ಹೊರನಾಡು ಸಮೀಪ ಭಾರೀ ಭೂ ಕುಸಿತ, ಮಡಿಕೇರಿ ಊರುಬೈಲು ಗ್ರಾಮದಲ್ಲಿ 15 ಅಡಿ ಕುಸಿದು, ಕೊಚ್ಚಿ ಹೋದ ಗ್ರಾಮೀಣ ರಸ್ತೆ

| Updated By: ಸಾಧು ಶ್ರೀನಾಥ್​

Updated on: Aug 06, 2022 | 4:23 PM

Karnataka Rains: ರಾಜ್ಯದಲ್ಲಿ ಮುಂಗಾರು ಸತತವಾಗಿ ಬೀಳುತ್ತಿದ್ದು ಮಡಿಕೇರಿ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿಸುತ್ತಿದೆ. ಈ ಭಾಗಗಳಲ್ಲಿ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.

ಹೊರನಾಡು ಸಮೀಪ ಭಾರೀ ಭೂ ಕುಸಿತ, ಮಡಿಕೇರಿ ಊರುಬೈಲು ಗ್ರಾಮದಲ್ಲಿ 15 ಅಡಿ ಕುಸಿದು, ಕೊಚ್ಚಿ ಹೋದ ಗ್ರಾಮೀಣ ರಸ್ತೆ
ಹೊರನಾಡು ಸಮೀಪ ಭಾರೀ ಭೂ ಕುಸಿತ, ಮಡಿಕೇರಿ ಊರುಬೈಲು ಗ್ರಾಮದಲ್ಲಿ 15 ಅಡಿ ಕುಸಿದು, ಕೊಚ್ಚಿ ಹೋದ ಗ್ರಾಮೀಣ ರಸ್ತೆ
Follow us on

ಚಿಕ್ಕಮಗಳೂರು/ಮಡಿಕೇರಿ: ರಾಜ್ಯದಲ್ಲಿ ಮುಂಗಾರು (Karnataka Rains) ಸತತವಾಗಿ ಬೀಳುತ್ತಿದ್ದು ಮಡಿಕೇರಿ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿಸುತ್ತಿದೆ. ಈ ಭಾಗಗಳಲ್ಲಿ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಹೊರನಾಡು (Horanadu) ಸಮೀಪ ಭಾರೀ ಭೂ ಕುಸಿತವುಂಟಾಗಿ (Landslide) ಕುಟುಂಬ ಕಂಗಾಲಾಗಿದೆ. ಇನ್ನು ಮಡಿಕೇರಿಯ ಊರುಬೈಲು (Urubail) ಗ್ರಾಮದಲ್ಲಿ ಗ್ರಾಮೀಣ ರಸ್ತೆಯೊಂದು 15 ಅಡಿ ಕುಸಿದು, ಕೊಚ್ಚಿ ಹೋಗಿದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಸಮೀಪ ಭಾರೀ ಭೂ ಕುಸಿತವಾಗಿದ್ದು, ಕುಟುಂಬ ಕಂಗಾಲಾಗಿದೆ. ಉದಯ್-ವನಿತಾ ಎಂಬುವರಿಗೆ ಸೇರಿದ ಮನೆ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣಿನ ರಾಶಿ ಬಿದ್ದಿದೆ. ಬಂಡೆ, ಮರಗಳ ಸಹಿತ ಮನೆ ಮೇಲೆ ಮಣ್ಣು ಜಾರಿ ಬಂದಿದೆ.

ಕೂಲಿ ಮಾಡಿ, ಸಾಲ ಸೋಲ ಮಾಡಿದ ಕಟ್ಟಿದ ಮನೆಯೂ ಇಲ್ಲದಾಗಿದೆ. ಮಕ್ಕಳು ಮನೆ ಮುಂಭಾಗ ಓದುತ್ತಿರುವಾಗ ಏಕಾಏಕಿ ಭೂ ಕುಸಿತವಾಯ್ತು. ಮನೆಯಿಂದ ಹೊರಗೆ ಓಡಿಬಂದು ನಾವು ಜೀವ ಉಳಿಸಿಕೊಂಡಿದ್ದೇವೆ. ಮನೆ ಮೇಲೆ ಮಣ್ಣು ಬಿದ್ದಿರೋದ್ರಿಂದ ಬೇರೆ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ ಎಂದು ಮನೆಯೊಡತಿ ವನಿತಾ ಟಿವಿ9 ಜೊತೆ ಅಳಲು ತೋಡಿಕೊಂಡಿದ್ದಾರೆ.

ಇನ್ನು, ಕೊಡಗು ಜಿಲ್ಲೆಯಲ್ಲಿ ಭೂ ಕುಸಿತಗಳು ಸರ್ವೇಸಾಮಾನ್ಯವಾಗಿದೆ. ಮಡಿಕೇರಿ ತಾಲೂಕಿನಲ್ಲಿ ವರ್ಷಧಾರೆಯ ಸೈಡ್ ಇಫೆಕ್ಟ್ ತೀವ್ರವಾಗಿದೆ. ಊರುಬೈಲು ಗ್ರಾಮದಲ್ಲಿ ಗ್ರಾಮೀಣ ರಸ್ತೆಯೊಂದು ಸುಮಾರು 15 ಅಡಿ ಆಳಕ್ಕೆ ಕುಸಿದು ಕೊಚ್ಚಿ ಹೋಗಿದೆ.

