AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಂಡರ್​ ವಿಚಾರದಲ್ಲಿ ಕೈ – ಕಮಲ ನಾಯಕರ ಕೆಸರೆರೆಚಾಟ; ಉದ್ಘಾಟನೆಗೊಂಡು ವರ್ಷವಾದ್ರೂ ಸಿಗದ ಟೆಂಡರ್ ಭಾಗ್ಯ

ಸ್ಮಾರ್ಟ್​ ಸಿಟಿ ಯೋಜನೆಯಿಂದ ಮಂಗಳೂರು ತುಂಬಾ ಸ್ಮಾರ್ಟ್​ ಆಗುತ್ತೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದ್ರೆ, ಕಾಮಗಾರಿಯಲ್ಲಿನ ವಿಳಂಬ ಹಾಗೂ ಬೇಕಾಬಿಟ್ಟಿ ಕಾಮಗಾರಿಯಿಂದ ಜನರು ಆ ನಿರೀಕ್ಷೆಯನ್ನೇ ಕೈ ಬಿಟ್ಟಿದ್ದಾರೆ. ಕನಿಷ್ಟ ಪೂರ್ಣಗೊಂಡಿರುವ ಕಾಮಗಾರಿಯಾದರೂ ಜನರ ಉಪಯೋಗಕ್ಕೆ ಸಿಗಬಹುದು ಅಂದುಕೊಂಡಿದ್ದರೆ, ಅಲ್ಲೂ ರಾಜಕೀಯ ಕಾರಣದಿಂದಾಗಿ ನಗರದ ಹಾಟ್​ಸ್ಪಾಟ್​ ಸ್ಥಳ ಪಾಳು ಬೀಳುವಂತಾಗಿದೆ.

ಟೆಂಡರ್​ ವಿಚಾರದಲ್ಲಿ ಕೈ - ಕಮಲ ನಾಯಕರ ಕೆಸರೆರೆಚಾಟ; ಉದ್ಘಾಟನೆಗೊಂಡು ವರ್ಷವಾದ್ರೂ ಸಿಗದ ಟೆಂಡರ್ ಭಾಗ್ಯ
ನೆನೆಗುದಿಗೆ ಬಿದ್ದ ಕದ್ರಿ ಪಾರ್ಕ್​
ಅಶೋಕ್​ ಪೂಜಾರಿ, ಮಂಗಳೂರು
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 05, 2023 | 2:34 PM

Share

ದಕ್ಷಿಣ ಕನ್ನಡ, ನ.05:  ಮಂಗಳೂರಿನ ಸುಂದರ ಪಾರ್ಕ್ ಆಗಿದ್ದ ಕದ್ರಿ ಪಾರ್ಕ್(Kadri Park),​​ ಮಂಗಳೂರಿ(Mangalore)ನ ಬಹುತೇಕ ಜನರ ವೀಕೆಂಡ್​ ಹಾಟ್​ ಸ್ಪಾಟ್​ ಆಗಿತ್ತು. ಸದ್ಯ ಪಾರ್ಕ್​ ಚೆನ್ನಾಗಿದ್ರೂ, ಸ್ಮಾರ್ಟ್​ ಸಿಟಿ ಕಾಮಗಾರಿ ನಡೆಸಿ ಪಾರ್ಕ್​ ಹೊರಗಿನ ರಸ್ತೆ ಹಾಗೂ ಅದರ ಇಕ್ಕೆಲಗಳಲ್ಲೂ ಅಂಗಡಿಗಳನ್ನು ನಿರ್ಮಿಸಿದ ಬಳಿಕ ಎಲ್ಲಾ ವ್ಯವಸ್ಥೆಗಳು ಬುಡಮೇಲಾಗಿದೆ. ಅಗಲವಿದ್ದ ರಸ್ತೆಯನ್ನು ಕಿರಿದು ಮಾಡಿ ವಾಹನ ಪಾರ್ಕ್​ ಮಾಡಲು ಜಾಗ ಇಲ್ಲದಂತೆ ಮಾಡಿರುವುದು ಒಂದೆಡೆಯಾದ್ರೆ, ರಸ್ತೆ ಬದಿಯಲ್ಲಿ ನಿರ್ಮಿಸಿರುವ ಅಂಗಡಿ ಕೋಣೆಗಳು ಪಾಳು ಬೀಳುತ್ತಾ ಇರುವುದು ಇನ್ನೊಂದು ಸಮಸ್ಯೆಯಾಗಿದೆ. ಕದ್ರಿ ಪಾರ್ಕ್​ಗೆ ಹೈಟೆಕ್​ ಟಚ್​ ಕೊಟ್ಟು ಬೀದಿ ಬದಿ ವ್ಯಾಪಾರ ನಿಲ್ಲಿಸಿ, ಹೈಜೆನಿಕ್​ ಫುಡ್​ ಕೋರ್ಟ್​ ಮಾಡುವ ಪ್ಲಾನ್ ಸದ್ಯಕ್ಕೆ ಪ್ಲಾಪ್​ ಆಗಿದೆ.

