ಏರ್​ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ

ಒಂದೇ ಒಂದು ದುಡುಕಿನ ನಿರ್ಧಾರದಿಂದ ಇಡೀ ಜೀವನವೇ ಹಾಳಾಗಿ ಬಿಡುತ್ತದೆ. ಎಂತಹದೇ ಸಮಸ್ಯೆಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ, ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ಮಾಡದಿರಿ ; ನಿಖಿಲ್ ಕುಮಾರಸ್ವಾಮಿ

ಏರ್​ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ
ಕ್ಯಾಬ್ ಚಾಲಕ ದಿ.ಪ್ರತಾಪ್ ಮನೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ
Updated By: ಸಾಧು ಶ್ರೀನಾಥ್​

Updated on: Apr 01, 2021 | 2:42 PM

ಬೆಂಗಳೂರು:ಏರ್‌ಪೋರ್ಟ್ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಕ್ಯಾಬ್ ಚಾಲಕ ಪ್ರತಾಪ್ ಅವರ ಮನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಾಲಕ ಪ್ರತಾಪ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ದೈರ್ಯ ತುಂಬಿದ್ದಾರೆ. ‘ಒಂದೇ ಒಂದು ದುಡುಕಿನ ನಿರ್ಧಾರದಿಂದ ಇಡೀ ಜೀವನವೇ ಹಾಳಾಗಿ ಬಿಡುತ್ತದೆ. ಎಂತಹದೇ ಸಮಸ್ಯೆಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ, ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ಮಾಡದಿರಿ’ ಎಂದು ಅವರು ಕುಟುಂಬಸ್ಥರನ್ನು ಸಂತೈಸಿದ್ದಾರೆ.

ಕೊರೊನಾ ನಂತರ ಬಾಡಿಗೆ ಕಡಿಮೆಯಾಗಿದ್ದ ಕಾರಣ ಪ್ರತಾಪ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಎನ್ನಲಾಗಿತ್ತು. ಸಂಸಾರ ನಿರ್ವಹಣೆ ಮತ್ತು ವಾಹನದ ಕಂತು ಕಟ್ಟುವ ಹೊರೆಯಿಂದ ಬೇಸರಗೊಂಡಿದ್ದ ಚಾಲಕ ಪ್ರತಾಪ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಕಾರಣ ಕೇಳಿಬಂದಿತ್ತು. ಚಾಲಕ ಪ್ರತಾಪ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಏರ್​ಪೋರ್ಟ್​ ಟ್ಯಾಕ್ಸಿಗಳನ್ನು ನಿಲ್ಲಿಸಿ ಧರಣಿ ನಡೆಸಿದ್ದರು. ಹೀಗಾಗಿ ಏರ್​ಪೋರ್ಟ್ ಪ್ರಯಾಣಿಕರಿಗೆ ಟ್ಯಾಕ್ಸಿ ಬಿಸಿ ತಟ್ಟಿತ್ತು. ಅಲ್ಲದೇ ಮೊನ್ನೆ ಸಂಜೆಯಿಂದಲೇ ಒಲಾ ಉಬರ್ ಮತ್ತು ಏರ್​ಪೋರ್ಟ್ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದರು.

ಆರ್ಥಿಕ ಸಂಕಷ್ಟದಿಂದಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆತ್ಮಹತ್ಯೆ ಗೆ ಯತ್ಮಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕ್ಯಾಬ್…

Posted by Nikhil Gowda on Thursday, April 1, 2021

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನದ ದ್ವಾರದ ಮುಂಭಾಗ ಮಾರ್ಚ್ 30ರಂದು ರಾಮನಗರ ಮೂಲದ ಪ್ರತಾಪ್ ಏರ್​ಪೋರ್ಟ್ ಟರ್ಮಿನಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕ್ಯಾಬ್‌ನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಆಗ ಭದ್ರತಾಪಡೆಯ ಸಿಬ್ಬಂದಿಗಳು ಕ್ಯಾಬ್ ಗಾಜು ಒಡೆದು ಗಂಭೀರ ಗಾಯಗೊಂಡಿದ್ದ ಚಾಲಕ ಪ್ರತಾಪ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಾಲಕ ಪ್ರತಾಪ್ ಮೃತಪಟ್ಟಿದ್ದರು.

ಪ್ರತಾಪ್ ಅವರ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿ ವಿಮಾನ ನಿಲ್ದಾಣಕ್ಕೆ ಬಾರದೆ, ಟ್ಯಾಕ್ಸಿಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಟ್ಯಾಕ್ಸಿಗಳು ಬಾರದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ವಾಯುವಜ್ರ ಬಸ್ ಗಳ ಹೆಚ್ಚುವರಿ ನಿಯೋಜನೆ ಮಾಡಲಾಗಿತ್ತು. ಟ್ಯಾಕ್ಸಿ ಸ್ಟಾಂಡ್ ನಿಂದಲೇ ಪ್ರಯಾಣಿಕರ ಅನುಕೂಲಕ್ಕೆ ಬಸ್ ಗಳ ನಿಯೋಜನೆ ಮಾಡಲಾಗಿತ್ತು. ಆದರೆ ಬಸ್ ಗಳಲ್ಲಿ ತೆರಳಲು ಕೆಲ ಪ್ರಯಾಣಿಕರು ಹಿಂದೇಟು ಹಾಕುತ್ತಿರುವ ಬೆಳವಣಿಗೆಗಳೂ ಕಂಡುಬಂದಿತ್ತು.

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಟ್ಯಾಕ್ಸಿಗಳನ್ನ ಓಡಿಸದೇ ಇರಲು ಚಾಲಕ ಸಂಘ ನಿರ್ಧಾರ ಮಾಡಿತ್ತು. ಟ್ಯಾಕ್ಸಿ ಚಾಲಕರ ನಿರ್ಧಾರದಿಂದ ಪ್ರಯಾಣಿಕರಿಗೆ ನಗರದ ವಿವಿಧ ಭಾಗಗಳಿಗೆ ತೆರಳಲು ಅನಾನುಕೂಲವಾಗಿತ್ತು. ಮಧ್ಯಾಹ್ನದ ನಂತರ ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಒಂದು ಕಿ.ಮೀ.ಗೆ 24 ರೂ ದರ ನಿಗದಿ ಮಾಡಿ ಚಾಲಕರ ಜೀವನ ಉಳಿಸಿ ಎಂದು ಪ್ರತಿಭಟನೆ ನಡೆಸುವುದಾಗಿ ಟ್ಯಾಕ್ಸಿ ಚಾಲಕರ ಸಂಘ ಪ್ರಕಟಿಸಿತ್ತು.

ಇದನ್ನೂ ಓದಿ: ಏರ್‌ಪೋರ್ಟ್ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವು

IPL 2021: ಆರ್​ಸಿಬಿ ಮೇಲೆ ಪಂಜಾಬ್​ಗೆ ಸಿಕ್ಕಾಪಟ್ಟೆ ಲವ್.. ಬೆಂಗಳೂರು ತಂಡದ ಜೆರ್ಸಿ ಕಾಪಿ ಹೊಡೆದ ಕಿಂಗ್ಸ್​ಗೆ ಈಗ ಟ್ರೋಲಿಗರ ಕಾಟ!

Published On - 2:41 pm, Thu, 1 April 21