AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತನಿಗೆ ಕಣ್ಣೀರು ಬರಿಸಿದ ಈರುಳ್ಳಿ; 205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!

ಯಶವಂತಪುರದ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಭಾವಿಸಿ ದೂರದ ಊರುಗಳಿಂದ ಬೆಳೆಗಳನ್ನು ತಂದು ಮಾರಾಟ ಮಾಡಿ ಕೈ ಸೇರಿದ ಹಣ ನೋಡಿ ರೈತರು ಕಂಗಾಲಾಗಿದ್ದಾರೆ.

ರೈತನಿಗೆ ಕಣ್ಣೀರು ಬರಿಸಿದ ಈರುಳ್ಳಿ; 205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!
415 KM ದೂರದ ಯಶವಂತಪುರಕ್ಕೆ ಬಂದು 205 ಕೆಜಿ ಈರುಳ್ಳಿ ಮಾರಿ 8.35 ರೂಪಾಯಿ ಪಡೆದ ಗದಗ ರೈತ! ಬಿಲ್ ಫೋಟೋ ವೈರಲ್
TV9 Web
| Updated By: Rakesh Nayak Manchi|

Updated on:Nov 28, 2022 | 1:17 PM

Share

ಗದಗ: ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ ಗದಗದ ರೈತರೊಬ್ಬರೊಬ್ಬರ ಕೈಗೆ ಸಿಕ್ಕ ಹಣ ಕೇವ 8.36 ರೂಪಾಯಿ. ಇದು ಸಾಕಷ್ಟು ಆಘಾತಕಾರಿಯಾಗಿದೆ. ತನಗೆ ಆದ ಸಮಸ್ಯೆ ಬೇರೆ ಯಾವ ರೈತರಿಗೂ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಈರುಳ್ಳಿ ಮಾರಾಟದ ಬಿಲ್ ಅನ್ನು ತಿಮ್ಮಾಪುರ ಗ್ರಾಮದ ರೈತ ಪಾವಡೆಪ್ಪ ಹಳ್ಳಿಕೇರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಇದರ ಫೋಟೋ ವೈರಲ್ ಆಗುತ್ತಿದೆ. ಬಿಲ್ ವಿತರಿಸಿದ ಸಗಟು ವ್ಯಾಪಾರಿ ಈರುಳ್ಳಿಯನ್ನು ಕ್ವಿಂಟಾಲ್​ಗೆ 200 ರೂ. ಎಂದು ಮೌಲ್ಯೀಕರಿಸಿದ್ದಾರೆ. ಆದರೆ ಪೋರ್ಟರ್ ಶುಲ್ಕವಾಗಿ 24 ರೂ., ಸರಕು ಸಾಗಣೆಗೆ 377.64 ರೂ.ಗಳನ್ನು ಕಡಿತಗೊಳಿಸಿದ ನಂತರ ಪಾವಡೆಪ್ಪ ಹಳ್ಳಿಕೇರಿ ಅವರಿಗೆ 8.36 ರೂ.ಗಳನ್ನು ನೀಡಿದ್ದಾರೆ.

ಗದಗದ ತಿಮ್ಮಾಪುರ ಗ್ರಾಮದಿಂದ 415 ಕಿ.ಮೀ. ದೂರದಲ್ಲಿರುವ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಈರುಳ್ಳಿಯನ್ನು ಮಾರಾಟ ಮಾಡಲು ಹೋಗಿದ್ದ ಗದಗದ ಸುಮಾರು 50 ರೈತರು ಕೆಲವು ದಿನಗಳ ಹಿಂದೆ ಕ್ವಿಂಟಾಲ್​ಗೆ 200 ರೂ.ಗಳ ಬೆಲೆಯನ್ನು ಕಂಡು ಆಶ್ಚರ್ಯಚಕಿತರಾದರು. ಆದರೆ ಹಾಸ್ಯಾಸ್ಪದ ಬೆಲೆಗಳಿಂದ ಕೋಪಗೊಂಡ ರೈತರು ಈಗ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಗೆ ಇಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಓಲಾ, ಓಬರ್ ಆಟೊ ರೈಡ್​ಗೆ ಶೇ 5 ತೆರಿಗೆ: ಸಾರಿಗೆ ಇಲಾಖೆ ನಿರ್ಧಾರದ ಬಗ್ಗೆ ಆಟೊ ಚಾಲಕರ ಅಸಮಾಧಾನ

“ಈ ವರ್ಷ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗದಗದ ನಾವು ರೈತರು ಬಾಧಿತರಾಗಿದ್ದೇವೆ. ನಾವು ಬೆಳೆದ ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ. ಪುಣೆ ಮತ್ತು ತಮಿಳುನಾಡಿನಿಂದ ತಮ್ಮ ಉತ್ಪನ್ನಗಳನ್ನು ಯಶವಂತಪುರಕ್ಕೆ ತರುವ ರೈತರು ತಮ್ಮ ಬೆಳೆ ಉತ್ತಮವಾಗಿರುವುದರಿಂದ ಉತ್ತಮ ಬೆಲೆಯನ್ನು ಪಡೆಯುತ್ತಿದ್ದಾರೆ. ಆದರೂ ನಾವ್ಯಾರೂ ಬೆಲೆ ಇಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ನೊಂದ ರೈತ ಪಾವಡೆಪ್ಪ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

“ಗದಗ ಮತ್ತು ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗೆ ಅಲ್ಲಿ ಉತ್ತಮ ಬೆಲೆ ಸಿಗದ ಕಾರಣ ಯಶವಂತಪುರ ಮಾರುಕಟ್ಟೆಗೆ ಇತರೆ ರೈತರು ಬರುವುದನ್ನು ತಪ್ಪಿಸಲು ರಸೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇನೆ. ಬೆಳೆಯನ್ನು ಬೆಳೆಯಲು ಮತ್ತು ಮಾರುಕಟ್ಟೆಗೆ ಸಾಗಿಸಲು ನಾನು 25,000 ರೂಪಾಯಿಗೂ ಅಧಿಕ ಖರ್ಚು ಮಾಡಿದ್ದೇನೆ. ನನ್ನಂತಹ ಅನೇಕ ರೈತರು ಈಗ ನಿರಾಶೆಗೊಂಡಿದ್ದಾರೆ” ಎಂದು ಪಾವಡೆಪ್ಪ ಹೇಳಿದರು.

ವೈರಲ್ ಬಿಲ್

ಡಿಸೆಂಬರ್ ಮೊದಲ ವಾರದಲ್ಲಿ ಪ್ರತಿಭಟನೆ

ಈ ವರ್ಷ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ನಷ್ಟ ಅನುಭವಿಸುತ್ತಿರುವುದರಿಂದ ಆದಷ್ಟು ಬೇಗ ಕನಿಷ್ಠ ಬೆಂಬಲ ಬೆಲೆ ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇವೆ. ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ನಾವು ಡಿಸೆಂಬರ್ ಮೊದಲ ವಾರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Mon, 28 November 22