ಕಾರ್ಖಾನೆಗಳು ಉಗುಳುತ್ತಿರುವ ಹೊಗೆ, ದೂಳಿನಿಂದ ಬೆಳೆಗಳಿಗೆ ಹಾನಿ: ಕಂಗಾಲಾದ ಹಣ್ಣು, ತರಕಾರಿ ಬೆಳೆಗಾರರು

ಕೊಪ್ಪಳ ತಾಲೂಕಿನ ಕಾರ್ಖಾನೆಗಳಿಂದ ಹೊರಬರುವ ಧೂಳು ರೈತರ ತೋಟಗಾರಿಕೆ ಬೆಳೆಗಳಿಗೆ ಹಾನಿ ಮಾಡುತ್ತಿದೆ. ಧೂಳಿನಿಂದ ಪಪ್ಪಾಯಿ, ಬಾಳೆಹಣ್ಣುಗಳು ಬೇಗೆನೆ ಕೊಳೆಯುತ್ತಿವೆ. ಹೀಗಾಗಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ಕಾರ್ಖಾನೆಗಳು ಉಗುಳುತ್ತಿರುವ ಹೊಗೆ, ದೂಳಿನಿಂದ ಬೆಳೆಗಳಿಗೆ ಹಾನಿ: ಕಂಗಾಲಾದ ಹಣ್ಣು, ತರಕಾರಿ ಬೆಳೆಗಾರರು
ಹಾಳಾಗಿರುವ ಬೆಳೆ
Edited By: ವಿವೇಕ ಬಿರಾದಾರ

Updated on: Nov 17, 2024 | 1:03 PM

ಕೊಪ್ಪಳ, ನವೆಂಬರ್​ 17: ಕೊಪ್ಪಳ (Koppal) ತಾಲೂಕಿನಲ್ಲಿ ಹತ್ತಾರು ಸ್ಟೀಲ್ ಕಾರ್ಖಾನೆಗಳಿವೆ. ಈ ಕಾರ್ಖಾನೆ ಮಾಲೀಕರು ನಾವು ಯಾವುದೇ ದೂಳನ್ನು ಹೊರಬಿಡುವುದಿಲ್ಲ, ಬಿಟ್ಟರೂ ಶುದ್ದೀಕರಣ ಮಾಡುತ್ತೇವೆ ಅಂತ ಹೇಳಿ ಸರ್ಕಾರದಿಂದ ಪರವಾನಗಿ ಪಡೆದಿದ್ದಾರೆ. ಆದರೆ, ನಿಯಮಗಳನ್ನು ಮುರಿಯುತ್ತಿರುವ ಕರ್ಖಾನೆ ಮಾಲೀಕರು, ರಾತ್ರಿ ಸಮಯದಲ್ಲಿ ದೂಳನ್ನು ಹೊರ ಬಿಡುತ್ತಿದ್ದಾರೆ.

ಹೊರ ಬಂದ ದೂಳು, ಬೆಳೆಗಳ ಮೇಲೆ ಕುಳಿತುಕೊಳ್ಳುತ್ತಿದೆ. ಹಣ್ಣು, ತರಕಾರಿ ಸೇರಿದಂತೆ ಯಾವುದೆ ಬೆಳೆ ಮೇಲೆ ನೋಡಿದರೂ ಬರೀ ದೂಳು ಕಾಣುತ್ತಿದೆ. ರಾತ್ರಿ ಕಳೆದು ಬೆಳಗಾಗುವುದರಲ್ಲಿ ಬೆಳೆಗಳು ದೂಳುಮಯವಾಗಿರುತ್ತವೆ. ಇದೇ ಕಾರಣಕ್ಕೆ ಕೊಪ್ಪಳ ತಾಲೂಕಿನ ಹಾಲವರ್ತಿ, ಕುಣಿಕೇರಿ, ಬಗನಾಳ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮದ ರೈತರು ಬೆಳೆದ ಪಪ್ಪಾಯ, ಬಾಳೆಹಣ್ಣುಗಳನ್ನು ಯಾರು ಕೂಡಾ ಖರೀದಿ ಮಾಡಲು ಮುಂದೆ ಬರುತ್ತಿಲ್ಲ.

