ಜಾಮೀನು ಸಿಕ್ಕಿದರೂ ಹೆಚ್​ಡಿ ರೇವಣ್ಣಗೆ ಕಡಿಮೆಯಾಗಿಲ್ಲ ಟೆನ್ಷನ್: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಜಾಮೀನಿಗೆ ಅರ್ಜಿ

ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಸದ್ಯ ದೇಗುಲ ಸುತ್ತುತ್ತಿರುವ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣಗೆ ಇನ್ನೂ ಟೆನ್ಷನ್ ಕಡಿಮೆಯಾಗಿಲ್ಲ. ಇದೀಗ ಹೊಳೆನರಸೀಪುರದಲ್ಲಿ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲೂ ಜಾಮೀನು ಪಡೆಯಲು ಮುಂದಾಗಿದ್ದು, ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಿದ್ದಾರೆ.

ಜಾಮೀನು ಸಿಕ್ಕಿದರೂ ಹೆಚ್​ಡಿ ರೇವಣ್ಣಗೆ ಕಡಿಮೆಯಾಗಿಲ್ಲ ಟೆನ್ಷನ್: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಜಾಮೀನಿಗೆ ಅರ್ಜಿ
ಹೆಚ್​ಡಿ ರೇವಣ್ಣ
Edited By:

Updated on: May 16, 2024 | 2:34 PM

ಬೆಂಗಳೂರು, ಮೇ 16: ಜಾಮೀನು ಪಡೆದು ಜೈಲಿನಿಂದ ಹೊರಬಂದರೂ ಜೆಡಿಎಸ್ (JDS) ಶಾಸಕ ಹೆಚ್​ಡಿ ರೇವಣ್ಣ (HD Revanna) ಟೆನ್ಷನ್ ಕಡಿಮೆಯಾಗಿಲ್ಲ. ಇದೀಗ ರೇವಣ್ಣ ದೇವರ ದರ್ಶನದ ಜೊತೆಗೆ ನ್ಯಾಯ ದೇವತೆಗೆ ಮೊರೆ ಹೋಗಿದ್ದಾರೆ. ಇವತ್ತು ಬೆಳ್ಳಂ ಬೆಳಗ್ಗೆ ಬೆಂಗಳೂರಿನ ಜಯನಗರದ ಗಣಪತಿ ದೇವಸ್ಥಾನ, ಬಸವನಗುಡಿಯ ಗಂಗಾಧರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ, ನಂತರ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಕೆಆರ್‌ ನಗರ ಕಿಡ್ನ್ಯಾಪ್‌ ಕೇಸ್‌ನಲ್ಲಿ ಜಾಮೀನು ಸಿಕ್ಕಿದೆ. ಇದೀಗ ಹೊಳೆನರಸೀಪುರದಲ್ಲಿ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲೂ ಜಾಮೀನು ಪಡೆಯಲು ಮುಂದಾಗಿದ್ದಾರೆ. ಲೈಂಗಿಕ ದೌರ್ಜನ್ಯ ಕೇಸ್‌ನಲ್ಲೂ ಮೊದಲನೇ ಆರೋಪಿ ಆಗಿರುವ ರೇವಣ್ಣ, ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಗೆ ಹಾಜಾರಾಗಿದ್ದಾರೆ. ನ್ಯಾಯಾಧೀಶರ ಮುಂದೆಯೇ ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಹೊಳೆನರಸೀಪುರದ ಕೇಸ್ ಜಾಮೀನುಸಹಿತ ಕೇಸ್ ಆಗಿದ್ದರೂ ವಶಕ್ಕೆ ಪಡೆಯಬಹುದು ಎಂಬ ಅನುಮಾನದಿಂದ ಕೋರ್ಟ್‌ಗೆ ಹಾಜರಾಗಿದ್ದಾರೆ. ಈ ಹಿಂದೆಯೂ ಬಂಧನದ ಬೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಎಸ್ಐಟಿ ಎಸ್‌ಪಿಪಿ, ಜಾಮೀನು ರಹಿತ ಪ್ರಕರಣಗಳನ್ನ ದಾಖಲಿಸಿಲ್ಲ ಅಂತಾ ಸ್ಪಷ್ಟನೆ ಕೊಟ್ಟ ಬಳಿಕ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದಿದ್ದರು.

ಕಿಡ್ನ್ಯಾಪ್ ಕೇಸ್​ನಲ್ಲಿ ರೇವಣ್ಣಗೆ ಮತ್ತೆ ಸಂಕಷ್ಟ?

ಹೊಳೆನರಸೀಪುರ ಕೇಸ್‌ನಲ್ಲಿ ಬೇಲ್‌ಗಾಗಿ ಕೋರ್ಟ್ ಮೊರೆ ಹೋಗಿರೋ ರೇವಣ್ಣಗೆ ಇತ್ತ ಕೆ.ಆರ್ ನಗರ ಕೇಸ್‌ನಲ್ಲಿ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಾಮೀನು ರದ್ದು ಕೋರಿ ಎಸ್ಐಟಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ. ಯಾಕಂದರೆ, ಕಿಡ್ನ್ಯಾಪ್ ಪ್ರಕರಣದಲ್ಲಿ 2ನೇ ಆರೋಪಿ ಸತೀಶ್ ಬಾಬು ವಿಚಾರಣೆ ನಡೆಸಿರುವ ಎಸ್ಐಟಿಗೆ ಮಹತ್ವದ ಸಾಕ್ಷ್ಯಕಲೆಹಾಕಿದೆ. ಜೊತಗೆೆ ರೇವಣ್ಣ ವಿರುದ್ಧ ಬಲವಾದ ಸಾಕ್ಷ್ಯ ಕಲೆ ಹಾಕಲು ತಯಾರಿ ನಡೆಸಿದೆ. ಈ ಎಲ್ಲಾ ಅಂಶ ಮುಂದಿಟ್ಟು ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿದ್ದಾಗಲೇ, ಪಕ್ಷದ ಚಟುವಟಿಕೆಗಳಲ್ಲೇ ನನ್ನ ಸಂಪರ್ಕದಲ್ಲಿ ಇರಲಿಲ್ಲ ಪ್ರಜ್ವಲ್: ಹೆಚ್​ಡಿ ಕುಮಾರಸ್ವಾಮಿ

ಅತ್ತ ಮೈಸೂರಿನ ಜಿಲ್ಲೆ ಸಾಲಿಗ್ರಾಮದಲ್ಲಿರುವ ರೇವಣ್ಣ ಪತ್ನಿ ಭವಾನಿಗೆ ಎಸ್ಐಟಿ 2 ನೋಟಿಸ್ ನೀಡಿದೆ. ಕಿಡ್ನ್ಯಾಪ್ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದ್ರೆ, ಭವಾನಿ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಸದ್ಯ ಕಾನೂನು ಕುಣಿಕೆಯಿಂದ ಬಚಾವಾಗಲು ರೇವಣ್ಣ ದೇವರ ದರ್ಶನದ ಜೊತೆಗೆ ಕಾನೂನು ಸಮರವನ್ನೂ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us