Karnataka Breaking News Live: ವಿಜಯಪುರದ ಡಿಸಿಸಿ ಬ್ಯಾಂಕ್ (DCC Bank) ಆವರಣದಲ್ಲಿಂದು ಅಖಿಲ ಭಾರತ 70ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಹಕಾರ ಖಾತೆ ಸಚಿವ ಕೆ.ಎನ್.ರಾಜಣ್ಣ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ (Siddaramaiah) ತವರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಎರಡನೇ ದಿನದ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನ ಕುಂಬಾರಪೇಟೆಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಿನ್ನೆ ಸಂಜೆ ಕಾಣಿಸಕೊಂಡ ಬೆಂಕಿ ಕೆನ್ನಾಲಿಗೆ,3ನೇ ಮಹಡಿಯಿಂದ ಗೋದಾಮಿನ 6ನೇ ಮಹಡಿಗೂ ವ್ಯಾಪಿಸಿತ್ತು. ಇದ್ರಿಂದ ಮಕ್ಕಳ ಆಟದ ಸಾಮಾನು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದೆಲ್ಲದರ ಜೊತೆಗೆ ರಾಜ್ಯದ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ..
ಕಾರಗೃಹದಿಂದ ಬಿಡುಗಡೆಯಾದ ನಂತರ ಮಾತನಾಡಿದ ಮುರುಘಾಶ್ರೀ, ನಾವು ಸೂಕ್ತವಾದ ಸಂದರ್ಭದಲ್ಲಿ ವಿಚಾರ ಹಂಚಿಕೊಳ್ಳುತ್ತೇವೆ. ನಾವು ಈಗ ಮತ್ತೆ ಮೌನಕ್ಕೆ ಸರಿಯುತ್ತಿದ್ದೇವೆ. ಮುಂದೆ ಮಾತಾಡುತ್ತೇವೆ, ಸದ್ಯ ನೋ ಕಾಮೆಂಟ್ಸ್ ಎಂದು ಹೇಳಿ ದಾವಣಗೆರೆ ವಿರಕ್ತ ಮಠದತ್ತ ತೆರಳಿದರು.
ಬಂಧನದ ಆದೇಶಕ್ಕೆ ಹೈಕೋರ್ಟ್ನಿಂದ ತಡೆ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಅವರನ್ನು ಬಿಡುಗಡೆ ಮಾಡಲಾಗಿದೆ. ಮುರುಘಾಶ್ರೀ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಆದೇಶ ಹೊರಡಿಸಿತ್ತು.
ಇ-ವಿಧಾನ ಯೋಜನೆ ಕರ್ನಾಟಕ ವಿಧಾನ ಮಂಡಲದಲ್ಲಿ ಜಾರಿಗೊಳಿಸುವ ವಿಚಾರವಾಗಿ ರಾಜ್ಯಸಭೆ ಚೇರ್ಮನ್ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್ ಕರ್, ಲೋಕಸಭೆ ಸೆಕ್ರೆಟರಿ ಜನರಲ್ ಉತ್ಪಲ್ ಕುಮಾರ್ ಸಿಂಗ್, ರಾಜ್ಯಸಭೆ ಸೆಕ್ರೆಟರಿ ಜನರಲ್ ಪ್ರಮೋದ್ ಚಂದ್ರ ಮೋದಿ ಹಾಗೂ ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭೇಟಿ ಮಾಡಿದರು. ದೆಹಲಿಯಲ್ಲಿ ಇಂದು ಭೇಟಿನೀಡಿ ಮಾತುಕತೆ ನಡೆಸಿದರು. ಈ ವೇಳೆ ವಿಧಾನಸಭೆ ಕಾರ್ಯದರ್ಶಿ ಕೆ.ಎ. ವಿಶಾಲಾಕ್ಷಿ ಹಾಗೂ ವಿಧಾನ ಪರಿಷತ್ ಕಾರ್ಯದರ್ಶಿ ಕೆ .ಆರ್. ಮಹಾಲಕ್ಷ್ಮಿ ಉಪಸ್ಥಿತರಿದ್ದರು.
ಮಂಗಳೂರು: ಆಪ್ತರ ಜೊತೆ ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ಕೈಗೊಂಡಿರುವ ಬಗ್ಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಸತೀಶ್ ಜಾರಕಿಹೊಳಿ ದುಬೈಗೆ ಹೋಗಿರುವುದರಲ್ಲಿ ತಪ್ಪೇನಿದೆ. ಶಿಸ್ತಿನ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ ಕೂಡ ಒಬ್ಬರು. ಸತೀಶ್ ಜಾರಕಿಹೊಳಿ ಏನೇ ಮಾಡಿದರೂ ಅರ್ಥಪೂರ್ಣವಾಗಿರುತ್ತದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿಜವಾದ ಕಾಂಗ್ರೆಸ್ಸಿಗ. ವಿರಾಮಕ್ಕಾಗಿ ದುಬೈಗೆ ಹೋಗಿರಬಹುದು, ಯಾವುದೇ ಸಂಶಯ ಬೇಡ ಎಂದರು.
ಮಂಗಳೂರು: ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಧಾರವಾಡ ಜಿಲ್ಲೆಯಲ್ಲಿ ಮೂವರು ಪ್ರಮುಖರು ಸೇರ್ಪಡೆ ಸಾಧ್ಯತೆಯಿದೆ. ಬಿಜೆಪಿಯ ಮಾಜಿ ಸಚಿವರು, ಶಾಸಕರು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ ಎಂದರು.
