
1947 ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ಅನೇಕ ಪ್ರಾಂತ್ಯಗಳು ಭಾರತದೊಂದಿಗೆ ಸೇರಿಕೊಂಡಿತು. ಆದರೆ ಅಂದು ಬೀದರ್, ಗುಲ್ಬರ್ಗಾ ಮತ್ತು ರಾಯಚೂರು ಈಶಾನ್ಯ ಜಿಲ್ಲೆಗಳ ದೊಡ್ಡ ಭಾಗಗಳನ್ನು ಒಳಗೊಂಡಿದ್ದ ಹೈದರಾಬಾದ್ ಭಾರತದೊಂದಿಗೆ ಸೇರಲು ಇಚ್ಚಿಸದೆ ಪಾಕಿಸ್ತಾನದೊಂದಿಗೆ ಸೇರಿಕೊಳ್ಳಲು ಬಯಸಿತ್ತು. ನಿಜಾಮನು ತನ್ನ ಆಡಳಿತವನ್ನು ಬಲವಂತದಿಂದ ಉರುಳಿಸುವವರೆಗೂ ಭಾರತಕ್ಕೆ ಸೇರಲು ನಿರಾಕರಿಸಿದನು. ಭಾರತದ ಮೊದಲ ಗೃಹ ಮಂತ್ರಿ ನೇತೃತ್ವದಲ್ಲಿ ವೀರೋಚಿತ ಪೋಲೀಸ್ ಕ್ರಮದ ತನಕ ಹೈದರಾಬಾದ್ ರಾಜಪ್ರಭುತ್ವದ ರಾಜ್ಯವು ವಿಮೋಚನೆಗೊಳ್ಳಲಿಲ್ಲ.
ನಿಜಾಮರ ವಿರುದ್ಧದ ಅಂದಿನ ಗೃಹಮಂತ್ರಿಯಾಗಿದ್ದ ಸರ್ದರ್ ವಲ್ಲಭಭಾಯ್ ಪಟೇಲರು ನಿಜಾಮನ ವಿರುದ್ಧ ಆಪರೇಷನ್ ಪೋಲೋ ಎಂಬ ಹೆಸರಿನಲ್ಲಿ ‘ಪೊಲೀಸ್ ಕಾರ್ಯಾಚರಣೆ ಕೈಗೊಂಡರು. ಈ ವೇಳೆ ನಿಜಾಮ ಮತ್ತು ಸೈನ್ಯ ಭಾರತಕ್ಕೆ ಶರಣಾಯಿತು. ಹೈದರಾಬಾದ್ ಪ್ರಾಂತ್ಯ ಸೆ.17ರಂದು ಭಾರತಕ್ಕೆ ವಿಲೀನವಾಯಿತು. ಈ ದಿನವು ಇತಿಹಾಸದಲ್ಲಿ ಒಂದು ಪ್ರಮುಖ ದಿನವಾಗಿ ಗುರುತಿಸಿಕೊಂಡಿತು.
ಈ ದಿನವನ್ನು ಕರ್ನಾಟಕ ಸರ್ಕಾರವು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವೆಂದು ಆಚರಿಸುತ್ತದೆ. ಇಂದು ಇದನ್ನು ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುತ್ತದೆ. ತೆಲಂಗಾಣವು ವಿಮೋಚನೆಯನ್ನು ಕೇಸರಿ ಪಕ್ಷ ಬಿಜೆಪಿ ಹೈದರಾಬಾದ್ ವಿಮೋಚನಾ ದಿನ ಎಂದು ಕರೆದರೆ ಆಡಳಿತರೂಢ ಟಿಎಸ್ಆರ್ ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಏಕೀಕರಣ ದಿನ ಎಂದು ಆಚರಿಸುತ್ತದೆ. ಇಂದು ತೆಲಂಗಾಣ ಮತ್ತು ಕರ್ನಾಟಕ ವಿಮೋಚನಾ ದಿನದ ಅಮೃತಮಹೋತ್ಸವವನ್ನು ಆಚರಿಸುತ್ತಿದೆ.
ಕಲ್ಯಾಣ ಕರ್ನಾಟಕಕ್ಕೆ ಅಮೃತ ಮಹೋತ್ಸವದ ಸಂಭ್ರಮ
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಭಾರತಕ್ಕೆ ಸೇರಿ ಇಂದಿಗೆ 75 ವರ್ಷಗಳು ಪೂರ್ಣಗೊಂಡಿವೆ. ಕಲ್ಯಾಣ ಕರ್ನಾಟಕ ಭಾಗವೆಂದೇ ಕರೆಯುವ ಹೈದರಾಬಾದ್ ಕರ್ನಾಟಕದ ಕೇಂದ್ರ ಭಾಗವಾಗಿರುವ ಕಲಬುರಗಿಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಲಿದ್ದಾರೆ.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ಪ್ರಯುಕ್ತ ರಾಯಚೂರಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಗರದ ಪಟೇಲ್ ವೃತ್ತದಲ್ಲಿರುವ ಪುತ್ಥಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಅವರು ಮಾಲಾರ್ಪಣೆ ಮಾಡಿದ್ದು, ರಾಯಚೂರು ಎಸ್ಪಿ, ನಗರಸಭೆ ಅಧ್ಯಕ್ಷರು, ಸದಸ್ಯರು ಸೇರಿ ಹಲವರು ಭಾಗಿಯಾದರು. ಜಿಲ್ಲಾಧಿಕಾರಿಯವರು ಧ್ವಜಾರೋಹಣ ನೆರವೇರಿಸಿದ ನಂತರ ಜಿಲ್ಲಾ ಪೊಲೀಸ್ ವತಿಯಿಂದ ಕವಾಯತು ನಡೆಯಿತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 am, Sat, 17 September 22