ಕಲಬುರಗಿಯಲ್ಲಿ ಕಂಡಕ್ಟರ್ ಆಗಲು ಅಕ್ರಮ, ಮತ್ತೊಬ್ಬ ಅಭ್ಯರ್ಥಿಯ ಕಳ್ಳಾಟ ಪತ್ತೆ: ಗೋಧಿಹಿಟ್ಟನ್ನು ಹೀಗೂ ಬಳಸಬಹುದು

ಅಕ್ರಮವಾಗಿ ದೈಹಿಕ ಪರೀಕ್ಷೆ ಪಾಸಾಗಲು ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದಿದ್ದ ಓರ್ವ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ.

ಕಲಬುರಗಿ: ಕಾಲಿನಲ್ಲಿ ಕಬ್ಬಿಣದ ಪೀಸ್​ಗಳು, ಒಳ ಉಡುಪಲ್ಲಿ ಕೆಜಿ ಕಲ್ಲು, ಶರ್ಟ್​ ಜೇಬು ಒಳಗೆ ಐರನ್ ಪೀಸ್​ಗಳನ್ನು ಇಟ್ಟುಕೊಂಡು ಬಂದು ಸರ್ಕಾರಿ ಹುದ್ದೆ ಪಡೆಯಬೇಕೆಂದು ಕೊಂಡಿದ್ದ ಖತರ್ನಾಕ್ ಕಿಲಾಡಿಗಳು ನಿನ್ನೆ ಸಿಕ್ಕಿಬಿದ್ದಿದ್ದರು. ಈಗ ಇದೇ ರೀತಿಯ ಮತ್ತೊಂದು ಐಡಿಯಾ ನೋಡಿ ಕೆಲಸ ಪಡೆಯಲೇ ಬೇಕು ಎಂದು ಬಂದಿದ್ದ ಮತ್ತೊಬ್ಬ ಕಿಲಾಡಿ ಸಿಕ್ಕಿಬಿದ್ದಿದ್ದಾನೆ. ಅಕ್ರಮವಾಗಿ ದೈಹಿಕ ಪರೀಕ್ಷೆ ಪಾಸಾಗಲು ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದಿದ್ದ ಓರ್ವ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ.

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1619 ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ಮಾಡಿಕೊಳ್ತಿದೆ. ಇದಕ್ಕೆ 38 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಮೊದಲ ಹಂತದಲ್ಲಿ, ದಾಖಲಾತಿ ಪರಿಶೀಲನೆ, ದೇಹದಾರ್ಡ್ಯ ಪರೀಕ್ಷೆ ನಡೆಸಲಾಗುತ್ತಿದೆ. ಚಾಲಕ ಕಂ ನಿರ್ವಾಹಕನಾಗಲು 55 ಕೆಜಿ ತೂಕ, 163 ಸೆಂಟಿ ಮೀಟರ್ ಎತ್ತರವಿರಬೇಕು. ಆದ್ರೆ, ಟೆಸ್ಟ್​ಗೆ ಬಂದಿದ್ದ ನಾಲ್ವರು ಖದೀಮರು ತೂಕ ಹೆಚ್ಚಳಕ್ಕಾಗಿ ಒಳ ಉಡುಪಲ್ಲಿ ಕೆಜಿ ಕಲ್ಲು, ಕಾಲುಗಳಿಗೆ, ಸೊಂಟಕ್ಕೆ ಕಬ್ಬಿಣದ ಪೀಸ್​ಗಳನ್ನು ಕಟ್ಟಿಕೊಂಡಿದ್ರು. ಅಲ್ಲದೇ ಶರ್ಟ್​​ ಒಳಗೆ ಜೇಬುಗಳನ್ನ ಮಾಡಿಸಿಕೊಂಡು ಕಬ್ಬಿಣದ ಪೀಸ್​ಗಳನ್ನು ಹುದುಗಿಸಿಟ್ಟಿದ್ರು. ಈ ಖದೀಮರ ಕಳ್ಳಾಟ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದರು. ಇದೇ ರೀತಿಯ ಖತರ್ನಾಕ್ ಐಡಿಯಾ ಮಾಡಿಕೊಂಡು ಬಂದಿದ್ದ ಮತ್ತೋರ್ವ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಉದ್ಯೋಗಕ್ಕಾಗಿ ಅಡ್ಡದಾರಿ! ಕಂಡಕ್ಟರ್​ ಕೆಲಸ ಪಡೆಯಲು ಈ ಕಿಲಾಡಿಗಳು ಮಾಡಿದ ಪ್ಲಾನ್ ಕೇಳಿದ್ರೆ, ಶಾಕ್ ಆಗ್ತೀರಿ

ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದಿದ್ದ ಖದೀಮನ ಕಳ್ಳಾಟ ಬಯಲು

ಅಕ್ರಮವಾಗಿ ದೈಹಿಕ ಪರೀಕ್ಷೆ ಪಾಸಾಗಲು ಯತ್ನಿಸಿದ ಓರ್ವ ಅಭ್ಯರ್ಥಿ ತನ್ನ ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದ್ದಿದ್ದಾನೆ. ಇಲಾಖೆಯ ಸಿಬ್ಬಂದಿ ಪರಿಶೀಲನೆ ವೇಳೆ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ. ಸದ್ಯ ಅಭ್ಯರ್ಥಿಯನ್ನು ನೇಮಕಾತಿ ಪ್ರಕ್ರಿಯೆಯಿಂದಲೇ ಕೈಬಿಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಕೇಸ್​​ ದಾಖಲಿಸದೆ ಬಿಟ್ಟು ಕಳಿಸಲಾಗಿದೆ. ಹೆಚ್ಚು ತೂಕವನ್ನು ತೋರಿಸಲು ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:00 am, Sat, 11 February 23

Web contact

TV9 Kannada

Read More
Follow Us