ಹೈದರಾಬಾದ್ ನಿಜಾಮನ ದಬ್ಬಾಳಿಕೆ ವಿರುದ್ಧ ನಡೆದ ಹೋರಾಟ ನೂರಾರು ಜನರ ತ್ಯಾಗ, ಬಲಿದಾನದ ಪ್ರತೀಕ ಕಲ್ಯಾಣ ಕರ್ನಾಟಕ ಉತ್ಸವ

| Updated By: ವಿವೇಕ ಬಿರಾದಾರ

Updated on: Sep 17, 2024 | 7:33 AM

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳು 2 ದಿನದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಸ್ವತಂತ್ರವಾಗಲು ನಡೆದ ಹೋರಾಟ, ತ್ಯಾಗ-ಬಲಿದಾನ ಕೊನೆಗೆ ಪಟೇಲರ ನಿರ್ಧಾರದಿಂದ ಹೈದರಾಬಾದ್​ ಕರ್ನಾಟಕ ಭಾರತದಲ್ಲಿ ವಿಲೀನವಾಗಿ ಕಲ್ಯಾಣ ಕರ್ನಾಟಕವಾದ ಮಾಹಿತಿ ಇಲ್ಲಿದೆ.

ಹೈದರಾಬಾದ್ ನಿಜಾಮನ ದಬ್ಬಾಳಿಕೆ ವಿರುದ್ಧ ನಡೆದ ಹೋರಾಟ ನೂರಾರು ಜನರ ತ್ಯಾಗ, ಬಲಿದಾನದ ಪ್ರತೀಕ ಕಲ್ಯಾಣ ಕರ್ನಾಟಕ ಉತ್ಸವ
ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ
Follow us on

ಭಾರತಕ್ಕೆ ಆಗಸ್ಟ್ 15 ಸ್ವಾತಂತ್ರ್ಯ ದಿನದ ಸಂಭ್ರಮವಾದರೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಜನರಿಗೆ ಮಾತ್ರ ಸೆಪ್ಟೆಂಬರ್ 17 ಸ್ವಾತಂತ್ರ್ಯ ದಿನದ ಸಂಭ್ರಮ. ಹೌದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳು 2 ದಿನದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಭಾಗದ ಜನರು ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದರೇ, ನಂತರ ನಮ್ಮದೇ ದೇಶದ ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕಾಯಿತು. ಕಲ್ಯಾಣ ಕರ್ನಾಟಕ ಸೇರಿದಂತೆ ಹೈದ್ರಾಬಾದ್ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಗಲು ಕಾರಣೀಭೂತರಾಗಿದ್ದು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್.

13 ತಿಂಗಳು ತಡವಾಗಿ ಲಭಿಸಿದ ಸ್ವಾತಂತ್ರ್ಯ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ಕೂಡಾ ಕಲ್ಯಾಣ ಕರ್ನಾಟಕಕ್ಕೆ ಮತ್ತು ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಪ್ರದೇಶದ ಜನರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ಸೆಪ್ಟೆಂಬರ್ 17 1948 ರಂದು. ಹೀಗಾಗಿ ಸೆಪ್ಟೆಂಬರ್ 17 ಅನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ನೀಡುವಾಗ ದೇಶದಲ್ಲಿ ಅನೇಕ ಸಂಸ್ಥಾನಗಳಿದ್ದವು. ಅವರಿಗೆ ಬ್ರಿಟಿಷರು, ಮೂರು ಅವಕಾಶಗಳನ್ನು ನೀಡಿದ್ದರು. ದೇಶಿಯ ಸಂಸ್ಥಾನದವರು, ಇಚ್ಚಿಸಿದರೆ ಭಾರತದ ಒಕ್ಕೂಟದಲ್ಲಾಗಲಿ, ಪಾಕಿಸ್ತಾನದಲ್ಲಾಗಲಿ ಅಥವಾ ಸ್ವತಂತ್ರವಾಗಿ ಕೂಡಾ ಇರಲು ಅವಕಾಶ ನೀಡಿದ್ದರು. ಆದರೆ ಸ್ವಾತಂತ್ರ್ಯ ನಂತರ ಬಹುತೇಕ ಸಣ್ಣಪುಟ್ಟ ಸಂಸ್ಥಾನಗಳು ದೇಶದಲ್ಲಿ ವಿಲೀನವಾದವು. ಆದರೆ ಜುನಾಗಡ, ಕಾಶ್ಮೀರ, ಹೈದರಾಬಾದ್ ನಿಜಾಮ ಸೇರಿದಂತೆ ಹಲವರು ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದರು.

