ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷ: ವಾರಕ್ಕೆ ಸರಾಸರಿ ಒಬ್ಬರ ಸಾವು; ಅಂಕಿ ಅಂಶ ಬಹಿರಂಗ

|

Updated on: Mar 31, 2024 | 9:55 PM

ಕರ್ನಾಟಕದಲ್ಲಿ ಪ್ರತಿ ವಾರ ಮಾನವ-ಪ್ರಾಣಿ ಸಂಘರ್ಷದಲ್ಲಿ ಸರಾಸರಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಬಹಿರಂಗಪಡಿಸಿವೆ. ಬನ್ನೇರುಘಟ್ಟ, ಚಾಮರಾಜನಗರ, ಮೈಸೂರು, ಕೊಡಗು ಮತ್ತು ಹಾಸನದಿಂದ ಚಿಕ್ಕಮಗಳೂರು ಬೆಲ್ಟ್ ವರೆಗೆ ಇಂತಹ ಸಂಘರ್ಷಗಳು ಹೆಚ್ಚಾಗಿ ವರದಿಯಾಗುತ್ತವೆ.

ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷ: ವಾರಕ್ಕೆ ಸರಾಸರಿ ಒಬ್ಬರ ಸಾವು; ಅಂಕಿ ಅಂಶ ಬಹಿರಂಗ
ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷ: ವಾರಕ್ಕೆ ಸರಾಸರಿ ಒಬ್ಬರ ಸಾವು; ಅಂಕಿ ಅಂಶ ಬಹಿರಂಗ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಮಾ.31: ಕರ್ನಾಟಕದಲ್ಲಿ (Karnataka) ಪ್ರತಿ ವಾರ ಮಾನವ-ಪ್ರಾಣಿ ಸಂಘರ್ಷದಲ್ಲಿ (Human-Animal Conflict) ಸರಾಸರಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಬಹಿರಂಗಪಡಿಸಿವೆ. ಅರಣ್ಯ ಇಲಾಖೆಯ ಪ್ರಕಾರ, ರಾಜ್ಯದ ದಕ್ಷಿಣ ಭಾಗದಲ್ಲಿ ಬನ್ನೇರುಘಟ್ಟ, ಚಾಮರಾಜನಗರ, ಮೈಸೂರು, ಕೊಡಗು ಮತ್ತು ಹಾಸನದಿಂದ ಚಿಕ್ಕಮಗಳೂರು ಬೆಲ್ಟ್ ವರೆಗೆ ಇಂತಹ ಸಂಘರ್ಷಗಳು ಹೆಚ್ಚಾಗಿ ವರದಿಯಾಗುತ್ತವೆ.

2010 ರಿಂದ 2024ರ ನಡುವೆ 600 ಕ್ಕೂ ಹೆಚ್ಚು ಜನರು ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಆನೆಗಳ ದಾಳಿಗೆ ಬಲಿಯಾದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಂಘರ್ಷಗಳನ್ನು ‘ಜ್ವಲಂತ ಸಮಸ್ಯೆ’ ಎಂದು ಕರೆದಿದ್ದಾರೆ.

ಅರಣ್ಯ ಇಲಾಖೆಯು ಪಿಟಿಐ ಜೊತೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 2010-11 ಮತ್ತು 2023-24 ರ ನಡುವೆ (ಈ ವರ್ಷ ಮಾರ್ಚ್ 6 ರವರೆಗೆ) 618 ಜನರು ಮಾನವ-ಪ್ರಾಣಿ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಆನೆಗಳ ದಾಳಿಯಿಂದ 416 ಮಂದಿ ಸಾವನ್ನಪ್ಪಿದರೆ, ಚಿರತೆಗಳ ದಾಳಿಯಿಂದ 38, ಕರಡಿಗಳ ದಾಳಿಯಿಂದ 36, ಹುಲಿಗಳ ದಾಳಿಯಿಂದ 34 ಮತ್ತು ಕಾಡುಹಂದಿಗಳ ದಾಳಿಯಿಂದ 32 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೋರ್ವ ಬಲಿ, 3 ದಿನದ ಅಂತರದಲ್ಲೇ ಇಬ್ಬರು ದುರ್ಮರಣ

ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡಿಸುವಾಗ, ಸಿದ್ದರಾಮಯ್ಯ ಅವರು ಅರಣ್ಯ ಮತ್ತು ಇದರ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಮಾನವ-ಪ್ರಾಣಿ ಸಂಘರ್ಷವನ್ನು ಪರಿಹರಿಸಲು, ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣಕ್ಕಾಗಿ ಹಿಂದಿನ ಬಜೆಟ್‌ನಲ್ಲಿ (2023-24) 100 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಮತ್ತು ಸುಮಾರು 78 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ವರ್ಷದಲ್ಲೂ (2024-25) ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ 2024-25ನೇ ಸಾಲಿನ ಬಜೆಟ್‌ನಲ್ಲಿ ಅಂದಾಜು 151 ಕೋಟಿ ರೂ. ಮೀಸಲಿಡಲಾಗಿದ್ದು, ಮಾನವ-ಆನೆ ಸಂಘರ್ಷ ತಡೆಗೆ ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಒಂದಾದ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣಕ್ಕೆ 60 ಕೋಟಿ ರೂ. ಸೇರಿದಂತೆ ವನ್ಯಜೀವಿ ಸಂಬಂಧಿತ ಎಲ್ಲ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.

ತಮ್ಮ ವಾಸಸ್ಥಾನಕ್ಕೆ ತೊಂದರೆಯಾಗುತ್ತಿರುವ ಕಾರಣದಿಂದ ಪ್ರಾಣಿಗಳು ಅರಣ್ಯದಿಂದ ಹೊರಬರುತ್ತಿವೆ ಎಂದು ಸೂಚಿಸಿದ ಅರಣ್ಯ ಅಧಿಕಾರಿಯೊಬ್ಬರು, ಕಾಡಿನೊಳಗೆ ಬಹಳಷ್ಟು ಕಳೆಗಳು ಬೆಳೆಯಲು ಪ್ರಾರಂಭಿಸಿವೆ. ಇದರಿಂದಾಗಿಯೂ ಪ್ರಾಣಿಗಳು ಅರಣ್ಯದಿಂದ ಹೊರಬರುತ್ತಿವೆ. ಇದರಿಂದಾಗಿ ಮಾನವ-ಪ್ರಾಣಿ ಸಂಘರ್ಷ ಉಂಟಾಗುತ್ತಿದೆ ಎಂದಿದ್ದಾರೆ.

ಸಂರಕ್ಷಣಾ ಪ್ರಯತ್ನದಿಂದ ಪ್ರಾಣಿಗಳ, ವಿಶೇಷವಾಗಿ ಆನೆಗಳ ಜನಸಂಖ್ಯೆಯು ಹೆಚ್ಚಾಗಿದೆ. ಆದ್ದರಿಂದ ಅವುಗಳ ಆವಾಸಸ್ಥಾನಗಳನ್ನು ಸುಧಾರಿಸಬೇಕು. ಬೇಟೆ ಕಡಿಮೆಯಾಗಿದೆ, ಪ್ರಾಣಿಗಳು ಹೆಚ್ಚಾಗುತ್ತಿವೆ. ಸಮಸ್ಯೆಯನ್ನು ಪರಿಹರಿಸಲು ಸರಿಯಾದ ಬ್ಯಾರಿಕೇಡ್‌ಗಳ ಅಗತ್ಯವಿದೆ. ಅರಣ್ಯದ ಗಡಿಯಲ್ಲಿ ನಾವು ರೈಲು ಬ್ಯಾರಿಕೇಡ್‌ಗಳು, ಸೋಲಾರ್ ಫೆನ್ಸಿಂಗ್ ಮತ್ತು ಆನೆಗಳು ಗ್ರಾಮಗಳಿಗೆ ಪ್ರವೇಶಿಸದಂತೆ ತಡೆಯಲು ಕಂದಕಗಳನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಹಾಸನ: ಕಾಡಾನೆ ದಾಳಿಗೆ ರೈತ ಗಂಭೀರ ಗಾಯ, ತಡ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪ್ರಜ್ವಲ್ ರೇವಣ್ಣ

