ಕರ್ನಾಟಕದಲ್ಲಿ ಕರೆಂಟ್ ಕದನ ಶುರುವಾಗಿದೆ. ಪ್ರತಿ ಮನೆಗು 200 ಯುನಿಟ್ವರೆಗು ಉಚಿತ ವಿದ್ಯುತ್ನ ಚರ್ಚೆ ಒಂದಡೆಯಾದರೇ ವಿದ್ಯುತ್ ದರ ಏರಿಕೆ ಚರ್ಚೆ ಮತ್ತೊಂದಡೆ. ವಿದ್ಯುತ್ ದರ ಏರಿಕೆಯಿಂದ ರಾಜ್ಯದ ಜನತೆ ಹೈರಾಣಾಗಿದ್ದು, ದುಪ್ಪಟ್ಟು ಬಿಲ್ ಬಂದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಈ ವಿಚಾರವಾಗಿ ರಾಜಕೀಯ ಕೆಸೆರೆಚಾಟ ಶುರುವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ. ಇನ್ನು ರಾಜ್ಯದಲ್ಲಿ ಮಳೆಯಾಗದ ಜಲಾಶಯಗಳು ಬರಿದಾಗುತ್ತಿದ್ದು, ಮಳೆಗಾಗಿ ವಿಶೇಷ ಪೂಜೆ ಮತ್ತು ಹರಕೆಗಳನ್ನು ಜನರು ಸಲ್ಲಿಸುತ್ತಿದ್ದಾರೆ. ಇನ್ನು ಅಪಘಾತ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಮತ್ತು ಅಪರಾಧ ಪ್ರಕರಣಗಳೂ ಕೂಡ ಜನರನ್ನು ಬೆಚ್ಚಿ ಬೀಳಿಸಿವೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ….
ಬಹಳಷ್ಟು ವಿಚಾರ ಚರ್ಚೆ ಮಾಡಲು ಪಕ್ಷದಲ್ಲಿ ಬಹಳಷ್ಟು ವೇದಿಕೆಗಳಿವೆ. ನಾನು ಈಗ ಪ್ರತಿಕ್ರಿಯೆ ನೀಡಿದ್ರೆ ಅದು ಧಾರಾವಾಹಿ ರೀತಿ ಬೆಳೆಯುತ್ತೆ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಕೇಂದ್ರ ಸರ್ಕಾರ ಅಕ್ಕಿ ನೀಡಲ್ಲವೆಂಬ ಕಾರಣಕ್ಕೆ ಯೋಜನೆ ನಿಲ್ಲಿಸಲ್ಲ. ಖಂಡಿತಾ ಅರ್ಹ ಫಲಾನುಭವಿಗಳಿಗೆ ತಲಾ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಲ್ಲಿ ಮಾಜಿ ಡಿಸಿಎಂ ಸವದಿ ಹೇಳಿದರು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡ್ತೀನಿ. ತಾಳ್ಮೆಯಿದ್ದರೆ ಸೂಕ್ತ ಸ್ಥಾನಮಾನ ಸಿಕ್ಕೇ ಸಿಗುತ್ತೆ ಎಂದಿದ್ದಾರೆ.
ಅಕ್ಕಿ ನೀಡಲಾಗದೆ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅಕ್ಕಿ ಯಾವುದೂ ನಿಲ್ಲುವುದಿಲ್ಲ. ಇದು ದ್ವೇಷದ ರಾಜಕಾರಣವಲ್ಲ, ಅಸಮರ್ಥ ರಾಜಕಾರಣ. ಈ ಹಿಂದೆಯೂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಿಸಿದ್ದರು. ಆಗಲೂ ಕೇಂದ್ರ ಸರ್ಕಾರದ ಅಕ್ಕಿಗೆ ತಮ್ಮ ಫೋಟೋ ಹಾಕಿಕೊಂಡಿದ್ದರು ಎಂದಿದ್ದಾರೆ.