ಆದರೆ, ಹೈದರಾಬಾದ್ ಸಂಸ್ಥಾನದ ವ್ಯಾಪ್ತಿಯಲ್ಲಿದ್ದ ಬಹುತೇಕರ ಆಸೆ ಹೈದ್ರಾಬಾದ ಸಂಸ್ಥಾನ ಕೂಡಾ ಸ್ವಾತಂತ್ರ್ಯ ಭಾರತದಲ್ಲಿ ವಿಲೀನವಾಗಬೇಕು. ಆ ಮೂಲಕ ಪ್ರಜಾಪ್ರಭುತ್ವ ಜಾರಿಯಾಗಬೇಕು ಎನ್ನುವದಾಗಿತ್ತು. ಆದರೆ ಅಂದಿನ ಹೈದರಾಬಾದ್ ನಿಜಾಮನಾಗಿದ್ದ ಮೀರ್ ಉಸ್ಮಾನ್ ಅಲಿಖಾನ್ ಮಾತ್ರ ಸ್ವತಂತ್ರವಾಗಿ ಉಳಿಯಲು ನಿರ್ದರಿಸಿಬಿಟ್ಟಿದ್ದ. ಹೀಗಾಗಿ ಇಲ್ಲಿನ ಅನೇಕ ಜನ ಮತ್ತೆ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕಿಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾಮಿ ರಮನಾಂದ ತೀರ್ಥರ ನೇತೃತ್ವದಲ್ಲಿ ಹೋರಾಟಗಳು ಪ್ರಾರಂಭವಾದವು. ಇದೇ ಸಮಯದಲ್ಲಿ ಹೈದರಾಬಾದ್​ ನಿಜಾಮ, ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಅನೇಕ ವಾಮಮಾರ್ಗಗಳನ್ನು ಅನುಸರಿಸುತ್ತಾನೆ.

ರಜಾಕರ ದಬ್ಬಾಳಿಕೆ- ನಡೆಯಿತು ಗೋರ್ಟಾ ಹತ್ಯಾಕಾಂಡ

ತನ್ನ ಖಾಸಗಿ ಸೈನಿಕರ ಪಡೆಯಾಗಿದ್ದ ರಜಾಕರನ್ನು ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಹೈದರಾಬಾದ್​ ನಿಜಾಮ ಬಳಸಿಕೊಳ್ಳುತ್ತಾನೆ. ರಜಾಕರು ತಮ್ಮ ದಬ್ಬಾಳಿಕೆಯಿಂದ ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಾರೆ. ಜನರ ಆಸ್ತಿಪಾಸ್ತಿಯನ್ನು ಹಾನಿ ಮಾಡುತ್ತಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ. ಅನೇಕರನ್ನು ಹತ್ಯೆ ಮಾಡುತ್ತಾರೆ. ಸುಮಾರು ಎರಡು ಲಕ್ಷದಷ್ಟು ಇದ್ದ ರಜಾಕರ್ ಪಡೆ ಅನೇಕ ತಿಂಗಳ ಕಾಲ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ ಎಸಗುತ್ತದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಹತ್ಯಾಕಾಂಡವೇ ನಡೆಯುತ್ತದೆ. 1948ರ ಮೇ ತಿಂಗಳಲ್ಲಿ ನೂರಾರು ರಾಷ್ಟ್ರಭಕ್ತರನ್ನು ರಜಾಕರು ಬರ್ಬರವಾಗಿ ಕೊಲೆ ಮಾಡುತ್ತಾರೆ. ಗೋರ್ಟಾ ಗ್ರಾಮದಲ್ಲಿ ರಕ್ತದ ಕಾಲುವೆ ಹರಿಯುತ್ತದೆ. ಹೀಗಾಗಿ ಈ ಗ್ರಾಮವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಅಂತ ಕರೆಯುತ್ತಾರೆ.

