ಝೀರೋ ಟ್ರಾಫಿಕ್​​ನಲ್ಲಿ ಕರೆತಂದರೂ ಬದುಕಲಿಲ್ಲ ಜೀವ: ಚಿಕಿತ್ಸೆ ಫಲಿಸದೆ ಕಂದಮ್ಮ ಕೊನೆಯುಸಿರು

ಕಿಡ್ನಿ ಸಮಸ್ಯೆಯ ಜೊತೆಗೆ ಕರುಳು ಹೊರಬಂದ ರೀತಿಯಲ್ಲಿ ಜನಿಸಿದ್ದ ಮಗು ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್​​ನಲ್ಲಿ ಮೃತಪಟ್ಟಿದೆ. ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣ ಕೊಪ್ಪಳದಿಂದ ಹುಬ್ಬಳ್ಳಿಗೆ ಶಿಶುವನ್ನು ಝೀರೋ ಟ್ರಾಫಿಕ್​​ನಲ್ಲಿ ಕರೆತರಲಾಗಿತ್ತು. ವೈದ್ಯರ ಸರ್ವ ಪ್ರಯತ್ನದ ಹೊರತಾಗಿಯೂ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಗಂಡು ಮಗು ಜನಿಸಿದರೂ ಅದನ್ನು ಉಳಿಸಿಕೊಳ್ಳಲಾಗದ ಕಾರಣ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಝೀರೋ ಟ್ರಾಫಿಕ್​​ನಲ್ಲಿ ಕರೆತಂದರೂ ಬದುಕಲಿಲ್ಲ ಜೀವ: ಚಿಕಿತ್ಸೆ ಫಲಿಸದೆ ಕಂದಮ್ಮ ಕೊನೆಯುಸಿರು
ಮಗು ಸಾವು
Edited By:

Updated on: Dec 30, 2025 | 3:38 PM

ಕೊಪ್ಪಳ, ಡಿಸೆಂಬರ್​​ 30: ಹೆರಿಗೆ ವೇಳೆ ನವಜಾತ ಶಿಶುವಿನ ಕರುಳು ಹೊರಗೆ ಬಂದಿದ್ದ ಕೇಸ್​​ ಸಂಬಂಧ ವೈದ್ಯರ ಪ್ರಯತ್ನ ಕೊನೆಗೂ ಫಲಪ್ರದವಾಗಿಲ್ಲ. ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ನವಜಾತ ಶಿಶು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿಶುವನ್ನು ಕೊಪ್ಪಳದಿಂದ ಹುಬ್ಬಳ್ಳಿಗೆ ಕರೆತರಲಾಗಿತ್ತು, ಆದರೆ ನಿನ್ನೆ ರಾತ್ರಿ ಮಗು ಪ್ರಾಣ ಬಿಟ್ಟಿದೆ.

ಕುಕನೂರ ತಾಲೂಕಿನ ಗುತ್ತೂರ ನಿವಾಸಿಗಳಾದ ಮಲ್ಲಪ್ಪ, ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ ದುರ್ದೈವ ಎಂಬಂತೆ ಹುಟ್ಟುವ ವೇಳೆಯೇ ಮಗುವಿನ ಕರುಳೆಲ್ಲ ಹೊರಗಡೆ ಬಂದಿದ್ದ ಕಾರಣ ತುರ್ತಾಗಿ ಆಪರೇಷನ್​​ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಕೊಪ್ಪಳದಿಂದ ತಾಯಿ ಮತ್ತು ಮಗುವನ್ನು 5 ಆಂಬ್ಯುಲೆನ್ಸ್​ಗಳ ಮೂಲಕ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್​​ನಲ್ಲಿ ರವಾನಿಸಲಾಗಿತ್ತು.

ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ; ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು

ನವಜಾತ ಶಿಶುವಿಗೆ ಕಿಡ್ನಿ ಸಮಸ್ಯೆ ಕೂಡ ಇರುವ ಬಗ್ಗೆ ವೈದ್ಯರು ತಿಳಿಸಿದ ಕಾರಣ ಹತ್ತು ಗಂಟೆ ಹಿಂದೆ ಜನಿಸಿದ ಮಗುವನ್ನ ಆಂಬ್ಯುಲೆನ್ಸ್ ಚಾಲಕ ಪ್ರಕಾಶ್ ಝೀರೋ ಟ್ರಾಫಿಕ್​ನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದರು. ನವಜಾತ ಶಿಶು ಪ್ರಾಣ ಉಳಿಸಲು ಪೊಲೀಸರು ಕೂಡ ಸಾಥ್ ನೀಡಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಿಶುವನ್ನು ಉಳಿಸಲು ಕಿಮ್ಸ್​​ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದ ಹೊರತಾಗಿಯೂ ಮಗು ಅಸುನೀಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:37 pm, Tue, 30 December 25