ನಾವು ಹೆಚ್ಚು ಜನರ ಬಳಿ ಹೋಗದ ಕಾರಣ ಮಂಡ್ಯದಲ್ಲಿ ಹಿನ್ನಡೆಯಾಗಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಕೆ.ಆರ್.ಪೇಟೆ ಚುನಾವಣೆ ಗೆದ್ದ ಬಳಿಕ ಜನರ ಬಳಿ ಹೋಗಬೇಕಿತ್ತು. ನಾವು ಗೆದ್ದ ಕೆ.ಆರ್.ಪೇಟೆ ಕ್ಷೇತ್ರವನ್ನೂ ಸಹ ಕಳೆದುಕೊಂಡಿದ್ದೇವೆ. ಈಗಿನಿಂದಲೇ ನಾವು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ವೈಯಕ್ತಿಕವಾಗಿ ಹೆಸರು ತಂದು ಕೊಟ್ಟಿದ್ದು ಹಳೇ ಮೈಸೂರು. ಆ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕು ಎಂದರು.
ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲಿ ಯಾರ ತಕರಾರೂ ಇಲ್ಲ ಎಂದು ಮಂಡ್ಯದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದರು. JDS ಎನ್ಡಿಎ ತೆಕ್ಕೆಗೆ ಬರಬೇಕು ಎಂಬುದು ವರಿಷ್ಠರ ತೀರ್ಮಾನ. ಈ ತೀರ್ಮಾನದ ಬಗ್ಗೆ ರಾಜ್ಯದಲ್ಲಿ ಉತ್ಸಾಹ ಇದೆ. ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೂ ಉತ್ಸಾಹ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, JDS ಹೆಚ್ಚು ಸ್ಥಾನ ಗೆಲ್ಲುತ್ತದೆ. ನಮ್ಮ ಗುರಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡುವುದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಕೈಬಿಡುವ ಪ್ರಶ್ನೆ ಇಲ್ಲ. ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನಾಯಕರಿಗೆ ಹೆಚ್ಚು ಶಕ್ತಿ ಕೊಡುತ್ತೇವೆ ಎಂದರು.
ಮಾಜಿ ಸಿಎಂ ಡಿವಿ ಸದಾನಂದಗೌಡ ಅವರನ್ನು ಭೇಟಿಯಾದ ನಂತರ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಡಿ.ವಿ.ಸದಾನಂದಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಸದಾನಂದಗೌಡ ಹಲವು ಸಲಹೆ ಕೊಟ್ಟಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಸಹ ಸದಾನಂದಗೌಡ ಜೊತೆ ಮಾತಾಡಿದ್ದಾರೆ. ಚೆನ್ನಾಗಿ ಕೆಲಸ ಮಾಡಿ ಎಂದು ಹಾರೈಸಿದ್ದಾರೆ ಎಂದರು.
ಮಂಡ್ಯ: ಮೈತ್ರಿ ಸಂಬಂಧ ದೆಹಲಿಗೆ ಬರುವಂತೆ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಭೆ ಇದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ನಾಯಕರು ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ನವೆಂಬರ್ 29ರ ನಂತರ ನಾನು ನವದೆಹಲಿಗೆ ಹೋಗುತ್ತೇನೆ. ಕುಮಾರಸ್ವಾಮಿಗೆ ಆಹ್ವಾನ ಇರಬಹುದು, ಆ ಬಗ್ಗೆ ಗೊತ್ತಿಲ್ಲ ಎಂದರು.
ವಿರೋಧ ಪಕ್ಷದ ನಾಯಕನಾಗಿ ಆರ್.ಅಶೋಕ್ ಆಯ್ಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಡಿವಿ ಸದಾನಂದಗೌಡ, ಮೂರು ತಿಂಗಳ ಮುಂಚೆಯೇ ವಿಪಕ್ಷ ನಾಯಕನ ಘೋಷಣೆ ಮಾಡಬೇಕಿತ್ತು. ಆಗ ಘೋಷಣೆ ಮಾಡಿದ್ದರೆ ಬಿಜೆಪಿ ಇನ್ನೂ ಶಕ್ತಿಯುತವಾಗುತ್ತಿತ್ತು ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆಯೇ ವರಿಷ್ಠರ ಮೇಲೆ ಕೋಪ ಇದ್ದಿತ್ತು. ಈಗ ಆ ಕೋಪ ಶಮನ ಆಗಿದೆ. ಯೋಗ್ಯರಾದವರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಾನು, ಅಶೋಕ್ ಸೇರಿ ಎಲ್ಲರೂ ಒಟ್ಟಾಗಿ ದುಡಿಯುತ್ತೇವೆ. ಅಶೋಕ್, ವಿಜಯೇಂದ್ರ ಎಲ್ಲರ ವಿಶ್ವಾಸಗಳಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಇದ್ದ ಆಂತರಿಕ ಗೊಂದಲ ನಿಭಾಯಿಸುವ ಶಕ್ತಿ ಇವರಿಗೆ ಇದೆ. ಮುಂದೆ ಅಶೋಕ್ ಸಿಎಂ ಆಗಲಿ, ಅವರಿಗೆ ಅನುಭವದ ಕೊರತೆ ಇಲ್ಲ. ಯತ್ನಾಳ್, ವಿ.ಸೋಮಣ್ಣ ಅಸಮಾಧಾನವನ್ನು ಸರಿಪಡಿಸುವ ಶಕ್ತಿ ಇದೆ. ಅಶೋಕ್ ಮೇಲೆ ಕೋಪ ಇಲ್ಲ, ಆದರೆ ಕೆಲವರ ಮೇಲೆ ಸ್ವಲ್ಪ ಬೇಸರವಿದೆ. ನಮ್ಮ ಬಳಿ ಬೆಣ್ಣೆ ಇದೆ, ಅದನ್ನು ಹಚ್ಚಿ ಅತೃಪ್ತರನ್ನು ಸಮಾಧಾನಪಡಿಸುತ್ತೇವೆ ಎಂದರು.