ರಜಾಕರ ದಬ್ಬಾಳಿಕೆಯ ನಡುವೆಯೂ ಕೂಡ ಹಲವು ಹೋರಾಟಗಾರು ಪ್ರಾಣದ ಹಂಗು ತೊರೆದು ಹೋರಾಟವನ್ನು ಮಾಡುತ್ತಾರೆ. ಇಷ್ಟಾದರೂ ಹೈದರಾಬಾದ್​ ನಿಜಾಮ ಭಾರತದಲ್ಲಿ ವಿಲೀನವಾಗಲು ಮುಂದಾಗದೆ ಇದ್ದಾಗ, ಬಲವಂತವಾಗಿ ಹೈದರಾಬಾದ್​ ಸಂಸ್ಥಾನವನ್ನು ಭಾರತದಲ್ಲಿ ವಿಲೀನ ಮಾಡಿಕೊಳ್ಳಲು ಅಂದಿನ ಗೃಹ ಸಚಿವ ಸರ್ಧಾರ ವಲ್ಲಾಭಬಾಯ್ ಪಟೇಲ್ ಮುಂದಾಗುತ್ತಾರೆ.

ಉಕ್ಕಿನ ಮನುಷ್ಯನ ದಿಟ್ಟ ನಿರ್ಧಾರ

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರುವಂತೆ ಅಂದಿನ ಗೃಹ ಸಚಿವ ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರು ಹೈದರಾಬಾದ್​ ನಿಜಾಮನಿಗೆ ಸಾಕಷ್ಟು ಮನವಿ ಮಾಡುತ್ತಾರೆ. ಆದರೆ, ಸರ್ಕಾರದ ಮನವಿಗೆ ಹೈದರಾಬಾದ್​ ನಿಜಾಮ ಬಗ್ಗುವಿದಲ್ಲ. ಬದಲಾಗಿ ಸ್ವತಂತ್ರವಾಗಿಯೇ ಇರುತ್ತೇನೆ ಅನ್ನೋ ಮೊಂಡುತನವನ್ನು ಪ್ರದರ್ಶಿಸುತ್ತಾನೆ. ಜೊತೆಗೆ ಸ್ವತಂತ್ರಕ್ಕಾಗಿ ನಡೆದ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರಿಸುತ್ತಾನೆ. ಹೋರಾಟಗಳಿಂದ ಹೈದರಾಬಾದ್​ ನಿಜಾಮ ಬಗ್ಗದಿದ್ದಾಗ ದೇಶದ ಮೊದಲ ಗೃಹ ಸಚಿವ ಮತ್ತು ಉಕ್ಕಿನ ಮನುಷ್ಯ ಅಂತ ಖ್ಯಾತಿ ಪಡೆದಿದ್ದ ಸರ್ಧಾರ ವಲ್ಲಾಬಾಯ್ ಪಟೇಲ್ ಅವರು ಹೈದರಾಬಾದ್​ ಸಂಸ್ಥಾನವನ್ನು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಸಲು ಮುಂದಾಗುತ್ತಾರೆ.

