ಕರ್ನಾಟಕದ ಈ ಹೆದ್ದಾರಿ ಈಗ ಸಾವಿನ ಹೆದ್ದಾರಿ; ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಅಪಘಾತ, 23 ಸಾವು

|

Updated on: May 09, 2023 | 11:28 AM

ಅದು ರಾಜ್ಯ ಹೆದ್ದಾರಿ, ಆದರೀಗ ಸಾವಿನ ಹೆದ್ದಾರಿಯಾಗಿದೆ. ಅತಿ ಹೆಚ್ಚು ರೈತರು ಓಡಾಡುವ ಈ ರಸ್ತೆಯಲ್ಲಿ ಸಾವಿನ ಮನೆ ಸೇರ್ತಾಯಿದ್ದಾರೆ. ಈ ಹಿನ್ನಲೆ ಆ ಮಾರ್ಗದ ಕೃಷಿ ಜಮೀನಿಗೆ ರೈತರು ಹೋಗಲು ಭಯ ಪಡುತ್ತಿದ್ದಾರೆ. ಕೃಷಿ ಕಾರ್ಮಿಕರು ಕೂಲಿ ಕೆಲಸಕ್ಕೆ ಬರ್ತಾಯಿಲ್ಲ. ಕೇವಲ ರೈತ ವರ್ಗ ಅಲ್ಲ, ಹೊಸದಾಗಿ ಬರುವ ವಾಹನ ಚಾಲಕರು, ಇಲ್ಲಿ ಅಪಘಾತಕ್ಕೆ ಒಳಗಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಸಾವಿನ ಹೆದ್ದಾರಿ ಯಾವುದು ಅಂತಿರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಕರ್ನಾಟಕದ ಈ ಹೆದ್ದಾರಿ ಈಗ ಸಾವಿನ ಹೆದ್ದಾರಿ; ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಅಪಘಾತ, 23 ಸಾವು
ಅರಬಾವಿ ಚಳ್ಳಕೆರೆ ಹೆದ್ದಾರಿ
Follow us on

ಗದಗ: ನಮ್ಮ ಜಮೀನುಗಳಿಗೆ ಹೋಗಬೇಕಾದ್ರೆ ನಿತ್ಯವೂ ಜೀವ ಭಯ. ಎಲ್ಲಿ ಏನಾಗುತ್ತೋ ಅನ್ನೋ ಆತಂಕ ಕಾಡುತ್ತಿದೆ ಎಂದು ರೈತರ ಗೋಳಾಟ. ಜಮೀನಿಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುತ್ತೇವೋ ಇಲ್ಲವೋ ಅನ್ನೋ ಭಯ ಕುಟುಂಬವನ್ನು ಕಾಡುತ್ತಿದ ಎಂದು ರೈತರ ಅಳಲು. ಹೌದು ಈ ಸಾವಿನ ಹೆದ್ದಾರಿ ಇರುವುದು ಗದಗ(Gadag) ಜಿಲ್ಲೆಯಲ್ಲಿ. ಈ ಹೆದ್ದಾರಿ ಅರಬಾವಿ ಹಾಗೂ ಚಳ್ಳಕೆರೆ(Arabhavi  Challakere State Highway) ರಾಜ್ಯ ಹೆದ್ದಾರಿ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳ ಸಂಚಾರ ಮಾಡುತ್ತಿವೆ. ಅದರಲ್ಲೂ ಬೃಹತ್ ಲಾರಿಗಳು, ಕಾರು ಸೇರಿದಂತೆ ಅನೇಕ ವಾಹನಗಳು ಓಡಾಡುತ್ತಿವೆ. ಹೀಗಾಗಿ ಈ ಮಾರ್ಗವಾಗಿ ರೈತರು ಜಮೀನಿಗೆ ಹೋಗಿ ಬರಲು ಹಾಗೂ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬರಲು ಭಯ ಪಡುತ್ತಿದ್ದಾರೆ.

