ಬೈಕ್​ಗೆ ಇಂಜಿನ್ ಆಯಿಲ್​ ಹಾಕಿಸಲು ಯುವಕರಿಂದ ರಾಬರಿ… ರಾತ್ರಿ ಮನೆಗೆ ವಾಪಸಾಗ್ತಿದ್ದ ಹೋಟೆಲ್ ಉದ್ಯಮಿ ಮೇಲೆ ಯುವಕರಿಂದ ಹಲ್ಲೆ; ಕಣ್ಣು ಕಳೆದುಕೊಂಡ ಸಂತ್ರಸ್ತ

| Updated By: ಸಾಧು ಶ್ರೀನಾಥ್​

Updated on: Oct 04, 2023 | 7:14 PM

ಮನೆಯ ಮುಂದೆ ತಮ್ಮ ಆಕ್ಟೀವಾ ಬೈಕ್​ ನಿಲ್ಲಿಸಿ ಮನೆಯ ಗೇಟ್​ ತೆಗೆಯಲು ಮುಂದಾಗಿದ್ದಾರೆ. ಆ ವೇಳೆ ನವೀನ್​ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ರಾಬರಿ ಗ್ಯಾಂಗ್ ಬಂದು ಸೀದಾ ನವೀನ್​ ಅವರ ಬಳಿ ಇದ್ದ ಹಣದ ಬ್ಯಾಗಿಗೆ ಕೈಹಾಕಿದ್ದಾರೆ. ಯಾವಾಗ ನವೀನ್​ ಹಣದ ಬ್ಯಾಗ್​ ಬಿಡಲಿಲ್ಲವೋ ಏಕಾಏಕಿ ತಮ್ಮ ಕೈಯಲ್ಲಿದ್ದ ಒಂದು ಮೆಟಲ್​ ಪಂಚ್​ ನಿಂದ ನವೀನ್​ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ನವೀನ್​ ಎಡಗಣ್ಣು ಹಾಗೂ ಹಿಂಭಾಗದ ತಲೆಗೆ ಗಂಭೀರವಾದ ಗಾಯಗಳಾಗಿವೆ.

ಬೈಕ್​ಗೆ ಇಂಜಿನ್ ಆಯಿಲ್​ ಹಾಕಿಸಲು ಯುವಕರಿಂದ ರಾಬರಿ... ರಾತ್ರಿ ಮನೆಗೆ ವಾಪಸಾಗ್ತಿದ್ದ ಹೋಟೆಲ್ ಉದ್ಯಮಿ ಮೇಲೆ ಯುವಕರಿಂದ ಹಲ್ಲೆ; ಕಣ್ಣು ಕಳೆದುಕೊಂಡ ಸಂತ್ರಸ್ತ
ಕೋಲಾರ ಹಣದ ಚೀಲದೊಂದಿಗೆ ಮನೆಗೆ ವಾಪಸಾಗುತ್ತಿದ್ದ ಹೋಟೆಲ್ ಉದ್ಯಮಿ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ
Follow us on

