ಬ್ರಿಟಿಷ್ ಸೈನ್ಯ ಸೇರಲು ತುದಿಗಾಲಲ್ಲಿ ನಿಂತಿದ್ದ ಆರ್​ಎಸ್​ಎಸ್​ ದೇಶದ್ರೋಹಿ ಸಂಘಟನೆ; ಕಾಂಗ್ರೆಸ್ ವಾಗ್ದಾಳಿ

| Updated By: ಸುಷ್ಮಾ ಚಕ್ರೆ

Updated on: May 29, 2022 | 4:26 PM

ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದ ಆರ್​ಎಸ್​ಎಸ್​ ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು? ಎಂದು ಟ್ವಿಟರ್​​ ಮೂಲಕ ಆರ್​ಎಸ್​​ಎಸ್​ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ಬ್ರಿಟಿಷ್ ಸೈನ್ಯ ಸೇರಲು ತುದಿಗಾಲಲ್ಲಿ ನಿಂತಿದ್ದ ಆರ್​ಎಸ್​ಎಸ್​ ದೇಶದ್ರೋಹಿ ಸಂಘಟನೆ; ಕಾಂಗ್ರೆಸ್ ವಾಗ್ದಾಳಿ
ಡಿ ಕೆ ಶಿವಕುಮಾರ
Follow us on

ಬೆಂಗಳೂರು: ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಭಾರತ ಕಂಡ ಮಹಾ ದಾರ್ಶನಿಕ ಗಾಂಧೀಜಿ ಹತ್ಯೆಯನ್ನು ಸಂಭ್ರಮಿಸುವ ಆರ್​ಎಸ್​ಎಸ್​ (RSS) ಈ ದೇಶದ ನಪುಂಸಕ ಸಂಘಟನೆ ಎಂದು ಟ್ವಿಟರ್​​ ಮೂಲಕ ಆರ್​ಎಸ್​​ಎಸ್​ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. RSS ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗದು. ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟಿಷರ ಸೈನ್ಯ ಸೇರಲು ಆರ್​ಎಸ್​ಎಸ್​ ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದ ಆರ್​ಎಸ್​ಎಸ್​ ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು? ಎಂದು ಟ್ವಿಟರ್​​ ಮೂಲಕ ಆರ್​ಎಸ್​​ಎಸ್​ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ಗಾಂಧೀಜಿಯನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ. ಗೋಡ್ಸೆ ತಯಾರಾಗಿದ್ದು ಇದೇ ಆರ್​ಎಸ್​​ಎಸ್​​ ಗರಡಿಯಲ್ಲೇ. ಈ ಬಗ್ಗೆ ನಾಥೂರಾಮ್ ಗೋಡ್ಸೆ ಸೋದರ ಖಚಿತಪಡಿಸಿದ್ದಾನೆ. ಗೋಪಾಲ ಗೋಡ್ಸೆ ಈ ಕುರಿತು ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾನೆ. ಆರ್​ಎಸ್​ಎಸ್​ ಅನ್ನು ಭಾರತಕ್ಕೆ ದ್ರೋಹ ಬಗೆದ ಸಂಘಟನೆ ಎನ್ನಲು ನಿದರ್ಶನಗಳಿವೆ. 1929ರ ಲಾಹೋರ್ ಅಧಿವೇಶನದಲ್ಲಿ ನೆಹರು ಎಲ್ಲ ಸಂಸ್ಥೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದ್ದರು. 1930ರ ಜನವರಿ 26ರಂದು ಧ್ವಜ ಹಾರಿಸಲು ಕರೆ ಕೊಟ್ಟಿದ್ದರು. ಇದನ್ನು ನಿರಾಕರಿಸಿದ RSS ಭಗವಾಧ್ವಜವನ್ನು ಹಾರಿಸಿತ್ತು. ತನ್ನ ಸಂಘದ ಕಚೇರಿ ಮೇಲೆ ಭಗವಾಧ್ವಜವನ್ನು ಹಾರಿಸಿದ್ದಷ್ಟೇ ಅಲ್ಲದೆ, ತ್ರಿವರ್ಣ ಧ್ವಜ ಅನಿಷ್ಟದ ಸಂಕೇತ ಎಂದು ಆರ್​ಎಸ್​ಎಸ್​ ತನ್ನ ಮುಖವಾಣಿ ‘ಆರ್ಗನೈಸರ್’ನಲ್ಲಿ ಬರೆದಿತ್ತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ನೀಡದೆ, ತನ್ನ ಸಂಘದ ಕಚೇರಿ ಮೇಲೆ ಭಗವಾಧ್ವಜ ಹಾರಿಸಿತ್ತು. ಆರ್​ಎಸ್​ಎಸ್​ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸಿತ್ತು. ನಾವು ಮೂವರು ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ RSS ಸಂಘಟನೆಯಲ್ಲೇ ಬೆಳೆದವು ಎಂದು ಹೇಳಬಹುದು ಎಂದು ಗೋಪಾಲ್ ಗೋಡ್ಸೆ ಸಂದರ್ಶನವೊಂದರಲ್ಲಿ ಹೇಳಿದ್ದರು ಎಂದು ಟ್ವೀಟ್​​​ ಮೂಲಕ ಆರ್​ಎಸ್​​ಎಸ್​ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಅವರಿಂದಲೇ ಕರ್ನಾಟಕ ಕಾಂಗ್ರೆಸ್​ ಮುಕ್ತ ಆಗಲಿದೆ: ನಳಿನ್ ಕುಮಾರ್ ಕಟೀಲ್

ಇನ್ನು, ಆರ್​ಎಸ್​ಎಸ್​ ಮೂಲದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾನು ದ್ರಾವಿಡ ಪಂಥಕ್ಕೆ ಸೇರಿದವನು ಎಂದು ಹೇಳಿದ್ದೇನೆ. ಅದರಲ್ಲಿ‌ ತಪ್ಪೇನಿದೆ? ದ್ರಾವಿಡರು ದೇಶದ‌ ಮೂಲ ನಿವಾಸಿಗಳು. ಅದನ್ನ ಹೇಳಿದ್ದೇನೆ, ಅದು ಸತ್ಯ ಅಲ್ಲ ಎಂದು ಸಾಬೀತುಪಡಿಸಲಿ ಎಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಆರ್ಯರು ಮಧ್ಯಪ್ರಾಚ್ಯ ಪ್ರದೇಶದಿಂದ ಬಂದವರು ಎಂಬುದನ್ನು ನೀವು ಓದಿರಲಿಲ್ವಾ? ಸಿಎಂ ಬೊಮ್ಮಾಯಿ ನನಗೆ ಯಾವ ಪಂಥಕ್ಕೆ ಸೇರಿದ್ದೀರಾ ಎಂದಿದ್ದರು. ನಾನು ದ್ರಾವಿಡ ಪಂಥಕ್ಕೆ ಸೇರಿದವನು ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