ಅಶೋಕ್ ವಿರುದ್ಧದ ನೂರಾರು ಕೋಟಿ ರೂ ಬೆಲೆಬಾಳುವ ಜಮೀನಿನ ಹಗರಣದ ದಾಖಲೆ ಬಿಡುಗಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2024 | 7:31 PM

ನಿನ್ನೆ ಖುದ್ದು ಸಿಎಂ ಸಿದ್ದರಾಮಯ್ಯರ ಪತ್ನಿಯೇ ಮುಡಾ ಕಚೇರಿಗೆ ಬಂದು ಸೈಟ್ ವಾಪಸ್​ ಕೊಡೋದಾಗಿ ಹೇಳಿದ್ರು. ಇದಾಗ್ತಿದ್ದಂತೆಯೇ ತಕ್ಷಣವೇ ಸಿಎಂ ಪತ್ನಿಯ ಹೆಸರಿನಲ್ಲಿದ್ದ ಸೈಟ್​ಗಳು ಮುಡಾ ಪಾಲಾಗಿದೆ. ಈ ವಿಚಾರವಾಗಿ ಆರ್​ ಅಶೋಕ್​ ಕಿಡಕಾರಿದ್ದರು. ಇದೀಗ ಕಾಂಗ್ರೆಸ್​ ಸಚಿವರು ಅಶೋಕ್ ವಿರುದ್ಧದ ನೂರಾರು ಕೋಟಿ ಬೆಲೆಬಾಳುವ ಜಮೀನಿನ ಹಗರಣದ ದಾಖಲೆ ಬಿಡುಗಡೆ ಮಾಡಿದ್ದಾರೆ.

ಅಶೋಕ್ ವಿರುದ್ಧದ ನೂರಾರು ಕೋಟಿ ರೂ ಬೆಲೆಬಾಳುವ ಜಮೀನಿನ ಹಗರಣದ ದಾಖಲೆ ಬಿಡುಗಡೆ
ಅಶೋಕ್ ವಿರುದ್ಧದ ನೂರಾರು ಕೋಟಿ ರೂ ಬೆಲೆಬಾಳುವ ಜಮೀನಿನ ಹಗರಣದ ದಾಖಲೆ ಬಿಡುಗಡೆ
Follow us on

ಬೆಂಗಳೂರು, ಅಕ್ಟೋಬರ್​ 02: ವಿಪಕ್ಷ ನಾಯಕ ಆರ್.ಅಶೋಕ್ (R Ashoka) ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್​​ ಸಚಿವರು ಬಿಡುಗಡೆ ಮಾಡಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ  ಪರಮೇಶ್ವರ್ ಮತ್ತು ಸಚಿವ ಹೆಚ್​ಕೆ ಪಾಟೀಲ್​ರಿಂದ ದಾಖಲೆ ಬಿಡುಗಡೆ ಮಾಡಲಾಗಿದೆ.

ದಾಖಲೆ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಗೃಹ ಸಚಿವ ಡಾ. ಜಿ  ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಲದಲ್ಲಿ ಏನಾಗಿತ್ತು ಎಂಬುದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ಇದು. ವಿತ್ ರೆಕಾರ್ಡ್ಸ್ ನಾವು ನಿಮ್ಮ ಮುಂದೆ ಮಂಡಿಸುತ್ತೇವೆ. ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1 ರಲ್ಲಿ 32 ಗುಂಟೆ ಜಮೀನನ್ನು ಬಿಡಿಎ ನೋಟಿಫೈ ಮಾಡಿತ್ತು. 1977 ಫೆಬ್ರವರಿಯಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮೊದಲ ನೊಟಿಫಿಕೇಷನ್ ಹೊರಡಿಸಿತ್ತು.

ಇದನ್ನೂ ಓದಿ: ಸೈಟ್ ವಾಪಸ್ ಪಡೆದು ಕೋರ್ಟ್ ಆದೇಶ ಉಲ್ಲಂಘನೆ: ಮುಡಾ ಆಯುಕ್ತರ ಬಂಧನಕ್ಕೆ ಕುಮಾರಸ್ವಾಮಿ ಆಗ್ರಹ

26 ಫೆಬ್ರವರಿ 2003ರಲ್ಲಿ ಹಾಗೂ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಬಿಡಿಎ ನೊಟಿಫಿಕೇಷನ್​ಗೂ ಮೊದಲು ಈ ಜಮೀನು ರಾಮಸ್ವಾಮಿ ಎನ್ನುವವರ ಒಡೆತನದಲ್ಲಿತ್ತು. ಅದಾದ ಬಳಿಕ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್ ಅಶೋಕ್ ಶುದ್ಧಕ್ರಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಿಎಸ್ ಯಡಿಯೂರಪ್ಪ ಹಾಗೂ ಆರ್ ಅಶೋಕ್ ಅಕ್ರಮ: ಕಾಂಗ್ರೆಸ್ ಆರೋಪ