ಮಂಡ್ಯ: ಬಿಜೆಪಿಯಿಂದ ಮಾಜಿ ಸಚಿವ ನಾರಾಯಣಗೌಡ ಅಂತರ ಕಾಯ್ದುಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಾರಾಯಣಗೌಡ ನಮ್ಮೊಂದಿಗೆ ಇದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಒಂದಷ್ಟು ಸಮಯ ಬೇಕಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೂ ಸಹ ನಾರಾಯಣಗೌಡಗೆ ಹಿನ್ನಡೆಯಾಗಿದೆ. ಇದಕ್ಕಾಗಿ ನಾರಾಯಣಗೌಡ ಸ್ವಲ್ಪ ನೋವಿನಲ್ಲಿ ಇದ್ದಾರೆ. ಮೊನ್ನೆಯೂ ಅವರ ಜೊತೆ ಮಾತನಾಡಿದ್ದೇನೆ. ನಾನು ರಾಜ್ಯಾಧ್ಯಕ್ಷನಾದ ವೇಳೆ ಅವರು ಬಂದು ಆಶೀರ್ವಾದ ಮಾಡಿದ್ದಾರೆ. ನಾರಾಯಣಗೌಡ ಈ ಭಾಗದಲ್ಲಿ ನಮಗೆ ಶಕ್ತಿ, ಅವರನ್ನು ಉಳಿಸಿಕೊಳ್ಳುತ್ತೇವೆ ಎಂದರು.
ಕೊಪ್ಪಳದ ಬಸಾಪೂರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ರಹಸ್ಯ ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. ಅಧಿಕಾರಿಗಳು, ಸಾರ್ವಜನಿಕರನ್ನು ಹೊರಗೆ ಕಳುಹಿಸಿ ಸಚಿವರಾದ ಎಂ ಬಿ ಪಾಟೀಲ್, ಕೆಎನ್ ರಾಜಣ್ಣ ಜೊತೆ ಚರ್ಚೆ ನಡೆಸುತ್ತಿದ್ದಾರೆ. ದೆಹಲಿಯಿಂದ ಬಂದ ಕರೆ ನಂತರ ರಹಸ್ಯ ಸಭೆ ನಡೆಸಲಾಗುತ್ತಿದೆ.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿನೀಡಿದರು. ವಿಪಕ್ಷ ನಾಯಕನಾಗಿ ಅಶೋಕ್ ಆಯ್ಕೆಯಾಗಿರುವ ಹಿನ್ನೆಲೆ ಬೆಂಗಳೂರಿನ ಆರ್ಎಂವಿ ಎಕ್ಸ್ಟೆನ್ಷನ್ನಲ್ಲಿರುವ ಸದಾನಂದಗೌಡ ಮನೆಗೆ ಭೇಟಿ ನೀಡಿದರು. ಈ ವೇಳೆ ಶಾಸಕ ಎಸ್ ಮುನಿರಾಜ್ ಜೊತೆಗಿದ್ದರು.
ಮಂಡ್ಯಕ್ಕೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದು, ಸಂಜಯ್ ಸರ್ಕಲ್ನಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಸಂಜಯ್ ಸರ್ಕಲ್ನಿಂದ ಬಿಜೆಪಿ ಕಚೇರಿವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು.
ಎಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆಯೋ ಆ ರಾಜ್ಯ, ದೇಶ ಬೆಳದಿದೆ ಎಂದರ್ಥ ಎಂದು ವಿಜಯಪುರದಲ್ಲಿ ನಡೆದ 70ನೇ ಸಹಕಾರ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಎಲ್ಲಾ ಮಹಿಳೆಯರು ಸಹ ಸಹಕಾರ ಸಂಘಗಳ ಸದಸ್ಯರಾಗಬೇಕು. ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಸಹಕಾರಿ ಬ್ಯಾಂಕ್ನಲ್ಲಿ ಬಡ್ಡಿ ರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. ಸಹಕಾರ ಬ್ಯಾಂಕ್ಗಳಿಗೆ ನಮ್ಮ ಸರ್ಕಾರ ಸಹಕಾರ ನೀಡಲಿದೆ. ಸಹಕಾರ ಕ್ಷೇತ್ರ ಬೆಳೆಯಲು ನೆಹರು, ಗಾಂಧೀಜಿ ಸಹಾಯ ಮಾಡಿದ್ದಾರೆ ಎಂದರು.
