AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Temple bell politics! ಶಿವಶಂಕರಪ್ಪ-ಸಿದ್ದೇಶ್ವರ ಸಾವಿರಾರು ಕೋಟಿ ಧನಿಕರು, ಪರಸ್ಪರ ಭ್ರಷ್ಟಾಚಾರ ಪತ್ತೆ ಹಚ್ಚಲು ಇಬ್ಬರೂ ದೇವರ ಗಂಟೆ ಬಾರಿಸಲು ಮುಂದಾಗಿದ್ದಾರೆ!

ನಗರ ದೇವತೆ ದುರ್ಗಾಂಭಿಕೆ ದೇವಿ ಗಂಟೆ ಅಂದ್ರೆ ಅದೊಂದು ರೀತಿಯಲ್ಲಿ ನ್ಯಾಯದೇವತೆ ಗಂಟೆ. ಸುಳ್ಳು ಪ್ರಮಾಣ ಮಾಡಿ ದೇವಿಯ ಗಂಟೆ ಬಾರಿಸಿದ್ರೆ ಆರು ತಿಂಗಳಲ್ಲಿ ಇಂತಹವರಿಗೆ ಯಾವುದಾದ್ರು ಅನಾಹುತವಾಗುತ್ತದೆ. ಹೀಗಾಗಿ ಜನ ಕೋರ್ಟು ಕಚೇರಿ ಅನ್ನದೇ ದೇವಸ್ಥಾನದ ಗಂಟೆ ಬಾರಿಸುತ್ತಾರೆ.

Temple bell politics! ಶಿವಶಂಕರಪ್ಪ-ಸಿದ್ದೇಶ್ವರ ಸಾವಿರಾರು ಕೋಟಿ ಧನಿಕರು, ಪರಸ್ಪರ ಭ್ರಷ್ಟಾಚಾರ ಪತ್ತೆ ಹಚ್ಚಲು ಇಬ್ಬರೂ ದೇವರ ಗಂಟೆ ಬಾರಿಸಲು ಮುಂದಾಗಿದ್ದಾರೆ!
ಶಿವಶಂಕರಪ್ಪ-ಸಿದ್ದೇಶ್ವರ ಪರಸ್ಪರ ಭ್ರಷ್ಟಾಚಾರ ಪತ್ತೆ ಹಚ್ಚಲು ದೇವರ ಗಂಟೆ ಮೊರೆಹೋಗಿದ್ದಾರೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on:Jul 20, 2023 | 11:44 AM

ದಾವಣಗೆರೆ, ಜುಲೈ 20: ಅವರಿಬ್ಬರೂ ಸಾವಿರಾರು ಕೋಟಿ ರೂಪಾಯಿ ಮಾಲೀಕರು. ಆದ್ರೆ ನೀ ಭ್ರಷ್ಟಾಚಾರ ಮಾಡಿದೀಯಾ. ನೀ ಭ್ರಷ್ಟಾಚಾರ ಮಾಡಿದ್ದೀಯಾ ಎಂದು ನಿತ್ಯ ಪರಸ್ಪರ ಆರೋಪ ಮಾಡುತ್ತಲೇ ಇರುತ್ತಾರೆ. ಈಗ ಸ್ವಲ್ಪ ಆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಭ್ರಷ್ಟಾಚಾರ (corruption) ಪತ್ತೆ ಹಚ್ಚಲು ಇಬ್ಬರೂ ಗಂಟೆಯ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಈ ಇಬ್ಬರೂ ಪ್ರಭಾವಿಗಳು ತಮ್ಮ ಹಿಂಬಾಲಕ ಮೂಲಕ ಗಂಟೆ ಬಾರಿಸಲು ಆಹ್ವಾನ ಕೊಟ್ಟಿದ್ದಾರೆ. ಇಲ್ಲಿದೆ ನೋಡಿ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹಾಗೂ ಸಿದ್ದೇಶ್ವರ (GM Siddeshwar) ಅವರ ಗಂಟೆ ರಾಜಕೀಯ ಸ್ಟೋರಿ (Temple bell politics). ದಾವಣಗೆರೆ (Davanagere) ಅಂದ್ರೆ ಕಾಂಗ್ರೆಸ್​​ ಶಾಸಕ ಶಾಮನೂರು ಶಿವಶಂಕರಪ್ಪ ಹೆಸರು ಥಟ್ ಅಂತಾ ನೆನಪಾಗಿಬಿಡುತ್ತದೆ. ಕಾರಣ ಇವರ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಸಕ್ಕರೆ ಕಾರ್ಖಾನೆ, ರೈಸ್ ಮಿಲ್ ಹೀಗೆ ಸಾವಿರಾರು ಕೋಟಿ ರೂಪಾಯಿ ವ್ಯವಹಾರ. ಮೇಲಾಗಿ ಕಾಂಗ್ರೆಸ್ ನಲ್ಲಿ ಒಳ್ಳೆ ಹೆಸರು. ಜೊತೆಗೆ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಕೂಡಾ ಶಾಮನೂರು ಕೈಯಲ್ಲಿದೆ.

