ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿ ದಾಳಿಯಿಂದ!
ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷ ಗಣನೀಯವಾಗಿ ಹೆಚ್ಚಿದ್ದು, 2022 ರಿಂದ 2025 ರ ನವೆಂಬರ್ವರೆಗೆ 203 ಜನರ ಸಾವಿಗೆ ಕಾರಣವಾಗಿದೆ. ಚಾಮರಾಜನಗರ, ಕೊಡಗು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಕಾಡುಪ್ರಾಣಿ ದಾಳಿಗಳು ಹೆಚ್ಚಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಿದ್ದು, ಸಾವಿಗೀಡಾದವರ ಅಂಕಿ ಅಂಶಗಳ ಪಟ್ಟಿ ಬಹಿರಂಗವಾಗಿದೆ.

ಬೆಂಗಳೂರು, ಡಿಸೆಂಬರ್ 23: ಇತ್ತೀಚಿನ ದಿನಗಳಲ್ಲಿ ಮಾನವ-ಪ್ರಾಣಿ (Man-Anima Conflict) ಸಂಘರ್ಷ ಹೆಚ್ಚುತ್ತಿದ್ದು, ರಾಜ್ಯದ ಹಲವೆಡೆ ಪ್ರಾಣಿ ದಾಳಿಯಿಂದ ನೂರಾರು ಮಂದಿ ಸಾಯುತ್ತಿದ್ದಾರೆ. ಕೊಡಗಿನಲ್ಲಿ ಆನೆದಾಳಿಯಿಂದ ಜನ ಕಂಗಾಲಾಗಿದ್ದರೆ, ಚಾಮರಾಜನಗರದಲ್ಲಿ ಮನೆಮಾಡಿರುವ ಹುಲಿಗಳ ದಂಡನ್ನು ಹಿಡಿಯಲಾಗದೆ ಅರಣ್ಯ ಇಲಾಖೆ ಪೇಚಾಡುತ್ತಿದೆ. ಇದರ ಮಧ್ಯೆ ರಾಜ್ಯದಲ್ಲಿ ಪ್ರಾಣಿ ದಾಳಿಯಿಂದ ಸಾವನ್ನಪ್ಪಿದವರ ಅಂಕಿ ಅಂಶಗಳು ಬಯಲಾಗಿದ್ದು, ಮಾನವ ಕುಲವನ್ನು ನಿಬ್ಬೆರಗಾಗಿಸಿದೆ.
ಎಲ್ಲೆಲ್ಲಿ ಎಷ್ಟು ಸಾವುನೋವುಗಳು
ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನಗಳ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಸುಮಾರು 60% ರಷ್ಟು ಸಾವುಗಳು ಮಾನವ-ವನ್ಯಜೀವಿ ಸಂಘರ್ಷಣೆಯಿಂದಲೇ ಸಂಭವಿಸಿವೆ ಎಂದು ಹೇಳಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಹಿರಂಗಪಡಿಸಿರುವಂತೆ, 2022 ರಿಂದ 2025 ರವರೆಗೆ (ನವೆಂಬರ್ 30) ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷದಲ್ಲಿ 203 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ 2022-23 ರಲ್ಲಿ 58 ಮಂದಿ, 2023-24 ರಲ್ಲಿ 65, 2024-25 ರಲ್ಲಿ 46 ಸೇರಿದಂತೆ 2025 ರ ನವೆಂಬರ್ವರೆಗೆ 34 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರಲ್ಲಿ ಮತ್ತೊಬ್ಬ ರೈತ ಬಲಿ: ದನ ಕಾಯುತ್ತಿದ್ದವನ ಕೊಂದ ಹುಲಿ
ನಾಲ್ಕು ವರ್ಷಗಳಲ್ಲಿ 40 ಸಾವುಗಳೊಂದಿಗೆ, ಚಾಮರಾಜನಗರ ಜಿಲ್ಲೆ ಅಂಕಿ ಅಂಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೊಡಗು 32 ಸಾವುಗಳೊಂದಿಗೆ ಎರಡನೇಯ ಸ್ಥಾನದಲ್ಲಿದೆ. ಮೈಸೂರು 25 ಮತ್ತು ಹಾಸನ 19 ಸಾವುಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣಗಳೇನು?