ಡಿ.4ರಿಂದ 15ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿರುವ ಹಿನ್ನೆಲೆ ಪೊಲೀಸರು ಹೇಗೆ ತಯಾರಿ ಮಾಡಿಕೊಂಡಿದ್ದಾರೆಂದು ಮಾಹಿತಿ ಪಡೆದಿದ್ದೇನೆ ಎಂದು ಬೆಳಗಾವಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 3,500 ಪೊಲೀಸ್ ಸಿಬ್ಬಂದಿ ಸುವರ್ಣಸೌಧ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸಿಬ್ಬಂದಿಗೆ ಎಲ್ಲ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ಊಟ, ವಸತಿ ವ್ಯವಸ್ಥಿತವಾಗಿ ಕಲ್ಪಿಸುವಂತೆ ಸೂಚನೆ ನೀಡಿದ್ದೇನೆ. ಭದ್ರತೆ, ಆಂತರಿಕ ವಿಚಾರ ಸೇರಿದಂತೆ ಬಿಗಿ ಭದ್ರತೆ ಮಾಡಿಕೊಳ್ಳುತ್ತೇವೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಟಾಂಗ್ ಕೊಟ್ಟ ಆನಂದ್ ಆಸ್ನೋಟಿಕರ್, ಜಿಲ್ಲಾ ಪಂಚಾಯತ್ ಸದಸ್ಯರಾಗಲೂ ರೂಪಾಲಿ ನಾಯ್ಕ್ಗೆ ಯೋಗ್ಯತೆಯಿಲ್ಲ, ಅನಪಡ್ ಆಕೆ. ರೂಪಾಲಿ ನಾಯ್ಕ್ ಅವರಿಂದಲೇ ರಾಜ್ಯದಲ್ಲಿ 40% ಕಮಿಷನ್ ಹೆಸರು ಬಿಜೆಪಿಗೆ ಬಂದಿದೆ. ಚುನಾವಣೆ ಸಂದರ್ಭದಲ್ಲಿ 20-30 ಕೋಟಿ ರೂ. ರೂಪಾಲಿ ಖರ್ಚು ಮಾಡಿದ್ದು, ಆ ಹಣ ಎಲ್ಲಿಂದ ಬಂತು? ನನಗೆ ಪಾರ್ಲಿಮೆಂಟ್ನಲ್ಲಿ ಇಂಗ್ಲಿಷ್ ಆಗಲೀ ಹಿಂದಿಯಲ್ಲಾಗಲೀ ಟೇಬಲ್ ತಟ್ಟಿ ಮಾತನಾಡುವ ಯೋಗ್ಯತೆಯಿದೆ. ಜಿಲ್ಲೆಯ ಸಮಸ್ಯೆಯನ್ನು ಪಾರ್ಲಿಮೆಂಟ್ನಲ್ಲಿ ನಾನು ಹೇಳುತ್ತೇನೆ. ಇದರಿಂದ ಲೋಕಸಭೆಯ ಚುನಾವಣೆಗೆ ನನಗೆ ಅವಕಾಶ ನೀಡಬೇಕು ಎಂದು ಆನಂದ್ ಆಸ್ನೋಟಿಕರ್ ಹೇಳಿದರು.
ಅನಂತ ಕುಮಾರ್ ಹೆಗಡೆಯವರ ಜತೆ ಉತ್ತಮ ಬಾಂಧವ್ಯವಿದ್ದು, ಅವರು ನನ್ನ ಸಹೋದರರಂತೆ. ಹೆಗಡೆಯವರು ಚುನಾವಣೆಗೆ ನಿಲ್ಲೋದಾದರೆ ನಾನು ಆಕಾಂಕ್ಷಿಯಲ್ಲ. ಅನಂತ ಕುಮಾರ್ ಹೆಗಡೆಯವರು ಚುನಾವಣೆಗೆ ನಿಲ್ಲದಿದ್ದರೆ ಮಾತ್ರ ನಾನು ಕೂಡಾ ಒಬ್ಬ ಚುನಾವಣಾ ಆಕಾಂಕ್ಷಿ. ದೇವೇಗೌಡರು, ಕುಮಾರಸ್ವಾಮಿ, ಪ್ರಧಾನಿ ಮೋದಿಯವರ ಅಭಿಮಾನಿಗಳು ನಮ್ಮ ಗೆಲ್ಲಿಸಿಯೇ ಗೆಲ್ಲಿಸುತ್ತಾರೆ. ಅವಕಾಶ ಸಿಕ್ಕರೆ ಉತ್ತರಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಖಂಡಿತಾ ಗೆಲ್ಲುತ್ತಾರೆ. ಜನರಿಗೆ ಬದಲಾವಣೆ ಬೇಕಿತ್ತು, ಜೆಡಿಎಸ್ ಅಂದು ಬಿಜೆಪಿ ವಿರುದ್ಧ ಮಾತನಾಡಿದ್ದರಿಂದ ನಾನು ಕೂಡಾ ಬಿಜೆಪಿ ವಿರುದ್ಧವಿದ್ದೆ. ನನ್ನ ಕಾರ್ಯಕರ್ತರು ಬಿಜೆಪಿ ಜತೆಯಾಗಿ ನಿಲ್ಲಬೇಕೆಂದು ಹೇಳಿದ್ದರಿಂದ ಬೆಂಬಲಿಸುತ್ತಿದ್ದೇನೆ. ಪಕ್ಷದಲ್ಲಿ ವೈಯಕ್ತಿಕ ಬೇಧಭಾವ ಇರಬಹುದು. ಆದರೆ ಮೋದಿ ಮತ್ತೆ ಪ್ರಧಾನಿಯಾಗಲು ಯಾವ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಹೇಳಿದರು.
ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಆನಂದ್ ಆಸ್ನೋಟಿಕರ್, ಕುಮಾರಸ್ವಾಮಿ ಬಿಜೆಪಿ ಜತೆ ಕೈಜೋಡಿಸಿದ್ದು ನನ್ನ ಕ್ಷೇತ್ರದ ಜನರಿಗೆ ಸಂತೋಷವಾಗಿದೆ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಪಕ್ಷದಲ್ಲಿದ್ದುಕೊಂಡೇ ಜೆಡಿಎಸ್ ಬಲಪಡಿಸುವುದಾಗಿ ತಿಳಿಸಿದ್ದೇನೆ. ಸರಕಾರ ಬಂದು 6 ತಿಂಗಳಾಗಿದ್ದು, ಗ್ಯಾರಂಟಿಗಳ ಮೂಲಕ ಸರಕಾರ ಜನರ ಬೆಂಬಲ ಪಡೆದಿತ್ತು. ಈ ಸರಕಾರ ಮಾಡುವ ಲೋಪ, ದೋಷಗಳು, ಸಮಸ್ಯೆಗಳು ಮುಂತಾದ ವಿಷಯಗಳ ಬಗ್ಗೆ ಕುಮಾರಣ್ಣ ಮಾತನಾಡುತ್ತಲೇ ಬಂದಿದ್ದಾರೆ. ನಾನು ಲೋಕಸಭೆ ಚುನಾವಣೆಯ ಆಕಾಂಕ್ಷಿ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಾನು ಮೋದಿಯವರ ಅಭಿಮಾನಿ ಎಂದು ಅಂದಿನಿಂದ ಹೇಳಿದ್ದು, ಅವರ ವಿರುದ್ಧ ಯಾವ ವಿಷಯಾನೂ ಮಾತನಾಡಿಲ್ಲ. ನಮ್ಮ ರಾಷ್ಟ್ರ ಉಳಿಬೇಕಾದರೆ, ಅಭಿವೃದ್ಧಿಗೆ ಪ್ರಧಾನಿ ಮೋದಿಯವರ ಅವಶ್ಯಕತೆಯಿದೆ. ಈ ಹಿಂದೆ ನನಗೆ ಕ್ಷೇತ್ರದ ಬಗ್ಗೆ ಅಷ್ಟೊಂದು ಮಾಹಿತಿಯಿರಲಿಲ್ಲ. ಆದರೆ, ಮುಂದಕ್ಕೆ ಜೆಡಿಎಸ್ ಅಭ್ಯರ್ಥಿಗೆ ಅವಕಾಶ ಸಿಕ್ಕಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ 100% ಜೆಡಿಎಸ್ ಗೆಲ್ಲುತ್ತದೆ ಎಂದರು.
ನಾಳೆ ಬೆಂಗಳೂರಿಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಆಗಮಿಸಲಿದ್ದಾರೆ. ನಾಳೆ ಸಿಎಂ, ಡಿಸಿಎಂ ಜೊತೆ ಸಭೆ ನಡೆಸಲಿರುವ ಸುರ್ಜೇವಾಲ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರು 25 ಶಾಸಕರ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಕಾರ್ಯಕರ್ತರಿಗೂ ಅವಕಾಶ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸುರ್ಜೇವಾಲ ನೇತೃತ್ವದಲ್ಲಿ ನಡೆಯುವ ಈ ಸಭೆ ಮಹತ್ವ ಪಡೆದುಕೊಂಡಿದೆ.
ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ಸಿಎಂ ಸಾರ್ವಜನಿಕರ ಮನವಿ ಸ್ವೀಕಾರ ವೇಳೆ ಸಿಎಂ ಸಿದ್ದರಾಮಯ್ಯ ಕೈಹಿಡಿದು ಜನರು ಜಗ್ಗಿದ್ದು, ಸಿಎಂ ಗರಂ ಆಗಿದ್ದಾರೆ. ಮನವಿ ಸ್ವೀಕಾರದ ವೇಳೆ ವ್ಯಕ್ತಿಯೋರ್ವರು ಸಿಎಂ ಕೈ ಹಿಡಿದುಕೊಂಡು ಎಳೆದಿದ್ದಾರೆ. ತಾನು ಕೊಟ್ಟ ಮನವಿ ಸಿಎಂ ನೋಡಬೇಕೆಂಬ ಅಪೇಕ್ಷೆಯಿಂದ ಕೈ ಹಿಡಿದು ಎಳೆದಿದ್ದಾರೆ. ಇದರಿಂದ ಸಿಎಂ ಕೋಪಗೊಂಡಿದ್ದು ತಕ್ಷಣವೇ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿ ಕೈ ಬಿಡಿಸಿದರು.
ರಾಮನಗರ ತಾಲೂಕಿನ ಚೆನ್ನಮಾನಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಹಳಿದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಚೆನ್ನಮಾನಹಳ್ಳಿ ನಿವಾಸಿ ಶ್ರೀನಿವಾಸ್(45) ಮೃತ ದುರ್ದೈವಿ. ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ರಾತ್ರಿಪಾಳಿ ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.
ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಯಾವ ರೀತಿಯಲ್ಲಿ ಹೇಳಿದ್ದಾರೆಂದು ಅವರೇ ಉತ್ತರ ಕೊಡಬೇಕಾಗುತ್ತೆ. ನಮ್ಮಂಥವರು ಕೆಲವೊಮ್ಮೆ ಮಾತಾಡುವಾಗ ಹುಷಾರಾಗಿ ಇರಬೇಕು. ನಮ್ಮ ಸರ್ಕಾರ ಧರ್ಮಾತೀತವಾಗಿ ಒಳ್ಳೆ ಉದ್ದೇಶಕ್ಕೆ ಕೆಲಸ ಮಾಡ್ತಿದೆ ಎಂದರು.
ಮಾಜಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಶ್ರೀಶೈಲ ಜಗದ್ಗುರುಗಳು ಭೇಟಿ ನೀಡಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಬಸವರಾಜ ಬೊಮ್ಮಾಯಿ ನಿವಾಸ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಭೇಟಿ ನೀಡಿ ಮಾಜಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸಿದರು.
ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಸೋಲದೇವನಹಳ್ಳಿ, ಹಂದಿಗುಟ್ಟೆ ಗ್ರಾಮಗಳ ಸುತ್ತಮುತ್ತ ಚಿರತೆ ಉಪಟಳ ಹೆಚ್ಚಾಗಿದೆ. ನಿನ್ನೆ ರಾತ್ರಿ ರಾಜಣ್ಣ ಎಂಬುವರ ಅಡಕೆ ತೋಟದಲ್ಲಿ ಚಿರತೆ ಓಡಾಟ ಕಂಡು ಬಂದಿದೆ. ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮದಲ್ಲಿ 6 ವರ್ಷದ ಹನುಮೇಶ ಛಲವಾದಿ ಎಂಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಬಾಲಕನ ಕಿವಿ, ದೇಹದ ಹಲವು ಕಡೆ ಗಂಭೀರ ಗಾಯಗಳಾಗಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ವಿಚಾರ ಸಂಬಂಧ ಮುರುಘಾ ಶ್ರೀ ಆಪ್ತ, ಮಾಜಿ ಶಾಸಕ ಶಿವಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನಿಗೆ ತಲೆಬಾಗಲು ಮುರುಘಾ ಶ್ರೀಗಳು ಸಿದ್ಧರಿದ್ದಾರೆ. ಎಲ್ಲವನ್ನೂ ಎದುರಿಸಲು ಮುರುಘಾ ಶ್ರೀಗಳು ಸಿದ್ಧರಿದ್ದಾರೆ. ಕೋರ್ಟ್ ವಾರಂಟ್ ಜಾರಿ ಮಾಡುತ್ತೆಂದು ನಿರೀಕ್ಷೆ ಇರಲಿಲ್ಲ. ಮುರುಘಾಶ್ರೀಗಳು ಆರೋಪಿ ಅಷ್ಟೇ, ಅಪರಾಧಿಯಲ್ಲ.
ಮತ್ತೊಮ್ಮೆ ಸಂಕಷ್ಟ ಎದುರಾಗಿದೆ, ಎದುರಿಸಲು ಸಿದ್ಧರಾಗಿದ್ದಾರೆ ಎಂದರು.
ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಯಾವುದೇ ಕ್ಷಣದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಂಧನ ಸಾಧ್ಯತೆ. 2ನೇ ಪೋಕ್ಸೋ ಕೇಸ್ನಲ್ಲಿ ಅರೆಸ್ಟ್ ವಾರಂಟ್ ಜಾರಿ ಮಾಡಿದ ಕೋರ್ಟ್. ನ.16ರಂದು ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ರಿಲೀಸ್ ಆಗಿದ್ದರು. 1ನೇ ಪೋಕ್ಸೋ ಕೇಸ್ನಲ್ಲಿ ಹೈಕೋರ್ಟ್ನಿಂದ ಬೇಲ್ ಹಿನ್ನೆಲೆ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಬಂಧನದ ಭೀತಿ ಎದುರಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ FDA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ಗಳನ್ನು FSLಗೆ ರವಾನಿಸಲಾಗಿತ್ತು. ಪ್ರಮುಖ ಆರೋಪಿ ಆರ್.ಡಿ.ಪಾಟೀಲ್, ಇಂಜಿನಿಯರ್ ರುದ್ರಗೌಡ ಸೇರಿದಂತೆ ಬಂಧಿತ ಎಲ್ಲಾ ಆರೋಪಿಗಳ ಮೊಬೈಲ್ FSLಗೆ ರವಾನಿಸಲಾಗಿದೆ.
ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿರುವ ಬಿಜೆಪಿ ಬೂತ್ ಅಧ್ಯಕ್ಷರ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದಾರೆ. ಚಾಮರಾಜ ಕ್ಷೇತ್ರದ ಬೂತ್ ನಂಬರ್ 181ರ ಅಧ್ಯಕ್ಷ ರವಿಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಬೂತ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್, ನಾಗೇಂದ್ರ ಸಾಥ್ ನೀಡಿದರು.