ಈ ಹಿಂದೆ ನಡೆಸಿದ ಸಮೀಕ್ಷೆಗಳ ಆಧಾರದ ಮೇಲೆ ಈಗಾಗಲೇ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಬೇಕಾದ ಸ್ಥಳಗಳನ್ನು ಇಲಾಖೆ ಗುರುತಿಸಿದೆ. ಆರಂಭದಲ್ಲಿ, ರೈಲ್ವೇ ಬ್ಯಾರಿಕೇಡ್‌ಗಳ ಅಗತ್ಯವಿರುವ ಸುಮಾರು 640 ಕಿಮೀಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಇದರ ಅವಶ್ಯಕತೆ 640 ರಿಂದ 750 ಕಿ.ಮೀ.ಗಳಿಗೆ ಏರಿಕೆಯಾಗಿದೆ. 2015 ರಿಂದ ಈವರೆಗೆ 311 ಕಿ.ಮೀ.ಗಳನ್ನು ಕ್ರಮಿಸಿದ್ದೇವೆ. ಪ್ರಸಕ್ತ ವರ್ಷದಲ್ಲಿ ನಮ್ಮ ಕಾರ್ಯವು 120 ಕಿ.ಮೀ. ಪೂರ್ಣಗೊಳಿಸುವುದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕವು ಅಂದಾಜು 6,400 ಆನೆಗಳನ್ನು ಹೊಂದಿದೆ ಮತ್ತು ಇವುಗಳಲ್ಲಿ ಸುಮಾರು 350 ಆನೆಗಳು ಕಾಡಿನಿಂದ ಹೊರಬರುತ್ತಿವೆ, ಹೆಚ್ಚಾಗಿ ಇದು 18-30 ವರ್ಷ ವಯಸ್ಸಿನ ಆನೆಗಳು ಹೊರಬರುತ್ತಿವೆ ಎಂದು ತಿಳಿಸಿದ್ದಾರೆ. ಮನುಷ್ಯ-ಆನೆ ಸಂಘರ್ಷದ ಬಗೆಯನ್ನು ವಿವರಿಸಿದ ಅವರು, ಅರಣ್ಯ ಪ್ರದೇಶದಿಂದ ಆಚೆ ಬೆಳೆದಿರುವ ವಾಣಿಜ್ಯ ಬೆಳೆಗಳನ್ನು ತಿನ್ನಲು ಬರುವ ಆನೆಗಳು ಸೂರ್ಯನ ಮೊದಲ ಕಿರಣ ಬರುವ ಮುನ್ನವೇ ತರಾತುರಿಯಲ್ಲಿ ಹಿಂದಿರುಗುತ್ತವೆ ಮತ್ತು ಅವುಗಳು ಹಿಂದೆ ಧಾವಿಸುವಾಗ ಈ ಸಂಘರ್ಷಗಳು ಸಂಭವಿಸುತ್ತವೆ ಎಂದು ಹೇಳಿದರು.

ಆನೆಗಳು ಸೂರ್ಯೋದಯಕ್ಕೂ ಮುನ್ನ ಆತುರವಾಗಿ ಅರಣ್ಯ ಪ್ರದೇಶಗಳಿಗೆ ಹಿಂತಿರುಗುವಾಗ ಅದರ ದಾರಿಯಲ್ಲಿ ಮನುಷ್ಯ ಎದುರಾದರೆ ಸಾವು-ನೋವು ಉಂಟಾಗುತ್ತದೆ” ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. ಹೆಚ್ಚಿನ ಸಾವುಗಳು ಎಲ್ಲಾ ಆಕಸ್ಮಿಕವಾಗಿವೆ. ಇವುಗಳಲ್ಲಿ ಹೆಚ್ಚಿನ ಸಾವುಗಳು ಮುಂಜಾನೆ ಅಥವಾ ತಡರಾತ್ರಿಯಲ್ಲಿ ಸಂಭವಿಸುತ್ತವೆ. ಅಲ್ಲದೆ, ಗಂಡು ಆನೆಗಳು ಕಾಫಿ ಎಸ್ಟೇಟ್‌ಗಳಿಗೆ ನುಗ್ಗಿ ಅಲ್ಲಿನ ಕೆಲಸಗಾರರೊಂದಿಗೆ ಸಂಘರ್ಷಕ್ಕೆ ಇಳಿಯುತ್ತವೆ ಎಂದರು.

ಆನೆಗಳಷ್ಟೇ ಅಲ್ಲ, ಹುಲಿ, ಚಿರತೆ, ಕರಡಿಗಳೊಂದಿಗೂ ಜನರು ಸಂಘರ್ಷ ನಡೆಸುತ್ತಿದ್ದಾರೆ. ಮಾನವ-ಪ್ರಾಣಿ ಸಂಘರ್ಷವು ಹಠಾತ್ ಮತ್ತು ಸಂಭವಿಸಿದಾಗ, ನಮ್ಮ ಕ್ಷೇತ್ರ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿರುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸಲು, ನಮಗೆ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಸಮನ್ವಯತೆಯ ಅಗತ್ಯವಿದೆ ಮತ್ತು ಪ್ರತಿಯೊಂದು ಇಲಾಖೆಯು ಒಗ್ಗೂಡಿ ಅರಣ್ಯ ಇಲಾಖೆಗೆ ಸಹಾಯ ಮಾಡಬೇಕು. ನಮ್ಮ ಇಲಾಖೆ ಪ್ರಾಣಿಗಳನ್ನು ಸಂರಕ್ಷಿಸಲು ಮಾತ್ರವಲ್ಲದೆ ಮನುಷ್ಯರನ್ನು ಕೊಲ್ಲದಂತೆ ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಕೆ.ಮಾಳಖೇಡೆ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