
ಹಾವೇರಿ, ಆ.18: ವಿಜ್ಞಾನ ಪ್ರದರ್ಶನಗಳಲ್ಲಿ ಸಾಮಾನ್ಯವಾಗಿ ಥರ್ಮಕೋಲ್, ಪ್ಲಾಸ್ಟಿಕ್ ಅಥವಾ ಕಾರ್ಡ್ಬೋರ್ಡ್ ಮಾದರಿಗಳನ್ನು ನೋಡುತ್ತೇವೆ. ಆದರೆ ಹಾವೇರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 5ನೇ ತರಗತಿಯ ಪುಟಾಣಿ ವಿದ್ಯಾರ್ಥಿಗಳು ನೈಜ ದ್ವಿಚಕ್ರ ವಾಹನದಲ್ಲೇ ನೂತನ ಭದ್ರತಾ ತಂತ್ರಜ್ಞಾನವನ್ನು ಅಳವಡಿಸಿ ಸೈ ಎನಿಸಿಕೊಂಡಿದ್ದಾರೆ.
ಚಾಲನಾ ಪರವಾನಗಿ ಇದ್ದರೆ ಮಾತ್ರವೇ ದ್ವಿಚಕ್ರ ವಾಹನ ಸ್ಟಾರ್ಟ್ ಆಗುವಂತೆ, ಲೈಸನ್ಸ್ ಇಲ್ಲದಿದ್ದರೆ ವಾಹನ ಚಲಾಯಿಸಲು ಸಾಧ್ಯವೇ ಆಗದಂತೆ ವಿಶೇಷ ತಂತ್ರಜ್ಞಾನ ರೂಪಿಸಿ ಇಡೀ ಶಾಲೆಯ ಗಮನ ಸೆಳೆದಿದ್ದಾರೆ. ‘ಸ್ವಸ್ಥ, ಸುಸ್ಥಿರ ಹಾಗೂ ಸುರಕ್ಷಿತ ಸಮಾಜ’ ನಿರ್ಮಾಣದ ಆಶಯದೊಂದಿಗೆ 5ನೇ ತರಗತಿಯ ವಿದ್ಯಾರ್ಥಿಗಳಾದ ಹ್ರಿದಾನ್ ಪವನ ಬಹದ್ದೂರ್ ದೇಸಾಯಿ ಹಾಗೂ ಅಥರ್ವ ಬ್ರಹ್ಮೇರಿ ಈ ವಿಶೇಷ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ;
ಇದು ಕೇವಲ ಪ್ರದರ್ಶನದ ಮಾದರಿಯಾಗಿ ಉಳಿದಿಲ್ಲ. ಮಕ್ಕಳು ತಾವು ಕಂಡುಹಿಡಿದ ತಂತ್ರಜ್ಞಾನವನ್ನು ನೈಜ ದ್ವಿಚಕ್ರ ವಾಹನಕ್ಕೆ ಅಳವಡಿಸಿ, ಯಶಸ್ವಿಯಾಗಿ ಚಲಾಯಿಸಿ ತೋರಿಸಿದ್ದಾರೆ. ಅಪ್ರಾಪ್ತ ವಯಸ್ಕರು ಹಾಗೂ ಪರವಾನಗಿ ಇಲ್ಲದವರು ಬೈಕ್ ಚಲಾಯಿಸುವುದನ್ನು ತಡೆದು, ರಸ್ತೆ ಅಪಘಾತಗಳನ್ನು ತಪ್ಪಿಸುವ ಮುಖ್ಯ ಉದ್ದೇಶವನ್ನು ಈ ಪ್ರಾಜೆಕ್ಟ್ ಹೊಂದಿದೆ.
ಇದನ್ನೂ ಓದಿ; ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ: ಬೆಳಗಾವಿ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಬೆಳೆ ನಾಶ, ಸಂಕಷ್ಟದಲ್ಲಿ ರೈತರು
ವಿದ್ಯಾರ್ಥಿಗಳ ಈ ತಾಂತ್ರಿಕ ಪ್ರಯೋಗಕ್ಕೆ ಶಾಲೆಯ ಶಿಕ್ಷಕರಾದ ರಾಘವೇಂದ್ರ ಪಾಟೀಲ್ ಹಾಗೂ ಪಲ್ಲವಿ ತಾಂತ್ರಿಕ ಮಾರ್ಗದರ್ಶನ ನೀಡಿದ್ದು, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ವಿ. ಅವರು ಪೂರ್ಣ ಪ್ರೋತ್ಸಾಹ ನೀಡಿದ್ದಾರೆ. ತರಗತಿಯಲ್ಲಿ ಕಲಿತ ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್ ಹಾಗೂ ತಂತ್ರಜ್ಞಾನ ಜ್ಞಾನವನ್ನು ಬಳಸಿಕೊಂಡು ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡುಕೊಂಡ ಈ ಪುಟಾಣಿ ವಿಜ್ಞಾನಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯ ಹಾಗೂ ಶಿಕ್ಷಣ ಪ್ರೇಮಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Tue, 18 August 26