ದೋಷಯುಕ್ತ ವಿಸ್ಕಿ ಮಾರಾಟ ಮಾಡಿದ ಪಿಂಟೋ ವೈನ್ ಲ್ಯಾಂಡ್‌ಗೆ 1 ಲಕ್ಷ ರೂ. ದಂಡ

ದೋಷಯುಕ್ತ ವಿಸ್ಕಿ ಸರಬರಾಜು ಮಾಡಿದ ಹುಬ್ಬಳ್ಳಿಯ ಪಿಂಟೋ ವೈನ್ ಲ್ಯಾಂಡ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಇದರ ಜೊತೆಗೆ ಪ್ರಕರಣದ ಖರ್ಚು ವೆಚ್ಚವನ್ನೂ ನೀಡುವಂತೆ ಸೂಚಿಸಿದೆ.

ದೋಷಯುಕ್ತ ವಿಸ್ಕಿ ಮಾರಾಟ ಮಾಡಿದ ಪಿಂಟೋ ವೈನ್ ಲ್ಯಾಂಡ್‌ಗೆ 1 ಲಕ್ಷ ರೂ. ದಂಡ
ದೋಷಯುಕ್ತ ವಿಸ್ಕಿ ಮಾರಾಟ ಮಾಡಿದ ಪಿಂಟೋ ವೈನ್ ಲ್ಯಾಂಡ್‌ಗೆ 1 ಲಕ್ಷ ರೂ. ದಂಡ ವಿಧಿಸಿದ ಧಾರವಾಡದ ಗ್ರಾಹಕರ ಕೋರ್ಟ್
Edited By: Rakesh Nayak Manchi

Updated on: Jun 22, 2023 | 8:33 PM

ಧಾರವಾಡ: ದೋಷಯುಕ್ತ ವಿಸ್ಕಿ (Whisky) ಸರಬರಾಜು ಮಾಡಿದ ಹುಬ್ಬಳ್ಳಿಯ ಪಿಂಟೋ ವೈನ್ ಲ್ಯಾಂಡ್‌ಗೆ 1.10 ಲಕ್ಷ ರೂ. ದಂಡ ಮತ್ತು ಪರಿಹಾರ ನೀಡಲು ಧಾರವಾಡದ ಗ್ರಾಹಕರ ನ್ಯಾಯಾಲಯ (Dharwad Consumer Court) ಆದೇಶ ಹೊರಡಿಸಿದೆ. ಬೆಳಗಾವಿ ರಾಯಬಾಗ ತಾಲೂಕಿನ ಶಿವಪುತ್ರ ಕುಮಟಿ ಎಂಬುವರು 2018 ರ ಜುಲೈ 9 ರಂದು ಪಿಂಟೋ ವೈನ್ ಲ್ಯಾಂಡ್‌ನಿಂದ 650 ರೂ. ನೀಡಿ ಇಂಪೀರಿಯಲ್ ಬ್ಲೂ ವಿಸ್ಕಿ ಬಾಟಲ್ ಖರೀದಿಸಿದ್ದರು. ಆ ವಿಸ್ಕಿ ಬಾಟಲ್‌ನ್ನು ತೆಗೆಯುವ ಪೂರ್ವದಲ್ಲಿ ಗಮನಿಸಿದಾಗ ಆ ಬಾಟಲ್‌ನಲ್ಲಿ ಗಾಜಿನ ಚೂರುಗಳು ಕಾಣಿಸಿಕೊಂಡಿದ್ದವು.

