
ಧಾರವಾಡ, ಆಗಸ್ಟ್ 2: ಉತ್ತರ ಕರ್ನಾಟಕದ ಜನರ ಪಾಲಿನ ಮಾನಸಿಕ ಸಂಜೀವಿನಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆ (DIMHANS) ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಕೋವಿಡ್ ನಂತರದ ದಿನಗಳಲ್ಲಿ ದೇಶದಲ್ಲಿ ಆರಂಭಿಸಲಾಗಿರುವ ಟೆಲಿ ಮಾನಸ್ ಯೋಜನೆಯಡಿ ಡಿಮ್ಹಾನ್ಸ್ ದಾಖಲೆ ಸಂಖ್ಯೆಯ ಜನರಿಗೆ ಮಾನಸಿಕ ಸಲಹೆ, ಚಿಕಿತ್ಸೆ ನೀಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆ ಮೂಲಕ ಅನೇಕರ ಆತ್ಮಹತ್ಯೆಗಳನ್ನು ತಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಗುವಿನಿಂದ ಹಿಡಿದು ವಯೋ ವೃದ್ಧರವರೆಗೂ ಮಾನಸಿಕ ಒತ್ತಡ ಸವಾಲಾಗಿದೆ. ಈ ಮಾನಸಿಕ ಒತ್ತಡ ತಡೆಯಲಾಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು. ಮಾನಸಿಕ ರೋಗಕ್ಕೆ ಪ್ರಾಥಮಿಕ ಮಟ್ಟದಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ದೊರೆತರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದನ್ನು ಟೆಲಿ ಮಾನಸ್ ಸಾಬೀತುಪಡಿಸಿದೆ. ವಿದ್ಯಾರ್ಥಿಗಳು, ಯುವಕರು, ಮದ್ಯವ್ಯಸನಿಗಳು, ಪತಿ-ಪತ್ನಿ, ವೃದ್ಧರು ಅನೇಕ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ನಿತ್ಯ ಇಂತಹ ಸಮಸ್ಯೆ ಮತ್ತು ಒತ್ತಡಗಳಿಂದ ಬಳಲುವವರು ಟೆಲಿ ಮಾನಸ್ಗೆ ಕರೆ ಮಾಡಿ ಮನಸ್ಸು ಹಗರು ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆಯ ಟೆಲಿ ಮಾನಸ್ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 65 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ, ಅವರಿಗೆ ಪರಿಹಾರ ಮಾರ್ಗಗಳನ್ನು ಒದಗಿಸಿ, ದಾಖಲೆ ಮಾಡಿದೆ.
ಕೋವಿಡ್ ನಂತರದಲ್ಲಿ ದೇಶದಲ್ಲಿ ಸಾಕಷ್ಟು ಜನರು ಮಾನಸಿಕ ಒತ್ತಡಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022ರಲ್ಲಿ ಟೆಲಿ ಮಾನಸ್ ಎಂಬ ನೂತನ ಕಾರ್ಯಕ್ರಮ ಶುರು ಮಾಡಿತು. ದೇಶದ ಪ್ರತಿ ರಾಜ್ಯದಲ್ಲೂ ಟೆಲಿ ಮಾನಸ ಕೇಂದ್ರಗಳಿದ್ದು, ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಧಾರವಾಡದ ಡಿಮಾನ್ಸ್ನಲ್ಲಿ ಈ ಕೇಂದ್ರಗಳು 2022ರಿಂದ ಕಾರ್ಯ ನಿರ್ವಹಿಸುತ್ತಿವೆ.
ಎರಡೂ ಕೇಂದ್ರದಡಿಯಲ್ಲಿ ಇದುವರೆಗೂ ಒಂದೂರೆ ಲಕ್ಷ ಕರೆಗಳನ್ನು ಸ್ವೀಕರಿಸಿ, ಪರಿಹಾರ ಒದಗಿಸಲಾಗಿದೆ. ಉಚಿತ ಸಹಾಯವಾಣಿ ಸಂಖ್ಯೆ 14416 ಅಥವಾ 18008914416ಕ್ಕೆ ಫೋನ್ ಮಾಡಿದರೆ ದಿನದ 24 ಗಂಟೆಯೂ ಪಾಳಿ ಪ್ರಕಾರ ಕಾರ್ಯನಿರ್ವಹಿಸುತ್ತಿರೋ 20 ಜನ ಸಿಬ್ಬಂದಿ, ಆಪ್ತ ಸಮಾಲೋಚಕರು ಕರೆ ಸ್ವೀಕರಿಸುತ್ತಾರೆ. ಕರೆ ಮಾಡುವಾಗ ಇನ್ನೊಂದು ಕರೆ ಬಂದರೂ ವೇಟಿಂಗ್ ಮೂಲಕ ನಂತರದಲ್ಲಿ ಅವರನ್ನು ಸಂಪರ್ಕಿಸುವ ವ್ಯವಸ್ಥೆಯೂ ಇದೆ.
ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು ಹಾಗೂ ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕರೆ ಮಾಡಿ, ಪರಿಹಾರವನ್ನು ಕಂಡುಕೊಳ್ಳಬಹುದು.
ಈ ಹಿಂದೆ ಬಂದಿರುವ ಕರೆಗಳ ಮಾಹಿತಿ ಪ್ರಕಾರ, ಹೆಚ್ಚು ರಾತ್ರಿ ಹೊತ್ತು ಕರೆಗಳು ಬರುತ್ತಿವೆ. ಈ ಕರೆಗಳ ಪೈಕಿ ಶೇ 85ರಷ್ಟು ಜನರು ಆರೋಗ್ಯ, ಶಿಕ್ಷಣ, ವೈಯಕ್ತಿಕ ಬದುಕು, ಅತ್ತೆ-ಸೊಸೆ ಜಗಳ, ಲೈಂಗಿಕ ಸಮಸ್ಯೆಗಳ ಬಗ್ಗೆ ದೂರುಗಳನ್ನು ಹೇಳಿಕೊಂಡಿದ್ದಾರೆ. ಶೇ 15ರಷ್ಟು ಜನರು ವಿವಿಧ ಚಟಗಳಿಂದ ಹೊರ ಬರುವುದು ಸೇರಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಈ ಪೈಕಿ ನಾವು ಗಂಭೀರ ಸಮಸ್ಯೆಗಳಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಹೋಗುವ ಸಂಗತಿಗಳಿದ್ದರೆ, ಆಪ್ತಸಮಾಲೋಚಕರು ಈ ಕರೆಯನ್ನು ಮನೋವೈದ್ಯರಿಗೆ ವರ್ಗಾಯಿಸುತ್ತಾರೆ. ಮನೋವೈದ್ಯರು ಅವರೊಂದಿಗೆ ವಿಡಿಯೋ ಕಾಲ್ ಮಾಡಿಯಾದರೂ ಅಥವಾ ಅವರನ್ನು ಡಿಮ್ಹಾನ್ಸ್ಗೆ ಕರೆಯಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ. ಇದುವರೆಗೂ ಸುಮಾರು 300 ಆತ್ಮಹತ್ಯೆಗಳನ್ನು ತಡೆಯುವಲ್ಲಿ ಈ ಕೇಂದ್ರ ಯಶಸ್ವಿಯಾಗಿದೆ. ಇಲ್ಲಿ ಪ್ರಮುಖವಾದ ವಿಚಾರವೆಂದರೆ, ಕರೆ ಮಾಡಿದವರ ಮಾಹಿತಿ ಮಾತ್ರ ಗೌಪ್ಯವಾಗಿರುತ್ತೆ ಎಂಬುದು.
ಪ್ರತಿ ಸಮಸ್ಯೆಗೆ ಇದೆ ಪರಿಹಾರವಿದೆ ಎಂಬ ಮಹತ್ವದ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ನಿಮ್ಹಾನ್ಸ್ ರೂಪಿಸಿರೋ ಯೋಜನೆಗೆ, ಬೆಂಗಳೂರಿನ ಐಐಐಟಿ ಸಂಸ್ಥೆ ಸಾಫ್ಟ್ವೇರ್ ತಯಾರಿಸಿಕೊಟ್ಟಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದು ಯಾರೂ ಆತ್ಮಹತ್ಯೆ ಅಥವಾ ಇನ್ನಾವುದೇ ಕಠಿಣ ಕ್ರಮಕ್ಕೆ ಮುಂದಾಗದೇ ಉತ್ತಮ, ಒತ್ತಡ ರಹಿತ ಜೀವನ ನಡೆಸಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ. ನೆಮ್ಮದಿಯ ಜೀವನ ನಡೆಸಲು ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಆರೋಗ್ಯ ಅನ್ನೋದನ್ನು ಜನರು ಅರ್ಥ ಮಾಡಿಕೊಂಡು, ಇಂಥ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.