ಇವರಿಗೆ ದಾವಣಗೆರೆ ಜಿಲ್ಲೆಯಲ್ಲಿ ಟಕ್ಕರ್ ಕೊಡುತ್ತಿರುವುದು ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ. ಪಕ್ಕದ ಚಿತ್ರದುರ್ಗ ಜಿಲ್ಲೆಯ ಭೀಮ ಸಮುದ್ರದ ನಿವಾಸಿ. ನಾಲ್ಕು ಸಲ ದಾವಣಗೆರೆಯಿಂದ ಸಂಸದ. ಅಡಿಕೆ ಬೆಳೆಗಾರ, ಗಣಿ ಉದ್ಯಮಿ ಕೂಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಸಿದ್ದೇಶ್ವರ ಅವರು ಸಂಬಂಧದಲ್ಲಿ ಅಳಿಯ ಆಗಬೇಕು!

ಈಗ ಲೋಕಸಭೆ ಚುನಾವಣೆ ಹತ್ತಿರಕ್ಕೆ ಬಂದಿದೆ. ಹೀಗಾಗಿ ಎರಡೂ ಕುಟುಂಬಗಳ ನಡುವೆ ಆರೋಪ ಪ್ರತ್ಯಾರೋಪ ಶುರುವಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಾಗ ಸಂಸದ ಸಿದ್ದೇಶ್ವರ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಸಹ ಶಾಮನೂರು ಬೆಂಬಲಿಗರು ಇಟ್ಟುಕೊಂಡಿದ್ದಾರಂತೆ.

ಕುಂದವಾಡ ಕೆರೆ ಹೂಳು ತೆಗೆಯಲು 16 ಕೋಟಿ ರೂ ವೆಚ್ಚ ಮಾಡಲಾಗಿದೆ. ಸಂಸದ ಸಿದ್ದೇಶ್ವರ ಹಣ ಪಡೆಯುತ್ತಿದ್ದರು. ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ ಮೂಲಕ ಹಣ ಪಡೆಯುತ್ತಿದ್ದರು. ಇದನ್ನ ಕೆಲ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಪೆನ್ ಡ್ರೈವ್ ನನ್ನ ಬಳಿ ಇದೆ. ತಾಕತ್ತಿದ್ದರೇ ನಗರ ದೇವತೆ ದುರ್ಗಾಂಭಿಕಾ ದೇವಸ್ಥಾನದ ಗಂಟೆ ಬಾರಿಸಲು ಹೇಳಿ ಎಂದು ಶಾಮನೂರು ಬೆಂಬಲಿಗರು ಸವಾಲ್ ಹಾಕಿದ್ದಾರೆ ಎಂದು ದಿನೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ- ಶಾಮನೂರು ಆಪ್ತ ಮಾಹಿತಿ ನೀಡಿದ್ದಾರೆ.

ನಗರ ದೇವತೆ ದುರ್ಗಾಂಭಿಕೆ ದೇವಿ ಗಂಟೆ ಅಂದ್ರೆ ಅದೊಂದು ರೀತಿಯಲ್ಲಿ ನ್ಯಾಯದೇವತೆ ಗಂಟೆ. ಸುಳ್ಳು ಪ್ರಮಾಣ ಮಾಡಿ ದೇವಿಯ ಗಂಟೆ ಬಾರಿಸಿದ್ರೆ ಆರು ತಿಂಗಳಲ್ಲಿ ಇಂತಹವರಿಗೆ ಯಾವುದಾದ್ರು ಅನಾಹುತವಾಗುತ್ತದೆ. ಹೀಗಾಗಿ ಜನ ಕೋರ್ಟು ಕಚೇರಿ ಅನ್ನದೇ ದೇವಸ್ಥಾನದ ಗಂಟೆ ಬಾರಿಸುತ್ತಾರೆ.