ಶಿವಪುತ್ರ ಬೇರೆ ಬಾಟಲ್ ನೀಡುವಂತೆ ಪಿಂಟೋ ವೈನ್ ಲ್ಯಾಂಡ್‌ಗೆ ವಿನಂತಿಸಿದ್ದರು. ಅದಕ್ಕೆ ಒಪ್ಪದ ಪಿಂಟೋ ವೈನ್ ಲ್ಯಾಂಡ್​ನವರು ಬಾಟಲ್‌ನಲ್ಲಿ ಗಾಜಿನ ಚೂರು ಇರುವುದು ನನ್ನ ತಪ್ಪಿನಿಂದಲ್ಲ. ಅದು ಉತ್ಪಾದಕರ ತಪ್ಪು ಎನ್ನುವ ಕಾರಣ ನೀಡಿ ಬಾಟಲ್ ಹಿಂಪಡೆಯಲು ನಿರಾಕರಿಸಿದ್ದರು. ಒಂದು ವೇಳೆ ಬಾಟಲ್‌ನಲ್ಲಿ ಗಾಜಿನ ಚೂರು ಇರುವುದನ್ನು ಗಮನಿಸದೇ ಹಾಗೆಯೇ ಅದರಲ್ಲಿನ ಮದ್ಯ ಸೇವಿಸಿದ್ದರೆ ಜೀವಕ್ಕೆ ಅಪಾಯ ಆಗುವ ಸಂಭವವಿತ್ತು ಎಂದು ಶಿವಪುತ್ರ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು ವೈನ್ ಲ್ಯಾಂಡ್ ವಿರುದ್ಧ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿ: ಹಾಲಿನ ದರ ಹೆಚ್ಚಾದರೆ ಹೊಟೇಲ್ ತಿಂಡಿ ಬೆಲೆಯಲ್ಲೂ ಏರಿಕೆ: ಹೊಟೇಲ್ ಮಾಲೀಕರು ಹೇಳುವುದೇನು?

ಈ ಕುರಿತು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ, ಪ್ರಕರಣದಲ್ಲಿ ನೋಟಿಸ್ ಜಾರಿಯಾದರೂ ಪಿಂಟೋ ವೈನ್ ಲ್ಯಾಂಡ್‌ರವರು ಗೈರು ಹಾಜರಾಗಿದ್ದರು. ಅಲ್ಲದೇ, ತಮ್ಮ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಉತ್ಪಾದಕರು ಅಂತಹ ಆಕ್ಷೇಪಾರ್ಹ ಪಾನೀಯಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ತಾವು ಹೊಣೆಗಾರರಾಗುವುದಿಲ್ಲ ಎಂದು ವೈನ್ ಲ್ಯಾಂಡ್ ಹಾಗೂ ಉತ್ಪಾದಕರು ಆಕ್ಷೇಪಿಸಿದ್ದರು. ತಾನು ಖರೀದಿಸಿದ ವಿಸ್ಕಿ ಬಾಟಲಿ 2 ಮತ್ತು 3 ನೇ ಎದುರುದಾರರು ಉತ್ಪಾದಿಸಿದ ಪಾನೀಯ ಎಂದು ರುಜುವಾತು ಪಡಿಸುವಲ್ಲಿ ದೂರುದಾರ ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಲಾಗಿದೆ.

ಹಣ ಪಡೆದು ಆ ರೀತಿ ದೋಷಯುಕ್ತ ನಕಲಿ ವಿಸ್ಕಿ ಮಾರಾಟ ಮಾಡಿದ ಸಂಗತಿಯನ್ನು 1 ನೇ ಎದುರುದಾರ ಅಲ್ಲಗಳೆದಿಲ್ಲವಾದ್ದರಿಂದ ದೂರುದಾರರಿಗೆ ಅವರು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಹಾಗೂ ಮೋಸದ ವ್ಯಾಪಾರ ಮಾಡಿದ್ದಾರೆಂದು ತೀರ್ಪಿನಲ್ಲಿ ಅಭಿಪ್ರಾಯ ಪಟ್ಟು ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ 1 ಲಕ್ಷ ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚವೆಂದು 10000 ರೂ. ನೀಡುವಂತೆ 1 ನೇ ಎದುರುದಾರ ಪಿಂಟೋ ವೈನ್ ಲ್ಯಾಂಡ್ ಮಾಲೀಕರಿಗೆ ನಿರ್ದೇಶಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:33 pm, Thu, 22 June 23

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us