ಬೇಕಾಬಿಟ್ಟಿ ಬಸ್ ಟಿಕೆಟ್ ದರ ಏರಿಸುವಂತಿಲ್ಲ: ವೈಜ್ಞಾನಿಕವಾಗಿ ಸಾರಿಗೆ ದರ ನಿಗದಿಗೆ ಸಮಿತಿ ರಚಿಸಿದ ಸರ್ಕಾರ

ಕರ್ನಾಟಕ ಸರ್ಕಾರವು ಸಾರ್ವಜನಿಕ ಸಾರಿಗೆ ದರಗಳನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚಿಸಲು ಅಧಿಸೂಚನೆ ಹೊರಡಿಸಿದೆ. ಸಮಿತಿಯು ಡೀಸೆಲ್ ಬೆಲೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಆಧರಿಸಿ ದರ ಪರಿಷ್ಕರಣೆ ಶಿಫಾರಸು ಮಾಡಲಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಬೇಕಾಬಿಟ್ಟಿ ಬಸ್ ಟಿಕೆಟ್ ದರ ಏರಿಸುವಂತಿಲ್ಲ: ವೈಜ್ಞಾನಿಕವಾಗಿ ಸಾರಿಗೆ ದರ ನಿಗದಿಗೆ ಸಮಿತಿ ರಚಿಸಿದ ಸರ್ಕಾರ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 28, 2025 | 7:03 AM

ಬೆಂಗಳೂರು, ಅಕ್ಟೋಬರ್ 28: ವೈಜ್ಞಾನಿಕವಾಗಿ ಸಾರ್ವಜನಿಕ ಸಾರಿಗೆ ದರ ನಿಗದಿ ಮಾಡಲು ಕರ್ನಾಟಕ (Karnataka) ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರಿಗೆ ದರ ನಿಯಂತ್ರಣ ಸಮಿತಿಯನ್ನು (PTFRC) ರಚಿಸಿ ಅಧಿಕೃತವಾಗಿ ಸೋಮವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದುವರೆಗೆ ಬಸ್ ಪ್ರಯಾಣ ದರ ಏರಿಕೆಗೆ ಯಾವುದೇ ಸ್ವತಂತ್ರ ಸಮಿತಿ ಇರಲಿಲ್ಲ. ಇದೀಗ ಸರ್ಕಾರವು ವೈಜ್ಞಾನಿಕ ಆಧಾರದ ಮೇಲೆ ದರ ನಿಗದಿಪಡಿಸಲು ಸಮಿತಿಯನ್ನು ರಚಿಸಿದೆ. ಹೀಗಾಗಿ ಇನ್ನು ಮುಂದೆ ರಾಜಕೀಯ ಇಚ್ಛಾಶಕ್ತಿಯಂತೆ ಒಟ್ಟಾರೆ ಬಸ್ ಟಿಕೆಟ್ ದರ ಏರಿಕೆ ಮಾಡಲು ಸಾಧ್ಯವಾಗದು. ರಾಜಕೀಯ ಒತ್ತಡ ಅಥವಾ ತಾತ್ಕಾಲಿಕ ನಿರ್ಧಾರಗಳಿಂದ ಬಸ್ ದರ ಏರಿಕೆ ಸಾಧ್ಯವಾಗುವುದಿಲ್ಲ.

ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸುವ ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಈಗ ಸರ್ಕಾರವು ಅಂತಿಮ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಇದಕ್ಕಾಗಿ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರಲ್ಲಿ ತಿದ್ದುಪಡಿ ಮಾಡಲಾಗಿದೆ.

ಹೇಗಿರಲಿದೆ ಸಾರಿಗೆ ದರ ನಿಯಂತ್ರಣ ಸಮಿತಿ?

ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರ ಹಚ್ಚಿಸುವ ಅನಿವಾರ್ಯತೆಯ ಕಾರಣ ಸರ್ಕಾರ ಈ ಸಮಿತಿ ರಚನೆಗೆ ಮುಂದಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಮಾದರಿಯಲ್ಲೇ ಸಾರಿಗೆ ದರ ನಿಯಂತ್ರಣ ಸಮಿತಿ ರಚನೆಯಾಗಲಿದೆ.

ಸಾರಿಗೆ ದರ ನಿಯಂತ್ರಣ ಸಮಿತಿಯಲ್ಲಿ ಯಾರೆಲ್ಲ ಇರಲಿದ್ದಾರೆ?

ಸಾರಿಗೆ ದರ ನಿಯಂತ್ರಣ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರು ಇರಲಿದ್ದು, ಅಧ್ಯಕ್ಷರಾಗಲು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅರ್ಹರಾಗಿರುತ್ತಾರೆ. ಒಬ್ಬ ಸದಸ್ಯರು ಕಾನೂನು ಅಥವಾ ಆಡಳಿತ ಹಿನ್ನೆಲೆಯುಳ್ಳ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿಯಾಗಿರಬೇಕು. ಮತ್ತೊಬ್ಬ ಸದಸ್ಯರು ಕೈಗಾರಿಕಾ ಅಥವಾ ಹಣಕಾಸು ತಜ್ಞರಾಗಿರಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ-ಕಾರ್ಯದರ್ಶಿ ಆಗಿರುತ್ತಾರೆ.

ಸಾರಿಗೆ ದರ ನಿಯಂತ್ರಣ ಸಮಿತಿ ಹೇಗೆ ಕಾರ್ಯನಿರ್ವಹಿಸುತ್ತದೆ?

  • ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡುತ್ತದೆ .
  • ಕಾಲಕಾಲಕ್ಕೆ ವಿವಿಧ ದರಗಳ ಪರಿಷ್ಕರಣೆಯನ್ನು ಆಯಾ ರಸ್ತೆ ಸಾರಿಗೆ ನಿಗಮಕ್ಕೆ ಸೂಚಿಸುತ್ತದೆ.
  • ಹಣಕಾಸು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ದರಗಳ ಮೇಲೆ
  • ವಿವಿಧ ಸರ್ ಚಾರ್ಜ್‌ಗಳು ಶುಲ್ಕಗಳನ್ನು ವಿಧಿಸಲು ಸಮಿತಿಯು ಸೂಚಿಸಬಹುದು.
  • ಸಮಿತಿಯು ರಸ್ತೆ ಸಾರಿಗೆ ನಿಗಮಗಳಿಗೆ ನೀಡಲಾದ ಶಿಫಾರಸುಗಳ ಪ್ರತಿಯನ್ನು,
  • ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸಬೇಕು.
  • ಸರ್ಕಾರಕ್ಕೆ ಪ್ರತಿ ವರ್ಷ ಏಪ್ರಿಲ್‌ 1ರ ನಂತರ ಸಾಧ್ಯವಾದಷ್ಟು ಬೇಗ ಡಿಸೆಂಬರ್ 31ರ ಒಳಗೆ ವಾರ್ಷಿಕ ವರದಿಯಾಗಿ ಸಲ್ಲಿಸಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