ನಾಲ್ಕು ದಿನಗಳ ಹಿಂದೆ ಪ್ರವಾಹದಲ್ಲಿ ರಸ್ತೆ ಕುಸಿತವಾಗಿತ್ತು. ಇದರಿಂದಾಗಿ ಚೆಂಬು-ಊರುಬೈಲ್ ಸಂಪರ್ಕ‌ ಕಡಿತಗೊಂಡಿದೆ. ರಸ್ತೆ ಸಂಪರ್ಕ‌ ಮರು ಸ್ಥಾಪನೆಗಾಗಿ ಊರುಬೈಲು ಗ್ರಾಮಸ್ಥರು ಮಳೆಯ ಮಧ್ಯೆಯೂ ಶ್ರಮದಾನ ಮಾಡುತ್ತಿದ್ದಾರೆ.

  1.  ನೆರೆ ಪೀಡಿತ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಿಎಂ ವೀಡಿಯೊ ಕಾನ್ಫೆರೆನ್ಸ್:
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ ಟಿ ನಗರದ ತಮ್ಮ ನಿವಾಸದಿಂದಲೇ 17 ಜಿಲ್ಲೆಗಳ ಜಿಲ್ಲಾಡಳಿತ ಅಧಿಕಾರಿಗಳ ಜೊತೆ ವೀಡಿಯೊ ಕಾನ್ಫೆರೆನ್ಸ್ ನಡೆಸಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ದಾವಣಗೆರೆ, ತುಮಕೂರು, ರಾಮನಗರ, ಯಾದಗಿರಿ, ಕೊಪ್ಪಳ, ಹಾವೇರಿ, ಬೀದರ್, ಕಲ್ಬುರ್ಗಿ, ಗದಗ, ಹಾಗೂ ಚಿಕ್ಕಮಗಳೂರು ಜಿಲ್ಲಾಡಳಿತ ಜೊತೆ ಸಿಎಂ ಬೊಮ್ಮಾಯಿ ಸಭೆ ಆರಂಭವಾಗಿದೆ.

ಒಂದೇ ತಿಂಗಳಲ್ಲಿ ಎರಡನೆ ಬಾರಿ ಉಕ್ಕಿ ಹರಿದ ಹೇಮಾವತಿ ನದಿ

ಹಾಸನ- ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ತೀವ್ರವಾಗಿದ್ದು, ಹೇಮಾವತಿ ನದಿ ಮತ್ತೆ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಸಕಲೇಶಪುರದ ಹೇಮಾವತಿ ನದಿ ದಂಡೆಯ ಹೊಳೆ ಮಲ್ಲೇಶ್ವರ ದೇಗುಲ ಜಲಾವೃತಗೊಂಡಿದೆ. ದೇಗುಲದ ಮೆಟ್ಟಿಲುಗಳು ನದಿ ನೀರಲ್ಲಿ ಮುಚ್ಚಿ ಹೋಗಿವೆ. ಜುಲೈ ತಿಂಗಳ ಮಳೆಯಲ್ಲೂ ದೇಗುಲ ಜಲಾವೃತವಾಗಿತ್ತು. ಇದೀಗ ತಿಂಗಳ ಅಂತರದಲ್ಲಿ ಎರಡನೆ ಬಾರಿಗೆ ಉಕ್ಕಿ ಹರಿದ ಹೇಮಾವತಿ ನದಿ. ಸಕಲೇಶಪುರ ತಾಲ್ಲೂಕು ಹಾಗು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೇಮಾವತಿಗೆ ನೀರಿನ ಹರಿವು ಹೆಚ್ಚಾಗಿದೆ.

ಕಳೆ ತೆಗೆಯುವಾಗ ಹಾವು ಕಚ್ಚಿ ರೈತ ಸಾವು:

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಸಗರ ಗ್ರಾಮದಲ್ಲಿ‌ಹಾವು ಕಚ್ಚಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಗ್ರಾಮದ‌ 35 ವರ್ಷದ ರೈತ ಬಾಬು ಕುರ್ಲೈ ಮೃತ ದುರ್ದೈವಿ. ಜಮೀನಿನಲ್ಲಿ ಕಳೆ ತೆಗೆಯುವಾಗ ಹಾವು ಕಚ್ಚಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ರೈತ ಬದುಕುಳಿಯಲಿಲ್ಲ. ರೈತ ಮೃತಪಟ್ಟಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಮಳೆಯ ಅವಾಂತರ – ಅಕ್ಕ ಪಕ್ಕದಲ್ಲಿ ಇರುವ ಮನೆಗಳ ಗೋಡೆಗಳು ಕುಸಿತ

ತುಮಕೂರು ತಾಲೂಕಿನ ಹೊನಸಿಗೆರೆ ಗ್ರಾಮದಲ್ಲಿ ಸತತ ಮಳೆಗೆ ಮೂರು ಮನೆಗಳು ಕುಸಿದಿವೆ. ಗ್ರಾಮದ ನರಸಿಂಹ ಮೂರ್ತಿ, ಪೂಜಹನುಮಯ್ಯ ಮತ್ತು ನರಸಯ್ಯರಿಗೆ ಸೇರಿದ ಅಕ್ಕಪಕ್ಕದ ಮನೆಗಳ ಗೋಡೆಗಳು ಕುಸಿದಿವೆ.

Published On - 3:04 pm, Sat, 6 August 22