AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ತಂಗಿ ಮೇಲೆ ಕಣ್ಣು ಹಾಕಿದ ಧಾರವಾಡದ ಸರ್ಕಾರಿ ನೌಕರ; ಅಪಹರಣ ಮಾಡಿಸಲು ಹೋಗಿ ಜೈಲು ಪಾಲು

ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಮುಕ್ತುಂ ಅಲಿ ಮೆಹಬೂಬ ಟೋಪದಾರ್ ಎನ್ನುವ ವ್ಯಕ್ತಿ ಧಾರವಾಡ ಮೂಲದ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದ. 2017 ರಲ್ಲಿ ನಡೆದಿದ್ದ ಈ ಮದುವೆಯ ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ದರು.

ಪತ್ನಿ ತಂಗಿ ಮೇಲೆ ಕಣ್ಣು ಹಾಕಿದ ಧಾರವಾಡದ ಸರ್ಕಾರಿ ನೌಕರ; ಅಪಹರಣ ಮಾಡಿಸಲು ಹೋಗಿ ಜೈಲು ಪಾಲು
ಮುಕ್ತುಂ ಅಲಿ ಮೆಹಬೂಬ ಟೋಪದಾರ್
sandhya thejappa
|

Updated on: Apr 21, 2021 | 5:59 PM

Share

ಧಾರವಾಡ: ಮನುಷ್ಯನ ಮನಸ್ಥಿತಿಯೇ ವಿಚಿತ್ರ. ಇದೇ ಕಾರಣಕ್ಕೆ ಇರುವುದನ್ನೆಲ್ಲಾ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ.. ಅಂತಾ ಕವಿ ಹೇಳಿದ್ದಾರೆ. ಇದಕ್ಕೊಂದು ಸಾಕ್ಷಿ ಎನ್ನುವಂತೆ ಧಾರವಾಡ ಜಿಲ್ಲೆಯಲ್ಲಿ ಘಟನೆಯೊಂದು ನಡೆದಿದೆ. ಆ ವ್ಯಕ್ತಿಗೆ ಸರ್ಕಾರಿ ನೌಕರಿ ಇತ್ತು. ಪತ್ನಿಯೂ ಇದ್ದಳು. ಆದರೆ ಆತನಿಗೆ ಅದೇಕೋ ಏನೋ ಪತ್ನಿಯ ತಂಗಿಯ ಮೇಲೆ ಮನಸ್ಸಾಗಿ ಹೋಯಿತು. ಆತನ ಈ ವಿಕೃತ ಮನಸ್ಸು ಆಕೆಯನ್ನು ಪಡೆಯಲು ಅಪಹರಿಸುವ ಯೋಚನೆ ಮಾಡಿಬಿಟ್ಟ. ಇಂಥದ್ದೊಂದು ಘಟನೆ ನಡೆದು, ಸರ್ಕಾರಿ ನೌಕರ ಜೈಲಿಗೆ ಹೋಗಿದ್ದಾನೆ.

