ಹಾಸನದಲ್ಲಿ ಪುಂಡರ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ಆವಾಜ್ ಹಾಕಿದ್ದ ಆಟೋ ಚಾಲಕನನ್ನು ಕೊಂದೇಬಿಟ್ಟರು!

ಕ್ಷುಲ್ಲಕ ಕಾರಣಕ್ಕೆ ಪುಂಡ ಹುಡುಗರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಮೇಲೆ ಹಲ್ಲೆ ಮಾಡಿದರು ಎಂಬ ಸಿಟ್ಟಿನಿಂದ ಮತ್ತೆ ಹಲ್ಲೆ ಮಾಡಿದ್ದ ಸ್ಥಳಕ್ಕೆ ಹೋಗಿ ಆರ್ಭಟಿಸೋಕೆ ಯತ್ನಿಸಿದ ಆಟೋ ಚಾಲಕನನ್ನೆ ಇರಿದುಕೊಂದ ಪಾತಕಿಗಳು ಎಸ್ಕೇಪ್ ಆಗಿದ್ದಾರೆ.

ಹಾಸನದಲ್ಲಿ ಪುಂಡರ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ಆವಾಜ್ ಹಾಕಿದ್ದ ಆಟೋ ಚಾಲಕನನ್ನು ಕೊಂದೇಬಿಟ್ಟರು!
ಹಾಸನದಲ್ಲಿ ಪುಂಡರ ಹುಡುಗರ ಅಟ್ಟಹಾಸ
Follow us
| Updated By: ಸಾಧು ಶ್ರೀನಾಥ್​

Updated on: Mar 19, 2023 | 6:00 AM

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ (Auto driver) ಆತ ಯಾವಾಗಲೂ ಸ್ನೇಹಿತರ ಜೊತೆಯೇ ಇರ್ತಿದ್ದ. ಶುಕ್ರವಾರ ಹಾಸನದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಸ್ನೇಹಿತನನ್ನ ಮಾತನಾಡಿಸೋಕೆ ಅಂತಾ ಗವೇನಹಳ್ಳಿ ಬಳಿ ಹೋಗಿದ್ದಾನೆ. ಬೈಕ್ ನಲ್ಲಿ ಹೋಗಿದ್ದ ವೇಳೆ ರಾಶ್ ಡ್ರೈವಿಂಗ್ ಅಂತಾ ಅಲ್ಲಿದ್ದ ಹುಡುಗರ ಜೊತೆ ಮಾತಿಗೆ ಮಾತು ಬೆಳೆದಿದೆ. ಕೆಲ ಪುಂಡರು ಇವರ ಮೇಲೆ ಹಲ್ಲೆಮಾಡಿ ಕಳಿಸಿದ್ದಾರೆ. ಒಬ್ಬನೆ ಇದ್ದಾಗ ಹಲ್ಲೆ ಮಾಡ್ತೀರಾ ಎಂದು ವಾಪಸ್ ಹೋಗಿ ಮತ್ತೆ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ಆತ ಹಲ್ಲೆ ಮಾಡಿದವರ ಮೇಲೆ ಎಗರಾಡಿದ್ದ. ಅಷ್ಟೇ ನೋಡ ನೋಡುತ್ತಲೆ ಆಟೋ ಡ್ರೈವರ್ ಮೇಲೆ ಎರಗಿದ್ದ ಹಂತಕ ಪಡೆ ಮನಸೋ ಇಚ್ಚೆ ಹಲ್ಲೆ ಮಾಡಿದರು. ಚೂರಿಯಿಂದ ಇರಿದು ಕೊಂದು ಮುಗಿಸಿ ಎಸ್ಕೇಪ್ ಆಗಿದ್ದಾರೆ. ಸಣ್ಣದೊಂದು ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಮನೆ ಮಗನ ಕಳೆದುಕೊಂಡ ಸಂಬಂಧಿಕರ ರೋದನ ಮುಗಿಲು ಮುಟ್ಟಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹಾಸನದಲ್ಲಿ (Hassan) ಪುಂಡರ ಅಟ್ಟಹಾಸಕ್ಕೆ (miscreants) ಮತ್ತೊಂದು ಬಲಿ… ಕ್ಷುಲ್ಲಕ ಕಾರಣಕ್ಕೆ ನಡೆದ ಕಲಹದಲ್ಲಿ ಆಟೋ ಡ್ರೈವರ್ ಕೊಂದ ಹಂತಕರು… ಬೈಕ್ ರಾಶ್ ಡ್ರೈವಿಂಗ್ ಮಾಡಿದ ಕಾರಣಕ್ಕೆ ಹಲ್ಲೆ ಮಾಡಿದ್ರು ಎಂದು ಮತ್ತೆ ಜಗಳಕ್ಕೆ ಬಂದವನನ್ನ ಇರಿದು ಕೊಂದರು.. ಆರೋಫಿಗಳ ಬಂಧನಕ್ಕೆ ಖಾಕಿ ತಲಾಶ್! ಹೌದು ಹಾಸನ ನಗರದಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆಗಳೆ ನಡೆದು ಹೋಗ್ತಿದ್ದು ಶುಕ್ರವಾರ ರಾತ್ರಿ ಕೂಡ ಇಂತಹದ್ದೇ ಘಟನೆಗೆ ನಗರದ ಹುಣಸಿನಕೆರೆ ಪ್ರದೇಶದ ವಿಶ್ವನಾಥ ನಗರದ ಆಟೋ ಚಾಲಕ ಸುಮಂತ್ (20) ನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ (Murder).