ಸಂಸ್ಥೆಯ ಸಾಧನೆ ಬಗ್ಗೆ ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣ ಕುಮಾರ್ ‘ಟಿವಿ9’ಜೊತೆಗೆ ಮಾತನಾಡಿದ್ದು, ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಕಳೆದ ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೋರ್ವ ಧಾರವಾಡದ ರೈಲ್ವೆ ನಿಲ್ದಾಣದ ಬಳಿ ಹೋಗಿದ್ದ. ಅಲ್ಲಿ ಟೆಲಿ ಮಾನಸ್ ಪೋಸ್ಟರ್ ನೋಡಿ, 14416 ನಂಬರ್ ಗೆ ಫೋನ್ ಮಾಡಿದ. ಕೂಡಲೇ ಆತನಿಗೆ ಕೌನ್ಸೆಲಿಂಗ್ ಮಾಡಲಾಯಿತು. ಬಳಿಕ ಆತನ ಮನವೊಲಿಸಿ ಡಿಮ್ಹಾನ್ಸ್ಗೆ ಕರೆಯಿಸಿಕೊಳ್ಳಲಾಯಿತು. ಬಳಿಕ ಆತನಿಗೆ ಆಪ್ತ ಸಮಾಲೋಚನೆ ಮಾಡಿದ ಬಳಿಕ ಆತ ಗುಣಮುಖನಾದ. ಇದೀಗ ಆ ಯುವಕ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇದರರ್ಥ, ಸಮಸ್ಯೆಗಳು ಬಂದ ಕೂಡಲೇ ಆತ್ಮಹತ್ಯೆಯೊಂದೇ ದಾರಿಯಲ್ಲ. ಬದಲಿಗೆ ಆ ಸಮಸ್ಯೆಗಳನ್ನು ಮೀರಿ ನಿಂತು ಬದುಕನ್ನು ಗೆಲ್ಲಬೇಕು. ಟೆಲಿ ಮಾನಸ್ ಇಂಥ ಆತ್ಮಸ್ಥೈರ್ಯವನ್ನು ಜನರಲ್ಲಿ ತುಂಬುವಲ್ಲಿ ಯಶಸ್ವಿಯಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ನೀವು ಕೂಡ ಹಾಸಿಗೆ ಮೇಲೆ ಮಲಗಿ ರಾತ್ರಿಯಿಡೀ ಫಿಲ್ಮ್ ನೋಡ್ತೀರಾ? ಹಾಗಿದ್ರೆ ಈ ವಿಷಯ ತಿಳಿದುಕೊಳ್ಳಿ
ಟೆಲಿ ಮಾನಸ್ ಕೇಂದ್ರದ ನೋಡಲ್ ಅಧಿಕಾರಿ ಡಾ. ರಂಗನಾಥ ಕುಲಕರ್ಣಿ ಮಾತನಾಡಿ, ಈ ಟೆಲಿ ಮಾನಸ್ನ ವಿಶೇಷ ಎಂದರೆ ಯಾವುದೇ ಕಾರಣಕ್ಕೂ ಯಾರ ಐಡೆಂಟಿಟಿಯನ್ನು ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಜನರು ಎಲ್ಲೇ ಇದ್ದರೂ ಮೊಬೈಲ್ ಮೂಲಕ ತಮ್ಮ ಸಮಸ್ಯೆಯನ್ನು ನಮ್ಮ ಸಿಬ್ಬಂದಿಗೆ ಹೇಳಿಕೊಳ್ಳಬಹುದು. ಅಲ್ಲದೇ ಅವರ ಮೊಬೈಲ್ ಸಂಖ್ಯೆ ಕೂಡ ಡಿ ಕೋಡ್ ಆಗಿರುತ್ತದೆ. ಹೀಗಾಗಿ ಯಾವ ರೋಗಿಯ ಗುರುತನ್ನು ಕೂಡ ಪತ್ತೆ ಹಚ್ಚಲು ಸಾಧ್ಯವೇ ಆಗೋದಿಲ್ಲ. ಇಲ್ಲಿ ರೋಗಿಗಳು ಫೋನ್ ಮಾಡಿದಾಗ ಮೂರು ಹಂತಗಳಲ್ಲಿ ಅವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಅವರ ಮಾನಸಿಕ ಸಮಸ್ಯೆ ತೀವ್ರವಾಗಿದೆ ಎಂದು ಅನ್ನಿಸಿದರೆ ಅವರ ಮನವೊಲಿಸಿ, ಡಿಮ್ಹಾನ್ಸ್ ಅಥವಾ ಆ ವ್ಯಕ್ತಿಯ ಸಮೀಪದ ಮಾನಸಿಕ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಗುತ್ತದೆ. ಆ ಮೂಲಕ ಆತನ ಸಮಸ್ಯೆಯನ್ನು ಪರಿಹರಿಸೋ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.