Priyank Kharge: ಕರ್ನಾಟಕ ನವೋದ್ಯಮದ, ಆವಿಷ್ಕಾರದ ಕಾಶಿ; ಸ್ಟಾರ್ಟಪ್​​​ನಲ್ಲಿಯೂ ಬೆಂಗಳೂರು ಮುಂದೆ ಎಂದ ಪ್ರಿಯಾಂಕ್ ಖರ್ಗೆ

Priyank Kharge ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023: ವಿರೋಧ ಪಕ್ಷಗಳು ಸರ್ಕಾರ ಟೇಕಾಫ್ ಆಗಿಲ್ಲ ಎಂದು ಹೇಳುತ್ತವೆ. ಆದರೆ, ಅವರಿಗೆ ಇನ್ನೂ ಪ್ರತಿಪಕ್ಷ ನಾಯಕನ ನೇಮಕ ಮಾಡಲು ಆಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ನಾಯಕನ ನೇಮಕವೂ ಅತಿ ಮುಖ್ಯ ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಿದರು.

Follow us
|

Updated on:Sep 15, 2023 | 4:35 PM

ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕ ಈಗ ನವೋದ್ಯಮದ, ಆವಿಷ್ಕಾರದ ಕಾಶಿ ಎಂದು ಈಗ ಪರಿಗಣಿಸಲ್ಪಟ್ಟಿದೆ. 1 ಬಿಲಿಯನ್ ಡಾಲರ್ ವರೆಗೆ ಮೌಲ್ಯ ಹೊಂದಿರುವ ಸುಮಾರು 43 ಯುನಿಕಾರ್ನ್​​ಗಳು ಬೆಂಗಳೂರು ಹಾಗೂ ಕರ್ನಾಟಕದಲ್ಲಿವೆ. 47 ಕಂಪನಿಗಳು ಯುನಿಕಾರ್ನ್​​ಗಳಾಗುವ ಹಂತದಲ್ಲಿವೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ಕಾಂಗ್ರೆಸ್​ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಬೆಂಗಳೂರಿನ ಲಲಿತ್​ ಅಶೋಕ್​​​ ಹೋಟೆಲ್​ನಲ್ಲಿ ಆಯೋಜಿಸಿರುವ ಕನಸಿನ ಕರುನಾಡು (TV9 Karnataka Summit 2023) ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೂಗಲ್​, ಮೈಕ್ರೋಸಾಫ್ಟ್​ನಂಥ ದೈತ್ಯ ಕಂಪನಿಗಳು ಬೆಂಗಳೂರಿನಲ್ಲಿ ಇನ್ನೂ ಆರಂಭವಾಗಿಲ್ಲ ಎಂಬುದು ನಿಜವಾದರೂ ಮುಂದಿನ ದಿನಗಳಲ್ಲಿ ಆಗಲಿವೆ. ಹಿಂದೆ ಬೆಂಗಳೂರೆಂಬುದು ಜಾಗತಿಕ ಐಟಿ ಉದ್ಯಮದ ಕಾಲ್ ಸೆಂಟರ್ ಆಗಿತ್ತು. ಆದರೆ ಈಗ ನವೋದ್ಯಮದ, ಆವಿಷ್ಕಾರದ ಕಾಶಿ ಎಂದು ಪರಿಗಣಿಸಲ್ಪಟ್ಟಿದೆ. ಇದು ಸುಮಾರು 30-40 ವರ್ಷಗಳ ಸುದೀರ್ಘ ಪ್ರಕ್ರಿಯೆ. ಕಾಲ್ ಸೆಂಟರ್ ಕೇಂದ್ರವಾಗಿದ್ದ ಊರು ಈಗ ಐಟಿ ಸೇವೆಗಳತ್ತ ಹೊರಳಿದೆ. ನಂತರ ನಾವು ಈಗ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟೆವು. ಅಮೆರಿಕದಲ್ಲಿ ಇರುವುದಕ್ಕಿಂತಲೂ ದೊಡ್ಡ ಸಂಶೋಧನಾ ಕೇಂದ್ರಗಳು ಈಗ ಬೆಂಗಳೂರಿನಲ್ಲಿವೆ ಎಂದು ಹೇಳಿದರು.

ಸ್ಟಾರ್ಟ್ಅಪ್​ಗೆ ಪೂರಕ ವಾತಾವರಣದಲ್ಲಿ ಕೂಡ ಬೆಂಗಳೂರು ಮುಂದಿದೆ. ಸ್ಟಾರ್ಟಪ್​​​ ಉದ್ಯಮದಲ್ಲಿ ತೊಡಗಿಕೊಳ್ಳುತ್ತಿರುವವರಿಗೆ ಸಮಾಜದಲ್ಲಿಯೂ ಗೌರವ ಇದೆ ಎಂದು ಖರ್ಗೆ ಹೇಳಿದರು.