ಅವರೆಲ್ಲಾ ಪೋಲಿ ಅಲೆದುಕೊಂಡು, ಪರೋಡಿಗಳ ತರ ಹೇರ್​ ಕಟ್ಟಿಂಗ್ ಮಾಡಿಸಿಕೊಂಡು ಶೋಕಿ ಮಾಡಿಕೊಂಡಿದ್ದ ಯುವಕರು, ತನ್ನ ಬೈಕ್​ಗೆ ಇಂಜಿನ್​ ಆಯಿಲ್​ ಹಾಕಿಸೋದಕ್ಕೆ ಒಂದು ಸಾವಿರ ದುಡ್ಡು ಬೇಕು ಎಂದು ಅದ್ಯಾವಾಗೋ ಪರಿಚಯವಾಗಿದ್ದ ಹಳೆ ಸ್ನೇಹಿತನೊಬ್ಬನ ಬಳಿ ಕೇಳಿದ್ದ ಒಂದು ಸಾವಿರ ಹಣಕ್ಕಾಗಿ ಬಂದವರು ಹಣ ಸಿಗದೇ ಇದ್ದಾಗ ರಾಬರಿ ಮಾಡೋದಕ್ಕೆ ಹೋಗಿ ಈಗ ಉದ್ಯಮಿಯೊಬ್ಬರ ಕಣ್ಣಿಗೆ ಸಂಚಕಾರ ತಂದಿಟ್ಟಿದ್ದಾರೆ. ಅವತ್ತು ಸೆಪ್ಟಂಬರ್ 17 ಎಲ್ಲರ ಮನೆಯಲ್ಲೂ ಗಣೇಶ ಹಬ್ಬಕ್ಕಾಗಿ ತಯಾರಿಗಳು ಜೋರಾಗಿತ್ತು, ಕೋಲಾರ ನಗರದಲ್ಲೂ ಕೂಡಾ ಹಬ್ಬದ ತಯಾರಿಗಳು ಜೋರಾಗಿತ್ತು, ಆದರೆ ಕೋಲಾರದ ಪ್ರಸಿದ್ದ ಸಹನಾದರ್ಶಿನಿ ಹೋಟೆಲ್​ನ ಮಾಲೀಕ ನವೀಶ್​ ಶೆಟ್ಟಿ ಅವರು ಮಾತ್ರ ಎಂದಿನಂತೆ ತಮ್ಮ ಹೋಟೆಲ್​ ಮುಗಿಸಿಕೊಂಡು, ಮುನೇಶ್ವರ ನಗರದಲ್ಲಿರುವ ತಮ್ಮ ಮನೆಯತ್ತ ಹೊರಟಿದ್ದರು, ಅಂದು ಬಂದಿದ್ದ ಹಣವನ್ನು ಒಂದು ಬ್ಯಾಗ್​ನಲ್ಲಿ ಹಾಕಿಕೊಂಡು ಹೊರಟಿದ್ದರು. ಆದರೆ ಈ ವೇಳೆ ಹಬ್ಬದ ದಿನ ಅಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು.

ಯಾರೂ ಊಹೇ ಮಾಡಿರದ ರೀತಿಯಲ್ಲಿ ಅಲ್ಲಿ ಘಟನೆಯೊಂದು ನಡೆದಿತ್ತು. ಅಷ್ಟಕ್ಕೂ ಅಲ್ಲೇನಾಯ್ತು ಅಂತ ನೋಡೋದಾದ್ರೆ ಅವತ್ತು ಹೋಟೆಲ್​ ಮುಗಿಸಿಕೊಂಡು ಸೀದಾ ಮುನೇಶ್ವರ ನಗರದ ತಮ್ಮ ಮನೆಯತ್ತ ಹೋಟೆಲ್ ಮಾಲೀಕ ನವೀಶ್​ ಶೆಟ್ಟಿ ಹೊರಟಿದ್ದರು. ಆದರೆ ಅವರು ಯಾವುದನ್ನೂ ಗಮನಿಸದೆ ತಮ್ಮ ಪಾಡಿಗೆ ತಾವು ಹೊರಟಿದ್ದಾರೆ. ಜೊತೆಗೆ ಪಕ್ಕದ ಅಂಗಡಿಯವರೊಬ್ಬರು ಮಾತಿಗೆ ಸಿಕ್ಕಿದ್ದಾರೆ. ಮಾತಾಡಿಕೊಂಡು ಮನೆಯ ಹತ್ತಿರ ಹತ್ತಿರ ಹೋಗಿದ್ದಾರೆ. ಅಷ್ಟೊತ್ತಿಗೆ ಜೊತೆಗೆ ಸಿಕ್ಕಿದ್ದಾತ ತಮ್ಮ ಮನೆ ಬಂದ ಹಿನ್ನೆಲೆ ತಮ್ಮ ಮನೆಯತ್ತ ಹೊರಟಿದ್ದಾರೆ. ಈ ವೇಳೆ ನವೀನ್​ ಒಬ್ಬರೇ ರಾತ್ರಿ ಸುಮಾರು 10.45 ರಲ್ಲಿ ಮನೆಯತ್ತ ಹೋಗಿದ್ದಾರೆ.