ಶಿಗ್ಗಾಂವಿ, ವರುಣ, ಶಿಕಾರಿಪುರ, ಚಿಕ್ಕಮಗಳೂರು, ಕನಕಪುರ ಕ್ಷೇತ್ರ ಸೇರಿ ಆಯ್ದ ಜಿಲ್ಲೆಗಳಲ್ಲಿ 2 ರಾಜಕೀಯ ಪಕ್ಷಗಳಿಂದ ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಲಾಗುತ್ತಿದೆ. ಅಡ್ಜೆಸ್ಟ್ಮೆಂಟ್ ಆಟ 2 ಪಕ್ಷಗಳ ನೀತಿಗೆಟ್ಟ ರಾಜಕಾರಣಕ್ಕೆ ಹಿಡಿದ ಕನ್ನಡಿ. ಮಂಡ್ಯ ಜಿಲ್ಲೆ ಒಂದರಲ್ಲೇ ಪ್ರತಿ ಕ್ಷೇತ್ರಕ್ಕೆ 10-20 ಕೋಟಿ ರೂ. ಖರ್ಚು. 10-20 ಕೋಟಿ ರೂ. ವ್ಯಯಿಸಿ ಮತ ವಿಭಜನೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
135 ಸೀಟುಗಳ ಅಮಲಿನಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ತೇಲುತ್ತಿದೆ. ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ಹುಚ್ಚಾಟ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಟ್ವೀಟ್ ಮೂಲಕ ಕಿಡಿಕಾರಿದೆ. ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ಅಪಮಾನಕರ ಸೋಲು ಮರೆತು ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸ್ತಿರುವುದು ವಿಕೃತಿಯ ಪರಮಾವಧಿ. ಜಾತಿ, ಧರ್ಮ ಒಡೆದು, ಮನಸ್ಸುಗಳ ನಡುವೆ ದ್ವೇಷದ ಬೆಂಕಿ ಬಿತ್ತಿ, ಪರಸ್ಪರ ವ್ಯವಹಾರದ ಪರಿಣಾಮವೇ ಈ 135 ಸೀಟು ಎಂದು ಟ್ವೀಟ್ ಮಾಡಿದೆ.
135 ಸೀಟುಗಳ ಅಮಲಿನಲ್ಲಿ ತೇಲುತ್ತಿರುವ @INCKarnataka ಪಕ್ಷ, ‘ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು’ ಎಂಬಂತೆ ಹುಚ್ಚಾಟ ಆಡುತ್ತಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು,ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸುತ್ತಿರುವುದು ವಿಕೃತಿಯ ಪರಮಾವಧಿ.1/6#ಬಿಜೆಪಿ_ಕಾಂಗ್ರೆಸ್_ಭಾಯಿ_ಭಾಯಿ
— Janata Dal Secular (@JanataDal_S) June 14, 2023
ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 9 ವರ್ಷ ಹಿನ್ನೆಲೆ ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಬಿಜೆಪಿ ಮಹಾ ಸಂಪರ್ಕ ಅಭಿಯಾನದ ಭಾಗವಾಗಿ ಭೇಟಿ ಮಾಡಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಜೂ.18ರಿಂದ ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. https://sevasindhugs.karnataka.gov.in ಲಿಂಕ್ ಬಳಸಿಕೊಂಡು ಮೊಬೈಲ್, ಕಂಪ್ಯೂಟರ್, ಲ್ಯಾಪ್ಟ್ಯಾಪ್ ಮೂಲಕ ನೋಂದಾಯಿಸಬಹುದು. ಆಧಾರ್ ಕಾರ್ಡ್, ಗ್ರಾಹಕರ ಐಡಿಗಳ ಮಾಹಿತಿ ನೋಂದಣಿ ಮಾಡಬೇಕು. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದ ಯಾವುದೇ ವಿದ್ಯುತ್ ಕಚೇರಿಯಲ್ಲಿ ನೋಂದಣಿ ಮಾಡಬಹುದಾಗಿದೆ.
ಕೇಂದ್ರಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಸ್ತಿಲ್ಲವೆಂದು ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯನವರೇ ಪುಕ್ಕಟೆ ವಿದ್ಯುತ್ ಅಂತಾ ವಿದ್ಯುತ್ ದರ ಹೆಚ್ಚಿಸಿದ್ರಿ. ಗೃಹಜ್ಯೋತಿ ಯೋಜನೆಯ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ! ಈಗ ಅಕ್ಕಿ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನಾಟಕ ಮಾಡುತ್ತಿದ್ದೀರಿ ಎಂದು ಟ್ವೀಟ್ ಮಾಡಿದೆ.
ಮಾನ್ಯ @siddaramaiah ರವರೇ,
ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ!
ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ.
ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ…
— BJP Karnataka (@BJP4Karnataka) June 14, 2023
ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲೆ ಅವರಿಗೆ ವಿಶ್ವಾಸ ಇಲ್ಲ ಅನ್ನಿಸುತ್ತದೆ. ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ಇವರೇ ಫೀಲ್ಡಿಗೆ ಇಳಿದಿದ್ದಾರೆ. ಅಮಿತ್ ಶಾ, ಪ್ರಧಾನಿ ಮೋದಿ ಮಾತು ಪಕ್ಕಾ ನಿಜ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ಕಿಡಿಕಾರಿದರು.
ಇದು ಕೇಂದ್ರ ಸರ್ಕಾರದ ಷಡ್ಯಂತ್ರ. ಎಷ್ಟೇ ಷಡ್ಯಂತ್ರ ಮಾಡಿದರು ಪ್ರಯತ್ನ ಮಾಡುತ್ತೇವೆ. ತೆಲಂಗಾಣದವರು 100% ಕೊಡುತ್ತೇವೆ ಅಂತ ಇನ್ನೂ ಹೇಳಿಲ್ಲ. ನಾವು ಉಚಿತವಾಗಿ ಅಕ್ಕಿ ಕೊಡಬೇಕು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತೆ. ನಾಳೆ ನಿಖರವಾದ ಮಾಹಿತಿ ಸಿಗುತ್ತೆ. ನಾವು ಉಚಿತ ಅಕ್ಕಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ವಿಳಂಬ ಆದರೆ ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಜುಲೈ 1ರಿಂದ ಅನ್ನಭಾಗ್ಯ ಯೋಜನೆ ಜಾರಿಯಾಗಲ್ಲ ಎನ್ನಲಾಗುತ್ತಿದ್ದು, BPL, ಅಂತ್ಯೋದಯ ಕಾರ್ಡ್ದಾರರಿಗೆ 10 ಕೆ.ಜಿ ಅಕ್ಕಿ ವಿತರಣೆ ಡೌಟು ಎನ್ನಲಾಗುತ್ತಿದೆ.
ಈ ಹಿಂದೆ ಕೊಡಲ್ಲ ಎಂದಿದ್ರೆ, ಬೇರೆ ರಾಜ್ಯಗಳಿಗೆ ಮನವಿ ಮಾಡುತ್ತಿದ್ದೇವು. ನಾಳೆ ತೆಲಂಗಾಣಕ್ಕೆ ಆಹಾರ ಸಚಿವ ಮುನಿಯಪ್ಪ ಹೋಗುತ್ತಿದ್ದಾರೆ. ಅಕ್ಕಿ ಪೂರೈಸಲು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಪಂಜಾಬ್ ಸರ್ಕಾರ ಮುಂದಿನ ವರ್ಷ ಅಕ್ಕಿ ಕೊಡುವುದಾಗಿ ಹೇಳಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರ ನಮಗೇನು ಪುಕ್ಕಟೆಯಾಗಿ ಅಕ್ಕಿ ಕೊಡುವುದಿಲ್ಲ. ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ನಾವು ದುಡ್ಡು ಕೊಡುತ್ತೇವೆ. ಖಾಸಗಿಯವರಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಪೂರೈಸಲ್ಲ ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದೆ. ಅಕ್ಕಿ ಪೂರೈಸಲು ಛತ್ತೀಸ್ಗಢ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಬಿಜೆಪಿಯವರು ಬಡವರ ವಿರೋಧಿಗಳು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಉಚಿತ ಅಕ್ಕಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಡೆಪ್ಯುಟಿ ಮ್ಯಾನೇಜರ್ 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದಿದ್ದರು. ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಯಾಕೆ ಪೂರೈಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ರೂ. ವೆಚ್ಚ ಆಗಲಿದೆ. ಪ್ರತಿ ವರ್ಷಕ್ಕೆ 10,092 ಕೋಟಿ ರೂ. ಬೇಕು. ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ FCI ಡೆಪ್ಯುಟಿ ಮ್ಯಾನೇಜರ್ ಜೊತೆ ಚರ್ಚೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಡೆಪ್ಯುಟಿ ಮ್ಯಾನೇಜರ್ ಜೂ.12ರಂದು ಪತ್ರ ಬರೆದಿದ್ದಾರೆ. ಜೂನ್ 12ರಂದು ಹೆಚ್ಚುವರಿ ಅಕ್ಕಿ ಕೊಡುವುದಾಗಿ ಒಪ್ಪಿಗೆ ನೀಡಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದರು.
