AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ ನಗರಸಭೆ ಮೇಲೆ ಲೋಕಾಯುಕ್ತ ದಾಳಿ, ಅಸಿಸ್ಟೆಂಟ್ ಇಂಜಿನಿಯರ್ ಬಲೆಗೆ

ಲಂಚ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು ಇಂದು ಗದಗ ಮಹಾನಗರ ಪಾಲಿಕೆ ಮೇಲೆ ದಾಳಿ ನಡೆಸಿ ಸಹಾಯಕ ಇಂಜಿನಿಯರ್​ನನ್ನು ರೆಡ್​ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.

ಗದಗ ನಗರಸಭೆ ಮೇಲೆ ಲೋಕಾಯುಕ್ತ ದಾಳಿ, ಅಸಿಸ್ಟೆಂಟ್ ಇಂಜಿನಿಯರ್ ಬಲೆಗೆ
ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಗದಗ ನಗರಸಭೆ ಸಹಾಯಕ ಇಂಜಿನಿಯರ್
Rakesh Nayak Manchi
|

Updated on:May 11, 2023 | 5:09 PM

Share

ಗದಗ: ರಸ್ತೆ ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚದ (Bribery) ಬೇಡಿಕೆ ಇಟ್ಟಿದ್ದ ನಗರಸಭೆ (Gadag Municipal Corporation) ಸಹಾಯಕ ಇಂಜಿನಿಯರ್ ​ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಗದಗ-ಬೆಟಗೇರಿ ನಗರಸಭೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುವ ಕಾಟೇವಾಲ ಎಂಬುವವರೇ ಲೋಕಾಯುಕ್ತರ ಬಲೆಗೆ ಬಿದ್ದವರು. ಗುತ್ತಿಗೆದಾರ ಅಬ್ದುಲ್ ಮನಿಯಾರ್ ಎಂಬುವರ ಒಂಬತ್ತು ಲಕ್ಷ ರೂ. ಮೊತ್ತದ ಮೂರು ಬಿಲ್ ಪಾಸ್ ಮಾಡಲು ಒಂದೂವರೆ ಲಕ್ಷ ಹಣ ಕೇಳಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರ ತಂಡ ದಾಳಿ (Lokayukta Raid) ಮಾಡಿ ಹಣ ಸಮೇತ ವಶಕ್ಕೆ ಪಡೆದಿದ್ದಾರೆ.

ಲಂಚ ಪಡೆದ ಇಂಜಿನಿಯರ್ ಕಾಟೇವಾಲ ಅವರು, ಹಣವನ್ನು ಬೈಕಿನಲ್ಲಿ ಇಟ್ಟಿದ್ದರು. ನಂತರ ಲೋಕಾಯುಕ್ತರಿಗೆ ಹಣ ಹಸ್ತಾಂತರ ಮಾಡಿದ್ದಾರೆ. ಬಿಲ್ ಪಾಸ್ ಮಾಡಲು ಒಂದೂವರೆ ಲಕ್ಷ ಹಣ ಕೇವಲ ಕಾಟೇವಾಲ ಇಂಜಿನಿಯರ್ ಮಾತ್ರ ಕೇಳಿದ್ರಾ ಅಥವಾ ಬೇರೆ ಯಾರಾದರೂ ಇದರಲ್ಲಿ ಇದ್ದರಾ ಎಂಬುದು ಲೋಕಾಯುಕ್ತರ ತನಿಖೆಯಿಂದ ಹೊರಬಿಳಲಿದೆ.

ಲೋಕಾಯುಕ್ತ ಎಸ್​ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್​ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ಇದನ್ನೂ ಓದಿ: Gadag: ಐಪಿಎಲ್ ಬೆಟ್ಟಿಂಗ್ ದಂಧೆಕೋರರಿಂದ ಲಂಚ ಪಡೆಯುತ್ತಿದ್ದ ಗಜೇಂದ್ರಗಡ ಠಾಣೆ ಪಿಎಸ್​ಐ ಲೋಕಾಯುಕ್ತ ಬಲೆಗೆ

ಇತ್ತೀಚೆಗೆ ಗದಗದಲ್ಲಿ ನಡೆದ ಲೋಕಾಯುಕ್ತ ಟ್ರ್ಯಾಪ್​ನಲ್ಲಿ ಪಿಎಸ್​ಐ ಸಹಿತ ಮೂವರು ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡೆದ ಐಪಿಎಲ್ ಪಂದ್ಯದಲ್ಲಿ ಒಂದು ಸಾವಿರಕ್ಕೆ ಎರಡು ಸಾವಿರ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಯಲ್ಲಿ ಬರೆದುಕೊಟ್ಟ ಹಾಗೂ ತಮ್ಮ ಮೊಬೈಲ್​ನಲ್ಲಿ ಆನ್ ಲೈನ್ ಆ್ಯಪ್​ನಲ್ಲಿ ಬೆಟ್ಟಿಂಗ್ ಆಡುತ್ತಿದ್ದಾಗ ಹರೀಶ್ ಪರಶುರಾಮ ದಲಬಂಜನ್ ಹಾಗೂ ಸಂತೋಷ ತಂದೆ ವಿರುಪಾಕ್ಷಸಾ ಜರತಾರಿ ಎಂಬಿಬ್ಬರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ನಗದು 2500ರೂ.ಹಣ ಹಾಗೂ ಮೊಬೈಲ್ ಜಪ್ತಿ ಮಾಡಿದ್ದರು.

ಆ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0054/2023 ಕಲಂ-78[1][ಎ][4][6]ಕೆ.ಪಿ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಾಗ ಪಿಎಸ್ಐ ರಾಘವೇಂದ್ರ, ಪೇದೆಗಳಾದ ಶರಣಪ್ಪ ಭಜಂತ್ರಿ ಹಾಗೂ ಕುರಿ ಎಂಬುವರು ಎರಡು ಲಕ್ಷ ರೂ. ಹಣ ಡೀಮ್ಯಾಂಡ್ ಮಾಡಿದ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿನಾಯಕ ಜರತಾರಿ ಎಂಬುವರು ದೂರು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Thu, 11 May 23