ಏನಿದು ಕಥೆ? ಯಾರು ಆ ಸರ್ಕಾರಿ ನೌಕರ? ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಮುಕ್ತುಂ ಅಲಿ ಮೆಹಬೂಬ ಟೋಪದಾರ್ ಎನ್ನುವ ವ್ಯಕ್ತಿ ಧಾರವಾಡ ಮೂಲದ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದ. 2017 ರಲ್ಲಿ ನಡೆದಿದ್ದ ಈ ಮದುವೆಯ ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಯಾವಾಗ ಮುಕ್ತುಂ ಅಲಿ ಮಾಡಬಾರದ ಕೆಲಸಕ್ಕೆ ಕೈ ಹಾಕಿದ್ದನೋ ಆಗ ದಾಂಪತ್ಯದಲ್ಲಿ ಬಿರುಕುವುಂಟಾಯಿತು. ಈ ಮುಕ್ತುಂ ಅಲಿ ಮಾಡಿದ್ದು ದೊಡ್ಡ ತಪ್ಪೆಂದರೆ ಪತ್ನಿಯ ತಂಗಿಯ ಮೇಲೆ ಕಣ್ಣು ಹಾಕಿದ್ದು. ಸಾಮಾನ್ಯವಾಗಿ ಅಕ್ಕನ ಪತಿಯೊಂದಿಗೆ ಎಲ್ಲ ಯುವತಿಯರು ಇರುವ ಹಾಗೆ ಆ ಯುವತಿಯೂ ಇದ್ದಳು. ಎಲ್ಲರಂತೆ ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳನ್ನು ಕಳಿಸುತ್ತಿದ್ದಳು. ಆದರೆ ಅದನ್ನೇ ತಪ್ಪಾಗಿ ಅರ್ಥೈಸಿಕೊಂಡ ವಿಕೃತ ಮನಸ್ಸಿನ ಮುಕ್ತುಂ ಅಲಿ, ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಅಂದುಕೊಂಡ. ಆದರೆ ಆ ಯುವತಿಗೆ ಅಂಥಹ ಭಾವನೆಗಳು ಇರಲೇ ಇಲ್ಲ. ಆದರೆ ಮುಕ್ತುಂ ಅಲಿ ಮನಸ್ಸಿನಲ್ಲಿ ಆಕೆಯ ಮೇಲೆ ಪ್ರೀತಿ ಬೆಳೆಯುತ್ತಾ ಹೋಯಿತು. ಒಂದು ದಿನ ನೇರವಾಗಿ ಮುಕ್ತುಂ ಅಲಿ ಈ ಬಗ್ಗೆ ಆ ಯುವತಿಗೆ ವಾಟ್ಸಾಪ್ ಮೂಲಕ ಹೇಳಿಯೇ ಬಿಟ್ಟ. ಇದರಿಂದಾಗಿ ಯುವತಿಗೆ ಶಾಕ್ ಆಯಿತು. ಕೂಡಲೇ ಆಕೆ ಈ ವಿಚಾರವನ್ನು ಮನೆಯಲ್ಲಿ ಹೇಳಿದ್ದೇ ತಡ ದಾಂಪತ್ಯದಲ್ಲಿ ಬಿರುಕು ಬಿಟ್ಟಿತು. ಇದರಿಂದಾಗಿ ಮನೆಯಲ್ಲಿ ದೊಡ್ಡ ಜಗಳವೂ ಆಯಿತು. ಆಗ ಮುಕ್ತುಂ ಅಲಿಗೂ ಹಾಗೂ ಆತನ ಪತ್ನಿ ತವರು ಮನೆಯವರ ನಡುವೆ ಸಂಬಂಧವೇ ಕಳಚಿ ಹೋಯಿತು. ಯಾವುದೇ ಕಾರಣಕ್ಕೂ ಪರಸ್ಪರರ ಮನೆಗೆ ಹೋಗದಂತೆ ನಿರ್ಧರಿಸಲಾಯಿತು.

ವಿಕೃತ ಮನಸ್ಸಿನ ಸರಕಾರಿ ನೌಕರ ಮುಕ್ತುಂ ಅಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಮುಕ್ತುಂ ಅಲಿ ಮೆಹಬೂಬ ಟೋಪದಾರ್ ತಾನು ಮಾಡಿದ್ದ ತಪ್ಪನ್ನು ಒಪ್ಪಿಕೊಂಡು ಪತ್ನಿಯೊಂದಿಗೆ ನೆಮ್ಮದಿಯಾಗಿ ಇದ್ದು ಬಿಡಬಹುದಾಗಿತ್ತು. ಆದರೆ ಆತ ಇದಕ್ಕೆ ಒಪ್ಪಲಿಲ್ಲ. ನಡೆದ ಘಟನೆಯನ್ನೇ ಅಹಂಕಾರದಿಂದ ಸ್ವೀಕರಿಸಿದ ಮುಕ್ತುಂ ಅಲಿ, ಯಾವುದೇ ಕಾರಣಕ್ಕೂ ಪತ್ನಿಯ ತಂಗಿಯನ್ನು ಬಿಡಬಾರದು ಅಂತಾ ನಿರ್ಧರಿಸಿದ. ಈ ಮಧ್ಯೆ ಪತ್ನಿ ತನ್ನನ್ನು ಬಿಟ್ಟು ಮಕ್ಕಳೊಡನೆ ತವರು ಮನೆಗೆ ಹೋಗಿರೋದು ಆತನನ್ನು ಸಿಟ್ಟಿಗೆಬ್ಬಿಸಿದ್ದರೆ ಮತ್ತೊಂದು ಕಡೆ ಪತ್ನಿಯ ತಂಗಿಯ ಮದುವೆ ನಿಶ್ಚಯವಾಗಿತ್ತು. ಆ ನಿಶ್ಚಯಕ್ಕೆ ಮುಕ್ತು ಅಲಿಗೆ ಗೊತ್ತಾಗದಂತೆ ಪತ್ನಿ ಹೋಗಿ ಬಂದಿರುವುದು ತಿಳಿದು ದೊಡ್ಡ ರಗಳಯನ್ನೇ ಮಾಡಿದ್ದ. ಇನ್ನೊಮ್ಮೆ ಈ ರೀತಿಯಾಗದಂತೆ ವರ್ತಿಸುವುದಾಗಿ ಪತ್ನಿ ಹೇಳಿದ ಮೇಲೆ ಅದು ಅಲ್ಲಿಗೇ ನಿಂತಿತ್ತು. ಇದೇ ವೇಳೆ ಪತ್ನಿಯ ತಂಗಿಯ ನಿಶ್ಚಯದ ಸುದ್ದಿ ಕೇಳಿದಾಗಿನಿಂದ ಹುಚ್ಚನಂತಾಗಿ ಹೋದ ಮುಕ್ತುಂ ಅಲಿ, ಪತ್ನಿಯ ತಂಗಿಯನ್ನೇ ಅಪಹರಣ ಮಾಡಿಸಲು ನಿರ್ಧರಿಸಿದ. ಅದಕ್ಕಾಗಿ ಎಷ್ಟೇ ಖರ್ಚಾದರೂ ಸರಿ ಅಂತಾ ಹೇಳಿದ್ದ.