ಮನೆಯ ಮುಂದೆ ತಮ್ಮ ಆಕ್ಟೀವಾ ಬೈಕ್​ ನಿಲ್ಲಿಸಿ ಮನೆಯ ಗೇಟ್​ ತೆಗೆಯಲು ಮುಂದಾಗಿದ್ದಾರೆ. ಆ ವೇಳೆ ನವೀನ್​ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ರಾಬರಿ ಗ್ಯಾಂಗ್ ಬಂದು ಸೀದಾ ನವೀನ್​ ಅವರ ಬಳಿ ಇದ್ದ ಹಣದ ಬ್ಯಾಗಿಗೆ ಕೈಹಾಕಿದ್ದಾರೆ. ಯಾವಾಗ ನವೀನ್​ ಹಣದ ಬ್ಯಾಗ್​ ಬಿಡಲಿಲ್ಲವೋ ಏಕಾಏಕಿ ತಮ್ಮ ಕೈಯಲ್ಲಿದ್ದ ಒಂದು ಮೆಟಲ್​ ಪಂಚ್​ ನಿಂದ ನವೀನ್​ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ನವೀನ್​ ಎಡಗಣ್ಣು ಹಾಗೂ ಹಿಂಭಾಗದ ತಲೆಗೆ ಗಂಭೀರವಾದ ಗಾಯಗಳಾಗಿವೆ.

ಅಷ್ಟೇ ಅಲ್ಲಾ ನೋಡನೋಡುತ್ತಿದ್ದಂತೆ ನವೀನ್​ ಮೈಮೇಲೆಲ್ಲಾ ರಕ್ತ ಹರಿಯಲು ಶುರುವಾಗಿದೆ. ಈ ವೇಳೆ ಅಲ್ಲೇ ಇದ್ದ ನವೀನ್ ಅವರ ಮಗ ಓಡೋಡಿ ಬಂದಿದ್ದಾನೆ. ತನ್ನ ತಂದೆಯ ಮೇಲೆ ಹಲ್ಲೆಯನ್ನು ಕಣ್ಣಾರೆ ಕಂಡ ಮಗ ಕಿರುಚಾಡಿದ್ದಾನೆ. ಅಲ್ಲದೆ ಅಲ್ಲಿದ್ದ ದುಷ್ಕರ್ಮಿಗಳಿಗೆ ಪ್ರತಿರೋಧ ಒಡ್ಡಿದ್ದಾನೆ. ಆದರೆ ಅವನ ಮೇಲೂ ಹಲ್ಲೆ ಮಾಡಿದ್ದಾರೆ. ಅಷ್ಟೊತ್ತಿಗೆ ಅಲ್ಲಿದ್ದ ಅಕ್ಕಪಕ್ಕದ ಮನೆಯವರು ಓಡೋಡಿ ಬಂದಿದ್ದಾರೆ. ಬರುತ್ತಲೇ ಬೈಕ್​ನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ, ಉಳಿದ ಒಬ್ಬ ಮಧು ಎಂಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ, ಜನರು ಅತನನ್ನು ಚೆನ್ನಾಗಿ ಥಳಿಸಿದ್ದಾರೆ, ನಂತರ ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿ ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ನವೀನ್​ ಶೆಟ್ಟರನ್ನು ಕೋಲಾರದ ವಂಶೋದಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಅಷ್ಟೊತ್ತಿಗೆ ಸ್ಥಳಕ್ಕೆ ಬಂದಿದ್ದ ಕೋಲಾರ ನಗರ ಠಾಣೆಯ ಪೊಲೀಸರು ಸಾರ್ವಜನಿಕರ ವಶದಲ್ಲಿದ್ದ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ನಂತರ ಅವನನ್ನು ವಿಚಾರಣೆ ನಡೆಸಿದ್ದಾರೆ. ನವೀನ್​ ಶೆಟ್ಟಿ ಮೇಲೆ ಹಲ್ಲೆ ಮಾಡಿ ಹಣ ರಾಬರಿ ಮಾಡಲು ಬಂದಿದ್ದ ಮೂರು ಜನರ ಪೈಕಿ ಸಾರ್ವಜನಿಕರಿಗೆ ಸಿಕ್ಕಿದ್ದ ಆರೋಪಿ ಮಧು ಎಂಬಾತ ಅದೇ ಸಹನದರ್ಶಿನಿ ಹೋಟೆಲ್​ ಪಕ್ಕದಲ್ಲಿದ್ದ ಬಾರ್​ನಲ್ಲಿ ಕೆಲಸ ಮಾಡುತ್ತಿದ್ದವನು ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಅವನು ಅಲ್ಲಿ ಕೆಲಸ ಬಿಟ್ಟಿದ್ದ. ನಂತರ ಬೆಂಗಳೂರಿಗೆ ಹೋಗಿದ್ದ, ಬಾರ್​ ನಲ್ಲಿ ಕೆಲಸ ಮಾಡುವಾಗ ಅದೆಷ್ಟೋ ಬಾರಿ ಇದೇ ಹೋಟೆಲ್​ನಲ್ಲಿ ಬಂದು ರಾತ್ರಿ ಹೊತ್ತು ಬಿಟ್ಟಿಯಾಗಿ ಊಟ ಮಾಡಿಕೊಂಡು ಹೋಗಿದ್ದವನು, ಜೊತೆಗೆ ನವೀನ್​ಗೆ ಪರಿಚಯಸ್ಥ ಕೂಡಾ, ಹೀಗಿದ್ದ ಮಧು ಬಾರ್​ನಲ್ಲಿ ಕೆಲಸ ಬಿಟ್ಟ ನಂತರ ಬೆಂಗಳೂರಿಗೆ ಹೋಗಿದ್ದ, ಅವತ್ತು ಗಣೇಶ ಹಬ್ಬದ ಹಿಂದಿನ ದಿನ ಮಧು ಸ್ನೇಹಿತ ಅಭಿಷೇಕ್​ ಎಂಬಾತ ತನ್ನ ಪಲ್ಸರ್ ಬೈಕ್​ಗೆ ಇಂಜಿನ್​ ಆಯಿಲ್​ ಹಾಕಿಸಬೇಕು ಅದಕ್ಕೆ ಒಂದು ಸಾವಿರ ಹಣ ಬೇಕು ಎಂದು ಕೇಳಿದ್ದ. ಅದಕ್ಕೆ ಅದೇ ಪಲ್ಸರ್ ಬೈಕ್​ನಲ್ಲಿ ಬೆಂಗಳೂರಿನ ಕೆಂಪೇಗೌಡ ನಗರದಿಂದ ಸೀದಾ ಕೋಲಾರಕ್ಕೆ ತ್ರಿಬಲ್​ ರೈಡಿಂಗ್ ಮಾಡಿಕೊಂಡು ಕೋಲಾರಕ್ಕೆ​ ಬಂದಿದ್ದರು. ಮಧು, ಅಭಿಷೇಕ್​, ಹಾಗೂ ಮನೋಜ್.

