ಕೊಪ್ಪಳದಲ್ಲಿ ಹೆಚ್ಚಾದ ಸರಗಳ್ಳರ ಹಾವಳಿ, ಆತಂಕದಲ್ಲಿ ಮಹಿಳೆಯರು

| Updated By: ಆಯೇಷಾ ಬಾನು

Updated on: Jun 19, 2024 | 10:35 AM

ಕೊಪ್ಪಳದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇಂದು ಕೂಡಾ ಮನೆ ಮುಂದೆ ನಿಂತಿದ್ದ ಮಹಿಳೆಯ ಕತ್ತಲ್ಲಿದ್ದ ಚಿನ್ನದ ಮಾಂಗಲ್ಯ ಸರಗಳ್ಳತನವಾಗಿರೋ ಘಟನೆ ನಡೆದಿದೆ. ಬೈಕ್ ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬರೋ ಕಿಲಾಡಿಗಳು ಸರಗಳ್ಳತನ ಮಾಡಿದ್ದಾರೆ.

ಕೊಪ್ಪಳ, ಜೂನ್.19: ಕೊಪ್ಪಳ ನಗರದಲ್ಲಿ ಸರಗಳ್ಳರ ಹಾವಳಿ (Chain Snatching) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಮಹಿಳೆಯರಲ್ಲಿ ಆತಂಕವನ್ನುಂಟು ಮಾಡಿವೆ. ಇಂದು ಕೂಡಾ ಮನೆ ಮುಂದೆ ನಿಂತಿದ್ದ ಮಹಿಳೆಯ ಕತ್ತಲ್ಲಿದ್ದ ಚಿನ್ನದ ಮಾಂಗಲ್ಯ ಸರಗಳ್ಳತನವಾಗಿರೋ ಘಟನೆ ನಡೆದಿದೆ.

ಕೊಪ್ಪಳ ನಗರದ ಟೀಚರ್ಸ್ ಕಾಲೋನಿಯಲ್ಲಿ ಮುಂಜಾನೆ ಸರಗಳ್ಳತನ ನಡೆದಿದೆ. ಮಂಜುಳಾ ಹಿರೇಮಠ ಅನ್ನೋರ ಐವತ್ತು ಗ್ರಾಮ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಒಂಟಿ ಮಹಿಳೆಯರೇ ಟಾರ್ಗೇಟ್

ಇನ್ನು ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ವಾಕಿಂಗ್ ಮಾಡೋರು, ಒಂಟಿಯಾಗಿ ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ದೆಯರನ್ನೇ ಟಾರ್ಗೆಟ್ ಮಾಡ್ತಿರೋ ಸರಗಳ್ಳರು, ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದಾರೆ. ಬೈಕ್ ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬರೋ ಕಿಲಾಡಿಗಳು ಸರಗಳ್ಳತನ ಮಾಡಿ ಹೋಗುತ್ತಿದ್ದಾರೆ.

ಕೊಪ್ಪಳ ನಗರದಲ್ಲಿ ಈ ಹಿಂದೆ ಡಾಲರ್ಸ್ ಕಾಲೋನಿ ಸೇರಿದಂತೆ ಹಲವೆಡೆ ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಇದು ನಗರದ ಮಹಿಳೆಯರ ಆತಂಕವನ್ನು ಹೆಚ್ಚಿಸುತ್ತಿದೆ. ಇನ್ನು ಇಂದು ನಡೆದ ಘಟನೆ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ನಗರ ಠಾಣೆ ಪಿಐ ಜಯಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗನೆ ಸರಗಳ್ಳರ ಹೆಡೆಮುರಿ ಕಟ್ಟೋದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮಹಾರಾಷ್ಟ್ರ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್

ಗುಂಡಿಗೆ ಬಿದ್ದು ಮೂವರು ಸಾವು

ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೀಲಮ್ಮ, ಮುತ್ತಪ್ಪ, ಹಾಗೂ ಶೀವು ಯಾಳವಾರ ಮೃತಪಟ್ಟಿದ್ದಾರೆ. ಎಮ್ಮೆಗೆ ನೀರು ಕುಡಿಸಲು ಹೋದಾಗ ನೀಲಮ್ಮ ಕಾಲು ಜಾರಿ ಗುಂಡಿಗೆ ಬಿದ್ದಿದ್ದು, ಆಕೆಯನ್ನು ರಕ್ಷಣೆ ಮಾಡಲು ಬಂದ ಮುತ್ತಪ್ಪ ಹಾಗೂ ಶೀವು ಕೂಡ ನೀರುಪಾಲಾಗಿದ್ದಾರೆ.

ಟಿಪ್ಪರ್​ ಡಿಕ್ಕಿ, ಬೈಕ್​ನಲ್ಲಿದ್ದ ದಂಪತಿ ಸಾವು

ಟಿಪ್ಪರ್​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳ್ಳಾರಿ ತಾಲೂಕಿನ‌ ಅಮರಾಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಬೈಕ್​ನಲ್ಲಿದ್ದ ಪತಿ ನಾಗರಾಜ್ ಹಾಗೂ ಪತ್ನಿ ಪಾರ್ವತಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ 8 ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೃತಪಟ್ಟ ದಂಪತಿ ಹೊಸ ದರೋಜಿ ಗ್ರಾಮದ ನಿವಾಸಿಗಳಾಗಿದ್ದು, ಪುತ್ರನ ಜೊತೆ ದಂಪತಿ ಬೈಕ್​ನಲ್ಲಿ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:49 am, Wed, 19 June 24