Shakti Scheme: ಶಕ್ತಿ ಯೋಜನೆ ಉದ್ಘಾಟನೆಗೆ ಇರಲ್ಲ ಡಿಕೆ ಶಿವಕುಮಾರ್; ಕಾರಣವೇನು?

ಶಕ್ತಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸುವುದಿಲ್ಲ ಎಂಬುದು ಶುಕ್ರವಾರ ಸಂಜೆ ತಿಳಿದುಬಂದಿದೆ.

Shakti Scheme: ಶಕ್ತಿ ಯೋಜನೆ ಉದ್ಘಾಟನೆಗೆ ಇರಲ್ಲ ಡಿಕೆ ಶಿವಕುಮಾರ್; ಕಾರಣವೇನು?
ಡಿಕೆ ಶಿವಕುಮಾರ್
Follow us
|

Updated on: Jun 09, 2023 | 7:44 PM

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ (Shakti Scheme) ಭಾನುವಾರ ಚಾಲನೆ ದೊರೆಯಲಿದೆ. ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸುವುದಿಲ್ಲ ಎಂಬುದು ಶುಕ್ರವಾರ ಸಂಜೆ ತಿಳಿದುಬಂದಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿ ಸರ್ಕಾರ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಕೆಯಲ್ಲಿ ಉಪ ಮುಖ್ಯಮಂತ್ರಿ ಹೆಸರೂ ಇದೆ. ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ಭಾಗವಹಿಸುವುದಿಲ್ಲ ಎಂಬುದು ತಿಳಿದುಬಂದಿದೆ.

ಡಿಕೆ ಶಿವಕುಮಾರ್ ಅವರು ಶನಿವಾರ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ. ಬೆಳಗ್ಗೆ 11.30ಕ್ಕೆ ಹೆಚ್​ಎಎಲ್​ನಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲಿರುವ ಅವರು, ಮಧ್ಯಪ್ರದೇಶದ ಗ್ವಾಲಿಯರ್​ಗೆ ತೆರಳಲಿದ್ದಾರೆ. ನಂತರ ಭಗಲಾಮುಖಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ನಂತರ ಉಜ್ಜೈನಿಗೆ ತೆರಳಲಿದ್ದು, ರಾತ್ರಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಉಜ್ಜೈನಿ ಮಹಾಕಾಲ ಮಂದಿರದಲ್ಲಿ ಭಸ್ಮ ಆರತಿ ನೆರವೇರಿಸಲಿದ್ದಾರೆ. ಬಳಿಕ ಕಾಲಭೈರವ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಭಾನುವಾರ ಸಂಜೆ 5 ಗಂಟೆಗೆ ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿಯಮ ಮೀರಿ ಮೇಕೆದಾಟು ಪಾದಯಾತ್ರೆ; ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೈಕೋರ್ಟಲ್ಲಿ ರಿಲೀಫ್

ಈ ಮಧ್ಯೆ, ಭಾನುವಾರದ ಶಕ್ತಿ ಯೋಜನೆ ಕಾರ್ಯಕ್ರಮದ ರೂಪುರೇಷೆಯನ್ನು ಸಾರಿಗೆ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