ತಂತ್ರಜ್ಞಾನದ ಬಳಕೆಯಲ್ಲಿ ನಾವು ಮುಂದಿದ್ದೇವೆ. ರೈತರಿಗೆ ನೇರ ನಗದು ವರ್ಗಾವಣೆ ವಿಚಾರದಲ್ಲಿಯೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದೇವೆ. ಗ್ರಾಮ ಪಂಚಾಯತ್, ಗ್ರಾಮ ವನ್, ಬೆಂಗಳೂರು ವನ್ ಕೇಂದ್ರಗಳು ಇಲ್ಲೆಲ್ಲ ಏನೇನು ಸಭೆಗಳು, ವ್ಯವಹಾರಗಳು ನಡೆಯುತ್ತವೆ ಎಂಬುದನ್ನು ನೇರ ವೆಬ್​ಸೈಟ್​​ ಮೂಲಕ ಗಮನಿಸಬಹುದು. ಉಚಿತ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ತಂತ್ರಜ್ಞಾನ ವಿಚಾರದಲ್ಲಿ ಹಿಂದುಳಿದವರು ಅಥವಾ ಗ್ರಾಮೀಣ ಪ್ರದೇಶದವರಿಗೆ ಸೇವೆ ಒದಗಿಸುವುದಕ್ಕಾಗಿಯೇ ಗ್ರಾಮ ವನ್​​ನಂಥ ಕೇಂದ್ರಗಳನ್ನು ಆರಂಭಿಸಿ ಅದರ ಮೂಲಕ ನೆರವು ನೀಡಲಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶದ ಜನರ ಅಂತರ್ಜಾಲ ಬಳಕೆ ಶೇ 18ಕ್ಕಿಂತಲೂ ಹೆಚ್ಚಿದೆ. ಜನರ ಅಹವಾಲುಗಳು ಸರ್ಕಾರದ ಮಟ್ಟಕ್ಕೆ ತಲುಪಲು ಬೇಕಾದಂಥ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ.

ಅತಿ ಹೆಚ್ಚು ಉದ್ಯೋಗಾವಕಾಶ ಹೊಂದಿರುವ ಪದವೀಧರರನ್ನು ಹೊಂದಲಿದೆ ಕರ್ನಾಟಕ; ಖರ್ಗೆ

ಒಂದು ವರ್ಷದೊಳಗೆ ಸರ್ಕಾರವು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇಷ್ಟೇ ಅಲ್ಲದೆ, ದೇಶದಲ್ಲೇ ಹೆಚ್ಚು ಉದ್ಯೋಗಾವಕಾಶ ಹೊಂದಿರುವ ಪದವೀಧರರನ್ನು ಹೊಂದುವ ಗುರಿಯನ್ನು ಕರ್ನಾಟಕ ಹೊಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನೂರು ದಿನದಲ್ಲಿ ಏನೆಲ್ಲ ಸಾಧನೆ? ಪ್ರಿಯಾಂಕ್ ಖರ್ಗೆ ನೀಡಿದ ಮಾಹಿತಿ ಇಲ್ಲಿದೆ

ನೂರು ದಿನದಲ್ಲಿ ಒಂದು ಸರ್ಕಾರ ಸಂಪೂರ್ಣ ಕ್ಯಾಬಿನೆಟ್ ರಚನೆ ಮಾಡುವುದು, ಜವಾಬ್ದಾರಿ ಹಂಚುವುದು, ಬಜೆಟ್ ಸಿದ್ಧತೆ ನಡೆಸುವುದು, ಭರವಸೆ ನೀಡಿದಂತೆಯೇ ಐದು ಗ್ಯಾರಂಟಿಗಳ ಪೈಕಿ 4 ಅನ್ನು ಜನರಿಗೆ ತಲುಪಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಇವೆಲ್ಲ 100 ದಿನಗಳ ಒಳಗೆ ಮಾಡಿದ್ದೇವೆ. ಇದಕ್ಕಿಂತ ಹೆಚ್ಚಿನ ವೇಗ ಹೇಗೆ ನಿರೀಕ್ಷಿಸಲು ಸಾಧ್ಯ? ವಿರೋಧ ಪಕ್ಷಗಳು ಸರ್ಕಾರ ಟೇಕಾಫ್ ಆಗಿಲ್ಲ ಎಂದು ಹೇಳುತ್ತವೆ. ಆದರೆ, ಅವರಿಗೆ ಇನ್ನೂ ಪ್ರತಿಪಕ್ಷ ನಾಯಕನ ನೇಮಕ ಮಾಡಲು ಆಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ನಾಯಕನ ನೇಮಕವೂ ಅತಿ ಮುಖ್ಯ ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: DK Shivakumar Speech: ಟ್ರಾಫಿಕ್, ಕಸ ಸಮಸ್ಯೆ ಸೇರಿದಂತೆ ಬ್ರ್ಯಾಂಡ್​ ಬೆಂಗಳೂರು ಕಟ್ಟುವ ಬಗ್ಗೆ​ ಡಿಕೆ ಶಿವಕುಮಾರ್ ಮನದಾಳದ ಮಾತು​

ಆಕ್ರಮಣಕಾರಿಯಾಗಿ ಮಾತನಾಡುತ್ತಿರುವ ಕುರಿತ ಆರೋಪಗಳಿಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ದಾಖಲೆ ಇಲ್ಲದೆ, ಆಧಾರ ಇಲ್ಲದೆ ಯಾವ ವಾಗ್ದಾಳಿಯನ್ನೂ ಮಾಡಿಲ್ಲ. ಬಸವಣ್ಣನ ತತ್ವ ನಂಬುವ ನಾವು ಕಾಯಕವೇ ಕೈಲಾಸ ಎಂಬಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೇಂದ್ರದ ವಿರುದ್ಧವೂ ಕಿಡಿ

ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದೆ. ಕಾರ್ಪೊರೇಟ್ ಕಂಪನಿಗಳ 1 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ನಾವು 40,000 ಕೋಟಿ ರೂ. ಖರ್ಚುಮಾಡಿ ಜನರಿಗೆ ನೆರವು ನೀಡುತ್ತಿದ್ದೇವೆ. ಗ್ಯಾರಂಟಿ ಅಂದರೆ ಹಣ ನೀಡುವುದಷ್ಟೇ ಅಲ್ಲ, ಸಮಾನತೆ ಕೊಡುವುದು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾನತೆ ಸೃಷ್ಟಿಸುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Fri, 15 September 23