ಈ​ ಮೂವರೂ ಕೋಲಾರದಲ್ಲಿ ಒಂದಷ್ಟು ಹೊತ್ತು ಅಲ್ಲೇ ಹೋಟೆಲ್​ ಬಳಿಯಲ್ಲೇ ಟೈಂ ಪಾಸ್ ಮಾಡಿದ್ದಾರೆ. ನಂತರ ರಾತ್ರಿ ಹೊತ್ತಿಗೆ ಮೂರು ಜನ ಪ್ಲಾನ್​ ಮಾಡಿಕೊಂಡಿದ್ದಾರೆ. ಮಧು ಹೇಳಿದಂತೆ ಮಾತನಾಡಿಕೊಂಡು ಪ್ರತಿದಿನ ಹೋಟೆಲ್​ ಮುಗಿಸಿ ರಾತ್ರಿ 10.45ರ ಹೊತ್ತಿಗೆ ಹೋಟೆಲ್​ಗೆ​ ಬೀಗ ಹಾಕಿಕೊಂಡು ಹೋಗೋ ವಿಷಯ ಮಧುಗೆ ಗೊತ್ತಿತ್ತು ಈ ವೇಳೆ ಮಧು ತನ್ನಿಬ್ಬರು ಸ್ನೇಹಿತರೊಂದಿಗೆ ನವೀನ್​ಶೆಟ್ಟಿ ಹೋಟೆಲ್​ ಮುಗಿಸಿಕೊಂಡು ಬೀಗ ಹಾಕಿ ಮನೆಯತ್ತ ಹೊರಟಾಗ ಸೀದಾ ಅವರನ್ನು ಫಾಲೋ ಮಾಡಿದ್ದರು.