ಹೌದು ಗದಗ ಬೆಟಗೇರಿ ಬಾಗದಲ್ಲಿ ರೈತರ ಜಮೀನು ಹೆಚ್ಚಾಗಿವೆ. ಹೀಗಾಗಿ ನಿತ್ಯ ರೈತರು, ಕೂಲಿ ಕಾರ್ಮಿಕರು ಓಡಾಡುತ್ತಾರೆ. ಎತ್ತಿನ ಬಂಡಿ, ಹಾಗೂ ಟ್ರ್ತಾಕ್ಟರ್ ಮೂಲಕ ಉತ್ಪನ್ನ ತರುವಾಗ ಅಪಘಾತಗಳು ಹೆಚ್ಚಾಗಿ ಆಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಇದೇ ಮಾರ್ಗದಲ್ಲಿ 30 ಕ್ಕೂ ಹೆಚ್ಚು ಅಪಘಾತವಾಗಿದ್ದು, 23 ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ರೈತರು ಆರೋಪಿಸಿದ್ದಾರೆ. ಅದರಲ್ಲೂ ಹೆಚ್ಚಾಗಿ ರೈತರೇ ಸಾವಿನ ಮನೆ ಸೇರಿದ್ದಾರೆ ಎನ್ನುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಅಪಘಾತವಾಗಿವೆ. ಹೀಗಾಗಿ ಈ ಹೆದ್ದಾರಿ ಚತುಷ್ಪಥ ಹೆದ್ದಾರಿ ಮಾಡಿ, ಇಲ್ಲವಾದರೆ ಸರ್ವಿಸ್ ರೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ರು, ಸರ್ಕಾರ ಸರ್ವೀಸ್ ರೋಡ್​ ಮಾಡುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಈ ಕ್ಷೇತ್ರದಲ್ಲಿ ಶುರುವಾಗಿದೆ ದೇಣಿಗೆ ರಾಜಕೀಯ; ಜೆಡಿಎಸ್​ ಅಭ್ಯರ್ಥಿಗೆ ಹೋದಲೆಲ್ಲ ಹರಿದು ಬರ್ತಿದೆ ಹಣ

ಈ ಅರಬಾವಿ ಹಾಗೂ ಚಳ್ಳಕೆರೆ ಹೆದ್ದಾರಿಯಲ್ಲಿ ಇತ್ತಿಚೆಗೆ ಬಸ್ ಪಲ್ಟಿಯಾಗಿತ್ತು‌. ವಾರದಲ್ಲಿ ಒಂದೆರಡು ಅಪಘಾತವಾಗಿ ರೈತರು, ವಾಹನ ಸವಾರರು ಸಾವಿನ ಮನೆ ಸೇರುತ್ತಿದ್ದಾರೆ. ಅದರಲ್ಲೂ ಈವಾಗ ಕಡಲೆ, ಜೋಳವನ್ನ ಕಟಾವು ಮಾಡುವ ಸಮಯ. ಹಗಲು, ರಾತ್ರಿ ಜಮೀನುಗಳಿಗೆ ಹೋಗಬೇಕಾದ ಅನಿವಾರ್ಯ. ಇಂತಹ ಸಮಯದಲ್ಲಿ ಕೂಲಿ ಕಾರ್ಮಿಕರು ಕೂಡ ಕೃಷಿ ಕೆಲಸಕ್ಕೆ ಬರುತ್ತಿಲ್ಲ. ಈ ಭಾಗದ ರೈತರು, ಸರ್ವೀಸ್ ರೋಡ್​ ಬೇಕು ಎಂದು ಹತ್ತಾರು ಭಾರಿ ಮನವಿ ಮಾಡಿಕೊಂಡಿದ್ರು, ಜಿಲ್ಲಾಡಳಿತ ಹಾಗೂ ಸಚಿವರು ಕೇರ್ ಮಾಡ್ತಾಯಿಲ್ಲ ಎಂದು ರೈತರು ಕಿಡಿಕಾರಿದ್ದಾರೆ. ಹೀಗಾಗಿ ಈ ಭಾಗದ ಎಲ್ಲಾ, ರೈತರು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನ ಸರ್ಕಾರಕ್ಕೆ ನೀಡಿದ್ದಾರೆ.

ಸುಗಮ ಸಂಚಾರಕ್ಕೆ ಅನುಕೂಲವಾಗುವ ಹೆದ್ದಾರಿ, ಇಲ್ಲಿ ಮಾತ್ರ ಸಾವಿನ ಹೆದ್ದಾರಿಯಾಗಿದೆ. ವೇಗವಾಗಿ ಬರುವ ವಾಹನಗಳು ರೈತರ ಸಾವಿಗೆ ಕಾರಣವಾಗುತ್ತಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಅನುಕೂಲಕ್ಕಾಗಿ ಸರ್ವೀಸ್ ರೋಡ್​ ಮಾಡುವ ಮೂಲಕ, ಅನ್ನದಾತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