ರೈಸ್​ ಮಿಲ್​ನಲ್ಲಿ ವಿದ್ಯುತ್ ಅವಘಡ, ಯುವಕ‌ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದ ಆಕಾಶ್​ ರೈಸ್ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಂದೀಪ್​(32) ಎಂಬಾತ ವಿದ್ಯುತ್​ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ರೈಸ್​ ಮಿಲ್​ನಲ್ಲಿ ವಿದ್ಯುತ್ ಅವಘಡ, ಯುವಕ‌ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೃತ ಯುವಕ
Edited By: ಕಿರಣ್ ಹನುಮಂತ್​ ಮಾದಾರ್

Updated on: Feb 08, 2023 | 1:54 PM

ದಾವಣಗೆರೆ: ಆಕಾಶ್​ ರೈಸ್​ ಮಿಲ್​ನಲ್ಲಿ ವಿದ್ಯುತ್​ ಪ್ರವಹಿಸಿ ಕಾರ್ಮಿಕ ಸಂದೀಪ್​​​(32) ಎಂಬಾತ ಸಾವನ್ನಪ್ಪಿರುವ ಘಟನೆ ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದ ರೈಸ್ ಮಿಲ್​ನಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದ ನಿವಾಸಿಯಾದ ಸಂದೀಪ್ ನೀರಿಗಾಗಿ ವಿದ್ಯುತ್​ ಪಂಪ್​ಸೆಟ್​ ಆನ್​ ಮಾಡಲು ಹೋದಾಗ ವಿದ್ಯುತ್​ ಪ್ರವಹಿಸಿ ಈ ಘಟನೆ ನಡೆದಿದೆ. ವಿದ್ಯುತ್ ಶಾಕ್​ನಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್​ನನ್ನು ಕೂಡಲೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಕಾರ್ಮಿಕ ಸಂದೀಪ್​​ ಸಾವನವ್ನಪ್ಪಿದ್ದಾನೆ. ಈ ಹಿಂದೆಯೂ ಮಿಲ್​ನಲ್ಲಿ ವಿದ್ಯುತ್ ಅವಘಡದಿಂದ ಯುವಕನೊಬ್ಬ ಮೃತಪಟ್ಟಿದ್ದ, ಮಾಲೀಕರ ನಿರ್ಲಕ್ಷ್ಯವೇ ಸಂದೀಪ್ ಸಾವಿಗೆ ಕಾರಣ ಎಂದು ಸಂದೀಪ್ ಕುಟುಂಬಸ್ಥರ ಆರೋಪಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ; ಬೈಕ್‌ ಸವಾರನಿಗೆ 10,250 ರೂ. ದಂಡ ವಿಧಿಸಿದ ಕೋರ್ಟ್

ಚಿತ್ರದುರ್ಗ: ಕಾರ್ಮಿಕ (ಹಮಾಲಿ) ರವಿಕುಮಾರ್ ಎಂಬಾತನ ಮೇಲೆ ಕುಡಿದು ವಾಹನ ಚಾಲನೆ, ಅಪಾಯಕಾರಿ ಚಾಲನೆ, ಹೆಲ್ಮೆಟ್‌ ಧರಿಸದೆ ನಿಯಮ‌ ಉಲ್ಲಂಘನೆ ಸೇರಿ ಫೆ. 2ರಂದು ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಕೇಸ್​ ದಾಖಲಾಗಿತ್ತು. ಮೆದೇಹಳ್ಳಿ ರಸ್ತೆಯಲ್ಲಿ ಬೈಕ್ ಸವಾರನನ್ನು ಸಂಚಾರಿ ಠಾಣೆ ಪೊಲೀಸರು ಹಿಡಿದಿದ್ದರು. ಆತನಿಗೆ ಚಿತ್ರದುರ್ಗ ಸಿಜೆಎಂ & ಜೆಎಂಎಫ್‌ಸಿ ಕೋರ್ಟ್ ಒಟ್ಟು 20,500 ರೂ. ದಂಡ ವಿಧಿಸಿತ್ತು. ಬಳಿಕ ಶೇ.50ರಷ್ಟು ರಿಯಾಯತಿ ನೀಡಿದ ಕೋರ್ಟ್​ 10,250ರೂ.ಗೆ ಇಳಿಸಿದ್ದು, ಅರೋಪಿಗೆ ಅದು ಕೂಡ ಕಟ್ಟಲಾಗದೇ ಒಂದು ವರ್ಷ ಕಾಲ ಸಾಧಾರಣ ಶಿಕ್ಷೆ ನೀಡಿದೆ. ಸದ್ಯ ನಾಯಾಂಗ ಬಂಧನದಲ್ಲಿರಿಸಲಾಗಿದೆ.