ಈಗ ಶಾಮನೂರು ಹಾಗೂ ಸಿದ್ದೇಶ್ವರ ಕುಟುಂಬದ ಆರೋಪ ಪ್ರತ್ಯಾರೋಪಕ್ಕೆ ನಗರ ದೇವತೆ ದುರ್ಗಾಂಭಿಕಾ ದೇವಿ ಗಂಟೆ ವೇದಿಕೆ ಆಗಿದೆ. ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ದೇವಿಯ ಗಂಟೆ ಬಾರಿಸಲು ಸಿದ್ಧ ನಾನು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಘೋಷಿಸಿದ್ದಾರೆ. ಶಾಮನೂರ ಕುಟುಂಬ ಸಹ ದೇವಸ್ಥಾನಕ್ಕೆ ಬರಲಿ ಎಂದು ಸವಾಲ್ ಗೆ ಪ್ರತಿ ಸವಾಲ್ ಹಾಕಿದ್ದಾರೆ ಸಂಸದ ಸಿದ್ದೇಶ್ವರ ಆಪ್ತ ಹಾಗೂ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್.

ಹೀಗೆ ಕೈ ಶಾಸಕ ಶಾಮನೂರ ಹಾಗೂ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಜಗಳ ಶುರುವಾಗಿದೆ. ಬೀಗರ ಜಗಳ-ಇದು ಮಾಮೂಲು ಅಂತಾ ಜಿಲ್ಲೆಯಲ್ಲಿ ಜನ ಮಾತಾಡುವುದು ಮಾಮೂಲಾಗಿದೆ. ಆದ್ರೆ ಈ ಜಗಳದಿಂದ ಜನಕ್ಕೆ ತೊಂದರೆ ಆಗುತ್ತಿದೆ. ಸಾವಿರಾರು ಕೋಟಿಯ ಸರದಾರರ ಕುಟುಂಬಗಳ ನಡುವಿನ ಜಗಳ ಜನ ಸಾಮಾನ್ಯರ ಜೀವ ಹಿಂಡುತ್ತಿದೆ. ಕೇವಲ 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಇಡಿ ಕುಂದವಾಡ ಕೆರೆ ನಿರ್ಮಿಸಲಾಗಿದೆ.

ಆ ಕೆರೆ ಹೂಳು ತೆಗೆಯಲು ಬರೋಬರಿ 16 ಕೋಟಿ ಖರ್ಚು ಮಾಡಿದೆಯಂತೆ ಬಿಜೆಪಿ ಸರ್ಕಾರ. ಇದೆಲ್ಲಾ ಗೋಲ್ ಮಾಲ್​ ಆಗಿದೆ ಎಂದು ಇದೀಗ ತನಿಖೆಗೆ ಕಾಂಗ್ರೆಸ್ ಮುಂದಾಗಿದೆ. ಇದರಿಂದ ಬಿಜೆಪಿಯಲ್ಲಿ ಚಡಪಡಿಕೆ ಶುರುವಾಗಿದೆ. ಲೋಕಾಯುಕ್ತ, ಸಿಬಿಐ, ಪೊಲೀಸರಿಗೆ ದೂರು ನೀಡುವುದು ಹೀಗೆ ಯಾವುದಾದರೂ ನೆಲದ ಕಾನೂನು ವ್ಯವಸ್ಥೆಗೆ ಮೊರೆ ಹೋಗದೇ ಇಬ್ಬರೂ ದೇವಸ್ಥಾನದ ಗಂಟೆಗೆ ಮೊರೆ ಹೋಗಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. ಆದ್ರೆ ಅದು ಯಾವಾಗ ಗಂಟೆ ಬಾರಿಸುತ್ತಾರೆ? ಎಂಬುದೇ ಸದ್ಯದ ಕುತೂಹಲ.

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Thu, 20 July 23