ಈಗಾಗಲೇ ನಾವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಈಗಾಗಲೇ ಒಂದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಐದು ಗ್ಯಾರಂಟಿಗಳಲ್ಲಿ ಅನ್ನಾಭಾಗ್ಯ ಯೋಜನೆಯೂ ಒಂದು. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದ್ದೇವೆ. BPL, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ತಿಂಗಳಿಗೆ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಬೇಕು ಎಂದರು.
ಕೆಆರ್ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸಿರುವ ವಿಚಾರವಾಗಿ ಮಾತನಾಡಿದ ಮಂಡ್ಯದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ, KRS ಡ್ಯಾಂನಲ್ಲಿ ನೀರು ಬಹಳ ಕಡಿಮೆ ಇದೆ. ಅನಿರ್ವಾಯವಾಗಿ KRS ಡ್ಯಾಂನಿಂದ ನಾಲೆಗೆ ನೀರು ಬಿಡಬೇಕಾಗಿತ್ತು. ಡ್ಯಾಂನಿಂದ ಮೂರ್ನಾಲ್ಕು TMC ನೀರು ಮಾತ್ರ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಬಿಜೆಪಿಯವರೇ ಫಸ್ಟ್ ಅಡ್ಜೆಸ್ಟ್ಮೆಂಟ್. ಹೆಚ್ಡಿ ಕುಮಾರಸ್ವಾಮಿಯವರು ನಾವು ಅಡ್ಜೆಸ್ಟ್ಮೆಂಟ್ ಅಂತ ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಒಂದೇ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ಳದೆ ಇರುವ ಪಕ್ಷ. ನಾವೂ ನೇರವಾಗಿ ಫೈಟ್ ಮಾಡಿರೋದು, ಅದಕ್ಕೆ 135 ಸೀಟು ಕೊಟ್ಟಿರೋದು. ತನಿಖೆ ಮಾಡೋದಕ್ಕೆ ಟೈಂ ಬೇಕು. ಎಲ್ಲವನ್ನು ತನಿಖೆ ಮಾಡುತ್ತೇವೆ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಕರಾವಳಿಯಲ್ಲಿ ಬಿಪರ್ಜಾಯ್ ಚಂಡಮಾರುತ ಆರ್ಭಟ ಹಿನ್ನೆಲೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹೈಅಲರ್ಟ್ ಘೋಷಣೆ ಮಾಡಿದೆ. ಮುಂದಿನ 5 ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಸಮುದ್ರದ ಹತ್ತಿರ ಓಡಾಟ, ಆಟವಾಡುವುದು ಕೂಡ ನಿಷೇಧ ಮಾಡಲಾಗಿದೆ.
ಬೆಂಗಳೂರು: ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋಟಗಾರಿಕೆ, ರೇಷ್ಮೆ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ, ಕೃಷಿ, ಮೀನುಗಾರಿಕೆ ಸೇರಿ 14 ಇಲಾಖೆಯ ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದು,
ಬೆಂಗಳೂರು: ವಿಚಾರಣೆ ವೇಳೆ ಪಿಎಸ್ಐ ಮೇಲೆ ಹಲ್ಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೌನೇಶ್ ಎಂಬಾತ ಹಲ್ಲೆ ಮಾಡಿರುವ ವ್ಯಕ್ತಿ.