38 ಗುಂಟೆ ಬಿಡಿಎ ಭೂಮಿಯನ್ನು ಅಕ್ರಮವಾಗಿ ರೆಜಿಸ್ಟರ್ ಮಾಡಿಸಿಕೊಂಡಿದ್ದಾರೆ ಆರ್ ಅಶೋಕ್. 16/10/2009ರಲ್ಲಿ ರಾಮಸ್ವಾಮಿ ಕಡೆಯವರಿಂದ ಈ ಜಮೀನನ್ನು ಡಿ ನೊಟಿಫಿಕೇಷನ್ ಮಾಡಿಕೊಡಲು ಅರ್ಜಿ ಸಲ್ಲಿಸುತ್ತಾರೆ. ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರು ಆ ಕಡತದ ಮೇಲೆ ‘ಕೂಡಲೇ ಮಂಡಿಸಿ’ ಎಂದು ಬರೆದು ಸಹಿ ಹಾಕಿದ್ದಾರೆ. ಅಸಲಿಗೆ ಈ ಸರ್ವೇ ನಂಬರ್ ಜಮೀನಿನ ಮಾಲೀಕತ್ವ 1977ರಲ್ಲಿ ಬಂದಿದೆ. ಆದರೆ ರಾಮಸ್ವಾಮಿಯಿಂದ ಆರ್ ಅಶೋಕ್ ಕ್ರಯ ಮಾಡಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಜಿವಿ ಅತ್ರಿ ಎಂಬವರು ಲೋಕಾಯುಕ್ತದಲ್ಲಿ ಈ ಕೇಸ್​ಗೆ ಸಂಬಂಧ ಪೆಟಿಷನ್ ಹಾಕಿದ್ದರು. ಪೆಟಿಷನ್ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಮೇಲೆ ಆರ್ ಅಶೋಕ್ ಜಮೀನು ವಾಪಾಸ್ ಕೊಡುವ ನಿರ್ಧಾರ ಮಾಡುತ್ತಾರೆ. 28/07/2011ರಲ್ಲಿ ಬಿಡಿಎಗೆ ವಾಪಾಸ್ ಕೊಡುವ ಬಗ್ಗೆ ಪತ್ರ ಬರೆದಿದ್ದರು. ಬಿಡಿಎ ಸ್ವತ್ತನ್ನೇ ಆರ್ ಅಶೋಕ್ ವಾಪಾಸ್ ಬಿಡಿಗೆ ಕೊಡಲು ಯಾರು ಈತ? ಈ ಕೇಸ್ ಹೈ ಕೋರ್ಟ್ ಮೆಟ್ಟಿಲೇರುತ್ತೆ. ಈ ವೇಳೆ ಹೈ ಕೋರ್ಟ್ ಈ ಜಾಗ ಸದ್ಯ ಬಿಡಿಎ ಕೈಯಗೆ ಸೇರಿದೆ. ಹೀಗಾಗಿ ಆರೋಪಿತರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕುವ ಅಗತ್ಯ ಇಲ್ಲ ಎಂದು ಹೈ ಕೋರ್ಟ್ ಹೇಳಿತ್ತು ಎಂದು ತಿಳಿಸಿದ್ದಾರೆ.

ಈಗ ಸಿದ್ದರಾಮಯ್ಯ ಪತ್ನಿ ಅವರು ವಾಪಾಸ್ ಕೊಟ್ಟ ಮೇಲೂ ಬಿಜೆಪಿಗರು ಏನು ಹೇಳುತ್ತಿದ್ದಾರೆ? ನಿಮ್ಮ ಜಮೀನೆ ಅಲ್ಲದ ಜಮೀನನ್ನು ನೀವು ವಾಪಾಸ್ ಕೊಟ್ಟು ಬಂದಿದ್ದೀರಿ. ನೀವು ಈಗ ಉಡುಗೊರೆಯಾಗಿ ಸಿಕ್ಕ ಜಮೀನು ವಾಪಾಸ್ ಕೊಟ್ಟ ಮೇಲೂ ಆರೋಪ ಮುಂದುವರೆಸುತ್ತಿದ್ದೀರಿ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ ಎಂಟ್ರಿ: ಮೊದಲ ಸಮನ್ಸ್​ ಜಾರಿ, ಯಾರಿಗೆ ಗೊತ್ತಾ?

ಸಿಎಂ ಸಿದ್ದರಾಮಯ್ಯನವರ ಶ್ರೀಮತಿಯವರಿಗೆ ಸಿಕ್ಕ ಉಡುಗೊರೆ ಮುಡಾಗೆ ವಾಪಾಸ್ ಕೊಟ್ಟಿದ್ದಾರೆ. ವಾಪಾಸ್ ಕೊಟ್ಟ ಮೇಲೂ ಬಿಜೆಪಿ ನಾಯಕರು ತಗಾದೆ ಮಾಡುತ್ತಾರೆ. ನೀವು ಈಗ ಅಕ್ರಮ ಮಾಡಿರೋದು ಒಪ್ಪಿಕೊಂಡಂತಾಯ್ತು ಅಂತ ಹೇಳುತ್ತಿದ್ದಾರೆ. ಆರ್ ಅಶೋಕ್ ಅವರಿಗೆ ದೊಡ್ಡ ಜವಾಬ್ದಾರಿ ಇದೆ. ಸರ್ಕಾರದ ಜಾಗ ಕಬಳಿಸಿ ಸಿಕ್ಕಾಕ್ಕೊಂಡಂಗಾಯ್ತು ಅಂತ ಆರ್ ಅಶೋಕ್ ಹೇಳಿದ್ದಾರೆ. ಈಗ ನಾವು ಬಿಜೆಪಿ ಅವಧಿಯಲ್ಲಿ ಆದ ಕೆಲವು ಪ್ರಕರಣಗಳನ್ನು ರಾಜ್ಯದ ಜನತೆ ಮುಂದೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.