Dr BR Ambedkar photo: ನಡು ರಸ್ತೆಯಲ್ಲಿ ಅಂಬೇಡ್ಕರ್​ ಭಾವಚಿತ್ರವಿಟ್ಟು ವಿವಾದ, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳಿಂದ ವಿವಾದಕ್ಕೆ ತಕ್ಷಣ ತೆರೆ!

ಹೌದು ಹೊನ್ನೇನಹಳ್ಳಿ ಕಾಲೋನಿ ರಸ್ತೆ ವಿವಾದ ಸಖತ್ ಸದ್ದು ಮಾಡುತ್ತಿದ್ದು, ರಾತ್ರೋ ರಾತ್ರಿ ಅಂಬೇಡ್ಕರ್ ಭಾವಚಿತ್ರ ತಲೆ ಎತ್ತಿರುವುದು ಅಧಿಕಾರಿಗಳ ನಿದ್ದೆ ಗೆಡಿಸಿದೆ. ಪರಿಣಾಮ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

Dr BR Ambedkar photo: ನಡು ರಸ್ತೆಯಲ್ಲಿ ಅಂಬೇಡ್ಕರ್​ ಭಾವಚಿತ್ರವಿಟ್ಟು ವಿವಾದ, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳಿಂದ ವಿವಾದಕ್ಕೆ ತಕ್ಷಣ ತೆರೆ!
ರಸ್ತೆ ಮಧ್ಯೆ ಅಂಬೇಡ್ಕರ್​ ಭಾವಚಿತ್ರವಿಟ್ಟು ವಿವಾದ, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳಿಂದ ವಿವಾದಕ್ಕೆ ತಕ್ಷಣ ತೆರೆ!
Edited By: ಸಾಧು ಶ್ರೀನಾಥ್​

Updated on: Sep 16, 2022 | 6:32 PM

ಅವರು ಸಂವಿಧಾನ ಶಿಲ್ಪಿ, ಅವರನ್ನ ಪ್ರತಿಯೊಬ್ಬರೂ ಮನೆಯಲ್ಲಿಟ್ಟು, ವಿಗ್ರಹ ಪ್ರತಿಷ್ಠಾಪನೆ ಮಾಡಿ ಮನ ಮನೆಗಳಲ್ಲೂ ಪೂಜಿಸುತ್ತಾರೆ. ಅದರಂತೆ ಶೋಷಿತರ ಧ್ವನಿಯಾಗಿ, ದಮನಿತರ ಶಕ್ತಿಯಾಗಿರುವ ಆತನನ್ನ ರಸ್ತೆ ಮಧ್ಯೆ ಪ್ರತಿಷ್ಠಾಪನೆ ಮಾಡಿದ್ದಾರೆ. ಆ ಮೂಲಕ ವಿವಾದವೊಂದಕ್ಕೆ ಅಂಬೇಡ್ಕರ್‌ನ್ನು ರಸ್ತೆಗೆ ತಂದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ರಾತ್ರೋ ರಾತ್ರಿ ಅಂಬೇಡ್ಕರ್​ ರಸ್ತೆ ಮಧ್ಯೆ ಪ್ರತ್ಯಕ್ಷವಾದ ಅಂಬೇಡ್ಕರ್​ ಭಾವಚಿತ್ರ..!

ಹೀಗೆ ರಸ್ತೆ ಮಧ್ಯೆ ಅಂಬೇಡ್ಕರ್ ಪ್ರತಿಷ್ಠಾಪನೆ (Dr BR Ambedkar photo) ಮಾಡಿರುವ ಗ್ರಾಮಸ್ಥರು, ಮತ್ತೊಂದೆಡೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕಥೆ ನಡೆಸುತ್ತಿರುವ ಪೊಲೀಸರು ಹಾಗೂ ಅಧಿಕಾರಿಗಳು ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಕೋಲಾರ (Kolar) ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ. ಹೌದು ಹೊನ್ನೇನಹಳ್ಳಿ ಕಾಲೋನಿ ರಸ್ತೆ ವಿವಾದ ಸಖತ್ ಸದ್ದು ಮಾಡುತ್ತಿದ್ದು, ರಾತ್ರೋ ರಾತ್ರಿ ಅಂಬೇಡ್ಕರ್ ಭಾವಚಿತ್ರ ತಲೆ ಎತ್ತಿರುವುದು ಅಧಿಕಾರಿಗಳ ನಿದ್ದೆ ಗೆಡಿಸಿದೆ. ಪರಿಣಾಮ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

ಏನಿದು ವಿವಾದ ಆಗಿದ್ದೇನು..!