ಶಿವಮೊಗ್ಗ: ವಿದ್ಯುತ್ ದರ ಏರಿಕೆ ಖಂಡಿಸಿ ಶಿವಮೊಗ್ಗದ ಮೆಸ್ಕಾಂ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮೆಸ್ಕಾಂ ಕಚೇರಿ ಮೇಲೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಮೆಸ್ಕಾಂ ಕಚೇರಿಯ ಗಾಜುಗಳು ಪುಡಿ ಪುಡಿಯಾಗಿವೆ. ಕೂಡಲೇ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಬೆಂಗಳೂರು: ಪ್ರತಾಪ್ ಸಿಂಹ ಹೇಳಿದ ತಕ್ಷಣ ತನಿಖೆ ಮಾಡಿಸಲು ಆಗುತ್ತಾ? ಸಂಸದ ಪ್ರತಾಪ್ ಸಿಂಹ ತನಿಖೆ ಮಾಡಿ ಅಂತ ಆಗ ಹೇಳಿದ್ನಾ? ಯಾವಾಗ, ಯಾರಿಂದ ತನಿಖೆ ಮಾಡಿಸಬೇಕು ಅಂತಾ ಗೊತ್ತು. ಹೊಂದಾಣಿಕೆ ರಾಜಕಾರಣ ಮಾಡಿದವರ ಹೆಸರನ್ನು ಹೇಳಲಿ. ಬಿಜೆಪಿಯಲ್ಲಿ ಯಾರು ಹೊಂದಾಣಿಕೆ ಮಾಡಿಕೊಂಡಿದ್ದರು ಹೇಳಲಿ. ಸಂಸದ ಪ್ರತಾಪ್ ಸಿಂಹಗೆ ಗೊತ್ತಿದ್ದರೆ ಅವರ ಹೆಸರನ್ನು ಹೇಳಲಿ.ರಾಜಕೀಯ ಜೀವನದಲ್ಲಿ ವಿಪಕ್ಷ ನಾಯಕರ ಜತೆ ಮಾತೇ ಆಡಲ್ಲ. ಪ್ರತಾಪ್ ಸಿಂಹ ಎಳಸು, ಆತನಿಗೆ ರಾಜಕೀಯದ ಪಕ್ವತೆ ಇಲ್ಲ. ಬಾಯಿಗೆ ಬಂದಂತೆ ಏನೇನೋ ಮಾತಾಡ್ತಾನೆ ಅವನು ಎಂದು ಕಾಂಗ್ರೆಸ್, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕೋಲಾರ: ಪ್ರಜಾಯಾತ್ರೆ ಸಮಾವೇಶಗಳಲ್ಲಿ ಭಾಷಣ ಮಾಡುವಾಗ ನಮ್ಮ ಪಕ್ಷಕ್ಕೆ ಮತ ನೀಡಿದರೆ ಸಹಕಾರ ಬ್ಯಾಂಕ್ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಒಂದಿದ್ದು ಮತ ಪಡೆದ ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡದೆ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆಂದು ಸಾಲ ವಸೂಲಿಗಾರರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಗ್ರಾಮದಲ್ಲಿ ಪ್ಲೆಕ್ಸ್ ಹಾಕಿ ನಿರ್ಭಂಧ ಹೇರಿ, ಸಾಲ ಕೇಳಲು ಬಾರದಂತೆ ಮಹಿಳೆಯರು ಎಚ್ಚರಿಕೆ ಕೊಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ದಾವಣಗೆರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗುಪ್ತ ದಾವಣಗೆರೆ ಹೊರ ವಲಯದ ಖಾಸಗಿ ರೇಸಾರ್ಟ್ನಲ್ಲಿ ನಿನ್ನೆ (ಜೂ.13) ರಂದು ಗುಪ್ತ ಮಾತುಕಥೆ ನಡೆಸಿದ್ದಾರೆ. ರೆಸಾರ್ಟ್ನಲ್ಲಿ ಬಾಗಿಲು ಹಾಕಿಕೊಂಡು ಸುಮಾರು 25 ನಿಮಿಷಗಳ ಕಾಲ ಸುಧೀರ್ಘ ಚರ್ಚೆ ನಡೆಸಿದೆ.
ಕೊಪ್ಪಳ: ಕೊಪ್ಪಳ ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಕಚೇರಿಯಲ್ಲಿ ಮಣ್ಣು ಗಣಿಗಾರಿಕೆ ಪರ್ಮಿಷನ್ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಹೊಡೆದಾಟದ ವೇಳೆ ಅಧಿಕಾರಿಗಳ ಎದುರೇ ಗನ್ ತೋರಿಸಿ ವ್ಯಕ್ತಿ ಕೂಗಾಡಿದ್ದಾನೆ. ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮಣ್ಣು ಗಣಿಗಾರಿಕೆಗೆ ಸಂಬಂಧ ಗಲಾಟೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ: ರಣದೀಪ್ ಸುರ್ಜೇವಾಲ ನೇರವಾಗಿ ಕರ್ನಾಟಕ ಸರ್ಕಾರ ನಡೆಸ್ತಿದ್ದಾರೆ ಅನ್ನಿಸುತ್ತೆ. ಕರ್ನಾಟಕದ ಮುಖ್ಯಮಂತ್ರಿ ಆಗಲಿ, ಉಪಮುಖ್ಯಮಂತ್ರಿ ಆಗಲಿ ಸರ್ಕಾರ ನಡೆಸುತ್ತಿಲ್ಲ. ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ನಿನ್ನೆ ನಡೆದ ಶಾಂಗ್ರೀಲಾ ಹೊಟೆಲ್ ಘಟನೆ ನೋಡಿದರೇ, ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಫ್ರೀ ಹ್ಯಾಂಡ್ ಕೊಡುತ್ತಿಲ್ಲ.
