Karnataka rains: ಮಂಗಳೂರಿನಲ್ಲಿ ಕೊನೆಗೂ ಬಂತು ಮಳೆ; ಕೊಪ್ಪಳ, ಗದಗ ಸೇರಿ ರಾಜ್ಯದ ಹಲವೆಡೆ ವರ್ಷಧಾರೆ

ಕೊನೆಗೂ ಮಂಗಳೂರಿಗೆ ವರುಣನ ಸಿಂಚನವಾಗಿದ್ದು, ಸಂಜೆ ವೇಳೆಗೆ ನಗರದಾದ್ಯಂತ ಭಾರೀ ಮಳೆಯಾಗಿದೆ. ಇದರಿಂದ ಕಡು ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿಗರು ತುಸು ನಿರಾಳರಾಗುವಂತಾಗಿದೆ.

ಬೆಂಗಳೂರು: ನೀರಿನ ಅಭಾವದಿಂದ ಕಂಗೆಟ್ಟಿದ್ದ ಮಂಗಳೂರಿನಲ್ಲಿ ಹಾಗೂ ಕೊಪ್ಪಳ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಗುರುವಾರ ಸಂಜೆ (Karnataka Rains) ಮಳೆಯಾಗಿದೆ. ಕೊನೆಗೂ ಮಂಗಳೂರಿಗೆ ವರುಣನ ಸಿಂಚನವಾಗಿದ್ದು, ಸಂಜೆ ವೇಳೆಗೆ ನಗರದಾದ್ಯಂತ ಭಾರೀ ಮಳೆಯಾಗಿದೆ. ಇದರಿಂದ ಕಡು ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿಗರು ತುಸು ನಿರಾಳರಾಗುವಂತಾಗಿದೆ. ಮಂಗಳೂರಿನ ನದಿಗಳಲ್ಲಿ ನೀರು ಬತ್ತಿಹೋಗಿ ನಗರದಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಾಹಾಕಾರ ಸೃಷ್ಟಿಯಾಗಿತ್ತು. ಪ್ರಸಿದ್ಧ ಯಾತ್ರಾಸ್ಥಳ ಕಟೀಲು ದುರ್ಗಾಪರಮೇಶ್ವರಿ ದೇಗುಲದಲ್ಲಿಯೂ ನೀರಿಗೆ ತತ್ವಾರ ಉಂಟಾಗಿತ್ತು.

ಮತ್ತೊಂದೆಡೆ, ಉತ್ತರ ಕರ್ನಾಟಕ ಭಾಗದ ಕೊಪ್ಪಳ ನಗರದಲ್ಲಿಯೂ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ನಗರದ ಹೊರವಲಯದಲ್ಲಿರುವ ವಿಶ್ವತೇಜ ಮೋಟಾರ್ಸ್ ಬಳಿ ಮರ ಬಿದ್ದು ಡಸ್ಟರ್‌ ಕಾರಿಗೆ ಹಾನಿಯಾಗಿದೆ. ವಿಶ್ವತೇಜ ಮೋಟರ್ಸ್​​​ನಲ್ಲಿ ಸರ್ವಿಸ್​​ಗಾಗಿ ಕಾರು ನಿಲ್ಲಿಸಲಾಗಿತ್ತು.

ಗದಗ-ಬೆಟಗೇರಿ ಅವಳಿ ನಗರ ಸೇರಿ ಹಲವಡೆ ಭಾರಿ ಮಳೆಯಾಗಿದೆ. ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಪರಿಣಾಮವಾಗಿ ಮುಂಗಾರು ಮಳೆಗಾಗಿ‌ ಕಾಯುತ್ತಿರೋ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸುಮಾರು ಅರ್ಧ ತಾಸು ಮಳೆಯಾಗಿದೆ.

ಬಾಗಲಕೋಟೆಯ ಇಳಕಲ್ ನಗರದಲ್ಲಿ ಕೂಡ ಸುಮಾರು ಅರ್ಧ ಗಂಟೆವರೆಗೆ ಮಳೆಯಾಗಿದೆ. ಇದರಿಂದ ಇಳಕಲ್ ಭಾಗದ ರೈತರು ಸಂತಸಗೊಂಡಿದ್ದಾರೆ.

ಈ ಮಧ್ಯೆ, ಸಾಮಾನ್ಯಕ್ಕಿಂತ ಒಂದು ವಾರ ತಡವಾಗಿ ಮುಂಗಾರು ಮಾರುತ ಕೇರಳ ಪ್ರವೇಶಿಸಿದ್ದು, ಮುಂದಿನ 24ರಿಂದ 48 ಗಂಟೆಗಳಲ್ಲಿ ಕರ್ನಾಟಕ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಓದಿ: Karnataka Rains: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಅಬ್ಬರ, ಕರ್ನಾಟಕದ ಕರಾವಳಿ ಭಾಗದಲ್ಲಿ 3 ದಿನ ಕಟ್ಟೆಚ್ಚರ, ಯೆಲ್ಲೋ ಅಲರ್ಟ್​​ ಘೋಷಣೆ

ಮುಂದಿನ 48 ಗಂಟೆಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ತಮಿಳುನಾಡು, ಕರ್ನಾಟಕ, ಮತ್ತು ನೈಋತ್ಯ, ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿ, ಈಶಾನ್ಯ ರಾಜ್ಯಗಳು ಮತ್ತು ಕೇರಳದ ಉಳಿದ ಭಾಗಗಳಲ್ಲಿ ಮುಂಗಾರು ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂಗಾರು ಒಂದು ವಾರ ತಡವಾಗಿದ್ದರೂ ಕೂಡ ಬಿಪರ್​ಜಾಯ್ ಚಂಡಮಾರುತದಿಂದಾಗಿ ಮಳೆಯ ಪ್ರಭಾವ ಹೆಚ್ಚಿರುವ ಸಾಧ್ಯತೆ ಇದೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:57 pm, Thu, 8 June 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us