ಟೆಂಡರ್​ ವಿಚಾರದಲ್ಲಿ ಕೈ – ಕಮಲ ನಾಯಕರ ಕೆಸರೆರೆಚಾಟ

ಹೌದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆಯಲಾದ ಟೆಂಡರ್ ರದ್ದು ಮಾಡಿ ತಮ್ಮ ಪಕ್ಷದವರಿಗೆ ನೀಡಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಶಾಸಕರು ಆರೋಪ ಮಾಡಿದ್ದಾರೆ. ಕದ್ರಿ ಪಾರ್ಕ್​ ರಸ್ತೆಯನ್ನು ಸುಮಾರು 16 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿ ಮಾಡಲಾಗಿದ್ದು, ಇಲ್ಲಿರುವ 38 ಅಂಗಡಿ ಕೋಣೆಗಳಿಗೆ 12 ಕೋಟಿ ರೂ ವ್ಯಯಿಸಲಾಗಿದೆ. ಕಾಮಗಾರಿ ಉದ್ಘಾಟನೆಗೊಂಡು ಹತ್ತು ತಿಂಗಳಾಗಿದ್ದರೂ ಯಾವುದೇ ಅಂಗಡಿಗಳೂ ಓಪನ್ ಆಗುವ ಲಕ್ಷಣ ಇಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆಯಲಾಗಿದ್ದು, ಅದು ಒಬ್ಬ ವ್ಯಕ್ತಿಗೆ ಎಲ್ಲಾ ಅಂಗಡಿಗಳನ್ನು ನೀಡುವ ಪ್ರಸ್ತಾಪವಾಗಿತ್ತು. ಹೀಗಾಗಿ ಹೊಸ ಸರ್ಕಾರ ಬಂದ ತಕ್ಷಣ ಆ ಟೆಂಡರ್ ರದ್ದು ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಶಿವಮೊಗ್ಗ ಜಿಲ್ಲೆ 18ನೇ ಸ್ಥಾನ ಪಡೆದಿದೆ -ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪರಿಂದ ಚಾಲನೆ

ಸ್ಥಳಿಯಾಡಳಿತದ ಕಟ್ಟಡಗಳನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿ ಹಂಚಿಕೆ ಮಾಡಬೇಕು ಎನ್ನುವ ನಿಯಮ ಇದೆ. ಹಿಂದಿನ ಟೆಂಡರ್​ನಲ್ಲಿ ಅದು ಮಾಡದೆ, ಶಾಸಕರು ತಮ್ಮವರಿಗೆ ನೀಡಲು ಒಬ್ಬರಿಗೆ ಎಲ್ಲಾ ಅಂಗಡಿ ನೀಡಿದ ಕಾರಣ ಆ ಟೆಂಡರ್ ರದ್ದು ಮಾಡಲಾಗಿದೆ ಎಂದು ಕಾಂಗ್ರೆಸ್​​ನವರು ಸಮಜಾಯಿಶಿ ನೀಡುತ್ತಿದ್ದಾರೆ. ಮಂಗಳೂರು ನಗರದಲ್ಲಿ ಪೂರ್ಣಗೊಂಡು ಕಣ್ಣಿಗೆ ಕಾಣುತ್ತಿರುವ ಏಕೈಕ ಸ್ಮಾರ್ಟ್​ ಸಿಟಿ ಕಾಮಗಾರಿ ಈ ಕದ್ರಿ ಪಾರ್ಕ್​ನ ರಸ್ತೆ ಹಾಗೂ ಅಂಗಡಿಗಳು ಅಲ್ಪ ಪೂರ್ಣಗೊಂಡಿದ್ದರೂ ಕೂಡ ಜನರ ಉಪಯೋಗಕ್ಕೆ ಸಿಗದಂತಾಗಿದೆ. ರಾಜಕೀಯ ಕಾರಣ ಇಟ್ಟುಕೊಂಡು ಸದ್ಯ ಟೆಂಡರ್​ ವಿಳಂಬ ಆಗುತ್ತಿದೆ ಎನ್ನುವುದು ರಾಜಕೀಯ ನಾಯಕರ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ. ಸರ್ಕಾರ ಆದಷ್ಟು ಶೀಘ್ರವಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿ, ಈ ಟೆಂಡರ್​ ವಿವಾದಕ್ಕೆ ತೆರೆ ಎಳೆಯಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashok
Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More