ರಾಯಚೂರು: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿದೆ. ವಿಷ್ಣು(26), ಶಿವರಾಮ್(28), ಬಲರಾಮ್(30) ಮೃತ ದುರ್ದೈವಿಗಳು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ: ನೋಡಿ ಕುಮಾರಸ್ವಾಮಿ ರಾಜ್ಯದ ಜನತೆ ಅವರನ್ನು ಎಲ್ಲಿ ಕೂರಿಸಿದ್ದಾರೆ ಅಂತ ಅರ್ಥ ಮಾಡಿಕೊಳ್ಳಬೇಕು. ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಾರಲ್ಲ ಈ ತರಹ ಬೇಜವಾಬ್ದಾರಿಯಿಂದ, ಅವರಿಗೆ ಜನರು ತಕ್ಕ ಉತ್ತರ ಕೊಟ್ಟಿಲ್ವಾ? 19 ಸೀಟ್ ಗೆಲ್ಲಿಸಿ ಎಲ್ಲಿ ಕೂರಿಸಬೇಕು ಕೂರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ 45 ಪರ್ಸೆಂಟ್ ಸರ್ಕಾರ ಆರೋಪಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ.
ವಿಜಯಪುರ: ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನವ ವಿವಾಹಿತರು ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಹೊರವಲಯದ ಸೊಲ್ಲಾಪುರ ಬೈಪಾಸ್ ಬಳಿ ತಡರಾತ್ರಿ ನಡೆದಿದೆ.
ತುಮಕೂರು: ಇಂದು (ಜೂ.14) ಪಾವಗಡ ಸೋಲಾರ್ ಪಾರ್ಕ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.45 ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಪಾವಗಡಕ್ಕೆ ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ತೆರಳಲಿದ್ದಾರೆ.
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜೂನ್ 18ರವರೆಗೆ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರು ಎಚ್ಎಎಲ್, ಕಾರವಾರ, ಹೊಸಕೋಟೆ, ತಿಪಟೂರು, ಗೋಣಿಕೊಪ್ಪಲು, ಕೋಟ, ಹೊನ್ನಾವರ, ಮಾಲೂರು, ಅಂಕೋಲಾ, ಮಂಕಿ, ಬೆಳ್ತಂಗಡಿ, ಹುಣಸೂರು, ಕದ್ರಾ, ಬೇಲಿಕೇರಿ, ಪುತ್ತೂರು, ಕುಂದಾಪುರ, ಜ್ಞಾನಭಾರತಿ, ದೊಡ್ಡಬಳ್ಳಾಪುರ, ಟಿ ನರಸೀಪುರ, ಸರಗೂರು, ಭಾಗಮಂಡಲದಲ್ಲಿ ಮಳೆಯಾಗಿದೆ.
ಬೆಂಗಳೂರು: ನಗರದಲ್ಲಿ ನಿನ್ನೆ(ಜೂನ್ 13) ಭಾರೀ ಮಳೆಯಾಗಿದ್ದು ವಿದ್ಯುತ್ ತಂತಿ ತಗುಲಿ ಓರ್ವ ರೈತ ಮತ್ತು ಹಸು ಮೃತಪಟ್ಟ ಘಟನೆ ಕಾಡುಗೋಡಿ ಸಮೀಪದ ಚನ್ನಸಂದ್ರದಲ್ಲಿ ನಡೆದಿದೆ. ಚನ್ನಸಂದ್ರ ನಿವಾಸಿ ಕೃಷ್ಣಪ್ಪ (55) ಮೃತ ರೈತ.
ಬೆಂಗಳೂರು: ಹೊಸ ಸರ್ಕಾರ ರಚನೆ ಬಳಿಕ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಜುಲೈ 7ರಂದು ಹೊಸ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
Published On - 7:13 am, Wed, 14 June 23