ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶಗಳಿಗೆ 2.75 ಟಿಎಂಸಿ ನೀರು ಹರಿಸಲು ನಿರ್ಧಾರ: ಡಿಕೆ ಶಿವಕುಮಾರ್​

| Updated By: ವಿವೇಕ ಬಿರಾದಾರ

Updated on: Jan 07, 2024 | 11:35 AM

ಮಳೆಯಿಲ್ಲದೆ ಈ ವರ್ಷ ಎರಡು ಸಾವರ ಕೋಟಿ ನಷ್ಟವಾಗಬಹುದು. ಕುಡಿಯುವ ನೀರಿಗೆ ಬಹಳ ದೊಡ್ಡ ತೊಂದರೆ ಆಗುವ ಪರಿಸ್ಥಿತಿ ಇದೆ. ಹೀಗಾಗಿ ತಡರಾತ್ರಿ ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಜೊತೆ ಚರ್ಚಿಸಿದ್ದೇನೆ. 2.75 ಟಿಎಂಸಿ ನೀರು ಬಿಡಬೇಕೆಂದು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶಗಳಿಗೆ 2.75 ಟಿಎಂಸಿ ನೀರು ಹರಿಸಲು ನಿರ್ಧಾರ: ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
Follow us on

ಬೆಂಗಳೂರು, ಜನವರಿ 07: ಈ ವರ್ಷ ಸಮರ್ಪಕವಾಗಿ ಮಳೆಯಾಗಲಿಲ್ಲ. ಮಾರ್ಗದರ್ಶನ ನೀಡಿದರೂ ರೈತರು ಭತ್ತ, ಮೆಣಸು ಬೆಳೆದಿದ್ದಾರೆ. ಮಳೆಯಿಲ್ಲದೆ ಈ ವರ್ಷ ಎರಡು ಸಾವಿರ ಕೋಟಿ ನಷ್ಟವಾಗಬಹುದು. ಕುಡಿಯುವ ನೀರಿಗೆ ಬಹಳ ದೊಡ್ಡ ತೊಂದರೆ ಆಗುವ ಪರಿಸ್ಥಿತಿ ಇದೆ. ಹೀಗಾಗಿ ತಡರಾತ್ರಿ ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು (Upper Krishna Project) ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಜೊತೆ ಚರ್ಚಿಸಿದ್ದೇನೆ. 2.75 ಟಿಎಂಸಿ ನೀರು ಬಿಡಬೇಕೆಂದು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ. ಮೆಣಸು ಬೆಳೆಗಾರರಿಗೆ ತೊಂದರೆ ಆಗಿದೆ, ಅವರಿಗೆ ನೀರು ತಲುಪಬೇಕು ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಕಚೇರಿ ಮುಂದೆ ಗುಂಡಿ ತೋಡಿಕೊಂಡು ಅದರಲ್ಲೇ ಕೂತಿದ್ದಾರೆ. ಸರ್ಕಾರವನ್ನು ಬ್ಲ್ಯಾಕ್​ಮೇಲ್ ಮಾಡಲು ಹೋಗಬಾರದು ಅಂದಿದ್ದೇನೆ. ರೈತರಿಂದಲೇ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ರಿಂದಲೇ ಕಾಂಗ್ರೆಸ್ ಅಂತ್ಯ ಎಂಬ ಮಾಜಿ ಪ್ರಧಾನಿ ಹೆಚ್​. ಡಿ.ದೇವೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸವಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 136 ಸ್ಥಾನ ಬಂದಿದೆ. ಇಬ್ಬರು ಪಕ್ಷೇತರರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ದೇವೇಗೌಡರು ಪದೇ ಪದೆ ನಮ್ಮನ್ನು ನೆನಪಿಸಿಕೊಂಡರೆ ನಮಗೆ ಸ್ಫೂರ್ತಿ. ದೇವೇಗೌಡರು ಏನೇ ಮಾತನಾಡಿದರೂ ಅದು ನಮಗೆ ಆಶೀರ್ವಾದ ಎಂದರು.

ಇದನ್ನೂ ಓದಿ: ಬರಗಾಲ, ಫೆಬ್ರವರಿ ಅಂತ್ಯದ ವೇಳೆಗೆ ಕುಡಿಯುವ ನೀರಿಗೆ ಹಾಹಾಕಾರ

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿಲ್ಲ. ಸಿಎಂ ಸಿದ್ದರಾಮಯ್ಯಗೂ ಸಹ ಆಹ್ವಾನ ನೀಡಿಲ್ಲ. ನಾನು ಶಿವನ ಭಕ್ತ, ಆಂಜನೇಯನ ಮೂರ್ತಿ ಇಲ್ಲಿದೆ ನೋಡಿ. ಎಲ್ಲಾ ದೇವರುಗಳು ನನ್ನ ಹೃದಯದಲ್ಲಿದ್ದಾರೆ. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆ ಆಗುತ್ತಿದೆ ಸಂತೋಷ. ಬೊಮ್ಮಾಯಿ ಫುಡ್ ಆ್ಯಕ್ಟ್ ತಂದಿದ್ಯಾರು ಎಂಬುದನ್ನೇ ಮರೆತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಅಗ್ಯಭಾಗ್ಯ ಯೋಜನೆ ಪ್ರಾರಂಭಿಸಿದರು. ಪಾಪ ಬಸವರಾಜ ಬೊಮ್ಮಾಯಿಗೆ ಇದು ಮರೆತು ಹೋಗಿದೆ ಎಂದು ವ್ಯಂಗ್ಯವಾಡಿದರು.

ನೈಸ್ ವಿಚಾರದಲ್ಲಿ ಸರ್ಕಾರ ಜಯಚಂದ್ರ ಅವರ ಬಾಯಿ ಮುಚ್ಚಿಸ್ತಿದೆ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು ಈಗ ಆ ಚರ್ಚೆ ಬೇಡ. ಅದರ ವಿಚಾರ ಬೇರೆ ಸುದ್ದಿಗೋಷ್ಠಿಯಲ್ಲಿ ಮಾತನಾಡೋಣ. ಅಧಿವೇಶನದಲ್ಲಿ ಚರ್ಚೆ ಮಾಡೋಣ ಬನ್ನಿ ಅಂದರೇ ಯಾಕೆ ಬರಲಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿದರು.

 ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