ಈ ಜಿಲ್ಲೆಗಳು ದಕ್ಷಿಣ ಭಾರತದ ಅತಿದೊಡ್ಡ ಅರಣ್ಯ ಪ್ರದೇಶಗಳಾದ ಬಂಡೀಪುರ-ನಾಗರಹೊಳೆ-ವಯನಾಡು-ಮುದುಮಲೈ ಭೂದೃಶ್ಯ ಸೇರಿದಂತೆ ಪರಿಸರ ಸೂಕ್ಷ್ಮ ವಲಯಗಳೊಂದಿಗೆ ವ್ಯಾಪಕ ಗಡಿಗಳನ್ನು ಹಂಚಿಕೊಳ್ಳುತ್ತವೆ. ದಕ್ಷಿಣ ಕರ್ನಾಟಕದ ಅರಣ್ಯಗಳ ಅಂಚಿನಲ್ಲಿರುವ ಮಾನವನ ವಾಸಸ್ಥಾನವು ವನ್ಯಜೀವಿಗಳ ವಾಸಸ್ಥಾನದೊಂದಿಗೆ ಹೊಂದಿಕೊಂಡಿದ್ದು, ಇದೇ ಕಾರಣದಿಂದ ಮಾನವ-ಪ್ರಾಣಿ ಸಂಘರ್ಷ ಏರ್ಪಟ್ಟು, ಸಾವು ನೋವುಗಳು ಸಂಭವಿಸಿವೆ ಎನ್ನಲಾಗಿದೆ.
ವಾಸಸ್ಥಾನಗಳ ವಿಘಟನೆ, ಕುಗ್ಗುತ್ತಿರುವ ಅರಣ್ಯ ಕಾರಿಡಾರ್ಗಳು, ಕೃಷಿ ವಿಸ್ತರಣೆ ಮತ್ತು ವನ್ಯಜೀವಿ ವಾಸಸ್ಥಾನಗಳಲ್ಲಿ ಮಾನವ ಅತಿಕ್ರಮಣದಂತಹ ಕಾರಣದಿಂದ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಹೀಗಿರುವಾಗ ವನ್ಯಜೀವಿ ಕಾರಿಡಾರ್ಗಳನ್ನು ಮರುಸ್ಥಾಪಿಸಿ, ವೈಜ್ಞಾನಿಕ ಭೂ-ಬಳಕೆಯೊಂದಿಗೆ ನಿರಂತರವಾಗಿ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಈ ಸಮಸ್ಯೆಯನ್ನು ತಡೆಯಬಹುದೆಂದು ಪರಿಸರ ಸಂರಕ್ಷಣಾ ತಜ್ಞರು ಸೂಚಿಸಿದ್ದಾರೆ.
ಇದನ್ನೂ ಓದಿ ರಾಮನಗರದಲ್ಲಿ ಆನೆ ದಾಳಿಗೆ ರೈತ ಬಲಿ; ಮೈಸೂರಿನಲ್ಲಿ ಹುಲಿ ದಾಳಿಗೆ ಹಸುಗಳ ಸರಣಿ ಸಾವು
ಈ ಸಂದರ್ಭದಲ್ಲಿಯೇ ಪ್ರಾಣಿಗಳು ದಾಳಿ ಮಾಡಿರುವುದು ಹೆಚ್ಚು
ಈ ಅಂಕಿ ಅಂಶಗಳ ಪ್ರಕಾರ, ಆನೆದಾಳಿಯಿಂದಲೇ ಹೆಚ್ಚಿನ ಸಾವುನೋವು ಸಂಭವಿಸಿದ್ದು, ಹುಲಿ ಮತ್ತು ಚಿರತೆಗಳ ದಾಳಿಯಿಂದಲೂ ನೂರಾರು ಜನ ಸಾವನ್ನಪ್ಪಿದ್ದಾರೆ. ರೈತರು ಕೃಷಿ ಹೊಲಗಳಲ್ಲಿ ಕೆಲಸ ಮಾಡುವಾಗ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಅರಣ್ಯ ಪ್ರದೇಶಗಳಲ್ಲಿ ಚಲಿಸುವಾಗ ಹೆಚ್ಚಿನ ಪ್ರಾಣಿ ದಾಳಿಗಳು ನಡೆದಿವೆ ಎಂದು ತಿಳಿದುಬಂದಿದೆ. ಹೆಚ್ಚಾಗಿ ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ಇಂತಹ ದುರ್ಘಟನೆಗಳು ಸಂಭವಿಸಿದ್ದು, ಸೌರಶಕ್ತಿ ಚಾಲಿತ ಬೇಲಿಗಳ ಸ್ಥಾಪನೆ, ಆನೆ ನಿರೋಧಕ ಕಂದಕಗಳು ಸೇರಿದಂತೆ ಅರಣ್ಯ ಇಲಾಖೆಯು ಹತ್ತು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




