ಗದಗ: ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಿ ಗುತ್ತಿಗೆದಾರ ಎಸ್ಕೇಪ್; ಓಡಾಡಲು ಸೂಕ್ತ ಮಾರ್ಗವಿಲ್ಲದೆ ರೈತರು ಕಂಗಾಲು

ತಾಲೂಕಿನ ಲಕ್ಕುಂಡಿ-ಕದಂಪೂರ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಅಂದಿನ ಬಿಜೆಪಿ ಸರ್ಕಾರ ಡಾಂಬರೀಕಣ ಮಾಡುತ್ತದೆ ಎನ್ನುವ ಸುದ್ದಿಗೆ ರೈತರು, ಜನರು ಫುಲ್ ಖುಷ್ ಆಗಿದ್ದರು. ಕಾಮಗಾರಿ ಟೆಂಡರ್ ಆಗಿ ಕಾಮಗಾರಿಯೂ ಆರಂಭವಾಗಿತ್ತು. ಆದರೆ, ಇದೀಗ ರಸ್ತೆ ತುಂಬೆಲ್ಲ ಜಲ್ಲಿ ಕಲ್ಲು ಹಾಕಿ ಕಾಮಗಾರಿ ಅರ್ಧಕ್ಕೆ ಬಿಟ್ಟು ಗುತ್ತಿಗೆದಾರ ಎಸ್ಕೇಪ್ ಆಗಿದ್ದಾನೆ ಎಂದು ರೈತರು ಕೆಂಡಕಾರಿದ್ದಾರೆ.

ಗದಗ: ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಿ ಗುತ್ತಿಗೆದಾರ ಎಸ್ಕೇಪ್; ಓಡಾಡಲು ಸೂಕ್ತ ಮಾರ್ಗವಿಲ್ಲದೆ ರೈತರು ಕಂಗಾಲು
ಗದಗ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 24, 2023 | 7:57 PM

ಗದಗ, ನ.24: ಗದಗ ತಾಲೂಕಿನ ಲಕ್ಕುಂಡಿ, ಕದಂಪುರ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಚುನಾವಣೆ ಪೂರ್ವದಲ್ಲಿ ಆರು ಕಿಲೋಮೀಟರ್ ರಸ್ತೆ ಸುಧಾರಣೆ ಕಾಮಗಾರಿ ಟೆಂಡರ್(Tender Work) ಆಗಿದೆ. ವಿಧಾನಸಭೆ ಚುನಾವಣೆಗೆ ಮುಂಚೆ ಕಾಮಗಾರಿಯೂ ಆರಂಭವಾಗಿದೆ. 4.50 ಕೋಟಿ ವೆಚ್ಚದ ಈ ರಸ್ತೆ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ದೊಡ್ಡದಾದ ಜಲ್ಲಿ ಕಲ್ಲು ಹಾಕಿ ಅರ್ಧ ಕಾಮಗಾರಿ ಮಾಡಿ ಎಸ್ಕೇಪ್ ಆಗಿದ್ದಾನೆ. ಇದರಿಂದ ನೂರಾರು ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಲಕ್ಕುಂಡಿ ಗ್ರಾಮದ ನೂರಾರು ರೈತರ ಹೂವಿನ ತೋಟಗಳು ಈ ರಸ್ತೆಯಲ್ಲಿ ಇವೆ. ಈಗ ನಾಲ್ಕು ತಿಂಗಳಿಂದ ಶ್ರಾವಣಮಾಸ, ಗಣೇಶನ ಹಬ್ಬ, ದಸರಾ, ದೀಪಾವಳಿ ಹಬ್ಬದಲ್ಲಿ ಹೂವಿಗೆ ಭಾರಿ ಬೇಡಿಕೆಯಿದೆ. ಹೀಗಾಗಿ ನಿತ್ಯವೂ ಈ ರಸ್ತೆಯಲ್ಲಿ ನೂರಾರು ರೈತರು, ಕಾರ್ಮಿಕರು ಸಂಚಾರ ಮಾಡುತ್ತಾರೆ. ಆದ್ರೆ, ಈ ರಸ್ತೆ ರೈತರ ಪಾಲಿಗೆ ಸಾವಿನ ರಸ್ತೆಯಾಗಿದೆ. ನಸುಕಿನಲ್ಲಿ ಜಮೀನುಗಳಿಗೆ ಹೋಗುವ ಸಾಕಷ್ಟು ರೈತರು, ಬೈಕ್ ಸ್ಕಿಡ್ ಆಗಿ ಬಿದ್ದು, ಕೈಕಾಲು ಮುರಿದುಕೊಂಡಿದ್ದಾರಂತೆ. ಅಷ್ಟೇ ಟಂಟಂ, ಗೂಡ್ಸ್ ವಾಹನಗಳ ಟೈಯರ್​ಗಳು ಬ್ಲಾಸ್ಟ್ ಆಗುತ್ತಿವೆ. ಹೀಗಾಗಿ ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ರೈತರು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ:ನೈಸ್ ರಸ್ತೆ ಮೂಲಕ ಮಾದವಾರ – ಎಲೆಕ್ಟ್ರಾನಿಕ್‌ ಸಿಟಿ ನಡುವೆ ಬಿಎಂಟಿಸಿ ಬಸ್‌ ಸೇವೆ ಆರಂಭ

