ಬಿಸಿಲ ಝಳ: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬೈಕ್​ ಸವಾರರಿಗೆ ನೆರಳಿನ ವ್ಯವಸ್ಥೆ

|

Updated on: Mar 20, 2023 | 2:12 PM

ಪ್ರಯಾಣಿಕರ ಅನುಕೂಲಕ್ಕಾಗಿ ಗದಗ ಪೊಲೀಸರು ಹೆಚ್ಚು ಟ್ರಾಫಿಕ್​ನಿಂದ ಕೂಡಿರುವ ಮುಳಗುಂದ ನಾಕಾ ಜಂಕ್ಷನ್​​​ನಲ್ಲಿ ಹಸಿರು ಮ್ಯಾಟ್​​​​​ನಿಂದ ಛತ್ತ ನಿರ್ಮಿಸಿದ್ದಾರೆ. ಇದರಿಂದ ದ್ವಿಚಕ್ರವಾಹನ ಸವಾರರು ಸಿಗ್ನಲ್​ ಬಳಿ ಬಂದು ನಿಂತಾಗ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಬಿಸಿಲ ಝಳ: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬೈಕ್​ ಸವಾರರಿಗೆ ನೆರಳಿನ ವ್ಯವಸ್ಥೆ
ಹಸಿರು ಛತ್ತ ನಿರ್ಮಾಣ
Follow us on

ಗದಗ: ಹಿಂದಿನ ವರ್ಷಗಳಿಗಿಂತ ಈ ವರ್ಷ ಬೇಸಿಗೆಯ ಬಿಸಿಲು (Summer Season) ಹೆಚ್ಚಾಗಿದೆ. ಬಿಸಿಲಿನ ತಾಪವನ್ನು ಸಹಿಸಲಾಗದೆ ಆಚೆ ತಿರುಗಾಡುವುದೇ ಬೇಡ ಅನ್ನುವಷ್ಟರ ಮಟ್ಟಿಗೆ ಬಿಸಿಲು ಇದೆ. ಬಿಸಿಲಿನ ತಾಪಮಾನಕ್ಕೆ ವಾಹನ ಸವಾರರು ಪಡುವ ಪಾಡು ಅಷ್ಟಿಷ್ಟಲ್ಲ. ಅದರಲ್ಲಂತು ದ್ವಿಚಕ್ರ ವಾಹನ ಸವಾರರು (Two wheeler) ಅನುಭವಿಸುವ ವೇದನೆ ಅಷ್ಟಿಷ್ಟಲ್ಲ. ಬೈಕ್​​ನಲ್ಲಿ ಹೋಗುವಾಗ ಮುಕಕ್ಕೆ ಹೊಡೆಯುವ ಬಿಸಿ ಗಾಳಿ, ತಲೆ ಮೇಲೆ ಸುಡುವ ಬಿಸಿಲು, ಹೆಲ್ಮೆಟ್​ ಹಾಕಿಕೊಂಡರೆ ಬೆವರಿಗೆ ಕೂದಲಿನ ವಾಸನೆ, ತುರಿಕೆ ಹೇಳ ತೀರದು. ಅದರಲ್ಲಂತು ಸಿಗ್ನಲ್​ಗಳಲ್ಲಿ ನಿಂತಾಗ ಬಿಸಿಲಿಗೆ ಕುಸಿದು ಬೀಳುವಷ್ಟು ದೇಹ ನಿತ್ರಾಣವಾಗುತ್ತೆ. ಇದನ್ನು ತಪ್ಪಿಸಲು, ಪ್ರಯಾಣಿಕರ ಅನುಕೂಲಕ್ಕಾಗಿ ಗದಗ ಪೊಲೀಸರು (Gadag Police) ಹೆಚ್ಚು ಟ್ರಾಫಿಕ್​ನಿಂದ ಕೂಡಿರುವ ಮುಳಗುಂದ ನಾಕಾ (Mulagund Naka) ಜಂಕ್ಷನ್​​​ನಲ್ಲಿ ಹಸಿರು ಮ್ಯಾಟ್​​​​​ನಿಂದ ಛತ್ತ ನಿರ್ಮಿಸಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸಿಗ್ನಲ್​ ಬಳಿ ಬಂದು ನಿಂತಾಗ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಶೀಘ್ರದಲ್ಲೇ, ನಗರದ ಇತರ ಟ್ರಾಫಿಕ್ ಜಂಕ್ಷನ್‌ಗಳಲ್ಲೂ ಇಂತಹ ಛತ್ತ ನಿರ್ಮಿಸಲು ಚಿಂತನೆ ನಡೆದಿದೆ.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಬಿಸಿಲಿನ ತಾಪಕ್ಕೆ ಬೇಸತ್ತು, ಸಿಗ್ನಲ್​ನಲ್ಲಿ ನಿಲ್ಲಲು ಆಗುವುದಿಲ್ಲ. ಹೀಗಾಗಿ ಸಿಗ್ನಲ್​ ಜಂಪ್​ ಮಾಡುತ್ತಾರೆ. ಇದರಿಂದ ಅಪಾಯ ತಂದುಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಪೊಲೀಸರು ಮುಳಗುಂದ ನಾಕಾದಲ್ಲಿ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (ಸಿಎಂಸಿ) ಸಹಯೋಗದೊಂದಿಗೆ ಹಸಿರು ಶೆಡ್-ನೆಟ್ ಹಾಕಿದ್ದಾರೆ. ಮುಳಗುಂದ ನಾಕಾ ಮೂಲಕ ಹಾದು ಹೋಗುವ ನಾಲ್ಕು ರಸ್ತೆಗಳಲ್ಲಿ ಇದೇ ರೀತಿಯ ಶೆಡ್‌ಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್​ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ

ವಾಹನ ಸವಾರರು ಪ್ರತಿ ಜಂಕ್ಷನ್‌ನಲ್ಲಿ ಕನಿಷ್ಠ ಎರಡು-ಐದು ನಿಮಿಷಗಳ ಕಾಲ ಬಿಸಿಲಿನ ಬೇಗೆಯನ್ನು ತಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಕ್ರಮವನ್ನು ಕೈಗೊಂಡಿದ್ದೇವೆ. “ನಾವು ಜಂಕ್ಷನ್‌ಗಳಿಗೆ ಭೇಟಿ ನೀಡಿದಾಗ, ಅನೇಕ ವಾಹನ ಚಾಲಕರು ಬಿಸಿಲಿಗೆ ಬೇಸತ್ತು ಸಿಗ್ನಲ್‌ಗಳನ್ನು ಜಂಪ್ ಮಾಡಲು ಪ್ರಯತ್ನಿಸುತ್ತಿದ್ದರು. ಆದ್ದರಿಂದ, ಈ ಹಸಿರು ಶೆಡ್‌ಗಳನ್ನು ನಿರ್ಮಿಸುವ ಆಲೋಚನೆಯನ್ನು ಮಾಡಿದ್ದೇವೆ. ಯೋಜನೆ ಅನುಷ್ಠಾನಗೊಳಿಸಲು ಹಣ ಮಂಜೂರಾತಿ ಮಾಡಿ ಎಂದು ಪುರಸಭೆಗೆ ಪತ್ರ ಬರೆದಿದ್ದು, ಪುರಸಭೆ ಅನುಮೋದನೆ ನೀಡಿದೆ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹೇಳಿದ್ದಾರೆ.

ಪ್ರಮುಖ ಜಂಕ್ಷನ್‌ಗಳನ್ನು ಗುರುತಿಸುವ ಕೆಲಸ ಆರಂಭಿಸಿದ್ದೇವೆ. ಆದ್ಯತೆ ಮೇರೆಗೆ ಮುಳಗುಂದ ನಾಕಾ ಬಳಿ ಬರುವ ಪ್ರತಿ ರಸ್ತೆಗೆ ಈಗಾಗಲೇ 75 ಅಡಿ ಉದ್ದದ ಹಸಿರು ನೆಟ್‌ ಅಳವಡಿಸಿದ್ದೇವೆ. ಪ್ರತಿ ಜಂಕ್ಷನ್‌ಗೆ 8-10 ಲಕ್ಷ ರೂಪಾಯಿ ಖರ್ಚಾಗುತ್ತದೆ. ಭೂಮರಡ್ಡಿ ಸರ್ಕಲ್ ಸೇರಿದಂತೆ ಒಂದೆರಡು ಪ್ರಮುಖ ಜಂಕ್ಷನ್‌ಗಳಲ್ಲಿ ಶೀಘ್ರವೇ ಈ ಶೇಡ್​ಗಳನ್ನು ನಿರ್ಮಾಣ ಮಾಡಲಿದ್ದೇವೆ ಎಂದರು. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Mon, 20 March 23