ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವಿತ್ತು, ಆದರೆ ಹಾಲಿ ಸರ್ಕಾರದ ಆ ನೀತಿ ಹೊಡೆತ ಕೊಟ್ಟಿದೆ!

FMCG Cluster Gives Boost To Employment Generation: ರಾಜ್ಯಕ್ಕೆ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಹಿರಿಮೆಯಾಗಬೇಕಿದ್ದ ಎಫ್ಎಂಸಿಜಿ ವಲಯ ವೈಫಲ್ಯ ಕಂಡಿದೆ. ಹಿಂದಿನ ಸರ್ಕಾರದಲ್ಲಿ ಹೂಡಿಕೆ ಮಾಡೋಕೆ ಮುಂದೆ ಬಂದಿದ್ದ ಉದ್ಯಮಿಗಳೆಲ್ಲ ಈಗ ಹಿಂದೇಟು ಹಾಕುತ್ತಿದಾರೆ, ಇದಕ್ಕೆಲ್ಲ ಹಿಂದಿನ ಸರ್ಕಾರ ನಿಗದಿ ಮಾಡಿದ್ದ ಭೂ ದರವನ್ನು ಈಗಿನ ಸರ್ಕಾರ ಏರಿಕೆ ಮಾಡಿದ್ದೇ ಕಾರಣವಾಗಿದೆಯಂತೆ.

ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವಿತ್ತು, ಆದರೆ ಹಾಲಿ ಸರ್ಕಾರದ ಆ ನೀತಿ ಹೊಡೆತ ಕೊಟ್ಟಿದೆ!
ಉ.ಕ.ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವಿತ್ತು, ಆದರೆ ಸರ್ಕಾರ ಕೈ ಚೆಲ್ಲಿತು
Edited By: ಸಾಧು ಶ್ರೀನಾಥ್​

Updated on: Feb 12, 2024 | 12:08 PM

ದೇಶದಲ್ಲೇ ಎರಡನೇಯದ್ದು ಎಂದು ಹೇಳಲಾಗಿದ್ದ ಕರ್ನಾಟಕದ ಎಫ್ಎಂಸಿಜಿ ಕಂಪನಿಗಳ ಸಮೂಹ ಸ್ಥಾಪನೆಗೆ (FMCG Cluster) ಈಗ ಹಿನ್ನಡೆ ಎದುರಾಗಿದೆ. ಹಿಂದಿನ ಸರ್ಕಾರದಲ್ಲಿ ಹೂಡಿಕೆ ಮಾಡೋಕೆ ಮುಂದೆ ಬಂದಿದ್ದ ಉದ್ಯಮಿಗಳೆಲ್ಲ ಈಗ ಹಿಂದೇಟು ಹಾಕುತ್ತಿದ್ದು, ರಾಜ್ಯಕ್ಕೆ ಹಿರಿಮೆಯಾಗಬೇಕಿದ್ದ ಎಫ್ಎಂಸಿಜಿ ವಲಯ ವೈಫಲ್ಯ ಕಂಡಿದ್ದು, ಇದಕ್ಕೆಲ್ಲ ಹಿಂದಿನ ಸರ್ಕಾರ ನಿಗದಿ ಮಾಡಿದ್ದ ದರವನ್ನು ಈಗಿನ ಸರ್ಕಾರ (Siddaramaiah) ಏರಿಕೆ ಮಾಡಿದ್ದೇ ಕಾರಣವಾಗಿದೆಯಂತೆ. ಹಾಗಾದ್ರೆ ಏನಿದು ಎಫ್ಎಂಸಿಜಿ? ಸರ್ಕಾರ ಮಾಡಿರುವ ಯಡವಟ್ಟಾದರೂ ಏನು? ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ…

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಆಸ್ಸಾಂ ರಾಜ್ಯದ ಗುವಾಹಟಿಯ ನಂತರ ಎಫ್ಎಂಸಿಜಿ ಘಟಕ ಅಂದ್ರೆ ಫಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್ ಘಟಕ ಮಂಜೂರಾಗಿತ್ತು. ಮಂಜೂರಿ ಸಿಕ್ಕ ತಕ್ಷಣವೇ ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ 590 ಎಕರೆ ಜಮೀನು ಕಾಯ್ದಿರಿಸಿ ಹೂಡಿಕೆದಾರರ ಸಮಾವೇಶ ಸಹ ಮಾಡಲಾಗಿತ್ತು.

