
ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿಯ ನಾಗಣಾಪುರ ಗ್ರಾಮದ ಹೊರವಲಯದಲ್ಲಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದ ಆರೋಪದಡಿ 6 ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ಕೊಡಗಿನ ಸೋಮವಾರಪೇಟೆಯವರು ಎಂದು ತಿಳಿದು ಬಂದಿದೆ.
ನಾಡ ಬಂದೂಕು ಬಳಸಿ ಜಿಂಕೆಗಳನ್ನು ಕೊಲ್ಲುತ್ತಿದ್ದರು. ಜಿಂಕೆ ಮಾಂಸ ಸೇವಿಸುತ್ತ ಕುಳಿತಿರುವಾಗಲೇ ರೆಡ್ ಹ್ಯಾಂಡ್ ಆಗಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಓಂಕಾರ ಅರಣ್ಯ ವಲಯದ ಆರ್.ಎಫ್.ಓ ನಾಗೇಂದ್ರ ನಾಯಕ್ ಹಾಗೂ ಸಿಬ್ಬಂದಿಯಿಂದ ಕಾರ್ಯಾಚರಣೆ ಜರುಗಿದ್ದು, ಬೇಟೆಗಾಗಿ ಬಳಸಿದ ಓಮ್ನಿ ಕಾರು ಮತ್ತು ಇತರೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.