ಬೆಂಗಳೂರು, ಸೆಪ್ಟೆಂಬರ್ 13: ಅದೊಂದು ಅಚಾನಕ್ಕಾಗಿ ನಡೆದ ಘಟನೆ. ಕಬಾಬ್ ಅಂಗಡಿ ಮಾಲೀಕನ ಯಡವಟ್ಟಿಗೆ ದೊಡ್ಡ ಅನಾಹುತವೇ ನಡೆದು ಹೋಗಿದೆ. ನಿಂತಿದ್ದ ವಾಹನಗಳು ನಿಂತಲ್ಲೇ ಧಗ ಧಗನೆ ಹೊತ್ತಿ (fire) ಉರಿದಿದೆ. ವಿವೇಕನಗರದ ಈಜಿಪುರದಲ್ಲಿ ಘಟನೆ ಸಂಭವಿಸಿದೆ. ಸೆಪ್ಟೆಂಬರ್ 12 ರ ರಾತ್ರಿ 9 ಗಂಟೆಯ ಸಮಯ. ವಿವೇಕನಗರದ ಈಜಿಪುರ ರಸ್ತೆ ಅಕ್ಕಪಕ್ಕದಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಿದ್ದು ದಿನ ನಿತ್ಯ ವ್ಯಾಪಾರ ವಹಿವಾಟು ನಡಿತಾ ಇರುತ್ತೆ. ಆದರೆ ನಿನ್ನೆ ಎಂದಿನಂತೆ ಇರಲೇ ಇಲ್ಲ. ನೋಡ ನೋಡ್ತಿದ್ದಂತೆ ಒಂದು ಆಟೋ, ಐದು ಬೈಕ್ ಸುಟ್ಟು ಕರಕಲಾಗಿದ್ದರೆ ಒಂದು ಬುಲೆಟ್ ಅರ್ಧ ಸುಟ್ಟು ಹೋಗಿತ್ತು.
ಅಷ್ಟಕ್ಕೂ ಆಗಿದ್ದೇನು?
ಹಾಗಾದರೆ ಅಲ್ಲಿ ಆಗಿದ್ದೇನು ಅಂದರೆ, ರಸ್ತೆ ಪಕ್ಕದಲ್ಲಿರುವ ಈ ಬಿರಿಯಾನಿ ಅಂಗಡಿಯಲ್ಲಿ ಕಬಾಬ್ ಮಾಡಲಾಗ್ತಿತ್ತು. ಈ ವೇಳೆ ಸಿಲಿಂಡರ್ ಖಾಲಿಯಾಗಿದೆ. ಸಿಲಿಂಡರ್ ಬದಲಾಯಿಸುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ಮಾಲೀಕ ಸಿಲಿಂಡರ್ನನ್ನ ರಸ್ತೆಗೆ ತಳ್ಳಿದ್ದಾನೆ. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಆಟೋಗೆ ಮೊದಲು ಬೆಂಕಿ ತಗುಲಿದರೆ, ಅದೇ ಬೆಂಕಿ ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ಬೈಕ್ ಗಳಿಗು ಹೊತ್ತಿಕೊಂಡಿದ್ದು ಹೊತ್ತಿ ಉರಿದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಇಷ್ಟಾಗುತ್ತಿದ್ದಂತೆ ಅಕ್ಕಪಕ್ಕದ ಅಂಗಡಿ ನಿವಾಸಿಗಳು ನೀರು ಹಾಕಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ಆರಿಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಶ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ ಸಂಪೂರ್ಣ ಪೂರ್ವ ನಿಯೋಜಿತ ದುಷ್ಕೃತ್ಯ: ಆರ್ ಅಶೋಕ್
ಅದೇನೇ ಹೇಳಿ ಒಂದು ಸಣ್ಣ ಯಡವಟ್ಟು ಭಾರೀ ಅನಾಹುತಕ್ಕೆ ಕಾರಣವಾಗಿದೆ. ಪ್ರೀತಿಯಿಂದ ಖರೀದಿಸಿದ್ದ ಬೈಕ್ ಕಳೆದುಕೊಂಡ ಮಾಲೀಕರು ಕಣ್ಣೀರು ಹಾಕುವಂತಾಗಿದೆ. ಇನ್ನು ಘಟನೆ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.