ಗ್ರಾಮದಲ್ಲಿರುವ ಈ ರಸ್ತೆಗೆ ಕಳೆದ ರಾತ್ರಿ ಸಂಸದರ ಅನುದಾನದಲ್ಲಿ ಸಿಸಿ ರಸ್ತೆಗೆ ವೆಟ್ ಮಿಕ್ಸ್ ಹಾಕಲಾಗಿತ್ತು, ಇನ್ನೇನು ಕಾಂಕ್ರೀಟ್ ಮಾಡಬೇಕಿದ್ದ ರಸ್ತೆ ಮಧ್ಯೆ ಗ್ರಾಮದ ದಲಿತರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ನಿರ್ಮಾಣ ಮಾಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ತಕರಾರಿಲ್ಲ ಆದ್ರೆ ಸವರ್ಣಿಯರ ಕುಟುಂಬಗಳಿರುವ ಕಡೆ ಹಿಂದಿಳಿದ ವರ್ಗಗಳ ಕಾಲೋನಿ ಅಭಿವೃದ್ದಿ ಬಳಸಬೇಕಾದ ಹಣವನ್ನ ಹಾಕಲಾಗಿದೆ ಜೊತೆಗೆ ಸವರ್ಣೀಯರು ರಸ್ತೆ ನಿರ್ಮಾಣಕ್ಕೆ ಅಡ್ಡಗಾಲಾಕಿದ್ದು. ರಸ್ತೆ ಮಾಡಿದ್ರೆ ಎಲ್ಲೆಡೆ ಮಾಡಿ ಇಲ್ಲವಾದಲ್ಲಿ ರಸ್ತೆ ಮಾಡುವುದೆ ಬೇಡ ಎಂದು ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿ ರಸ್ತೆ ಮಧ್ಯೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಬಿಗುವಿನ ವಾತಾವರಣ..!

ಇನ್ನೂ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಬಂದ ಅಧಿಕಾರಿಗಳನ್ನ ಸ್ಥಳೀಯರು ತರಾಟೆಗೆ ತೆಗೆದು ಕೊಂಡಿದ್ದಾರೆ. ಗ್ರಾಮದಲ್ಲಿ ರಸ್ತೆ ಮಾಡುವುದಕ್ಕೆ ತಕರಾರಿಲ್ಲ, ಆದ್ರೆ ಮಾಡಿದ್ರೆ ಎಲ್ಲೆಡೆ ರಸ್ತೆ ಮಾಡಿ ಇಲ್ಲವಾದಲ್ಲಿ ಕಾಮಗಾರಿ ನಿಲ್ಲಿಸಿ ಅನ್ನೋದು ಗ್ರಾಮದ ಕೆಲವರ ಮಾತು. ಅಲ್ಲದೆ ರಸ್ತೆಯನ್ನ ಆರ್​ಪಿಆರ್​ಡಿ ಅಂದ್ರೆ ಗ್ರಾಮೀಣಾಭಿವೃದ್ದಿ ಇಲಾಖೆಯ ಸುಮಾರು 5 ಲಕ್ಷ ವ್ಯಯ ಮಾಡಿ ಇಲ್ಲಿ ರಸ್ತೆ ಮಾಡಲಾಗುತ್ತಿದೆ. ಇದಕ್ಕೂ ಪಂಚಾಯತಿಗೂ ಯಾವುದೇ ಸಂಬಂದವಿಲ್ಲ ನಾವು ಯಾವುದೆ ಅನುಮತಿ ನೀಡಿಲ್ಲ ಅನ್ನೋದು ಪಂಚಾಯತ್​ ಅಧಿಕಾರಿಗಳ ಮಾತು. ಇನ್ನೂ ಮದ್ಯಾಹ್ನ ನಂತರ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ತಾಲೂಕು ಪಂಚಾಯತ ಇ.ಒ ಮುನಿಯಪ್ಪ ಹಾಗೂ ಕೋಲಾರ ಗ್ರಾಮಾಂತರ ವೃತ್ತ ನಿರೀಕ್ಷಕ ಐಯಣ್ಣ ರೆಡ್ಡಿ ರಸ್ತೆ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಸಮ್ಮುಖದಲ್ಲಿ ಅಂಬೇಡ್ಕರ್ ಭಾವಚಿತ್ರ ಗ್ರಾಮಸ್ಥರು ತೆಗೆಯುವ ಮೂಲಕ ರಸ್ತೆ ವಿವಾದ ಸುಖಾಂತ್ಯ ಹಾಡಿದ್ದಾರೆ.

ಒಟ್ನಲ್ಲಿ ದೇವಾಲಯ ಕಟ್ಟಿ ಪೂಜಿಸಬೇಕಾದ ಮಹಾನ್ ನಾಯಕ ಅಂಬೇಡ್ಕರ್‌ರನ್ನ ವಿವಾದಿತ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಿ ವಿವಾದವೊಂದಕ್ಕೆ ಕಾರಣವಾಗಿತ್ತು. ಸಧ್ಯ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ವಿವಾದಕ್ಕೆ ತೆರೆ ಎಳೆದಿದ್ದು, ಗ್ರಾಮಸ್ಥರ ಅನುಕೂಲಕ್ಕೆ ಮಾಡಿದ ರಸ್ತೆ ಹೀಗೆ ವಿವಾದ ಕೇಂದ್ರ ಬಿಂದುವಾಗಿರುವುದು ಮಾತ್ರ ದುರಂತ.
ವರದಿ : ರಾಜೇಂದ್ರ ಸಿಂಹ, ಟಿವಿ-9, ಕೋಲಾರ

Web contact

TV9 Kannada

Read More
Follow Us