ರೈತರ ಉತ್ಪನ್ನಗಳನ್ನು ಖರೀದಿ ಮಾಡದ ವ್ಯಾಪರಸ್ಥರು

ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ತೋಟಗಾರಿಕೆ ಬೆಳೆಯನ್ನು ಬೆಳದಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕಿಲೋ ಪಪ್ಪಾಯ 15 ರೂ.ಗೆ, ಪ್ರತಿ ಕಿಲೋ ಬಾಳೆಹಣ್ಣು 10 ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಆದರೆ, ಹಾಲವರ್ತಿ ಸೇರಿದಂತೆ ಸುತ್ತಮುತ್ತಲಿನ ರೈತರು ಬೆಳೆದ ಹಣ್ಣುಗಳನ್ನು ವ್ಯಾಪರಸ್ಥರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನೀವು ಬೆಳೆದ ಹಣ್ಣುಗಳ ಮೇಲೆ ದೂಳು ಕೂತಿರುತ್ತದೆ. ಹೀಗಾಗಿ ಅದು ಬೇಗನೆ ಹಾಳಾಗಿ ಹೋಗುತ್ತದೆ. ಮುಂದೆ ಅದನ್ನು ಯಾರು ಖರೀದಿ ಮಾಡೋದಿಲ್ಲ ಅಂತ ಹೇಳಿ ವ್ಯಾಪರಸ್ಥರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳದಿದ್ದ ಹಣ್ಣುಗಳು ಹಾಳಾಗಿ ಹೋಗುತ್ತಿವೆ.

ಬಾಳೆಕಾಯಿ ಮೇಲೆ ದೂಳು

ಇದನ್ನೂ ಓದಿ: ಶಾಸಕ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್: ರೈತರ ನೆರವಿಗೆ ಧಾವಿಸಿದ ಕಲಬುರಗಿ ಡಿಸಿ

ಹಾಲವರ್ತಿ ಗ್ರಾಮದ ಮಾರ್ಕಂಡಯ್ಯ ಸೇರಿದಂತೆ ನೂರಾರು ರೈತರು ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳದಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಡಾ ಸಾವಿರಾರು ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ, ಇದೀಗ ಪ್ಯಾಕ್ಟರಿಯ ದೂಳಿನಿಂದ ಕೃಷಿ ಮಾಡಲಾರದಂತಹ ಸ್ಥಿತಿಗೆ ಬಂದಿದ್ದೇವೆ ಎಂದು ರೈತ ಮಾರ್ಕಂಡಯ್ಯ ನೋವು ತೋಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಖಾನೆಯವರಿಗೆ ದೂಳು ಬಿಡದಂತೆ ಮನವಿ ಮಾಡಿದರೇ, ನಾವು ದೂಳು ಬಿಡುತ್ತಿಲ್ಲವಲ್ಲ ಅಂತ ಕಾರ್ಖಾನೆಯವರು ಹೇಳುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ರೈತರು ದೂರು ನೀಡಿದ್ದಾರೆ. ಆದರೆ, ಯಾರು ಕೂಡಾ ರೈತರ ಮನವಿಗೆ ಸ್ಪಂದಿಸುತ್ತಿಲ್ಲ.

ಬಾಳೆ ಎಲೆ ಮೇಲೆ ದೂಳು

ಈ ಬಗ್ಗೆ ಕೆಲ ಕಾರ್ಖಾನೆಯವರನ್ನು ನಮ್ಮ ಟಿವಿ9 ತಂಡ ಸಂಪರ್ಕಿಸುವ ಕೆಲಸ ಮಾಡಿತು. ಆದರೆ, ಬಹುತೇಕರು ನಾವು ದೂಳು ಬಿಡುತ್ತಿಲ್ಲವಲ್ಲ ಅಂತ ಹೇಳುತ್ತಿದ್ದಾರೆ. ಆದರೆ, ಅಧಿಕೃತವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.

ರೈತರ ಸಂಕಷ್ಟಕ್ಕೆ ನೆರವಾದೀತೆ ಸರ್ಕಾರ?

ಸದ್ಯ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದೆ ಬರಬೇಕಿದೆ. ಪ್ರಮುಖವಾಗಿ ಕಾರ್ಖಾನೆಗಳು ರಾತ್ರಿ ಸಮಯದಲ್ಲಿ ಬಿರುವ ಹೊಗೆ, ದೂಳಿಗೆ ನಿಯಂತ್ರಣ ಹೇರುವಂತೆ ಕರ್ಖಾನೆಯವರಿಗೆ ಕಟ್ಟಪ್ಪಣೆ ನೀಡಬೇಕು. ಜೊತೆಗೆ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ ಕರ್ಖಾನೆಗಳೇ ಪರಿಹಾರ ನೀಡುವಂತಹ ವ್ಯವಸ್ಥೆ ಮಾಡಬೇಕಿದೆ. ಆ ಮೂಲಕ ರೈತರ ಕೈ ಹಿಡಿಯುವ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:08 pm, Sun, 17 November 24

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us