ಮದ್ಯ ತುಂಬಿದ ಲಾರಿ ಪಲ್ಟಿ ಕೇಸ್​ಗೆ ಬಿಗ್ ಟ್ವಿಸ್ಟ್; ಅಪಘಾತ ಎಂದು ನಾಟಕ ಮಾಡಿದ್ನಾ ಚಾಲಕ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 13, 2024 | 7:04 PM

ಕಲಬುರಗಿ ತಾಲೂಕಿನ ಫರಹತ್ತಬಾದ್ ಗ್ರಾಮ ಹೊರವಲಯದಲ್ಲಿ ನಿನ್ನೆ(ಜೂ.12) ಕೋಟ್ಯಾಂತರ ಮೌಲ್ಯದ ಲಿಕ್ಕರ್ ತುಂಬಿದ್ದ ಲಾರಿ ಪಲ್ಟಿಯಾಗಿತ್ತು. ಎಲ್ಲರೂ ಮೊದ ಮೊದಲಿಗೆ ಅದು ಅಪಘಾತ ಎಂದು ತಿಳಿದಿದ್ದರು. ಆದ್ರೆ, ಅಬಕಾರಿ ಅಧಿಕಾರಿಗಳು ಎಂಟ್ರಿ ಕೊಡುತ್ತಲೇ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು ಅಂತೀರಾ? ಈ ಸ್ಟೋರಿ ಓದಿ.

ಮದ್ಯ ತುಂಬಿದ ಲಾರಿ ಪಲ್ಟಿ ಕೇಸ್​ಗೆ ಬಿಗ್ ಟ್ವಿಸ್ಟ್; ಅಪಘಾತ ಎಂದು ನಾಟಕ ಮಾಡಿದ್ನಾ ಚಾಲಕ?
ಮದ್ಯ ತುಂಬಿದ ಲಾರಿ ಪಲ್ಟಿ, ಅಬಕಾರಿ ಡಿವೈಎಸ್ ದೊಡ್ಡಪ್ಪ ಹೆಬಳಿ
Follow us on

ಕಲಬುರಗಿ, ಜೂ.13: ಕುಂದಾನಗರಿ ಬೆಳಗಾವಿ ಜಿಲ್ಲೆಯ ರಾಯಬಾಗ(Raybag) ತಾಲೂಕಿನಿಂದ ಬರೋಬ್ಬರಿ 1 ಕೋಟಿ 18 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಬಾಕ್ಸ್‌(Liquor box)ಗಳನ್ನ KA 56 1239 ಸಂಖ್ಯೆಯ ಲಾರಿಯಲ್ಲಿ ಬೀದರ್ ನಗರದ ಕೆಎಸ್‌ಡಿಸಿಎಲ್ ಗೋದಾಮಿಗೆ ಸಾಗಾಟ ಮಾಡಲಾಗುತ್ತಿತ್ತು. ಆದರೆ, ಗೋದಾಮಿಗೆ ತಲುಪಬೇಕಿದ್ದ ಲಿಕ್ಕರ್ ಲಾರಿ ಕಲಬುರಗಿ ತಾಲೂಕಿನ ಫರಹತ್ತಬಾದ್ ಗ್ರಾಮ ಹೊರವಲಯದಲ್ಲಿ ನಸುಕಿನ ಜಾವ 3.30 ಕ್ಕೆ ಪಲ್ಟಿಯಾಗಿದ್ದು, ಲಾರಿ ಪಲ್ಟಿಯಾದರೂ ಸಹ ಸಂಬಂಧಪಟ್ಟ ಮಾಲೀಕನಿಗಾಗಲಿ ಅಥವಾ ಪೊಲೀಸರಿಗಾಗಲಿ ಮಾಹಿತಿ ನೀಡದೇ ಚಾಲಕ, ಲಾರಿ ಪಕ್ಕದಲ್ಲೆ ಮಲಗಿಕೊಂಡು ಕಾಲ ಕಳೆದಿದ್ದಾನೆ.

ಕಲಬುರಗಿ ಅಬಕಾರಿ ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ

ಬೆಳಗ್ಗೆ 6 ಗಂಟೆಗೆ ಮಾಹಿತಿ ಸಿಕ್ಕ ತಕ್ಷಣ ಫರಹತ್ತಬಾದ್ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಎಮ್.ಸಿ ವಿಸ್ಕಿ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಬರೋಬ್ಬರಿ 1100 ಬಾಕ್ಸ್‌ಗಳನ್ನ ಲಾರಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾಗಿದೆ. ಲಾರಿಯಲ್ಲಿನ ಮದ್ಯದ ಬಾಕ್ಸ್‌ಗಳನ್ನ ಸಾರ್ವಜನಿಕರು ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಸಹ ತೆಗೆದುಕೊಂಡು ಹೋಗಿದ್ದಾರೆಂದು ಲಾರಿ ಮಾಲೀಕ ಶಿವಕುಮಾರ್ ಬೇರೆನೆ ಕಥೆ ಕಟ್ಟಿ ಪೊಲೀಸರ ವಿರುದ್ಧವೇ ಆರೋಪಿಸಿದ್ದ. ಈ ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಕಲಬುರಗಿ ಅಬಕಾರಿ ಡಿವೈಎಸ್ಪಿ ದೊಡ್ಡಪ್ಪ ಹೆಬ್ಬಳಿ ನೇತೃತ್ವದಲ್ಲಿ ಸಿಬ್ಬಂದಿಗಳು ಭೇಟಿ ನೀಡಿ, ಲಾರಿ ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಅಬಕಾರಿ ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯೇ ಇದು ಅಪಘಾತವಲ್ಲ, ಇದೊಂದು ಪಕ್ಕಾ ಪೂರ್ವ ಯೋಜಿತ ಘಟನೆ ಎನ್ನುವುದು ಗೊತ್ತಾಗಿದೆ.