ಸೆಪ್ಟಂಬರ್ 13 1948 ರಂದು ಆಪರೇಷನ್ ಪೋಲೋ ಎನ್ನುವ ಹೆಸರಿನಲ್ಲಿ ಹೈದರಾಬಾದ್​ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಮಾಡಲಿಕ್ಕೆ ಕಾರ್ಯಾಚರಣೆ ಆರಂಭವಾಗುತ್ತದೆ. ಭಾರತೀಯ ಸೈನ್ಯ ಕಾರ್ಯಚರಣೆಗೆ ಇಳಿಯಿತ್ತುದೆ. ಆದರೆ, ಕಾರ್ಯಚಾರಣೆ ಪ್ರಾರಂಭವಾದ ನಾಲ್ಕೇ ದಿನದಲ್ಲಿ ಯಾವುದೆ ಪ್ರತಿರೋದವಿಲ್ಲದೆ ಹೈದರಾಬಾದ್​ ನಿಜಾಮ ಭಾರತದಲ್ಲಿ ತನ್ನ ಸಂಸ್ಥಾನವನ್ನು ವಿಲೀನ ಮಾಡಲಿಕ್ಕೆ ಒಪ್ಪಿಗೆಯನ್ನು ಸೂಚಿಸಿದನು. ಹೀಗಾಗಿ ಸೆಪ್ಟಂಬರ್ 17 ಇಲ್ಲಿನ ಜನ ವಿಮೋಚನಾ ದಿನಾಚಾರಣೆ ಅಂತ ಆಚರಿಸುತ್ತಾ ಬಂದಿದ್ದಾರೆ.

1998ರವರಗೆ ವಿಮೋಚಣಾ ದಿನಾಚರಣೆ ಅಷ್ಟೇನು ವಿಶೇಷತೆಯನ್ನು ಪಡೆದಿರಲಿಲ್ಲ. ಆದರೆಮ 1998 ರಲ್ಲಿ ಹೈದರಾಬಾದ್​ ಸಂಸ್ಥಾನ ಭಾರತದಲ್ಲಿ ವಿಲೀನವಾಗಿ 50ನೇ ವರ್ಷದ ಸವಿನೆನಪಿಗೆ ಸೆಪ್ಟಂಬರ್ 17 ಅಂದಿನ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್​ ಅವರು ವಿಮೋಚನಾ ದಿನಾಚಾರಣೆಯನ್ನಾಗಿ ಆಚರಿಸಿದರು. ಅಂದಿನಿಂದ ಪ್ರತಿವರ್ಷ ಸೆಪ್ಟಂಬರ್ 17 ವಿಮೋಚನಾ ದಿನಾಚಾರಣೆಯನ್ನಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಚರಿಸಲಾಗುತ್ತಿದೆ. ಇತ್ತಿಚೆಗೆ ಈ ದಿನಾಚಾರಣೆಗೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕಕ್ಕೆ ಬರುತ್ತಿರುವದರಿಂದ ಅದು ಹೆಚ್ಚು ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ದಶಕದ ನಂತರ ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ: ಈ ಹಿಂದಿನ​ ನಿರ್ಣಯಗಳಲ್ಲಿ ಜಾರಿಯಾಗಿದ್ದೆಷ್ಟು? ಇಲ್ಲಿದೆ ಸಮಗ್ರ ಮಾಹಿತಿ

ಪ್ರತಿವರ್ಷ ಸೆಪ್ಟಂಬರ್ 17 ರಂದು ಈ ಭಾಗದ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸುವರು. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿ ಬೆಳೆದು ಬಂದಿದೆ.

ವಿಮೋಚನಾ ದಿನ ಹೋಗಿ ಕಲ್ಯಾಣ ಕರ್ನಾಟಕ ಉತ್ಸವ

1998 ರಿಂದ 2020 ರವರಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೆಪ್ಟಂಬರ್ 17 ಅನ್ನು ವಿಮೋಚನಾ ದಿನ ಅಂತಲೆ ಆಚರಿಸಲಾಗುತ್ತಿತ್ತು. ಕಲಬುಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳನ್ನು ಹೈದರಾಬಾದ್​ ಕರ್ನಾಟಕ ಪ್ರದೇಶ ಅಂತಲೆ ಕರೆಯಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ 2020ರಲ್ಲಿ ಹೈದರಾಬಾದ್​ ಕರ್ನಾಟಕ ಅಂತ ಕರೆಯುತ್ತಿದ್ದ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಂತ ಮರುನಾಮಕರಣ ಮಾಡಿತು. ಜೊತೆಗೆ 2020 ರಿಂದ ವಿಮೋಚನಾ ದಿನ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಅಂತ ಹೆಸರು ಬದಲಾಯಿಸಿದ್ದು, ಇದೀಗ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:32 am, Tue, 17 September 24