ಹತ್ತು ಲಕ್ಷ ರೂಪಾಯಿಗೆ ಅಪಹರಣದ ಡೀಲ್ ಫಿಕ್ಸ್; ಅಡ್ವಾನ್ಸ್ 5 ಲಕ್ಷ ರೂಪಾಯಿ ನೀಡಿಕೆ ಅಪಹರಣದ ಕೆಲಸಕ್ಕೆ ಮುಕ್ತುಂ ಅಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರವೀಣ ಕೃಷ್ಣಾ ನಾಯ್ಕ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನ ಚೇತನ ಬಸಪ್ಪ ಹಡಪದ ಎನ್ನುವವರನ್ನು ಸಂಪರ್ಕಿಸಿದ. ಪ್ರವೀಣ ಬಾರ್​ನಲ್ಲಿ ಕೆಲಸ ಮಾಡುವ ಯುವಕ. ಅದರೊಂದಿಗೆ ಇಂಥಹ ಕೆಲಸಗಳನ್ನು ಕೂಡ ಮಾಡುತ್ತಿರುವುದು ಮುಕ್ತುಂ ಅಲಿಗೆ ಗೊತ್ತಿತ್ತು. ಅದರೊಂದಿಗೆ ಅಟೋ ಡ್ರೈವರ್ ಆಗಿದ್ದ ಚೇತನ ಹಡಪದ ಕೂಡ ಸೇರಿಕೊಂಡ. ಮೂವರೂ ಸೇರಿ ಯುವತಿಯ ಅಪಹರಣಕ್ಕೆ ಯೋಜನೆ ರೂಪಿಸಿದರು. ಬಳಿಕ ಆಗಾಗ ಫೋನ್ ಮೂಲಕವೂ ಮಾತನಾಡಿದ್ದರು. ಅಚ್ಚರಿಯ ಸಂಗತಿ ಎಂದರೆ ಈ ಇಬ್ಬರಿಗೆ ಮುಕ್ತುಂ ಅಲಿ ಮುಂಗಡವಾಗಿ 5 ಲಕ್ಷ ರೂಪಾಯಿ ಕೂಡ ನೀಡಿಬಿಟ್ಟಿದ್ದ. ಹಣ ಮುಂಗಡವಾಗಿ ನೀಡಿದ್ದರಿಂದ ಅಪಹರಣವನ್ನು ಮಾಡುವಂತೆ ಪದೇ ಪದೇ ದುಂಬಾಲು ಬಿದ್ದಿದ್ದ.