ಇದನ್ನೂ ಓದಿ:ಮದ್ಯ ತುಂಬಿದ್ದ ಲಾರಿ ಪಲ್ಟಿ; ರಾಯಚೂರು- ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಅಪಘಾತ ಎಂದು ನಾಟಕ ಮಾಡಿದ್ನಾ ಚಾಲಕ?

ಬೆಳಗಾವಿ ಜಿಲ್ಲೆಯ ರಾಯಭಾಗ್‌ನಿಂದ 1100 ಬಾಕ್ಸ್ ಲಿಕ್ಕರ್‌‌ನಲ್ಲಿ ಅರ್ಧಕ್ಕಿಂತ ಅಧಿಕ ಬಾಕ್ಸ್ ಲಿಕ್ಕರ್‌ನ್ನ ಲಾರಿ ಚಾಲಕ ಮಾರ್ಗ ಮಧ್ಯೆ ಮಾರಾಟ ಮಾಡಿಕೊಂಡಿದ್ದಾನೆ. ಈ ವಿಷಯ ಗೊತ್ತಾದರೆ ಜೈಲೂಟ ಗ್ಯಾರಂಟಿ ಎನ್ನುವುದನ್ನ ಅರಿತ ಲಾರಿ ಚಾಲಕ, ಇನ್ಸೂರೆನ್ಸ್ ಹಣ ಬಂದೆ ಬರುತ್ತದೆ ಎನ್ನುವ ಕಾರಣಕ್ಕೆ ಲಿಕ್ಕರ್ ಲಾರಿಯನ್ನ ಫರತಹಬಾದ್ ಗ್ರಾಮದ ಬಳಿ ಅಪಘಾತದ ಕಥೆ ಗೊತ್ತಾಗಿದೆ. ಯಾಕೆಂದ್ರೆ ಅಪಘಾತದ ಒಂದೇ ಒಂದು ಸಣ್ಣ ಕುರುಹು ಸ್ಥಳದಲ್ಲಿ ಪತ್ತೆಯಾಗಿಲ್ಲ. ನಿಂತಿದ್ದ ಲಾರಿ ವಾಲಿ ಬಿದ್ದಿರೋದು ಸ್ಪಷ್ಟವಾಗಿದೆ. ಹೀಗಾಗೇ ಲಿಕ್ಕರ್ ಬಾಕ್ಸ್​ಗಳನ್ನ ಮಾರಾಟ ಮಾಡಿ ಅಪಘಾತ ಎಂದು ಬಿಂಬಿಸೋಕೆ ಹೊರಟಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ.

1100 ಲಿಕ್ಕರ್ ಬಾಕ್ಸ್‌ಗಳು ಇಂದು ಬೀದರ್‌ನ ಕೆಎಸ್‌ಡಿಸಿಎಲ್ ಗೋದಾಮಿಗೆ ಸಾಗಾಟವಾಗಬೇಕಿದ್ದವು. ಆದರೆ, ಸದ್ಯ ಪಲ್ಟಿಯಾದ ಲಾರಿಯಲ್ಲಿ ಕೇವಲ 400 ಬಾಕ್ಸ್‌ಗಳು ಮಾತ್ರ ಉಳಿದುಕೊಂಡಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಅಬಕಾರಿ ಇಲಾಖೆ ವತಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಸದ್ಯ ಈ ಸಂಬಂಧ ಫರತಹಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನನ್ನ ವಿಚಾರಣೆ ನಡೆಸಲಾಗುತ್ತಿದೆ. ಅದೆನೇ ಇರಲಿ ಅರ್ಧಕ್ಕಿಂತ ಅಧಿಕ ಲಿಕ್ಕರ್ ಮಾರಾಟ ಮಾಡಿ ಇದೀಗ ಲಾರಿ ಎಕ್ಸಿಡೆಂಟ್ ಆಗಿದೆ ಎಂದಿದ್ದು, ಕಥೆ ಎನ್ನೋದು ಮೇಲ್ಕೋಟಕ್ಕೆ ಗೊತ್ತಾಗಿದೆ‌. ಈ ಮಾಸ್ಟರ್ ಫ್ಲ್ಯಾನ್ ಹಿಂದೆ ಅದ್ಯಾರ ಕೈವಾಡವಿದೆ ಎನ್ನುವ ಬಗ್ಗೆ ಪೊಲೀಸರ ತನೀಖೆಯಿಂದ ಹೊರಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