ಹಾಸನಾಂಬೆ ದರ್ಶನಕ್ಕೆ ಜನಸಾಗರ: ದೇಗುಲದಲ್ಲಿ ವಿಐಪಿ ದರ್ಬಾರ್ ಖಂಡಿಸಿ ಧಿಕ್ಕಾರ ಕೂಗಿದ ಭಕ್ತರು
ಹಾಸನಾಂಬೆ ದರ್ಶನ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನದತ್ತ ಹರಿದು ಬರುತ್ತಿದ್ದಾರೆ. ರಾಜಕೀಯ ನಾಯಕರ ದರ್ಶನದಿಂದ ಸಾಮಾನ್ಯ ಜನರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನ: ವರ್ಷಕ್ಕೆ ಒಮ್ಮೆ ದರ್ಶನ ಕರುಣಿಸೋ ಹಾಸನದ ಅಧಿದೇವತೆ ಹಾಸನಾಂಬೆ (Hasanambe) ದರ್ಶನ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನದತ್ತ ಹರಿದು ಬರುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದಲೂ ಕೂಡ ನೂಕು ನುಗ್ಗಲಿನ ನಡುವೆ ದರ್ಶನ ಪಡೆಯಲು ಭಕ್ತರು ಪರದಾಡಿದ್ದಾರೆ. ಇನ್ನು ಸೆಲೆಬ್ರಿಟಿಗಳು, ರಾಜಕೀಯ ನಾಯಕರು, ಸಚಿವರುಗಳ ದರ್ಶನದಿಂದ ಸಾಮಾನ್ಯ ಜನರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿ ಧಿಕ್ಕಾರ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಎರಡು ದಿನಗಳಿಂದ ಶಾಸಕ ಪ್ರೀತಂಗೌಡ ಗರ್ಭಗುಡಿ ಬಾಗಿಲ ಬಳಿ ನಿಂತ್ತುಕೊಂಡಿದ್ದು, ಕೆಲವರಿಗೆ ಎಂಟ್ರಿ, ಕೆಲವರಿಗೆ ನೋ ಎಂಟ್ರಿ ಎನ್ನುತ್ತಿದ್ದಾರೆ. ಶಾಸಕರ ಈ ನಡೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಕೇವಲ ಐದು ದಿನಗಳು ಮಾತ್ರ ದರ್ಶನಕ್ಕೆ ಬಾಕಿ ಇರೋ ವೇಳೆ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳಲು ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವರ್ಷ 15 ದಿನಗಳು ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದಿರುತ್ತೆ. ಅದರಲ್ಲಿ 12 ದಿನಗಳು ಭಕ್ತರ ದರ್ಶನಕ್ಕೆ ಅವಕಾಶವಿದೆ. ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಸಿಗುತ್ತೆ. ಕಳೆದ ವರ್ಷ ಹಚ್ಚಿಟ್ಟ ದೀಪ ಆರೋದಿಲ್ಲ. ದೇವರ ಮುಡಿಗಿಟ್ಟ ಹೂ ಬಾಡೋದಿಲ್ಲ ಎನ್ನೋ ನಂಬಿಕೆಯಿಂದಲೇ ಆರದ ದೀಪವನ್ನ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ಇರಲಿಲ್ಲವಾದ್ದರಿಂದ ಈ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರ ಪ್ರವಾಹ ಹಾಸದತ್ತ ಹರಿದು ಬರುತ್ತಿದೆ. ಹಾಗಾಗಿಯೇ ದರ್ಶನಕ್ಕಾಗಿ ನೂಕು ನುಗ್ಗಲು ಸೃಷ್ಟಿಯಾಗುತ್ತಿದ್ದು, ಗಣ್ಯರ ದರ್ಶನವೇ ಸಾಮಾನ್ಯ ಭಕ್ತರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ನಾಲ್ಕು ಐದು ಗಂಟೆಗಳು ಕಾದು ಸಾಮಾನ್ಯ ಸರತಿ ಸಾಲಿನಲ್ಲಿ ಭಕ್ತರು ದರ್ಶನ ಮಾಡಬೇಕಾದ ಸ್ಥಿತಿ ಇದೆ.
