Karnataka Weather: ದಕ್ಷಿಣ ಕನ್ನಡ, ಉಡುಪಿಯಲ್ಲಿ ಶುಕ್ರವಾರದಿಂದ 3 ದಿನ ಭಾರೀ ಮಳೆ; ಆರೆಂಜ್ ಅಲರ್ಟ್ ಘೋಷಣೆ
Monsoon 2021: ಇಂದು ಮುಂಜಾನೆಯಿಂದಲೇ ಮಲೆನಾಡು, ಕರಾವಳಿಯಲ್ಲಿ ಮಳೆ ಶುರುವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಮೂರು ದಿನ ಭಾರೀ ಮಳೆಯಾಗುವ ಅಂದಾಜಿದೆ.

ಮಂಗಳೂರು: ಕರ್ನಾಟಕದಲ್ಲಿ ನಾಳೆಯಿಂದ ಈ ಸಾಲಿನ ಮುಂಗಾರು ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ನಾಳೆಯಿಂದ ಕರಾವಳಿ ಭಾಗಗಳಲ್ಲಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮುಂಜಾನೆಯಿಂದಲೇ ಮಲೆನಾಡು, ಕರಾವಳಿಯಲ್ಲಿ ಮಳೆ ಶುರುವಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದಿನಿಂದಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಜೂನ್ 13ರವರೆಗೂ ಮಳೆ ತೀವ್ರವಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ 3 ದಿನ ಗುಡುಗು ಸಿಡಿಲು ಸಹಿತ ಮಳೆ ಬೀಳಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯಿಂದ ಭೂಕುಸಿತವಾಗುವ ಸಾಧ್ಯತೆಯಿದೆ ಎಂದೂ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ, ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ವರದಿಯನುಸಾರ ಎರಡನೆಯ ದೀರ್ಘಾವಧಿ ಅಂದಾಜಿನಲ್ಲಿ ಈ ಬಾರಿ ಮುಂಗಾರು ಪ್ರಮಾಣ ಶೇ. 101ರಷ್ಟಿರಲಿದೆ. ಇದು ಎರಡು ವರ್ಷಗಳ ದೀರ್ಘಾವಧಿ ಸರಾಸರಿ (LPA) ಮಳೆ ಪ್ರಮಾಣದ ಆಧಾರದಲ್ಲಿದೆ. LPA ಅಂದ್ರೆ ದೀರ್ಘಾವಧಿ ಮಳೆ ಸರಾಸರಿ 88 ಸೆಂಟಿ ಮೀಟರ್ ಪ್ರಮಾಣದಲ್ಲಿರುತ್ತದೆ. ಇದನ್ನು 1961ರ ಮತ್ತು 2010ರ ನಡುವೆ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಾದ ಮಳೆಯನ್ನಾಧರಿಸಿ ಲೆಕ್ಕ ಹಾಕಲಾಗಿದೆ.
2020 ಮತ್ತು 2019 ಮುಂಗಾರು ಸಾಲಿನಲ್ಲಿ LPA ಮಳೆ ಸರಾಸರಿ ಅನುಕ್ರಮವಾಗಿ 110 % ಮತ್ತು 109 % ಪ್ರಮಾಣದಲ್ಲಿತ್ತು. 1996, 1997 ಮತ್ತು 1998 ಮುಂಗಾರು ಸಾಲಿನಲ್ಲಿ 103.4 %, 102.2 % ಮತ್ತು 104 % ಪ್ರಮಾಣದ ಮಳೆಯಾಗಿತ್ತು.
ಜೂನ್ ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಮುಂಗಾರು ಸಾಲಿನಲ್ಲಿ ಭಾರತದಲ್ಲಿ ಶೇ. 70ರಷ್ಟು ಮಳೆಯಾಗುತ್ತದೆ. ಇದು ಅಕ್ಕಿ, ಸೋಯಾಬೀನ್, ಹತ್ತಿ ಬೆಳೆಗೆ ನಿರ್ಣಾಯಕವಾಗಿರುತ್ತದೆ. ಕಳೆದ ಎರಡು ವರ್ಷಗಳಿಂದ ಇದು ಉತ್ತಮವಾಗಿದೆ. ಕೊವಿಡ್ ಸೋಂಕು ಕಾಲದಲ್ಲೂ ಕಳೆದ ವರ್ಷ ಉತ್ತಮ ಮಳೆಯಾಗಿ ರೈತಾಪಿ ರ್ಗಕ್ಕೆ ಆಶಾದಾಯಕವಾಗಿತ್ತು. ಈ ವರ್ಷವೂ ಇದೇ ನಿರೀಕ್ಷೆಯಲ್ಲಿದೆ ರೈತಾಪಿ ವರ್ಗ.
(Karnataka Weather Monsoon 2021 orange alert announced in coastal areas)
Published On - 9:10 am, Thu, 10 June 21