ನಾನು ಡಿಸಿಪಿ ಮಗ, ಮುಖ್ಯಮಂತ್ರಿ ನನ್ನ ಸಂಬಂಧಿ ಎಂದು ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಯುವಕನಿಂದ ಹಲ್ಲೆ

ತಡರಾತ್ರಿ 12 ಗಂಟೆಗೆ ಇಬ್ಬರು ಯುವತಿಯರು ಹಾಗೂ ಓರ್ವ ಯುವಕನನ್ನು ಅಪಾರ್ಟ್​ಮೆಂಟ್​ಗೆ ಕರೆದುಕೊಂಡು ಬಂದಿದನ್ನು ಪ್ರಶ್ನೆ ಮಾಡಿದಕ್ಕೆ ಓರ್ವ ಯುವಕ ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ನಡೆಸಿದ್ದಾನೆ. ನಾನು ಯಾರ್ ಗೊತ್ತಾ? ಡಿಸಿಪಿ ಮಗ. ಸಿಎಂ‌ ಸಿದ್ದರಾಮಯ್ಯ ನನ್ನ ಸಂಬಂಧಿ ಎಂದು ಹೇಳಿ ವರುಣ್, ಪುನೀತ್ ಮೇಲೆ ಹಲ್ಲೆ ನಡೆಸಿದ್ದಾನೆ.

ನಾನು ಡಿಸಿಪಿ ಮಗ, ಮುಖ್ಯಮಂತ್ರಿ ನನ್ನ ಸಂಬಂಧಿ ಎಂದು ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಯುವಕನಿಂದ ಹಲ್ಲೆ
ಯುವತಿಯರನ್ನು ಕರೆತಂದಿದನ್ನು ಪ್ರಶ್ನಿಸಿದಕ್ಕೆ ಸೆಕ್ಯೂರಿಟಿ ಮೇಲೆ ಹಲ್ಲೆ
Follow us
| Updated By: ಆಯೇಷಾ ಬಾನು

Updated on:Sep 21, 2024 | 9:48 AM

ಬೆಂಗಳೂರು, ಸೆ.21: ನಾನು ಡಿಸಿಪಿ ಮಗ, ಮುಖ್ಯಮಂತ್ರಿ (Siddaramaiah) ನನ್ನ ಸಂಬಂಧಿ ಅಂತಾ ಹೇಳಿ ಯುವಕನೋರ್ವ ಅಪಾರ್ಟ್​ಮೆಂಟ್​ ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಹಲ್ಲೆ (Assault) ನಡೆಸಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಪುನೀತ್ ಮೇಲೆ ಯುವಕ ವರುಣ್ (21) ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ಪುನೀತ್ ಅವರು ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದೊಡ್ಡಬೆಲೆಯ ಪ್ರಾವಿಡೆಂಟ್ ಸನ್​ವರ್ತ್​​ ಅಪಾರ್ಟ್​ಮೆಂಟ್​ಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಯುವಕ ವರುಣ್ ಅಪಾರ್ಟ್ಮೆಂಟ್​ಗೆ ಇಬ್ಬರು ಯುವತಿಯರು ಹಾಗೂ ಓರ್ವ ಯುವಕನನ್ನು ಕರೆತಂದಿದ್ದ. ಯುವತಿಯರನ್ನು ಕರೆದುಕೊಂಡು ಬಂದ ಹಿನ್ನೆಲೆ ಅನುಮಾನಗೊಂಡ ಸೆಕ್ಯೂರಿಟಿ ಗಾರ್ಡ್ ಪುನೀತ್, ರಾತ್ರಿ‌ 12 ಗಂಟೆ ನಂತರ ಅಪರಿಚಿತರಿಗೆ ಪ್ರವೇಶವಿಲ್ಲ ಎಂದು ಯುವಕನಿಗೆ ಖಡಕ್ ಆಗಿ ಹೇಳಿದ್ದಾರೆ.

ಇದರಿಂದ ಕೋಪಗೊಂಡ ವರುಣ್, ಹಲ್ಲೆ ನಡೆಸಿದ್ದಾನೆ. ನಾನು ಯಾರ್ ಗೊತ್ತಾ? ಡಿಸಿಪಿ ಮಗ. ಸಿಎಂ‌ ಸಿದ್ದರಾಮಯ್ಯ ನನ್ನ ಸಂಬಂಧಿ ಎಂದು ಹೇಳಿ ವರುಣ್, ಪುನೀತ್ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಮತ್ತೊಂದೆಡೆ ಅಪಾರ್ಟ್ಮೆಂಟ್ ರೂಲ್ಸ್ ಪ್ರಕಾರ ನಡೆದರೂ ಹಲ್ಲೆ ಮಾಡಿದ್ದಾರೆ. ಕಿವಿ ಪರದೆ ಹರಿದು ಹೋಗುವ ಹಾಗೆ ಹಲ್ಲೆ ಮಾಡಲಾಗಿದೆ. ನನ್ನ ಕಿವಿ ಕೇಳಿಸುತ್ತಿಲ್ಲ ಎಂದು ಪುನೀತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ‌ಮೇಲೆ ಕಪಾಳ ಮೋಕ್ಷ ಮಾಡುವ ವಿಡಿಯೋ ರಿಕಾರ್ಡ್ ಆಗಿದೆ. ಅಲ್ಲೇ‌ ಇದ್ದ ಸ್ಥಳೀಯರು ಹಲ್ಲೆ ವಿಡಿಯೋ ರಿಕಾರ್ಡ್ ಮಾಡಿದ್ದಾರೆ. ಅಲ್ಲದೆ ವರುಣ್ ಯುವತಿಯರನ್ನು ಕರೆದುಕೊಂಡು ಬಂದ ದೃಶ್ಯಗಳು ಕೂಡ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಚಿಕ್ಕಮಗಳೂರು: ಶಾಲೆ ಆವರಣದಲ್ಲಿ ಅಡಗಿದ್ದ 12 ಅಡಿ ಉದ್ದದ ಕಳಿಂಗ ಸರ್ಪ ಸೆರೆ

ಅಗ್ನಿ ಅವಘಡ.. ರಾಮಯ್ಯ ಆಸ್ಪತ್ರೆ ವಿರುದ್ಧ ದೂರು

ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಬಂಧ ಮೃತನ ಪತ್ನಿ ದೂರು ದಾಖಲಿಸಿದ್ದಾಳೆ. ಆಸ್ಪತ್ರೆ ನಿರ್ಲಕ್ಷ್ಯದಿಂದಾಗಿ ತನ್ನ ಗಂಡ ಸಾವನ್ನಪ್ಪಿರುವುದಾಗಿ ಮೃತನ ಪತ್ನಿ ಆರೋಪಿಸಿದ್ದಾಳೆ. ಮೊನ್ನೆ ಆಸ್ಪತ್ರೆಯ ಬ್ಲಾಕ್ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಈ ವೇಳೆ. ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಆತ ಗುಣಮುಖರಾಗ್ತಿದ್ರು. ಆದ್ರೆ ಆಸ್ಪತ್ರೆ ನಿರ್ಲಕ್ಷ್ಯದಿಂದ ಅವರು ಮೃತಪಟ್ಟಿದ್ದಾರೆ ಅಂತಾ ದೂರು ದಾಖಲಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:35 am, Sat, 21 September 24