
ಬೆಂಗಳೂರು, ಆಗಸ್ಟ್ 19: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದಲ್ಲಿ ಏರಿಳಿತಗಳು ಕಂಡುಬಂದಿವೆ. ಕೃಷ್ಣಾ ನದಿ ಜಲಾನಯನ ಪ್ರದೇಶದ ಆಲಮಟ್ಟಿ ಜಲಾಶಯವು ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಬೃಹತ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಕೆಆರ್ಎಸ್ ಸೇರಿದಂತೆ ಪ್ರಮುಖ ಡ್ಯಾಂಗಳಿಗೆ ಒಳಹರಿವು ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಮಂಡ್ಯ ಭಾಗದ ರೈತರಲ್ಲಿ ಆತಂಕ ಮೂಡಿದ್ದು, ನದಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿ ಡ್ಯಾಂ ಭರ್ತಿಯಾಗಿದ್ದು, ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ಗೆ ಪ್ರಸ್ತುತ 519.56 ಮೀಟರ್ ನೀರಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದಲ್ಲಿ ಮಳೆ ಕೊರತೆಯಿಂದ ಒಳಹರಿವು 1,752 ಕ್ಯೂಸೆಕ್ಗೆ ಕುಸಿದಿದೆ. ಡ್ಯಾಂ ಗರಿಷ್ಠ ಮಟ್ಟ 124.80 ಅಡಿಯಿದ್ದು, ಇಂದಿನ ಮಟ್ಟ 109.22 ಅಡಿಯಾಗಿದೆ (30.944 TMC). ರೈತರ ಬೆಳೆಗೆ ನೀರು ನೀಡದ ಸರ್ಕಾರ, ತಮಿಳುನಾಡಿಗೆ ಕಾವೇರಿ ನದಿಗೆ 2,294 ಕ್ಯೂಸೆಕ್ ನೀರು ಬಿಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಮೈಸೂರಿನ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84.00 ಅಡಿಯಿದ್ದು, ಪ್ರಸ್ತುತ 77.93 ಅಡಿ (15.87 TMC) ನೀರಿದೆ.
ಚಿಕ್ಕಮಗಳೂರು/ಶಿವಮೊಗ್ಗ ಗಡಿಭಾಗದ ಭದ್ರಾ ಜಲಾಶಯದ ಗರಿಷ್ಠ ಮಟ್ಟ 186.00 ಅಡಿಯಿದ್ದು, ಪ್ರಸ್ತುತ ಮಟ್ಟ 174.00 ಅಡಿಯಾಗಿದೆ (57.257 TMC).
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819.00 ಅಡಿಯಿದ್ದು, ಪ್ರಸ್ತುತ ನೀರಿನ ಮಟ್ಟ 1795.35 ಅಡಿಗೆ (ಶೇ 55.90) ತಲುಪಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