೆಲಸ ಮಾಡುತ್ತಾಳೆ ಎಂಬ ನಂಬಿಕೆ ನಮಗಿದೆ ಎಂದು ಹೆಮ್ಮೆಯ ಮಾತುಗಳನ್ನು ಅಣ್ಣಂದಿರು ಮಾತನಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Fri, 20 February 26

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us