ಶಾಸಕ ಪ್ರೀತಂಗೌಡ ಹಾಗೂ ರೇವಣ್ಣ ಮುಖಾ ಮುಖಿ:
ಹಾಸನಾಂಬೆ ದರ್ಶನೋತ್ಸವ ಕೊನೆಗೊಳ್ಳಲು ಅಂತಿಮ ದಿನಗಳು ಬರುತ್ತಿರುವ ವೇಳೆಯಲ್ಲಿ ವಿವಾದದ ಹೊಗೆ ಎದ್ದಿದೆ ಎನ್ನಲಾಗುತ್ತಿದೆ. ಅಕ್ಟೋಬರ್ 13ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದ ಬಳಿಕ ಅಕ್ಟೋಬರ್ 14ರಿಂದ ಸಾರ್ವಜನಿಕ ದರ್ಶನೋತ್ಸವ ನಡೆಯುತ್ತಿದೆ. ಎಂಟೇ ದಿನಕ್ಕೆ ನಾಲ್ಕೈದು ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಒಂಬತ್ತನೇ ದಿನವಾದ ಇಂದು, ಅದರಲ್ಲಿಯೂ ವೀಕೆಂಡ್ ಆಗಿರೋ ಹಿನ್ನೆಲೆಯಲ್ಲಿ ಇಂದು ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಿಗ್ಗೆಯಿಂದಲೂ ಕೂಡ ಅಪಾರ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದುಕೊಂಡರು. ಇಂದು ಮೂರನೇ ವೇಳೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಮಾಜಿ ಸಚಿವ ರೇವಣ್ಣ, ತಮ್ಮೊಟ್ಟಿಗೆ ಹೈಕೋರ್ಟ್ ವಕೀಲರೊಬ್ಬರನ್ನ ಕರೆತಂದಿದ್ದರು. ಈ ವೇಳೆ ಶಾಸಕ ಪ್ರೀತಂಗೌಡ ಹಾಗೂ ರೇವಣ್ಣ ಮುಖಾ ಮುಖಿಯಾದರು.
ಕೆಲವರಿಗೆ ಎಂಟ್ರಿ, ಕೆಲವರಿಗೆ ನೋ ಎಂಟ್ರಿ:
ಎರಡು ದಿನಗಳ ಹಿಂದೆ ತಮ್ಮ ಕುಟುಂಬ ಸದಸ್ಯರಿಗೆ ಗರ್ಭಗುಡಿ ಪ್ರವೇಶ ನೀಡಲಿಲ್ಲ ಎನ್ನುವ ಕಾರಣದಿಂದ ಸಿಟ್ಟಿಗೆದ್ದ ಶಾಸಕ ಪ್ರೀತಂಗೌಡ ನೆನ್ನೆಯಿಂದ ಗರ್ಭಗುಡಿ ಎದುರೇ ನಿಲ್ಲುತ್ತಿದ್ದಾರೆ. ಯಾರೆ ಬಂದರೂ ಕೂಡ ದೇವಿ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಯಾರಾದರು ಗರ್ಭಗುಡಿ ಪ್ರವೇಶ ಮಾಡಬೇಕು ಎಂದರೆ ಪೊಲೀಸರೇ ಶಾಸಕರ ಅನುಮತಿ ಪಡೆಯುತ್ತಿದ್ದಾರೆ. ನಟಿ ಹಾಗೂ ಅರಣ್ಯ ಅಭಿವೃದ್ದಿ ನಿಗದಮ ಅಧ್ಯಕ್ಷೆ ತಾರಾಗೂ ಶಾಸಕ ಪ್ರೀತಂಗೌಡ ಗರ್ಭಗುಡಿ ಪ್ರವೇಶ ನೀಡಲಿಲ್ಲ. ಎಸ್ಪಿ ಹರಿರಾಂ ಶಂಕರ್ ಮನವಿ ಮಾಡಿದ ಬಳಿಕ ತಾರಾ ಅವರಿಗೆ ಗರ್ಭಗುಡಿ ಎಂಟ್ರಿಗೆ ಅವಕಾಶ ನೀಡಲಾಯಿತು. ಕೆಲವರಿಗೆ ಎಂಟ್ರಿ, ಕೆಲವರಿಗೆ ನೋ ಎಂಟ್ರಿ ಎನ್ನೋ ರೀತಿಯ ವರ್ತನೆ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಬೇಕು ಎಂದು ಬರೋ ಕೆಲ ಭಕ್ತರಿಗೆ ನಿರಾಸೆ ಉಂಟಾದರೆ, ಭಾರಿ ಜನರ ನಡುವೆಯೂ ದೇವಿ ದರ್ಶನ ಪಡೆದು ಭಕ್ತರು ಖುಷಿ ಖುಷಿಯಿಂದ ಮರಳುತ್ತಿದ್ದಾರೆ.
ವರದಿ: ಮಂಜುನಾಥ್.ಕೆ.ಬಿ. ಟಿವಿ9, ಹಾಸನ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Sun, 23 October 22