ಶುಕ್ರವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಸುಮಂತ್, ಮಧ್ಯಾಹ್ನ ಸ್ನೇಹಿತನ ಮಾತನಾಡಿಸೋಕೆ ಎಂದು ಬೆಂಗಳೂರು ಮಂಗಳೂರು ಬೈಪಾಸ್ ರಸ್ತೆಯ ಬಳಿ ಹೋಗಿದ್ದಾನೆ. ಬೈಕ್ ನಲ್ಲಿ ಹೋಗಿದ್ದ ವೇಳೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ರಸ್ತೆಯಲ್ಲಿ ಹೋದ ವಿಚಾರಕ್ಕೆ ಅಲ್ಲೇ ಇದ್ದ ಕೆಲ ಹುಡುಗರು ಸುಮಂತನನ್ನು ಪ್ರಶ್ನೆ ಮಾಡಿದ್ದಾರೆ.

ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಸುಮಂತ್ ಮೇಲೆ ಹಲ್ಲೆ ಮಾಡಿದ ಹುಡುಗರು ವಾರ್ನ್ ಮಾಡಿ ಕಳಿಸಿದ್ದಾರೆ. ಆದ್ರೆ ಹಲ್ಲೆಯಾದ ಬಳಿಕ ವಾಪಸ್ ಬಂದು ಮತ್ತೆ ಸಂಜೆ ತನ್ನ ಮೇಲೆ ಹಲ್ಲೆ ಮಾಡಿದವರನ್ನ ಹುಡುಕಿ ಹೋದ ಸುಮಂತ್ ಅಲ್ಲೇ ಇದ್ದವರನ್ನ ನನ್ನ ಮೇಲೆ ಯಾಕೆ ಹಲ್ಲೆ ಮಾಡಿದ್ರಿ ಎಂದು ಪ್ರಶ್ನೆ ಮಾಡಿದ್ದನಂತೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಆವಾಜ್ ಹಾಕಿದ್ದನಂತೆ.

ಆದ್ರೆ ಅಲ್ಲೇ ಇದ್ದ ಪುಂಡರ ಗುಂಪು ಏಕಾಏಕಿ ಸುಮಂತ್ ಮೇಲೆ ಅಟ್ಯಾಕ್ ಮಾಡಿದೆ. ಏಕಾಂಗಿಯಾಗಿ ಸಿಕ್ಕವನ ಮೇಲೆ ಮುಗಿಬಿದ್ದು ಇರಿದು ಕೊಂದಿದ್ದಾರೆ. ಬೈಪಾಸ್ ರಸ್ತೆಯ ಅಂಗಡಿಯೊಂದರ ಬಳಿ ಬರ್ಬರವಾಗಿ ಕೊಂದು ಎಸ್ಕೇಪ್ ಆಗಿದ್ದು ರಾತ್ರಿ 11 ಗಂಟೆ ಸುಮಾರಿನಲ್ಲಿ ಸ್ಥಳೀಯರು ಮೃತದೇಹ ನೋಡಿದಾಗ ನಡೆದಿರೋ ಭೀಕರ ಹತ್ಯೆ ಪ್ರಕರಣ ಬಯಲಾಗಿದೆ.