ಸ್ವಲ್ಪ ಹೊತ್ತು ಅವರ ಸ್ನೇಹಿತರೊಬ್ಬರು ಜೊತೆಗಿದ್ದ ಕಾರಣ ಅವರ ಮನೆಯವರೆಗು ಹಿಂಬಾಲಿಸಿದ ಮೂವರ ಗ್ಯಾಂಗ್​ ನವೀನ್​ ತನ್ನ ಬೈಕ್​ ನಿಲ್ಲಿಸಿ ಮನೆಯ ಗೇಟ್​ ಬಾಗಿಲು ತೆಗೆಯುವಷ್ಟರಲ್ಲಿ ಅವರ ಬಳಿಯಿದ್ದ ಕ್ಯಾಷ್​ ​ಬ್ಯಾಗ್​ಗೆ ಕೈಹಾಕಿದ್ದರು. ಇನ್ನು ಪರಾರಿಯಾಗಿದ್ದ ಆರೋಪಿಗಳ ಬೆನ್ನುಬಿಡದ ಪೊಲೀಸರು ಕಳೆದ ರಾತ್ರಿ ಅಬವರನ್ನೂ (ಬೆಂಗಳೂರು ಕೆಂಪೇಗೌಡ ನಗರದ ಮನೋಜ್​ ಹಾಗೂ ಅಭಿಷೇಕ್​) ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಸದ್ಯ ಪೊಲೀಸರ ಕೈಗೆ ಸಿಕ್ಕ ಆರೋಪಿಗಳು ಈ ಹಿಂದೆಯೂ ಅಲ್ಲಲ್ಲಿ ಇಂಥ ಕೃತ್ಯಗಳನ್ನು ಎಸಗಿದ್ದಾರೆ ಎಂದು ತಿಳಿದುಬಂದಿದೆ, ಇನ್ನು ತಾನಾಯ್ತು ತನ್ನ ಕೆಲಸವಾಯ್ತು ಎಂದು ಹೋಟೆಲ್​ ನಡೆಸುತ್ತಾ ಜೀವನ ಮಾಡಿಕೊಂಡಿದ್ದ ನವೀನ್​ಶೆಟ್ಟಿ, ಘಟನೆ ನಡೆದು 15 ದಿನ ಕಳೆದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿಲ್ಲ, ಅವರ ಮೆದುಳಿನ ಹಿಂಭಾಗಕ್ಕೆ ಗಂಭೀರ ಗಾಯವಾಗಿದೆ, ಅದಕ್ಕಿಂತ ನವೀನ್​ಶೆಟ್ಟರ ಎಡಗಣ್ಣಿನ ದೃಷ್ಟಿ ಹೋಗಿದೆಯಂತೆ, ಏನೇ ಮಾಡಿದ್ರು ಎಡಗಣ್ಣಿನ ದೃಷ್ಟಿ ಬರೋದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಹೀಗೆ ಸರಿಯಾದ ವಿದ್ಯೆ ಉದ್ಯೋಗವಿಲ್ಲದೆ ಪೋಲಿ ಅಲೆದು ಕೊಂಡು ಶೋಕಿ ಮಾಡಿ ಜೀವನ ಮಾಡುವ ಇಂಥವರ ಹುಡುಗಾಟಕ್ಕೆ ಇಲ್ಲೊಂದು ಕುಟುಂಬದ ಬದುಕೇ ಕತ್ತಲಾಗಿದೆ. ನವೀನ್​ಶೆಟ್ಟಿಯವರು ತನ್ನ ಒಂದು ಕಣ್ಣು ಕಳೆದುಕೊಂಡು ಜೀವನ ಪರ್ಯಂತ ನೋವು ಅನುಭಿಸುವ ಸ್ಥಿತಿ ಎದುರಾಗಿದೆ. ಹಾಗಾಗಿ ಕಾನೂನಾದರೂ ಇಂಥ ದುಷ್ಟರಿಗೆ ತಕ್ಕ ಶಿಕ್ಷ ಕೊಟ್ಟು ಸರಿಯಾದ ಪಾಠ ಕಲಿಸಬೇಕಿದೆ.

Published On - 7:07 pm, Wed, 4 October 23