ಚೇತನ ಬಸಪ್ಪ ಹಡಪದ ಮತ್ತು ಪ್ರವೀಣ ಕೃಷ್ಣಾ ನಾಯ್ಕ

ಪತಿಯ ಮೇಲೆ ಕಣ್ಣಿಟ್ಟಿದ್ದ ಪತ್ನಿ ಯುವತಿಗೆ ಮದುವೆ ಗೊತ್ತಾಗಿದ್ದರಿಂದ ಮನೆಯಲ್ಲಿ ಮದುವೆಯ ತಯಾರಿ ನಡೆದಿದ್ದರೆ, ಪತಿಯ ಬಗ್ಗೆ ಅನುಮಾನವಿದ್ದ ಪತ್ನಿ ಆತನ ಮೇಲೊಂದು ಕಣ್ಣಿಟ್ಟಿದ್ದಳು. ಅಲ್ಲದೇ ಆತನಿಗೆ ಗೊತ್ತಿಲ್ಲದೇ ಆತನ ಮೊಬೈಲ್ನಲ್ಲಿ ರೆಕಾರ್ಡಿಂಗ್ ಆಪ್ಷನ್ ಆನ್ ಇಟ್ಟಿದ್ದಳು. ಎರಡು ತಿಂಗಳ ಹಿಂದೆ ಆತನ ಮೊಬೈಲ್​ನಲ್ಲಿ ಆಡಿಯೋ ಕ್ಲಿಪ್​ಗಳನ್ನು ಕೇಳುತ್ತಿರುವಾಗ ಒಂದು ಆಡಿಯೋದಲ್ಲಿ ಪತಿ ಮಾತನಾಡಿದ್ದನ್ನು ಕೇಳಿ ಆಕೆ ಶಾಕ್ ಆಗಿದ್ದಳು. ಪತಿ ಯಾರೋ ವ್ಯಕ್ತಿಯೊಂದಿಗೆ ಆಕೆಯ ಮದುವೆ ನಿಶ್ಚಯವಾಗಿದ್ದು, ಆದಷ್ಟು ಬೇಗನೇ ಏನಾದರೂ ಮಾಡಬೇಕು ಅಂತಾ ಹೇಳಿದ್ದು ತಿಳಿಯಿತು. ಇದರಿಂದ ಆತಂಕಗೊಂಡ ಪತ್ನಿ ಅದನ್ನು ನೇರವಾಗಿ ತವರು ಮನೆಯವರಿಗೆ ಕಳಿಸಿದರು. ಅಲ್ಲದೇ ಮನೆಯಲ್ಲಿ ಪತಿಯೊಂದಿಗೆ ದೊಡ್ಡ ಜಗಳವಾಗಿ ಮಕ್ಕಳೊಡನೆ ತವರು ಮನೆಗೆ ಬಂದು ಬಿಟ್ಟಳು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತವರು ಮನೆಯವರು ಧಾರವಾಡದ ನಗರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್​ ಶಿವಾನಂದ ದಿಡಿಗಿನಾಳ್ ಅವರನ್ನು ಭೇಟಿಯಾಗಿ ದೂರು ನೀಡಿದರು.

ಅಪಹರಿಸಿಕೊಂಡು ಎಲ್ಲಿಗೆ ಹೋಗುತ್ತಿದ್ದರು? ಮುಕ್ತುಂ ಅಲಿಯ ಪತ್ನಿ ನೀಡಿದ ದೂರಿನ ಮೇಲೆ ತನಿಖೆ ಆರಂಭಿಸಿದ್ದ ಧಾರವಾಡ ನಗರ ಠಾಣೆ ಇನ್ಸ್​ಪೆಕ್ಟರ್ ಸಂಗಮೇಶ ದಿಡಿಗಿನಾಳ, ಎಎಸ್ಐ ಮಹೇಶ ಕುರ್ತಕೋಟಿ, ಹವಾಲ್ದಾರ ಎಚ್.ಎಚ್.ಚಿಕ್ಕಮಠ, ಪ್ರವೀಣ ದಡೇದ, ಸಿಬ್ಬಂದಿ ಚೆನ್ನಬಸಪ್ಪ ಎನ್, ಲಕ್ಷ್ಮಣ ಲಮಾಣಿ, ಮೌನೇಶ ಚವ್ಹಾಣ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಚ್ಚರಿಯ ಮತ್ತೊಂದು ಸಂಗತಿ ಎಂದರೆ ಯುವತಿಯನ್ನು ಅಪಹರಿಸಿದ ಬಳಿಕ ಆಕೆಯನ್ನು ಚಾರ್ಮಾಡಿ ಘಾಟ್​ನಲ್ಲಿ ಇಡಬೇಕು ಅಂದುಕೊಂಡು, ಈ ಮೂವರೂ ಸ್ಥಳವನ್ನು ಕೂಡ ನೋಡಿ ಬಂದಿದ್ದರಂತೆ.

ಇದೀಗ ಮೂವರು ಆರೋಪಿಗಳನ್ನು ಬಂಧಿಸಿ, ಅವರ ಐಪಿಸಿ ಸೆಕ್ಷನ್ 366, ಐಪಿಸಿ ಸೆಕ್ಷನ್ 115 ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಪಾರಿ ಪಡೆದಿದ್ದ ಆರೋಪಿಗಳಿಂದ ಸುಮಾರು 3 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಅಂತಾ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ

ಡ್ರ್ಯಾಗರ್ ಇರಿದು ವ್ಯಕ್ತಿ ಕೊಲೆ; ಚಿನ್ನದ ಸರ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿ

ಅಪ್ರಾಪ್ತೆ ಮೇಲೆ ಟಿಕ್ಟಾಕ್ ಸ್ಟಾರ್ ಅತ್ಯಾಚಾರ; ಪೊಸ್ಕೊ ಕಾಯ್ದೆ ಅಡಿ ಬಂಧನ

(government employee prison who has decided to abduct his wife sister at Dharwad)