AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗಕ್ಕಾಗಿ ಅಡ್ಡದಾರಿ! ಕಂಡಕ್ಟರ್​ ಕೆಲಸ ಪಡೆಯಲು ಈ ಕಿಲಾಡಿಗಳು ಮಾಡಿದ ಪ್ಲಾನ್ ಕೇಳಿದ್ರೆ, ಶಾಕ್ ಆಗ್ತೀರಿ

ಕೆಕೆಆರ್​ಟಿಸಿಯಿಂದ ನಡೆದಿದ್ದ ಕಂಡಕ್ಟರ್ ಹುದ್ದೆಗಳ ನೇಮಕಾತಿಯ ದೇಹದಾರ್ಢ್ಯ ಪರೀಕ್ಷೆಯಲ್ಲಿ ಪಾಸಾಗಲು 55 ಕಿಲೋ ತೂಕ ಇರಬೇಕು. ಹೀಗಾಗಿ ಕಡಿಮೆ ತೂಕವಿದ್ದ ನಾಲ್ಕು ಜನ ದೇಹಕ್ಕೆ ಕಬ್ಬಿಣ, ಕಲ್ಲುಗಳನ್ನು ಕಟ್ಟಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾರೆ.

TV9 Web
| Updated By: ಆಯೇಷಾ ಬಾನು|

Updated on:Feb 10, 2023 | 11:00 AM

Share

ಕಲಬುರಗಿ: ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಮೊದಲು ಬೆಳಕಿಗೆ ಬಂದಿದ್ದು ಕಲಬುರಗಿಯಲ್ಲಿ. ಕಿಂಗ್ ಪಿನ್​ಗಳ ಸಹಾಯದಿಂದ ಅನೇಕ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ, ಹೊರಗಿನಿಂದ ಬಂದ ಉತ್ತರವನ್ನು ಬರೆದು ಆಯ್ಕೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಅನೇಕರು ದೇಹದಾರ್ಢ್ಯ ಪರೀಕ್ಷೆಯಲ್ಲಿ ಎತ್ತರವನ್ನು ತೋರಿಸಲು ತಲೆಗೆ ಪಟ್ಟಿಗಳನ್ನು ಕಟ್ಟಿಕೊಂಡು ಹೋಗಿದ್ದು ಕೂಡಾ ಬೆಳಗಾವಿಯಲ್ಲಿ ನಡೆದಿತ್ತು. ಇದೀಗ ಕಲಬುರಗಿಯಲ್ಲಿ ಮತ್ತೊಂದು ಚಾಲಾಕಿತನ ಕೃತ್ಯ ಬೆಳಕಿಗೆ ಬಂದಿದೆ. ಹೌದು ದೇಹದಾರ್ಢ್ಯ ಪರೀಕ್ಷೆಯಲ್ಲಿ ನಿಗದಿತ ತೂಕವನ್ನು ತೋರಿಸಲು ಕೆಲವರು ದೇಹದ ಒಳ ಉಡುಪುಗಳಲ್ಲಿ ಕಬ್ಬಿಣದ ಕಲ್ಲು, ಸರಪಳಿ ಇಟ್ಟುಕೊಂಡು ಬಂದು ಚಾಲಾಕಿನತ ಪ್ರದರ್ಶಿಸಿ ಸಿಕ್ಕಿಬಿದ್ದಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 1619 ಜನ ಕಂಡಕ್ಟರ್ ಕಂ ಡ್ರೈವರ್ ಹುದ್ದೆಗಳ ನೇಮಕಾತಿಗೆ ಈ ಹಿಂದೆ ಅರ್ಜಿ ಕರೆಯಲಾಗಿತ್ತು. ಸರಿಸುಮಾರು 39 ಸಾವಿರ ಜನರು ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿದವರಿಗೆ ದೇಹದಾರ್ಡ್ಯ ಪರೀಕ್ಷೆ, ಕಲಬುರಗಿ ನಗರದ ಕೆಕೆಆರ್​ಟಿಸಿ ಕೇಂದ್ರ ಕಚೇರಿ ಪಕ್ಕದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಡೆಯುತ್ತಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿದೆ. ಚಾಲಕ ಕಂ ನಿರ್ವಾಹಕ ಹುದ್ದೆಗೆ 163 ಸೆಂಟಿ ಮೀಟರ್ ಎತ್ತರ ಮತ್ತು 55 ಕಿಲೋ ತೂಕ ಅಭ್ಯರ್ಥಿಗಳು ಹೊಂದಿರಬೇಕು. ಅಂತವರು ಮಾತ್ರ ದೇಹದಾರ್ಢ್ಯ ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಾರೆ. ಆದರೆ ಕೆಲ ಕಡಿಮೆ ತೂಕ ಹೊಂದಿರುವ ಅಭ್ಯರ್ಥಿಗಳು, ದೇಹದಾರ್ಢ್ಯ ಪರೀಕ್ಷೆಯಲ್ಲಿ ಆಯ್ಕೆಯಾಗಲು, ಒಳಉಡುಪುಗಳಲ್ಲಿ ಐದರಿಂದ ಹತ್ತು ಕಿಲೋ ತೂಕದ ಕಬ್ಬಿಣದ ಕಲ್ಲು, ಕಬ್ಬಿಣದ ಪಟ್ಟಿ, ಸರಪಳಿ ಕಟ್ಟಿಕೊಂಡು ಬಂದು ದೇಹದಾರ್ಡ್ಯ ಪರೀಕ್ಷೆಯಲ್ಲಿ ತಮ್ಮ ತೂಕವನ್ನು ತೋರಿಸಲು ಬಂದಿದ್ದರು. ಹೀಗೆ ಬಂದ ನಾಲ್ವರ ಕಳ್ಳಾಟವನ್ನು ಪತ್ತೆ ಹಚ್ಚುವಲ್ಲಿ ಸಾರಿಗೆ ಸಂಸ್ಥೆಯ ನೇಮಕಾತಿ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:  ಸಚಿವ ಮುರುಗೇಶ್ ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ

ಕಳ್ಳಾಟ ಪತ್ತೆಯಾಗಿದ್ದು ಹೇಗೆ?

ಇನ್ನು ಕೆಲವರು ನೋಡಲು ನೀಳಕಾಯದಂತೆ ಇದ್ದರು ಕೂಡಾ, ದೇಹದಾರ್ಡ್ಯ ಪರೀಕ್ಷೆಯಲ್ಲಿ ಅವರ ತೂಕ ಐವತ್ತೈದು ಕಿಲೋಗಿಂತ ಹೆಚ್ಚು ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಜಾಗೃತ ದಳದ ಸಿಬ್ಬಂದಿ, ಅನುಮಾನಗೊಂಡವರ ಕೈ ಕಾಲುಗಳನ್ನು ಮುಟ್ಟಿ ನೋಡಿದಾಗ, ಗಟ್ಟಿಯಾದ ವಸ್ತುಗಳು ಇರೋದು ಪತ್ತೆಯಾಗಿದೆ. ಆಗ ಅಭ್ಯರ್ಥಿಗಳ ಬಟ್ಟೆಯನ್ನು ಬಿಚ್ಚಿಸಿ ನೋಡಿದಾಗ, ಸ್ವತಃ ಇಲಾಖೆಯ ಸಿಬ್ಬಂದಿಯೇ ಶಾಕ್ ಆಗಿದ್ದರು. ಯಾಕಂದ್ರೆ, ಚಾಲಾಕಿಗಳು ಕಾಲುಗಳ ತೊಡೆಯ ಸುತ್ತಮುತ್ತ ಕೆಲ ಕಬ್ಬಿಣದ ವಸ್ತುಗಳನ್ನು ಕಟ್ಟಿಕೊಂಡಿದ್ದು ಪತ್ತೆಯಾಗಿತ್ತು. ಇನ್ನೊಬ್ಬ ಅಭ್ಯರ್ಥಿಯ ಅಂಡರ್ ವೇರ್ ನಲ್ಲಿ ಐದು ಕಿಲೋ ತೂಕದ ಎರಡು ಕಲ್ಲುಗಳು ಪತ್ತೆಯಾಗಿದ್ದವು. ಹೀಗೆ ಅಕ್ರಮವಾಗಿ ದೇಹದಾರ್ಡ್ಯ ಪರೀಕ್ಷೆಯಲ್ಲಿ ನಾಲ್ವರು ಕಳ್ಳಾಟವಾಡಿದ್ದು ಬೆಳಕಿಗೆ ಬಂದಿದೆ.

ಇನ್ನು ಅಕ್ರಮವಾಗಿ ದೇಹದಾರ್ಡ್ಯ ಪರೀಕ್ಷೆಯಲ್ಲಿ ಪಾಸಾಗಲು, ಕಬ್ಬಿಣ, ಕಲ್ಲುಗಳನ್ನು ಕಟ್ಟಿಕೊಂಡು ಬಂದವರನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಆದ್ರೆ ನೇಮಕಾತಿಗೂ ಮೊದಲೇ ಅಕ್ರಮ ಬೆಳಕಿಗೆ ಬಂದಿದ್ದರಿಂದ, ಮಾನವೀಯತೆ ದೃಷ್ಟಿಯಿಂದ ಅವರಿಗೆ ಬುದ್ದಿ ಹೇಳಿರೋ ಅಧಿಕಾರಿಗಳು ಅವರ ವಿರುದ್ದ ಪೊಲೀಸ್ ಠಾಣೆಗೆ ಯಾವುದೇ ದೂರನ್ನು ನೀಡಿಲ್ಲಾ.

ಎಂ. ರಾಚಪ್ಪ, ಎಂ.ಡಿ, ಕೆಕೆಆರ್ ಟಿ ಸಿ, ಕೆಕೆಆರ್ ಟಿಸಿಯಿಂದ ಪಾರದರ್ಶಕವಾಗಿ ಡ್ರೈವರ್ ಕಂ ಕಂಡಕ್ಟರ್ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ದೇಹದಾರ್ಡ್ಯ ಪರೀಕ್ಷೆಯಲ್ಲಿ ಕೆಲವರು ಕಲ್ಲು ಮತ್ತು ಕಬ್ಬಿಣದ ರಾಡ್ ಗಳನ್ನು ಕಟ್ಟಿಕೊಂಡು ಬಂದಿದ್ದು ಬೆಳಕಿಗೆ ಬಂದಿದೆ. ಅವರನ್ನು ನೇಮಕಾತಿ ಪ್ರಕ್ರಿಯೇಯಿಂದ ಕೈಬಿಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:04 am, Fri, 10 February 23