ಚುನಾವಣೆ ವೇಳೆ ಇಡೀ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತೇನೆ ಅಂದಿದ್ದರು. ಇದೇನಾ ರಸ್ತೆ ಅಭಿವೃದ್ಧಿ ಎಂದು ಜನರು ಕ್ಷೇತ್ರದ ಶಾಸರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆಗಿಂತಲೂ ಮುಂಚೆ ಜಲ್ಲಿ ಹಾಕಿ ಗುತ್ತಿಗೆದಾರ ಎಸ್ಕೇಪ್ ಆಗಿದ್ದಾನಂತೆ. ಕಲ್ಲು ರಾಶಿಯ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಡೋಂಟ್ ಕೇರ್ ಅಂತಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ರೈತರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ರೈತರ ಜಮೀನುಗಳಿಗೆ ಕೃಷಿ ಚಟುವಟಿಕೆಯ ಪ್ರಮುಖ ರಸ್ತೆ ಇದಾಗಿದ್ದು, ಹದಗೆಟ್ಟ ರಸ್ತೆಯಿಂದ ಕೂಲಿ‌ ಕಾರ್ಮಿಕರು ಬಾರದ ಕಾರಣ ರೈತರು ಗೋಳಾಡುತ್ತಿದ್ದಾರೆ. ನೂರಾರು ಎಕರೆ ಹೂವಿನ ತೋಟಗಳ ಮಾಲೀಕರು ಕಾರ್ಮಿಕರ ಕೊರತೆಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಟಿವಿ9 ರಿಯಾಲಿಟ್ ಚೆಕ್ ವೇಳೆ ಲೋಕೋಪಯೋಗಿ ಇಲಾಖೆ ಚುನಾವಣೆ ಪೂರ್ವದ ಅಭಿವೃದ್ಧಿ ಪರ್ವದ ಅಸಲಿಯತ್ತು ಬಯಲಾಗಿದೆ.

ಇನ್ನು ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ರೈತ ಮಹಿಳೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ರಸ್ತೆ ಕಾಮಗಾರಿ‌ ಮಾಡದಿದ್ರೆ ಹಾಕಿದ‌ ಜಲ್ಲಿ ತೆಗೆದುಕೊಂಡು ಹೋಗಿ ಎಂದು ಕಿಡಿಕಾರಿದ್ದಾರೆ. ಶಾಸಕರು, ಅಧಿಕಾರಿಗಳಿಗೆ ಹೇಳಿ ಬೇಸತ್ತು ಹೋದ ರೈತರು, ಈಗ ಟಿವಿ9 ವಾಹಿನಿಯ ಮೊರೆ ಹೋಗಿದ್ದಾರೆ. ಟಿವಿ9 ಕ್ಯಾಮರಾದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಬಯಲಾಗಿದೆ. ಇಂಥ ರಸ್ತೆಯಲ್ಲಿ ಏನಾದ್ರೂ ಆದ್ರೆ, ಲೋಕೋಪಯೋಗಿ ಅಧಿಕಾರಿಗಳೇ ಹೊಣೆ ಎಂದು ರೈತರು ಆರೋಪಿಸಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭ ಮಾಡದಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಲೋಕೋಪಯೋಗಿ ಸಚಿವರು, ಮೇಲಾಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ, ಸಾರ್ವಜನಿಕರಿಗೆ ಆಗುತ್ತಿರುವ ನರಕಯಾತನೆ ತಪ್ಪಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