ಗ್ಯಾರಂಟಿ ಯೋಜನೆಯನ್ನು ಪ್ರಧಾನಿ ಮೋದಿ ವಿರೋಧಿಸಿದ್ದರು. ಇದೀಗ ಪ್ರಧಾನಿ ಮೋದಿಯೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಎಂದು ಕೊಪ್ಪಳದಲ್ಲಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. BJP ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿ ಅಂತಿದ್ದಾರೆ. ಬಿಜೆಪಿ ಯಾವತ್ತೂ ನುಡಿದಂತೆ ನಡೆಯಲ್ಲ. ಬಿಜೆಪಿಯವರು ಏನೇ ಹೇಳಿದ್ರು ಕೂಡ ಜನರು ನಂಬುವುದಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲಾ, ಎರಡೂ ಕೈ ತಟ್ಟಿದ್ರೆನೆ ಚಪ್ಪಾಳೆ ಆಗೋದು ಎಂದು ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಅತ್ಯಾಚಾರ ನೆಡದಿದೆ ನ್ಯಾಯ ಕೊಡಿಸಿ ಎಂದು ಹೇಳಿದ ಸಂತ್ರಸ್ತೆಯ ಸಂಬಂಧಿಗೆ ಸಲಹೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ಕೇಸ್ ದಾಖಲಾದ್ರೂ ಕ್ರಮಕ್ಕೆ ಸಂಬಂಧಪಟ್ಟವರಿಂದ ಮೀನಾಮೇಷ. ಹೀಗಾಗಿ ಸಂತ್ರಸ್ಥ ಮಹಿಳೆಯ ಮಾವ ನ್ಯಾಯಕ್ಕೆ ಎಸ್ಪಿ, ಮಾಜಿ ಶಾಸಕರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಶಾಸಕ ಈ ರೀತಿ ಹೇಳಿರುವ ಆಡಿಯೋ ವೈರಲ್ ಆಗಿದೆ.
ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರ ಸಂಬಂಧ ಸಚಿವ ಜಮೀರ್ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ಇದು ಪ್ರಜಾಪ್ರಭುತ್ವ, ಸಂವಿಧಾನ, ದಲಿತ ವಿರೋಧಿ ಹೇಳಿಕೆ. ಸಚಿವ ಜಮೀರ್ ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ. ನ್ಯಾಯದೇವತೆಯ ಗೌರವಕ್ಕೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಬೇರೆ ಸಿಎಂ ಆಗಿದ್ದರೆ ಇಷ್ಟೊತ್ತಿಗೆ ಜಮೀರ್ ರಾಜೀನಾಮೆ ಪಡೆಯುತ್ತಿದ್ರು. ಈ ಸರ್ಕಾರ ಜಮೀರ್ ಹೇಳಿಕೆ ಖಂಡಿಸುವ ಕೆಲಸ ಕೂಡ ಮಾಡಿಲ್ಲ ಎಂದರು.
ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಹೇಳಿಕೆ ವೈರಲ್ ವಿಚಾರ ಸಂಬಂಧ ದ.ಕನ್ನಡ ಜಿಲ್ಲೆ ಸುಳ್ಯದಲ್ಲಿ ವಜ್ರದೇಹಿ ರಾಜಶೇಖರಾನಂದಶ್ರೀ ಆಕ್ರೋಶ ಹೊರ ಹಾಕಿದ್ದಾರೆ. ಜಮೀರ್ ಅಹ್ಮದ್ರನ್ನು ಮೊದಲು ಪಾಕ್ಗೆ ಗಡಿಪಾರು ಮಾಡಬೇಕು. ಸರ್ಕಾರಕ್ಕೆ ತಾಕತ್ತಿದ್ರೆ ಜಮೀರ್ ಅಹ್ಮದ್ರನ್ನು ಗಡಿಪಾರು ಮಾಡಲಿ. ಇಲ್ಲೆಲ್ಲೂ ಅಲ್ಲ, ಜಮೀರ್ರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಸಚಿವ ಜಮೀರ್ ವಿರುದ್ಧ ರಾಜಶೇಖರಾನಂದ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷ ಸಂಘಟನೆಗೆ ನನ್ನ ಮೊದಲ ಆದ್ಯತೆ. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಗೆದ್ದು ಮೋದಿ ಕೈಬಲಪಡಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಯಾವಾಗ ಚುನಾವಣೆ ಬಂದರೂ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ. ಮೈಸೂರು ನನಗೆ ಅವಿನಾಭಾವ ಸಂಬಂಧ ಹೊಂದಿರುವ ಜಿಲ್ಲೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮೈಸೂರಿನ ಕುವೆಂಪು ನಗರದಲ್ಲಿರುವ ಸಾಹಿತಿ ಎಸ್ ಎಲ್ ಭೈರಪ್ಪ ನಿವಾಸಕ್ಕೆ ಬಿ ವೈ ವಿಜಯೇಂದ್ರ ಭೇಟಿ ನೀಡಿದ್ದು ಆಶೀರ್ವಾದ ಪಡೆದಿದ್ದಾರೆ. ರಾಜ್ಯಾಧ್ಯಕ್ಷರಾದ ನಂತರ ಮೈಸೂರಿಗೆ ಮೊದಲ ಬಾರಿ ಆಗಮಿಸಿರುವ ಬಿ.ವೈ. ವಿಜಯೇಂದ್ರ ಟೆಂಪಲ್ ರನ್, ಮಠಗಳ ಭೇಟಿ ಜೊತೆಗೆ ಗಣ್ಯರು, ಸಾಹಿತಿಗಳ ಭೇಟಿ ಮಾಡುತ್ತಿದ್ದಾರೆ.
ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ, ಹಸುಗೂಸು ಸಾವು ಪ್ರಕರಣ ಸಂಬಂಧ ಬಂಧಿತ ಐವರು ಅಧಿಕಾರಿಗಳು ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ.ಬೆಂಗಳೂರಿನ ವೈಟ್ಫೀಲ್ಡ್ನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸೌಂದರ್ಯ(23), 9 ತಿಂಗಳ ಮಗು ಸುವಿಕ್ಸಲಿಯಾ ಸ್ಥಳದಲ್ಲೇ ಮೃತಪಟ್ಟಿದ್ದರು. ದುರಂತ ಸಂಬಂಧ ಐವರು ಅಧಿಕಾರಿಗಳನ್ನು ಬಂಧಿಸಲಾಗಿತ್ತು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿದ್ದು ಪುತ್ರಿ ವಿವಾಹ ಕಾರ್ಯಕ್ರಮದ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಹುಬ್ಬಳ್ಳಿಯ ಧೀನಬಂದು ಕಾಲೋನಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಏಕೆಂದರೆ ಮದ್ಯಸೇವಿಸಿ ನಡುರಸ್ತೆಯಲ್ಲಿ ಚಾಕು ಹಿಡಿದು ವ್ಯಕ್ತಿ ಓಡಾಡುತ್ತಿದ್ದಾನೆ. ವಿನೋದ್ ನಡುಗಟ್ಟಿ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಡುತ್ತಿದ್ದಾನೆ. ಕಳೆದ ಒಂದು ವಾರದಿಂದ ಇದೇ ಸ್ಥಿತಿ ಇದ್ದು ವಿನೋದ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಜೆಪಿಯ ಹಲವು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಅವರು ಪಕ್ಷಕ್ಕೆ ಬಂದಮೇಲೆ ಸ್ಥಾನಮಾನ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಪಕ್ಷದವರ ಸಹಮತವನ್ನು ಪಡೆದುಕೊಂಡು ಚರ್ಚೆ ಮಾಡ್ತೀವಿ. ಬಿಜೆಪಿಯಿಂದ ಬಂದವರಿಗೆ ಗೊಂದಲ ಹಾಗೂ ಅನ್ಯಾಯ ಆಗಬಾರದು. ಆ ನಿಟ್ಟಿನಲ್ಲಿ ಆಯಾ ಕ್ಷೇತ್ರದ ನಮ್ಮ ಮುಖಂಡರ ಜೊತೆ ಚರ್ಚಿಸುತ್ತೇವೆ. ಸ್ವಇಚ್ಛೆಯಿಂದ ಬರುವವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದರು.
ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಸಂಭಾಷಣೆ ಕುರಿತು ಬಿಜೆಪಿ ಆರೋಪ ವಿಚಾರ ಸಂಬಂಧ ಬಾಗಲಕೋಟೆಯಲ್ಲಿ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಇದನ್ನು ನೋಡಿದ್ರೆ ನಗು ಬರುತ್ತೆ. ಇವರೆಲ್ಲರೂ ಸತ್ಯಹರಿಶ್ಚಂದ್ರ ರಾಜನ ಮನೆಯಲ್ಲಿ ಬಾಡಿಗೆ ಇದ್ದೋರ ಹಾಗೆ ಮಾತಾಡ್ತಾರಲ್ಲ. ಇಪ್ಪತ್ತು ವರ್ಷ ನೋಡಿಲ್ವಾ ಇವರ ಕಥೆ ಏನಿದೆ ಅನ್ನೋದು. ಬೇರೆಯವರಿಗೆ ಬೇರೆ ತರಹ ಅರ್ಥ ಆಗಬಹುದು. ಮಾತಾಡ್ಲಿ, ಆಪಾದನೆ ಮಾಡ್ಲಿ ಒಂದು ಬೆರಳು ಮುಂದೆ ಮಾಡುವಾಗ ನಾಲ್ಕು ಬೆರಳು ನಮ್ಮ ಕಡೆ ಇರ್ತಾವೆ ಅನ್ನೋ ಅರಿವು ಇರಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಲಾಂಗ್ ಮಚ್ಚು ಹಿಡಿದು ರೀಲ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ತಾಲೂಕಿನ ನರಸಾಪುರದಲ್ಲಿ ಬಂಧಿಸಲಾಗಿದೆ. ನರಸಾಪುರದ ವೇಣು ಮತ್ತು ಪವನ್ ಕುಮಾರ್ ಎಂಬುವವರು ಲಾಂಗ್ ಮತ್ತು ಮಚ್ಚು ಹಿಡಿದು ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದರು. ಹೀಗಾಗಿ ಅಕ್ರಮ ಶಸ್ತಾಸ್ತ್ರ ಕಾಯ್ದೆ ಪ್ರಕರಣದಡಿಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
ಉದ್ಯೋಗ ನೀಡುವುದಾಗಿ ಹೇಳಿ ಭೂಮಿ ಪಡೆದು ವಂಚನೆ ಆರೋಪ ಸಂಬಂಧ ಖಾಸಗಿ ಕಂಪನಿ ವಂಚನೆಗೆ ಮನನೊಂದು ಯುವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಬಳಿ ನಡೆದಿದೆ. ಕಂಪನಿ ವಿರುದ್ಧ ಡೆತ್ ನೋಟ್ ಬರೆದು ರೈತ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಎಂಬ ಖಾಸಗಿ ಕಂಪನಿ ಸಿದ್ದರಾಜು ಬಳಿಯಿಂದ ಉದ್ಯೋಗ ನೀಡುವುದಾಗಿ ಭೂಮಿ ಪಡೆದಿತ್ತು. ಬಳಿಕ ಉದ್ಯೋಗ ನೀಡದೆ ವಂಚಿಸಿದೆ ಎನ್ನಲಾಗಿದೆ.
Published On - 8:01 am, Mon, 20 November 23