ಈ ಸಮಾವೇಶದಲ್ಲಿ 17 ಕಂಪನಿಗಳು ತಮ್ಮ ಉತ್ಪಾದನಾ ಘಟಕ ತೆರೆಯೋದಕ್ಕೆ ಮುಂದೆ ಬಂದಿದ್ದವು. ಅದರಲ್ಲಿ ಒಂದೆರಡು ಕಂಪನಿ ಮಾತ್ರ ತಮ್ಮ ಘಟಕ ಆರಂಭಿಸಿದ್ದರೆ ಉಳಿದೆಲ್ಲವು ಪತ್ತೆಯೇ ಇಲ್ಲವಾಗಿವೆ. ಇದಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗದಿ ಮಾಡಿದ್ದ ಜಮೀನು ದರ ಈಗ ಏರಿಕೆಯಾಗಿದ್ದೇ ಕಾರಣವಂತೆ. ಆ ಸಮಯದಲ್ಲಿ ಪ್ರತಿ ಎಕರೆಗೆ 95 ಲಕ್ಷ ರೂಪಾಯಿ ಇತ್ತು. ಅದು ಈಗ 1 ಕೋಟಿ 39 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರಂತೆ. ಆದರೆ ಈ ರೀತಿ ದರ ಏರಿಕೆ ಮಾಡಿರುವುದಕ್ಕೆ ಏನಾದರೂ ಬಲವಾದ ಕಾರಣ ಇದ್ದೇ ಇರುತ್ತದೆ ಅಲ್ಲವಾ ಎಂದು ನಿಗೂಢವಾಗಿ ಪ್ರಶ್ನಿಸುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ನೇರವಾಗಿ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎಫ್ಎಂಸಿಜಿ ಕ್ಷೇತ್ರದಲ್ಲಿ ಪೇಸ್ಟ್, ಅಡುಗೆ ಎಣ್ಣೆ, ಶಾಂಪು, ಕೊಬ್ಬರಿ ಎಣ್ಣೆ, ಸೋಪು, ಫೇಸ್​​ವಾಶ್​​​​, ಫೇಸ್ ಮಾಸ್ಕ್, ತಂಪು ಪಾನೀಯ… ಹೀಗೆ ಗ್ರಾಹಕ ಬಳಕೆಯ ವಸ್ತುಗಳ ಉತ್ಪಾದನಾ ಘಟಕಗಳನ್ನು ತೆರೆಯಬಹುದು. ಈಗಾಗಲೇ ಗುವಾಹಟಿಯಲ್ಲಿ 70 ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಎರಡು ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ: ಏನಿದರ ವಿಶೇಷ? ಇಲ್ಲಿದೆ ವಿವರ

ಇದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಕ್ಲಸ್ಟರ್ ನಿಂದ ಹೊಸ ಉದ್ಯೋಗ ಸೃಷ್ಟಿ (FMCG Cluster Gives Boost To Employment Generation ) ಆಗೋದಿತ್ತು. ಇಲ್ಲಿಯವರೆಗೆ ಒಡಂಬಡಿಕೆ ಮಾಡಿಕೊಂಡಿರುವವರ ಪೈಕಿ ಐದು ಕಂಪನಿಗಳು ಭೂಮಿ ಖರೀದಿಸಿದ್ದು, ಅದರಲ್ಲಿ ಒಂದೆರಡು ಮಾತ್ರ ಆರಂಭ ಆಗಿವೆ. ಸುಮಾರು 500 ಜನರಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಆದರೆ ಇಂತಹ ಸಮಯದಲ್ಲಿಯೇ ಜಮೀನು ದರ ಏರಿಕೆ ಮಾಡಿದ್ದರಿಂದ ಯಾವುದೇ ಹೂಡಿಕೆದಾರರು ಮುಂದೆ ಬರುತ್ತಿಲ್ಲವಂತೆ. ಇನ್ನು ಸರ್ಕಾರದ ಈ ದರ ಏರಿಕೆ ಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಂಡಿಸಿದ್ದು, ಹಿಂದಿನ ದರದಲ್ಲಿ ಜಮೀನು ಕೊಡಬೇಕು. ಇದರಲ್ಲಿಯೂ ರಾಜಕೀಯ ಮಾಡಬಾರದು ಎಂದಿದ್ದಾರೆ.

ಸರ್ಕಾರದ ಈ ಪ್ರತಿಕೂಲ ನಿಲುವಿನಿಂದಾಗಿ ಈಗ ರೈತರಿಂದ ಪಡೆದುಕೊಂಡಿರೋ ಜಮೀನು ಕೂಡ ಖಾಲಿ ಬಿದ್ದಿದ್ದು, ಅತ್ತ ಕೈಗಾರಿಕೆಗಳು ಸಹ ಇಲ್ಲದಂತಾಗಿ ಹೋಗಿವೆ. ಸರ್ಕಾರ ಇನ್ನಾದರೂ ತನ್ನ ಬೆಲೆ ಏರಿಕೆಯಿಂದ ಹಿಂದೆ ಸರಿಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us