ತಪ್ಪು ಕಲ್ಪನೆಗಳಿಂದ ಅಂಗಾಂಗ ದಾನಕ್ಕೆ ಜನರ ಹಿಂದೇಟು, 3ನೇ ಸ್ಥಾನಕ್ಕೆ ಕುಸಿದ ರಾಜ್ಯ

ಕರ್ನಾಟಕದಲ್ಲಿ ಅಂಗಾಂಗ ದಾನದ ಪ್ರಮಾಣ ಕುಸಿದಿದೆ. ಮೂಢನಂಬಿಕೆಗಳು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ಮತ್ತು ಸರ್ಕಾರ ಜಾಗೃತಿ ಮೂಡಿಸುತ್ತಿದ್ದರೂ, ಜನರು ಅಂಗಾಂಗ ದಾನದಿಂದ ಹಿಂದೇಟು ಹಾಕುತ್ತಿದ್ದಾರೆ. ಕಿಡ್ನಿ ಮತ್ತು ಯಕೃತ್ತು ದಾನಕ್ಕಾಗಿ ರೋಗಿಗಳು ವರ್ಷಗಟ್ಟಲೆ ಕಾಯಬೇಕಾಗಿದೆ. ಅಂಗಾಂಗ ದಾನದ ಮಹತ್ವವನ್ನು ಜನರಿಗೆ ತಿಳಿಸುವುದು ಅತ್ಯಗತ್ಯ.

ತಪ್ಪು ಕಲ್ಪನೆಗಳಿಂದ ಅಂಗಾಂಗ ದಾನಕ್ಕೆ ಜನರ ಹಿಂದೇಟು, 3ನೇ ಸ್ಥಾನಕ್ಕೆ ಕುಸಿದ ರಾಜ್ಯ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jan 29, 2025 | 12:59 PM

ಬೆಂಗಳೂರು, ಜನವರಿ 29: ರಾಜ್ಯದ ಜನರು ಅಂಗಾಂಗ ದಾನಕ್ಕೆ (Organ Donation) ಹಿಂದೇಟು ಹಾಕುತ್ತಿದ್ದು, ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಅಂಗಾಂಗ ದಾನದ ಬಗ್ಗೆ ವೈದ್ಯರು ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮುಖ್ಯಮಂತ್ರಿಗಳು ಅಂಗಾಂಗ ದಾನಿಗಳನ್ನ ಗೌರವಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ. ಇಷ್ಟಾದರೂ ಮೂಢನಂಬಿಕೆಗಳು ಅಡ್ಡಿ ಉಂಟು ಮಾಡುತ್ತಿವೆ.

ಈ ಜನ್ಮದಲ್ಲಿ ಕಣ್ಣು, ಕಿಡ್ನಿ, ಚರ್ಮ, ಲಿವರ್, ಹೃದಯ, ಕರುಳು ಹೀಗೆ ಅಂಗಾಂಗಳನ್ನು ನೀಡಿದರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯತೆ ಕಾಡುತ್ತದೆ ಎಂಬ ಮಾತನ್ನು ನಂಬಿ ಜನರು ಅಂಗಾಂಗ ದಾನದಿಂದ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಅಂಗಾಂಗ ದಾನ ಶೇ 30ರಷ್ಟು ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಜಾಗೃತಿ ಬಳಿಕ ಕೊಂಚ ಸುಧಾರಣೆಯಾಗಿದೆ ಆದರೂ, ಮೂಢನಂಬಿಕೆ ಅಂಗಾಂಗ ಕುಸಿತಕ್ಕೆ ಕಾರಣವಾಗಿದ್ದು ಜನರು ಇದರಿಂದ ಹೊರ ಬರಬೇಕಿದೆ.

ಇದನ್ನೂ ಓದಿ: ಅಂಗಾಂಗ ದಾನಕ್ಕೂ ಮೊದಲು ಈ ವಿಷಯಗಳು ನಿಮಗೆ ತಿಳಿದಿರಲಿ

ಅಂಗಾಂಗ ದಾನಗಳ ಪೈಕಿ ಚರ್ಮ ಹಾಗು ಕಿಡ್ನಿ ದಾನದ ಸಂಖ್ಯೆ ತೀರಾ ಇಳಮುಖ ಕಂಡಿದೆ. ಅಂಗಾಂಗ ದಾನ ಸಿಗದ ಕಾರಣ ಸರಿಸುಮಾರು 5 ವರ್ಷ ಕಿಡ್ನಿಗಾಗಿ ರೋಗಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಯಕೃತ್ತು ಪಡೆಯಲು ನಾಲ್ಕುವರೆ ವರ್ಷ ವೈಟಿಂಗ್ ಪಿರಿಯಡ್ ಇದ್ದು, ಸರ್ಕಾರದ ಮಹತ್ವಾಕಾಂಕ್ಷೆ ಜೀವನ ಸಾರ್ಥಕತೆ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ವೈದ್ಯರು ಅಂಗಾಂಗದಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಅಂಗಾಂಗ ದಾನದ ಬಗ್ಗೆ ವೈದ್ಯರು ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಾಕಷ್ಟು ಅರಿವು ಮೂಡಿಸುತ್ತಿದೆ. ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ನೂರಾರು ಜನರಿಗೆ ಬೆಳಕಾಗುವ ಕಲ್ಪವೃಕ್ಷವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