ಗದಗ, ಮಾರ್ಚ್ 19: ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಹಣ್ಣುಗಳ ಹಾವಳಿಯ ವರದಿಗಳಿಂದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಮತ್ತೊಂದೆಡೆ ಬಿಸಿಲಿನ ಬೇಗೆ ಜೋರಾಗಿದೆ. ಜನ ತಂಪು ಪಾನೀಯಗಳು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಹಣ್ಣು ಖರೀದಿ ಎಂದರೆ ಜನ ಭಯಪಡುವಂತಾಗಿದೆ. ಇದರಿಂದಾಗಿ ರೈತರೇ ನೇರವಾಗಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ಗದಗ (Gadag) ನಗರದಲ್ಲಿ ರೈತರು ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳ (Watermelon) ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದರಿಂದಾಗಿ ದಲ್ಲಾಳಿಗಳು ಮಾತ್ರ ಈ ಬಾರಿ ಅಕ್ಷರಶಃ ಕಂಗಾಲಾಗಿದ್ದಾರೆ.
ಸದಾ ದಲ್ಲಾಳಿಗಳ ಮೋಸಕ್ಕೆ ಹೈರಾಣಾಗಿದ್ದ ರೈತರು ಇದೀಗ ಸ್ವತಃ ರೈತರ ಮಾರುಕಟ್ಟೆ ಅಖಾಡಕ್ಕೆ ಇಳಿದಿದ್ದಾರೆ. ಕೆಮಿಕಲ್ ಹಾವಳಿ ನೆಪವೊಡ್ಡಿ ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ಕೇವಲ ಕೆಜಿಗೆ 4-5 ರೂಪಾಯಿ ಖರೀದಿಗೆ ದಲ್ಲಾಳಿಗಳು ಮುಂದಾಗಿದ್ದರು. ಬಳಿಕ 25-30 ರೂಪಾಯಿ ಮಾರಾಟ ಮಾಡ್ತಾರೆ. ಈ ಬಗ್ಗೆ ಎಚ್ಚೆತ್ತುಕೊಂಡ ರೈತರು ದಲ್ಲಾಳಿಗಳ ಸಹವಾಸವೇ ಬೇಡ ಎಂದು ತಾವೇ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ರೈತರು ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಗದಗ ನಗರದ ಪಂಚರಹೊಂಡ ಬಳಿ ಬಂದರೆ ಸಾಲು ಸಾಲು ಸಾಲು ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಕಲ್ಲಂಗಡಿ ಹಣ್ಣು ತುಂಬಿಕೊಂಡು ಮಾರಾಟ ಮಾಡುವುದು ಕಾಣಿಸುತ್ತಿದೆ. ಗ್ರಾಹಕರು ರೈತರ ಬಳಿಯಿಂದಲೇ ಹಣ್ಣುಗಳ ಖರೀದಿಗೆ ಮುಗಿಬಿದ್ದಾರೆ.
ಇದನ್ನೂ ಓದಿ: ಗದಗ: ಸರ್ಕಾರಿ ರತಿ-ಕಾಮಣ್ಣ ಮೂರ್ತಿಗೆ 29 ಕೆಜಿ ಚಿನ್ನದಿಂದ ಶೃಂಗಾರ
ದಲ್ಲಾಳಿಗಳಿಗೆ ನೀಡುವ ದರಕ್ಕಿಂತ ರೈತರು ಈಗ ಮೂರು ಪಟ್ಟು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ರೈತರ ಈ ನಿರ್ಧಾರದಿಂದ ಗ್ರಾಹಕರಿಗೂ ಬಂಪರ್ ಲಾಭವಾಗುತ್ತಿದೆ. ಯಾಕೆಂದರೆ ದಲ್ಲಾಳಿಗಳು ಕೆಜಿಗೆ 25-30 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಈಗ ರೈತರು ಕೆಜಿಗೆ 13-15 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ವರ್ಷವಿಡೀ ಕಷ್ಟಪಟ್ಟರೂ ಮಾರಾಟದ ವೇಳೆ ಸದಾ ದಲ್ಲಾಳಿಗಳ ಹೊಡೆತಕ್ಕೆ ಸಿಲುಕಿ ನಲುಗುವ ರೈತರ ಹೊಸ ಪ್ಲಾನ್ನಿಂದಾಗಿ ಗ್ರಾಹಕರೂ ಖುಷಿಯಾಗಿದ್ದಾರೆ. ದಲ್ಲಾಳಿಗಳ ಆಟಕ್ಕೆ ಹೊಡೆತ ಬಿದ್ದಿದೆ.