ರಸ್ತೆ ಮಧ್ಯೆ ಕಾರ್ ಚಾಲಕ ಹಾಗೂ ಆಟೋ ಚಾಲಕನ ಮಧ್ಯೆ ಕಿರಿಕ್

ಬೆಂಗಳೂರು: ರಸ್ತೆ ಮಧ್ಯೆ ಕಾರ್ ಚಾಲಕ ಹಾಗೂ ಆಟೋ ಚಾಲಕನ ಮಧ್ಯೆ ಜಗಳವಾಗಿರುವ ಘಟನೆ ನಗರದ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿ ನಡೆದಿದೆ. ಓವರ್ ಟೇಕ್ ಮಾಡುವ ವೇಳೆ ಇಬ್ಬರ ನಡುವೆ ಜಟಾಪಟಿ ಶುರುವಾಗಿದ್ದು, ದಾರಿ ಬಿಡದ ಹಿನ್ನಲೆ ಟ್ರಾಫಿಕ್ ಜಾಂ ಸಂಧರ್ಭದಲ್ಲಿ ಆಟೋವನ್ನ ಕಾರಿಗೆ ಅಡ್ಡ ಹಾಕಿ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ. ಆಟೋ ಚಾಲಕನ ಕೃತ್ಯ ಮತ್ತೊಂದು ಕಾರ್​ನ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:Bengaluru: ರಸ್ತೆ ದಾಟುವಾಗ ವಿದ್ಯಾರ್ಥಿನಿಗೆ ಕಾರು ಡಿಕ್ಕಿ: ಅಪಘಾತಕ್ಕೆ BBMP, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಆರೋಪ

ಎರಡು ಪ್ರತ್ಯೇಕ ಅಪಘಾತ- ಮೈ ಜುಂ ಎನಿಸುವ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ

ತುಮಕೂರು: ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ಐವರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಅಂಚೇಪಾಳ್ಯ ಸಮೀಪ ನಡೆದಿದೆ. ಈ ಎರಡೂ ಅಪಘಾತ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಂ ಎನಿಸುವಂತಿದೆ. ಮೊದಲ ಪ್ರಕರಣದಲ್ಲಿ ಮನು ಎಂಬ ಯುವಕ ಕೆಲಸದ ನೀಮಿತ್ತ ಬೈಕ್‌ನಲ್ಲಿ ಅಂಚೇಪಾಳ್ಯಕ್ಕೆ ಬಂದು ಹೋಟೆಲ್ ಮುಂಭಾಗದ ರಸ್ತೆ ಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡ ಬದಿಗೆ ಅತಿ ವೇಗವಾಗಿ ನುಗ್ಗಿತು, ಇದನ್ನು ಗಮನಿಸಿದ ಮನು ಕ್ಷರ್ಣಾದದಲ್ಲಿ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಕ್ಯಾಂಟರ್ ಬೈಕ್ ಮೇಲೆ ಹರಿದು ಬೈಕ್ ಸಂಪೂರ್ಣ ನಜ್ಜು ನುಜ್ಜಾಯಿತು, ಮನು ಎಚ್ಚರಗೊಳ್ಳದಿದ್ದಲ್ಲಿ ಆತನ ಸಾವು ಕಟ್ಟಿಟ್ಟ ಬುತ್ತಿಯಾಗಿದ್ದು, ಕ್ಷಣಾರ್ಧಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಮತ್ತೊಂದು ಘಟನೆಯಲ್ಲಿ ಬೆಂಗಳೂರಿನಿಂದ ಕುಣಿಗಲ್ ತಾಲೂಕಿನ ಅಮೃತೂರಿಗೆ ಹೋಗುತಿದ್ದ ಇನ್ನೋವಾ ಕಾರು ಪಲ್ಟಿಯಾಗಿದೆ. ರಸ್ತೆ ಮೇಲಿನ ಹಂಪ್ಸ್ ಹಾರಿಯೇ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಇನ್ನೋವಾ ಕಾರು ಹೋಟೆಲ್​ ಮುಂದೆ ನಿಂತಿದ್ದ ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದು ಪಲ್ಟಿಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಈ ದೃಶ್ಯ ಕೂಡ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಂ ಎನಿಸುವಂತಿದೆ. ರಸ್ತೆಯ ಉಬ್ಬುಗಳಿಂದ ಅಪಘಾತ ನಡೆದಿದೆ ಎನ್ನಲಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Wed, 8 February 23

Loading...
Unable to load recommendations.
Follow Us