ಸಂಬಂಧಿಕರ ಮನೆಯೊಂದರ ಗೃಹ ಪ್ರವೇಶಕ್ಕೆ ಹೋಗಬೇಕಿದ್ದ ಸುಮಂತ್ ಎಲ್ಲಿಗೂ ಹೋಗದೆ ಮನೆಯಲ್ಲೇ ಇದ್ದನಂತೆ. ಮಧ್ಯಾಹ್ನದ ವೇಳೆ ಸ್ನೇಹಿತರ ಭೇಟಿಗೆ ಹೋದಾಗ ನಡೆದ ಕ್ಷುಲ್ಲಕ ಕಾರಣದ ಜಗಳವೇ ಕಡೆಗೆ ಕೊಲೆ ಮಾಡುವ ಹಂತಕ್ಕೆ ಹೋಗಿದೆ. ಐಟಿಐ ಮಾಡಿಕೊಂಡಿದ್ದ ಸುಮಂತ್ ಮನೆಯಲ್ಲಿ ಒಬ್ಬನೇ ಮಗನಾಗಿದ್ದು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ.

ಮನೆಯಲ್ಲಿ ದುಡಿಯೋ ಒಬ್ಬನೇ ಮಗನನ್ನ ಕಳೆದುಕೊಂಡ ಕುಟುಂಬ ಈಗ ಕಂಗಾಲಾಗಿದೆ. ಸುಮಂತ್ ಯಾರೊಂದಿಗೂ ಜಗಳಕ್ಕೆ ಹೋದ ಹುಡುಗನಲ್ಲ. ಯಾವಾಗಲೂ ಸ್ನೇಹಿತರ ಜೊತೆಗೆ ಒಡನಾಟ ಇದ್ದ ಹುಡುಗನಾಗಿದ್ದ. ಆದ್ರೆ ಕುಡಿದ ಅಮಲಿನಲ್ಲಿ ಜಗಳ ಮಾಡಿದ ಕೆಲ ಹುಡುಗರು ಸಣ್ಣ ವಿಚಾರಕ್ಕೆ ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಒಬ್ಬನೇ ಮಗನನ್ನ ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಅವರಿಗೆ ಈಗ ಆಸರೆಯಾಗುವವರು ಯಾರು ಎಂದು ಆಕ್ರೋಶ ಹೊರ ಹಾಕಿರೋ ಸಂಬಂಧಿಕರು, ಕೂಡಲೆ ಆರೋಪಿಗಳನ್ನ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾತ್ರಿ ಘಟನೆ ನಡೆದ ಕೂಡಲೆ ವಿಶೇಷ ತಂಡ ರಚಿಸಿ ಕೊಲೆ ಆರೋಪಿಗಳನ್ನ ಬಂಧಿಸಲು ಬಲೆ ಬೀಸಲಾಗಿದೆ. ನಗರದ ಬಡಾವಣೆ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮರಣೋತ್ತರ ಪರಿಕ್ಷೆ ಬಳಿಕ ಮೃತದೇಹವನ್ನ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ, ಹಾಸನದಲ್ಲಿ ಇಂತಹ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಹೀಗೆ ಸಣ್ಣ ಸಣ್ಣ ವಿಚಾರಗಳಿಗೂ ಕೊಲೆ ಮಾಡುವ ಹಂತಕ್ಕೆ ಹೋಗೋ ರಕ್ಕಸರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ

ಕ್ಷುಲ್ಲಕ ಕಾರಣಕ್ಕೆ ಪುಂಡ ಹುಡುಗರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಮೇಲೆ ಹಲ್ಲೆ ಮಾಡಿದರು ಎಂಬ ಸಿಟ್ಟಿನಿಂದ ಮತ್ತೆ ಹಲ್ಲೆ ಮಾಡಿದ್ದ ಸ್ಥಳಕ್ಕೆ ಹೋಗಿ ಆರ್ಭಟಿಸೋಕೆ ಯತ್ನಿಸಿದ ಆಟೋ ಚಾಲಕನನ್ನೆ ಇರಿದುಕೊಂದ ಪಾತಕಿಗಳು ಎಸ್ಕೇಪ್ ಆಗಿದ್ದಾರೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ9, ಹಾಸನ