
ಹಾವೇರಿ, ಫೆಬ್ರವರಿ 14: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನಗಳು ಕಳೆದಿವೆ. ಹೀಗಾಗಿ ಹಾವೇರಿಯಲ್ಲಿ ಇಂದು ಕಾಂಗ್ರೆಸ್ ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ಸಿಎಂ ಸಿದ್ದರಾಮಯ್ಯ (Siddaramaiah) ವಿತರಣೆ ಮಾಡಿದರು. ಆದರೆ ಇದೇ ಸಮಾವೇಶ ‘ದೋಸ್ತಿ’ಗಳ ವಾಕ್ಸಮರಕ್ಕೆ ವೇದಿಕೆ ಆಗಿತ್ತು.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಗ್ಯಾರಂಟಿಗಳನ್ನ ಯಾರು ವಿರೋಧ ಮಾಡ್ತಿದ್ರೋ, ಇಂದು ಅವರೇ ನಮ್ಮ ಗ್ಯಾರಂಟಿಗಳನ್ನ ಅನುಸರಿಸ್ತಿದ್ದಾರೆ. ಜನಸೇವೆಯ ಸಾರ್ಥಕ ಆಡಳಿತವನ್ನು ರಾಜ್ಯ ಸರ್ಕಾರ ನೀಡಿದೆ. 2 ವರ್ಷ 9 ತಿಂಗಳಲ್ಲಿ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ. ಈಗಾಗಲೇ 243 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸುತ್ತೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಗುಡುಗಿದರು.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು
ಬಿಜೆಪಿ ಅವಧಿಯಲ್ಲಿ ಶೇ.10ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಇದೀಗ ರಾಜ್ಯ ಸರ್ಕಾರದ ಬಳಿ ಹಣವಿಲ್ಲವೆಂದು ಟೀಕೆ ಮಾಡುತ್ತಾರೆ. ಖಜಾನೆ ಖಾಲಿಯಾಗಿದೆ ಅಂತಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿಗೆ 1.18 ಲಕ್ಷ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದೇವೆ. ಖಜಾನೆ ಖಾಲಿಯಾಗಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತ್ತಿರಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶೀವಕುಮಾರ್, ಬಿಜೆಪಿ, ಜೆಡಿಎಸ್ನವರು ಜನರಿಗಾಗಿ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ ಅಂತ ಆಕ್ರೋಶಭರಿತವಾಗಿ ಪ್ರಶ್ನಿಸಿದರು. ಬಿಜೆಪಿ ನಾಯಕರ ಟೀಕೆ, ಟಿಪ್ಪಣಿಗಳ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ನಾವೇನು ಮಾಡೋಕೆ ಆಗಲಿಲ್ಲ ಅಂತ ಈಗ ಕೈಕೈ ಹಿಸುಕಿಕೊಳ್ತಿದ್ದಾರೆ ಅಂತ ಗರಂ ಆದರು.
ನಮ್ಮ ಸರ್ಕಾರಕ್ಕೆ 1 ಸಾವಿರ ದಿನಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ದೊಡ್ಡ ಬದಲಾವಣೆಯಾಗಿದೆ. 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಆಗಲಿಲ್ಲ. ಇದು ಇದೀಗ ದೇಶದ ಗ್ಯಾರಂಟಿಯಾಗಿದೆ. ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಾವಿಲ್ಲ, ಆದರೆ ಟೀಕೆ ಹಾಗೂ ಅಪಪ್ರಚಾರಕ್ಕೆ ಸಾವಿದೆ ಎಂದು ಹೇಳಿದ್ದಾರೆ.
ಜನರ ಅನುಕೂಲಕ್ಕಾಗಿ ಭೂಗ್ಯಾರಂಟಿ ಯೋಜನೆ ಜಾರಿಮಾಡಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರದ 7ನೇ ಗ್ಯಾರಂಟಿ ನೀರು. ಕೃಷ್ಣಾ, ಕಾವೇರಿ, ಮೇಕೆದಾಟು, ಎತ್ತಿನಹೊಳೆ ಕಾಮಗಾರಿಯನ್ನು ನಮ್ಮ ಅವಧಿಯಲ್ಲೇ ಎಲ್ಲಾ ಕಾಮಗಾರಿ ಮುಗಿಸುವ ಪ್ರಯತ್ನಿಸ್ತೇವೆ ಎಂದರು.
ನಮ್ಮ ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ನೀಡಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಆರ್ .ಅಶೋಕ್, ವಿಜಯೇಂದ್ರ ನಿಮ್ಮ ಅವಧಿಯಲ್ಲಿ ಜನರಿಗೆ ಒಂದಾದ್ರು ಉತ್ತಮ ಕಾರ್ಯಕ್ರಮ ನೀಡಿದ್ರಾ? ನೀವು ಕೊಟ್ಟಿದ್ದರೇ ಜನರ ಮುಂದೆ ಮಾತನಾಡುವ ಅವಕಾಶ ಇರ್ತಿತ್ತು, ಆದರೆ ನೀವು ಆ ಅವಕಾಶ ಕಳೆದುಕೊಂಡಿದ್ದೀರಿ ಎಂದು ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.